ಕರಿಮಾಯಿ ಗುಡ್ಡ

ಹಿರಿಯ ಸಾಹಿತಿ ನಾ. ದಾಮೋದರ ಶೆಟ್ಟಿಯವರ 'ಕರಿಮಾಯಿ ಗುಡ್ಡ' ಕಾದಂಬರಿ ಸಾಂಸಾರಿಕ, ಸಂಶೋಧನಾತ್ಮಕ ಹಾಗೂ ಪತ್ತೇದಾರಿಯ ಗುಣಗಳನ್ನು ಹೊಂದಿದೆ. ಆಧುನಿಕ ಬದುಕಿಗೆ ಸಮೀಪವಾದ ಕಥಾವಸ್ತುವನ್ನೊಳಗೊಂಡಿದ್ದು ರೋಚಕ ತಿರುವುಗಳಿಂದ ಕೂಡಿ, ಕುತೂಹಲ ಕೆರಳಿಸುತ್ತ ಸಾಗುವ ಕಾದಂಬರಿ ಚೇತೋಹಾರಿ ಶೈಲಿಯಿಂದ ಕೂಡಿದೆ. ಇಂಗ್ಲಿಷ್ ಸಾಹಿತ್ಯದಲ್ಲಿ ಇರಬಹುದಾದ ಇಂಥ ಕಥಾನಕಗಳು ಕನ್ನಡದಲ್ಲಿ ಅಪರೂಪ.
ಎಸ್ಟೇಟ್ ಮಧ್ಯದ ಸಿರಿವಂತರ ಬದುಕಿನ ನಿಗೂಢ ಘಟನೆಯೊಂದನ್ನು ನಾದಾ ಅವರು ರೋಚಕವಾಗಿ ಹೆಣೆದಿದ್ದಾರೆ. ಎಸ್ಟೇಟು ಬಂಗಲೆಯಲ್ಲಿ ನಡೆಯುವ ಈ ಕಥೆಯು ಪ್ರೀತಿ, ದ್ವೇಷ, ಅಸೂಯೆ. ವಂಚನೆ ಮುಂತಾದ ಹಲವು ಭಾವಗಳ ಸಮ್ಮಿಲನವಾಗಿದೆ. ವಿನಾಕಾರಣ ಕೊಲೆಯಾಗುವ ಓರ್ವ ಅಮಾಯಕ ಹೆಣ್ಣಿನ ಮನಸ್ಸನ್ನು ಅರ್ಥೈಸಲಾಗದೆ ಆಕೆಯ ಭಾವನೆಗಳ ಮೌಲ್ಯವನ್ನು ತಿಪ್ಪೆಗೆಸೆಯುವ ಕ್ರೌರ್ಯ ತಮ್ಮ ಜನ್ಮಸಿದ್ದ ಹಕ್ಕು ಎಂಬಂತೆ ವರ್ತಿಸುವ ಪುರುಷ ಸಮಾಜವನ್ನು ಈ ಕಾದಂಬರಿ ವಿಮರ್ಶೆಗೆ ಎಡೆಮಾಡುತ್ತದೆ. ಕೊಡಗಿನ ಪ್ರಾಕೃತಿಕ ರಮಣೀಯತೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿರುವುದು ಈ ಕಾದಂಬರಿಯ ಮತ್ತೊಂದು ವಿಶೇಷ.
ಈ ಕಾದಂಬರಿಯ ಕುರಿತು ಖುದ್ದು ನಾ ದಾ ಶೆಟ್ಟಿ ತಮ್ಮ ಲೇಖಕರ ಮಾತಿನಲ್ಲಿ ಹೇಳಿರುವುದು ಹೀಗೆ… “ಕೊಡಗಿನ ಪ್ರಕೃತಿ ಪರಿಸರ ಯಾವತ್ತೂ ನನಗಿಷ್ಟ. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗುವ ಮುನ್ನ ಕೊಡಗಿನಲ್ಲಿ ನಾಲ್ಕು ವರ್ಷಗಳ ಕಾಲ ಪ್ರೌಢಶಾಲೆಯಲ್ಲಿ ದುಡಿಮೆಗೈದಿದ್ದೆ. ಅಲ್ಲಿನ ಪರಿಸರದ ಜೊತೆ ಮಾತುಕತೆಯಾಡುತ್ತಿದ್ದೆ. ಎತ್ತರದಲ್ಲಿದ್ದ ನನ್ನ ಪ್ರೌಢಶಾಲೆ. ಅದರ ಚಾವಡಿಯಲ್ಲಿ ನಿಂತಾಗ ಎದುರುಗಡೆ ವಿಶಾಲವಾಗಿ ಹರಡಿದ ಕರ್ತಕಾಡು ಕಣ್ಣಮುಂದೆ ಬರುತ್ತಿತ್ತು. ಆ ಕುರಿತು ಹಲವಾರು ಕವನಗಳನ್ನು ಬರೆದು ಪ್ರಕಟಿಸಿದ್ದೆ. ಅದನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಒಂದು ನೀಳ್ಗತೆ ಬರೆದೆ. ಅದು ಕಾಲೇಜಿನ ಪ್ರಕಟಣೆಯಾದ್ದರಿಂದ ವಿಶೇಷ ಪ್ರಚಾರ ಪಡೆಯದೆ ಅಲ್ಲಿಗೇ ಮುದುಡಿಕೊಂಡಿತು. ಚೆಂಗಪ್ಪ ಎಂಬ ನನ್ನ ಶಿಷ್ಯ ಬಹುಕಾಲದ ಬಳಿಕವೂ ನನ್ನ ಮನದಲ್ಲಿ ಉಳಿದಿದ್ದ ಕತೆಯನ್ನು 'ಕರಿಮಾಯಿ ಗುಡ್ಡ' ಎಂಬ ಹೆಸರು ಕೊಟ್ಟು ಪುನಾರಚಿಸಿ ಎಂದ. ಅದರೊಳಗೊಂದು ನಿಗೂಢತೆಯಿದೆ ಅಂದ. ಕರಿಮಾಯಿ ಅಂದಾಗ ಕಂಬಾರರು ಸುಳಿದು ಹೋದರು. ಅವರದು ಕರಿಮಾಯಿ. ನನ್ನದರಲ್ಲಿ ಗುಡ್ಡ ಕೂಡ ಇದೆ ಎಂದಾಯಿತು.
ಈ ಕತೆಯ ಮೂಲರೂಪ ಹುಟ್ಟಿಕೊಂಡದ್ದು ದಶಕಗಳ ಹಿಂದೆ. ಚಿತ್ರರಂಗದ ನನ್ನಿಬ್ಬರು ಗೆಳೆಯರಾದ ಕೆ.ಎಸ್. ಶ್ರೀಧರ್ ಹಾಗೂ ಕಾಸರಗೋಡು ಚಿನ್ನ ಸಿನಿಮಾ ತಯಾರಿಸಲೊಂದು ಕತೆ ಬೇಕು, ಬರೆದು ಕೊಡಿ ಎಂದರು. ಒಂದುದಿನ ನಾವು ಮೂವರು ನನ್ನ ತಲೆಗೆ ಹೊಳೆದ- ಕಥೆಯ ಕುರಿತು ಚರ್ಚೆ ನಡೆಸಿದೆವು. ಅದರ ಹೂರಣವನ್ನಿಟ್ಟುಕೊಂಡು ಒಂದು ನೀಳ್ಗತೆ (ಕಿರು ಕಾದಂಬರಿ) ಬರೆದೆ. ಅದು ಪ್ರಕಟವೂ ಆಯಿತು. ಸಿನಿಮಾ ಆಗಲಿಲ್ಲ. ಆದರೆ ನನ್ನ ಶಿಷ್ಯ ಚೆಂಗಪ್ಪನಿಗೆ ಅದನ್ನು ಸಿನಿಮಾ ಮಾಡಬೇಕೆಂಬ ಆಸೆ. ಆ ಕತೆಯನ್ನೊಂದು ಕಾದಂಬರಿ ಮಾಡಿರೆಂದು ಹಕ್ಕೊತ್ತಾಯ ಮಂಡಿಸಿದ. ಆ ಕತೆಯ ಹಂದರವನ್ನಿಟ್ಟುಕೊಂಡು ಅದನ್ನು ಕಾದಂಬರಿಯಾಗಿ ಹೊಸೆಯ ತೊಡಗಿದೆ. ಹೊಳೆದ ಹೊಸ ಹೊಸ ವಿಚಾರಗಳನ್ನು ಅಳವಡಿಸತೊಡಗಿದೆ ಸಾಮಾಜಿಕ ಕಾದಂಬರಿಯನ್ನಾಗಿ ರೂಪಿಸಬಯಸಿದರೂ ಅದೊಂದು ಪತ್ತೇದಾರಿ ಕಾದಂಬರಿಯ ರೂಪು ಪಡೆಯಿತು. ನಾನು ಎಂದೂ ಪತ್ತೇದಾರಿ ಕಾದಂಬರಿ ಬರೆದವನಲ್ಲ, ತಾಂತ್ರಿಕ ದೃಷ್ಟಿಯಲ್ಲಿ ಹಾಗೂ ನೈಜತೆಯ ದೃಷ್ಟಿಯಲ್ಲಿ ಅದೊಂದು ಸವಾಲೇ ಆಯಿತು. ಪ್ರತಿಬಾರಿ ಓದುವಾಗಲೂ ಹೊಸ ಹೊಸ ಸೂಕ್ಷ್ಮ ವಿಚಾರಗಳು ಸೇರ್ಪಡೆಯಾಗುತ್ತ ಬಂತು. ಕೊನೆಗೂ ಅದರ ಕೆಲಸ ಮುಗಿಯಿತು. ಚೆಂಗಪ್ಪ ಅದನ್ನು ಓದಿ ಆತನ ಪತ್ನಿ ಹರ್ಷಿತಾಳ ಕೈಗೆ ಕೊಟ್ಟ ಪರಿಣಾಮವಾಗಿ ಆಕೆಯೂ ಕಾದಂಬರಿಯ ಬಗ್ಗೆ ಕುತೂಹಲಗೊಂಡು ತಾನದನ್ನು ಇಂಗ್ಲಿಷಿಗೆ ಅನುವಾದಿಸುವೆನೆಂದಳು.
ಏಕಕಾಲದಲ್ಲಿ ಎರಡು ಭಾಷೆಗಳಲ್ಲಿ ಪ್ರಕಟಗೊಳ್ಳುವ ಸಂತಸವನ್ನು ಮನಸಾರೆ ಮೆಲ್ಲುತ್ತಿದ್ದ ಹೊತ್ತಿನಲ್ಲಿ 'ಸುಧಾ' ಪತ್ರಿಕೆಯಿಂದ ರಘುನಾಥ ಚ.ಹ. ಫೋನ್ ಮಾಡಿ, ಒಂದು ಕಾದಂಬರಿಯಿದ್ದರೆ ಕಳುಹಿಸಿಕೊಡಿ 'ಸುಧಾ'ದಲ್ಲಿ ಧಾರಾವಾಹಿಯಾಗಿ ಪ್ರಕಟಿಸೋಣ ಎಂದರು. ಮರುದಿನವೇ ಕಳುಹಿಸಿಕೊಟ್ಟೆ. ಅದು ಪ್ರಕಟಗೊಂಡು ಒಳ್ಳೆಯ ಪ್ರತಿಕ್ರಿಯೆ ಪಡೆಯಿತು. ರಘುನಾಥ ಚ. ಹ. ರಿಗೆ ಹಾಗೂ ಸುಧಾ ಪತ್ರಿಕೆಗೆ ವಂದನೆಗಳು.
ಇನ್ನೀಗ ಪುಸ್ತಕ ರೂಪದಲ್ಲಿ ಪ್ರಕಟಿಸುವ ಮಾತು. 'ಕರಿಮಾಯಿ ಗುಡ್ಡ'ದ ಇಂಗ್ಲಿಷ್ ಅನುವಾದವನ್ನು ಚೆಂಗಪ್ಪನ ಆದ್ಯ ಕಮ್ಯೂನಿಕೇಶನ್ಸ್ ಸಂಸ್ಥೆ ಪ್ರಕಟಿಸುವುದೆಂದು ತೀರ್ಮಾನ ವಾಯಿತು. ಅದರ ಬೆನ್ನಲ್ಲೆ ಕನ್ನಡದ ಪ್ರಮುಖ ಪ್ರಕಾಶಕರಲ್ಲೊಬ್ಬರಾದ ಅಂಕಿತ ಪ್ರಕಾಶನದ ಪ್ರಕಾಶ್ & ಪ್ರಭಾರನ್ನು ಕನ್ನಡ ಕಾದಂಬರಿಯ ಪ್ರಕಟಣೆಗಾಗಿ ವಿನಂತಿಸಿದೆ. ನನ್ನ ಗೆರೆ ಕಾದಂಬರಿಯನ್ನು ಈ ಹಿಂದೆ ಪ್ರಕಟಿಸಿದ್ದ ಅವರು ಸಂತೋಷದಿಂದ ಒಪ್ಪಿಕೊಂಡರು. ಕನ್ನಡದ ಪ್ರಮುಖ ಕತೆಗಾರರಲ್ಲೊಬ್ಬರಾದ ಲಕ್ಷ್ಮಣ ಕೊಡಸೆಯವರು ಅದಕ್ಕೊಂದು ಅರ್ಥಪೂರ್ಣ ಮುನ್ನುಡಿ ಬರೆದುಕೊಟ್ಟರು. ಸುಧಾ ಪತ್ರಿಕೆಯ ಧಾರಾವಾಹಿಗೆ ಖ್ಯಾತ ಚಿತ್ರಕಾರ ಮೋನಪ್ಪನವರು ಬರೆದ ಚಿತ್ರಗಳಲ್ಲಿ ಒಂದನ್ನು ಮುಖಪುಟಕ್ಕೆ ಬಳಸಿದೆವು. ಕೊಡಸೆಯವರನ್ನು, ಮೋನಪ್ಪನವರನ್ನು ವಿಶ್ವಾಸಪೂರ್ವಕ ನೆನೆಯುವೆ. ಪ್ರಕಟಿಸುವ ಕಂಬತ್ತಳ್ಳಿ ದಂಪತಿಗಳನ್ನು, ಓದಿ, ಪ್ರತಿಕ್ರಿಯಿಸುವ ನಿಮ್ಮನ್ನು ಮನಸಾರೆ ನೆನೆಯುವೆ.”