ಕಮಲ್ ತಪ್ಪಿದ ತಾಳ

ಕಲೆ, ಕಲಾವಿದ ಒಂದರ್ಥದಲ್ಲಿ ಬಾಂಧವ್ಯ ಬೆಸೆಯುವ ಸೂಜಿದಾರವಿದ್ದಂತೆ. ಭಾವೈಕ್ಯತೆಯ ನೇಯ್ಕೆಗೆ ಕಲಾವಿದನ ಕೊಡುಗೆ ದೊಡ್ಡದು. ನಮ್ಮ ಪರಿಸರದಲ್ಲಿ ಗಡಿ, ಭಾಷೆ, ಜಾತಿ, ಧರ್ಮಗಳ ಹೆಸರಿನಲ್ಲಿ ಮನಸ್ಸುಗಳನ್ನು ದೂರ ಮಾಡುವ ರಾಜಕೀಯ ಉದ್ದೇಶಿತ ಹತಾರಗಳು ಸಾಕಷ್ಟಿರುವಾಗ, ಜನರನ್ನು ಪರಸ್ಪರ ಹತ್ತಿರವಾಗಿಸುವಂಥ ಸಾಮರ್ಥ್ಯ ಕಲೆ, ಕಲಾವಿದನಿಗೂ ಇದೆಯೆಂಬುದು ಮನುಕುಲದ ಬಹುದೊಡ್ಡ ಸಮಾಧಾನ. ಆದರೆ, ಕಲೆಯ ಆ ಮೂಲ ಧೈಯವನ್ನೇ ಮರೆತಂತೆ ಮಾತನಾಡಿರುವ ಬಹುಭಾಷಾ ನಟ ಕಮಲ್ ಹಾಸನ್, ''ತಮಿಳಿನಿಂದ ಕನ್ನಡ ಹುಟ್ಟಿತು,'' ಎನ್ನುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 'ದ್ರಾವಿಡ ಭಾಷಾ ಪರಂಪರೆಯಲ್ಲಿ ತಮಿಳೇ ಮೇಲು' ಎನ್ನುವ ತಮಿಳಿಗರ ಈ ಹಿಂದಿನ ಮನಸ್ಥಿತಿಯ ಕೊಂಡಿಯೆಂಬಂತೆ ಉದ್ದಟತನದ ಹೇಳಿಕೆ ವ್ಯಕ್ತವಾಗಿರುವುದು ಖಂಡನೀಯ.
ಜಲ ವಿವಾದವಿರಲಿ, ಗಡಿ ವಿವಾದವಿರಲಿ, ಭಾಷಾ ವಿವಾದವಿರಲಿ, ರಾಜಕೀಯ ಮುನಿಸಿರಲಿ, ಕರ್ನಾಟಕ- ತಮಿಳುನಾಡು ನಡುವಿನ ಆ ಬಿಸಿತಾಪಗಳು ಕನ್ನಡ ಮತ್ತು ತಮಿಳು ಚಿತ್ರರಂಗವನ್ನು ಎಂದಿಗೂ ದೂರ ಮಾಡಿಲ್ಲ. ಇಲ್ಲಿನ ಕಲಾವಿದರು ಅಲ್ಲಿಯೂ, ಅಲ್ಲಿನ ಕಲಾವಿದರೂ ಇಲ್ಲಿಯೂ ಗಡಿ-ಭಾಷೆಗಳನ್ನೂ ಮೀರಿ ಜನರ ಹೃದಯಕ್ಕೆ ಹತ್ತಿರವಾಗಿದ್ದಾರೆ. ಆ ಪೈಕಿ ಕನ್ನಡಿಗರು ಮೆಚ್ಚಿದಂಥ ತಮಿಳು ನಟರ ಪೈಕಿ ಕಮಲ್ ಹಾಸನ್ ಅಗ್ರಪಂಕ್ತಿಯಲ್ಲಿ ನಿಲ್ಲುವಂಥವರು. ಕೆ. ಬಾಲಚಂದರ್ರಂಥ ಶ್ರೇಷ್ಠ ನಿರ್ದೇಶಕರು ಮದ್ರಾಸಿನಿಂದ ಇಲ್ಲಿಗೆ ಬಂದು 'ಬೆಂಕಿಯಲ್ಲಿ ಅರಳಿದ ಹೂ' ಮಾಡಿದಾಗ, ಕಮಲ್ ಹಾಸನ್ 'ಮುಂದೆ ಬನ್ನಿ. ಇನ್ನೂ ಮುಂದೆ ಬನ್ನಿ...' ಎಂದಾಗ ಕನ್ನಡಿಗರು ಮುಂದೆ ಬಂದೇ ಸಿನಿಮಾ ವೀಕ್ಷಿಸಿದರು. 'ಪುಷ್ಪಕ ವಿಮಾನ'ದ ಮೌನಕೃತಿಯಿಂದ 'ರಾಮ ಶ್ಯಾಮ ಭಾಮ'ದವರೆಗೆ; 'ವಿಶ್ವರೂಪಂ', 'ಕಲ್ಕಿ'ಯ ಅಬ್ಬರದವರೆಗೂ ಕನ್ನಡಿಗರು ಕಮಲ್ ನಟನೆಯನ್ನು ಅಭಿಮಾನಿಸಿದವರೇ, ಸಹಸ್ರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಯಾವ ಆಧಾರವೂ ಇಲ್ಲದೆ, ಭಾಷಾತಜ್ಞನಂತೆ ಅದರ ಹುಟ್ಟಿನ ಬಗ್ಗೆ ವ್ಯಾಖ್ಯಾನ ಹೊಮ್ಮಿಸಿರುವುದು ಕನ್ನಡಿಗರು ಒಪ್ಪುವಂಥದ್ದೇ ಅಲ್ಲ.
''ತಮಿಳಿನ ದಾಖಲೆಗಳಿಗೆ ಸ್ಪಷ್ಟತೆಯೇ ಇಲ್ಲ. ಅವು ಕೇವಲ ಬಾಯ್ಕಾತಿನ ದಾಖಲೆಗಳು. ಆದರೆ, ಕನ್ನಡಕ್ಕೆ ಹಾಗಿಲ್ಲ, 'ಕಾವೇರಿಯಿಂದ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್' ಎಂಬ ಭೌಗೋಳಿಕ ಎಲ್ಲೆಯನ್ನು ಹೇಳಿರುವುದು ಕನ್ನಡದಲ್ಲಿ ಮಾತ್ರ. ಕನ್ನಡ ಭಾಷೆಗೆ ಮಾತ್ರ ಸ್ಪಷ್ಟವಾದಂಥ ದಾಖಲೆಗಳಿವೆ,'' ಎಂದು ವಿಶ್ವದ ಅಗ್ರಗಣ್ಯ ಭಾಷಾ ವಿದ್ವಾಂತ ಶೆಲ್ವಾನ್ ಪೊಲಾಕ್ರ ಮಾತು ಇಲ್ಲಿ ಉಲ್ಲೇಖಾರ್ಹ. ಆದರೆ, ತನ್ನ ನಾಡಿನ, ನುಡಿಯ ಬಗ್ಗೆ ಇಂಥ ಬಲವಾದ ಆಧಾರವನ್ನೂ ಇಟ್ಟುಕೊಳ್ಳದೆ ತಮ್ಮ ಭಾಷೆಯನ್ನು ಮೆರೆಸುವ ಭರದಲ್ಲಿ ಕಮಲ್ ಆಡಿದ ಮಾತು ಶ್ರೇಷ್ಠತೆಯ ವ್ಯಸನವಷ್ಟೇ.
ದ್ರಾವಿಡ ಕುಟುಂಬದಲ್ಲಿ ತಾನು ಪ್ರಾಚೀನ ಭಾಷೆ ಎಂದು ಹೇಳಿಕೊಂಡೇ ತಮಿಳು ಭಾಷೆಯು ಕೇಂದ್ರದಿಂದ ಸಕಲ ಸೌಲಭ್ಯ ಪಡೆದಿದೆ. ಆ ಹೊತ್ತಿನಲ್ಲೂ ಕನ್ನಡಿಗರು 'ತಮಿಳಿಗಿಂತ ಕನ್ನಡವೇ ಮೊದಲು' ಎಂದೇನೂ ಪ್ರತಿಪಾದಿಸಲಿಲ್ಲ. ಇವೆರಡೂ ಒಂದೇ ಕಾಲಘಟ್ಟದ ಭಾಷೆಗಳನ್ನುವುದು ಸಾಮಾನ್ಯ ಜ್ಞಾನ. ಎರಡೂ ಭಾಷೆಗಳಲ್ಲಿ ಇಷ್ಟೊಂದು ಚಿತ್ರಗಳನ್ನು ಮಾಡಿದ ಬಳಿಕವೂ ಕಮಲ್ಗೆ ಈ ವಾಸ್ತವ ತಿಳಿಯಲಿಲ್ಲವೇ? ತಮಿಳಿಗರನ್ನು ಓಲೈಸುವ ಮೂಲಕ ಕಮಲ್ ರಾಜಕೀಯವಾಗಿ ಇನ್ನೇನಾದರೂ ಸಾಧಿಸಲು ಹೊರಟಿದ್ದರೆ, ಅದಕ್ಕೆ ಕನ್ನಡವನ್ನು ದಾಳ ಮಾಡಿಕೊಂಡಿದ್ದರೆ ಅದು ಮೂರ್ಖತನ. ಕಮಲ್ ಕನ್ನಡಿಗರ ಕ್ಷಮೆಯಾಚಿಸಲಿ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೯-೦೫-೨೦೨೫
ಚಿತ್ರ ಕೃಪೆ: ಇಂಟರ್ನೆಟ್ ತಾಣ