ಕರ್ತವ್ಯಕ್ಕೆ ಡಂಗೂರ ಬೇಡ

ಕರ್ತವ್ಯಕ್ಕೆ ಡಂಗೂರ ಬೇಡ

ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ಯಾವುದೇ ಸರಕಾರಗಳು ಬಂದರೂ ವಿವಿಧ ಫಲಾನುಭವಿಗಳ ಸಮಾವೇಶಗಳನ್ನು ನಡೆಸುವ ಸಂಪ್ರದಾಯ ಪಾಲಿಸಿಕೊಂಡು ಬಂದಿವೆ. ಸರಕಾರದ ಯೋಜನೆಗಳ ಫಲವನ್ನು ಪಡೇದ ಜನರನ್ನು ತಮ್ಮ ಪಕ್ಷದ ಸಭೆಗಳಲ್ಲು ತುಂಬಿಸಿಕೊಂಡು ಪ್ರಚಾರ ಪಡೆಯುವ ಮಾರ್ಗವಿದು. ಇತ್ತೀಚಿಗಂತೂ ಇಂತಹ ಕಾರ್ಯಕ್ರಮಗಳು ರೇಜಿಗೆ ಹುಟ್ಟಿಸುವ ಮಟ್ಟಿಗೆ ಬಂದು ನಿಂತಿವೆ. ಹಕ್ಕು ಪತ್ರ ವಿತರಣೆಯ ಹೆಸರಿನಲ್ಲಿ, ಫಲಾನುಭವಿಗಳ ಹೆಸರಿನಲ್ಲಿ, ಚೆಕ್ ವಿತರಣೆ ಎಂದು ಹೀಗೆ ಸಮಾವೇಶಗಳ ಸಾಲೇ ನಡೆಯುತ್ತಿವೆ. ಫಲಾನುಭವಿಗಳಿಗೆ ಯಾವುದೇ ಪಕ್ಷದ ಖಜಾನೆಯಿಂದ ಹಣವನ್ನು ನೀಡಿ ಸವಲತ್ತು ಕೊಟ್ಟಿರುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕಿದೆ. ಜನತೆ ಕಟ್ಟುವ ತೆರಿಗೆಯ ಪಾಲಿನದು ಎಂಬುದು ಮೊದಲು ನೆನಪಿರಲಿ. ಈ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಬಹುತೇಕ ಎಲ್ಲ ಸರಕಾರಗಳಲ್ಲಿ ವಿದ್ಯಾರ್ಥಿ ಸಮುದಾಯಕ್ಕೆ ಸ್ಕಾಲರ್ ಶಿಪ್ ಕೊಡುವುದು, ನಾನಾ ವರ್ಗದವರಿಗೆ ಸಾಲ ಸೌಲಭ್ಯವನ್ನು ಕೊಡುವುದು, ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಅನೇಕ ಯೋಜನೆಗಳನ್ನು ಕಲ್ಪಿಸಿಕೊಡುವುದು ವಿಶೇಷವಾಗಿ ಪಿಂಚಣಿ ಯೋಜನೆಗಳು, ನಿವೇಶನಗಳನ್ನು ಮತ್ತು ಮನೆಗಳನ್ನು ನೀಡುವುದು ಇವೆಲ್ಲವೂ ಸರ್ವೇ ಸಾಮಾನ್ಯ. ಇದೆಲ್ಲವೂ ಸರಕಾರದ ಕರ್ತವ್ಯ, ಆಡಳಿತದ ಭಾಗ. ಆದರೆ ಇದಕ್ಕಾಗಿ ತುತ್ತೂರಿ ಬಾರಿಸುತ್ತಾ ಇಂತಹ ಜನರನ್ನು ಸೇರಿಸಿ ನೀವೆಲ್ಲ ‘ನಮ್ಮ ಹಂಗಿನವರು' ಎಂದು ಸಮಾವೇಶಗಳಲ್ಲಿ ತಮ್ಮ ನಾಯಕತ್ವವನ್ನು ಬಿಂಬಿಸಿಕೊಳ್ಳುತ್ತ ತಮ್ಮ ಮನೆಯ ಖಜಾನೆಯಿಂದ ಸೌಲಭ್ಯ ಕೊಟ್ಟವರಂತೆ ವಿಜೃಂಭಿಸುವ ಅಗತ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಇಂತಹ ಅಗ್ಗದ ಪ್ರಚಾರ ಸರಕಾರದ ಪ್ರತಿದಿನದ ಕಾರ್ಯಕ್ರಮವಾಗಿದೆ. ಸರ್ಕಾರವಿರುವುದು ಜನರಿಗೆ ನೆರವು ನೀಡಲು, ಸೌಲಭ್ಯಗಳನ್ನು ಕಲ್ಪಿಸಿಕೊಡಲು. ಸರ್ಕಾರವೆಂದರೆ ಜನ ಮತ್ತು ಆಡಳಿತ ವ್ಯವಸ್ಥೆ ನಡುವೆ ಇರುವ ಸೇತುವೆ. ಪಿಂಚಣಿ ನೀಡಿದವರನ್ನು, ಸ್ಕಾಲರ್ ಶಿಪ್ ಪಡೆದವರನ್ನು, ಸಾಲ ಪಡೆದವರನ್ನು, ಮನೆ ಪಡೆದವರನ್ನು, ಬಿಸಿಲಿನಲ್ಲಿ ಕೂಡಿಸಿ ತಾಸುಗಟ್ಟಲೆ ಪುಕ್ಕಟೆ ಭಾಷಣಗಳನ್ನು ಮಾಡುವ ಈ ಕೀಳು ಮಟ್ಟದ ಪ್ರಚಾರದ ವೈಖರಿ ನಿಲ್ಲಲೇ ಬೇಕು. ಸರಕಾರವೆಂದ ಮೇಲೆ ಖಜಾನೆಯ ಹಣ ನಾನಾ ಯೋಜನೆಗಳಿಗೆ ವಿನಿಯೋಗಿಸಲೇ ಬೇಕು. ಇದಕ್ಕೆ ಡಂಗೂರ ಸಾರುವ ಅಗತ್ಯವಿಲ್ಲ. ಯಾವುದೇ ಪಕ್ಷದ, ಯಾವುದೇ ನಾಯಕನ ಕಿಸೆಯ ಹಣವಲ್ಲ, ನೆನಪಿರಲಿ.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೧೭-೦೩-೨೦೨೩

ಚಿತ್ರ ಕೃಪೆ: ಇಂಟರ್ನೆಟ್ ತಾಣ