ಕರ್ನಾಟಕದ ಏಕೀಕರಣಕ್ಕೆ ಮರಾಠಿ ಹೆಣ್ಣುಮಗಳು...

ಕರ್ನಾಟಕದ ಏಕೀಕರಣಕ್ಕೆ ಮರಾಠಿ ಹೆಣ್ಣುಮಗಳು...

ಕನ್ನಡ ಹೋರಾಟಗಳೆಂದರೆ‌ ಅರ್ಧ ರಾತ್ರಿಯಾದರೂ ಸರಿಯೇ ದಂಡು ಸೇರಿಸಿ ಕನ್ನಡ ವಿರೋಧಿಗಳನ್ನ ಬಗ್ಗುಬಡಿಯುತ್ತಿದ್ದ 'ಗಡಿನಾಡ ಸಿಂಹಿಣಿ' ಜಯದೇವಿತಾಯಿ ಲಿಗಾಡೆ ಹುಟ್ಟಿದ್ದು ಜೂನ್ ತಿಂಗಳ ೨೩ರಂದು. ಹೀಗಾಗಿ ಈ ಸಂಪೂರ್ಣ ಜೂನ್ ತಿಂಗಳನ್ನು ಈ ತಾಯಿಯನ್ನ ನೆನೆಯುತ್ತ ಅವರ ಬಗ್ಗೆ ತಿಳಿಯುತ್ತ ಕಳೆಯೋಣ, ಕನ್ನಡದ ಕ್ರಾಂತಿಯ ದೀಪಗಳು ಹೇಗೆ ಜಗಮಗಿಸಿ ಮುಂದಿನ ಪೀಳಿಗೆಯು ಸರಿದಾರಿಯಲ್ಲಿ ನಡೆಯಲು ಬೆಳಕನ್ನ ಚೆಲ್ಲಿದ ಈ ನಿಸ್ವಾರ್ಥ ಮಹಾಚೇತನಗಳು ಕನ್ನಡದ ಹಿರಿಮೆ.

೧೯ರ ದಶಕದಲ್ಲಿ ಮರಾಠಿ ಪ್ರಬಲ್ಯವಿದ್ದ ನಾಡಲ್ಲಿ, ಕರ್ನಾಟಕ, ಕನ್ನಡ ಮತ್ತು ಕನ್ನಡ ಜನರಿಗೋಸ್ಕರ ದೂರದ ಗಡಿ ಸೊಲ್ಲಾಪುರದಲ್ಲಿ ನಿಂತು ಗುಟುರು ಹಾಕಿ ಕನ್ನಡಿಗರ ಕೋಟೆ ಕಟ್ಟಿ ಅದನ್ನ ರಕ್ಷಣೆ ಮಾಡಿದ ಅಪ್ರತಿಮ ಹೋರಾಟಗಾರ್ತಿ ಗಡಿನಾಡ ಧೀರೋದ್ದಾತ ಮಹಿಳೆ ಗಡಿನಾಡ ಹುಲಿ ಬಿರುದಾಂಕಿತೆ ಜಯದೇವಿತಾಯಿ ಲಿಗಾಡೆ. ಆಧ್ಯಾತ್ಮ ಚಿಂತನಕಾರರು. ಕುಟುಂಬ ವತ್ಸಲೆ, ಸಾಹಿತ್ಯಸಾಧಕಿ, ಸಮಾಜಸೇವಕಿ ಹೀಗೆ ತ್ರಿವೇಣಿ ಸಂಗಮವಾಗಿದ್ದ ಈ ಜಂಗಮತಾಯಿ ತಾಯ್ನುಡಿಯ ಸೇವೆಗಾಗಿ ಸವೆದರು. ಕನ್ನಡ ನುಡಿಗೆ, ಕನ್ನಡ ನಾಡಿಗೆ ತನ್ನನ್ನು ಅರ್ಪಿಸಿಕೊಂಡು ಅಜರಾಮರ ಕೀರ್ತಿಪಾತ್ರರಾದ ಶ್ರೀಮತಿ ಜಯದೇವಿ ತಾಯಿ ಲಿಗಾಡೆ ಅವರ ಜೀವನ ದರ್ಶನವೆಂದರೆ ಅದೊಂದು ಯಶೋಗಾಥೆ.

ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷೆ, *‘ಗಡಿನಾಡ ದುರ್ಗಾ’* ಎಂದು ಬಿರುದಾಂಕಿತರಾಗಿರುವ ಅಖಂಡ ಕರ್ನಾಟಕದ ಕನಸು ಕಂಡು, ಕರ್ನಾಟಕದ ಏಕೀಕರಣಕ್ಕಾಗಿ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಾ, ಕನ್ನಡನಾಡು-ನುಡಿಗಾಗಿ ದುಡಿಯುತ್ತ ಬರಿ ಮಾತಲ್ಲೇ ಹೇಳದೆ ಕೃತಿಯಲ್ಲಿ ಮಾಡಿ ತೋರಿಸಿದ ಗಟ್ಟಿಗಿತ್ತಿ.

ಬೆಳಗಾವಿಯಂಥ ಗಡಿ ಪ್ರದೇಶದಲ್ಲಿ ಕನ್ನಡದ ಗುಡಿ ಕಟ್ಟಲು ಮತ್ತು ರಕ್ಷಣೆ ಮಾಡಲು ಹೋರಾಡಿದ ಅಪ್ರತಿಮ ಹೋರಾಟಗಾರ್ತಿ, ಮಹಾರಾಷ್ಟ್ರದಲ್ಲಿ ಕನ್ನಡ ಪ್ರಧಾನವಾಗಿರುವ ಸೋಲ್ಲಾಪುರ, ಅಕ್ಕಲಕೋಟೆ, ಜತ್ತ, ಜೊತೆಗೆ ಕೇರಳದ ಕಾಸರಗೋಡು ಹಾಗೂ ಇತರ ಕನ್ನಡ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಅವರ ಜೀವನದುದ್ದಕ್ಕೂ ಹೋರಾಟ ನಡೆಸಿದ್ದಾರೆ.

ಕಾವೇರಿಯಿಂದ ಗೋದಾವರಿಯ ತನಕ ಇದ್ದ ಕನ್ನಡ ನಾಡು ಪರಕೀಯ ಆಳ್ವಿಕೆಗೆ ಒಳಪಟ್ಟು ಜರ್ಜರಿತವಾಗಿ ವಸಾಹತು ಶಾಹಿಗಳ ಕಾಲಕ್ಕೆ ಹಂಚಿ ಹರಿದು ಹೋಯಿತು. ಹೀಗೆ ಪರಕೀಯರಿಂದ ಸ್ವಾಂತಂತ್ರ್ಯ ಪಡೆಯುವುದು, ಕರ್ನಾಟಕ ಏಕೀಕರಣ ಮಾಡುವುದು ಜಯದೇವಿ ತಾಯಿಯವರಿಗೆ ಮುಖ್ಯವಾಗಿತ್ತು. ಹೈದ್ರಾಬಾದ ಕರ್ನಾಟಕ ವಿಮೋಚನೆಗೆ ದುಡಿದ ತಾಯಿಯವರು ಮುಂದೆ ಕರ್ನಾಟಕ ಏಕೀಕರಣಕ್ಕಾಗಿ ಪಣತೊಟ್ಟರು. ಆಗ ಕನ್ನಡ ನಾಡಿನ ಮಕ್ಕಳು, ನಮ್ಮ ತಾಯಿ ಅನೇಕ ಪ್ರಾಂತಗಳಲ್ಲಿ ಹಂಚಿ ಹೋದಾಗ ನಾವು ನೆಮ್ಮದಿಯಿಂದ ಇರುವುದು ಹೇಗೆ? ಒಡೆದು ಹೋದ ಕರ್ನಾಟಕ ಒಂದಾಗಬೇಕು. ಎಂದು ಬಲವಾಗಿ ಪ್ರತಿಪಾದಿಸಿದರು. ಅನೇಕರ ಅವಿರತ ಹೋರಾಟದ ಫಲವಾಗಿ ಕರ್ನಾಟಕ ಏಕೀಕರಣವಾಯಿತು.

ಗಡಿಯಲ್ಲಿ ಕಟ್ಟಿ ಕನ್ನಡದ ಕೋಟೆ, ಉಡಿಯಲ್ಲಿ,

ಇಡಿಯ ನಾಡಕ್ಕರೆಯ, ಮಕ್ಕಳಾಡುಂಬೊಲವೆ,

ಒಡವೆಗಳನುಳಿದ ರುದ್ರಾಕ್ಷಿ ಕಂಕಣ ಬಲವೆ,

ಇದ್ದಲ್ಲೇ ಮರಳಿ ಗೆದ್ದಿರಿ ತುತ್ತತುದಿಯಲ್ಲಿ..

ಜಯದೇವಿ ತಾಯಿಯವರ ಈ ಮಹಾ ಕವನ ಸಾಹಿತ್ಯವನ್ನು ಓದಿದ ಜನ ಇವರನ್ನು ಆಧುನಿಕ ಕಾಲದ ಅಕ್ಕಮಹಾದೇವಿ ಅಂತ ಕರೆದಿದ್ದುಂಟು. ಇವರು ಹಲವಾರು ಸಾಹಿತ್ಯಗಳಲ್ಲಿ ಮಹಿಳೆಯರ ಹಕ್ಕುಗಳ ಬಗೆಗೆ ದ್ವನಿ ಎತ್ತಿದ್ದಾರೆ. ರವೀಂದ್ರನಾಥ ಠಾಕೂರರ ಭಕ್ತಿಗೀತೆಯಂತೆ ಬರೆದ ಗೀತೆಗಳು ಈ ಕೃತಿಯಲ್ಲಿವೆ. ಇಲ್ಲಿನ ಕೆಲವು ಗೀತೆಗಳು ಭಾರತೀಯ ಕವಿತಾ ಪುಸ್ತಕದಲ್ಲೂ ಸೇರ್ಪಡೆಯಾಗಿವೆ. ಇವರ ಈ ಕೃತಿಯಲ್ಲಿ ಸಾಮಾಜಿಕ ಪ್ರಜ್ಞೆಯ ಜೊತೆಗೆ ಅಧ್ಯಾತ್ಮಿಕ ಭಾವವೂ ತುಂಬಿದೆ.

ಭಾರತ ಸ್ವಾತಂತ್ರ್ಯ, ಹೈದ್ರಾಬಾದ್ ಕರ್ನಾಟಕದ ವಿಮೋಚನೆ ಮತ್ತು ಕರ್ನಾಟಕ ಏಕೀಕರಣ, ಗಡಿಯಲ್ಲಿ ಕನ್ನಡ ಶಾಲೆಗಳನ್ನು ಕಟ್ಟಿದ್ದು ಒಳಗೊಂಡಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ದುಡಿದ ಜಯದೇವಿತಾಯಿಯವರಿಗೆ ಕರ್ನಾಟಕದಲ್ಲಿ ಅತ್ಯಂತ ಸಾಮಾನ್ಯ ಬರಹಗಾರರಿಗೆ ಸಂದ ಗೌರವ, ನೆರವು ಕೂಡಾ ಬಂದಿಲ್ಲವೆನ್ನುವುದು ವಿಷಾದನೀಯ. ೧೯೭೪ರಲ್ಲಿ ಮಂಡ್ಯದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸೋಲಾಪೂರ ಕರ್ನಾಟಕಕ್ಕೆ ಸೇರಬೇಕೆಂಬ ಜಯದೇವಿತಾಯಿ ಲಿಗಾಡೆಯವರ ಹೋರಾಟ ಫಲಪ್ರದವಾಗದಾಗ ತಾವೇ ೧೯೮೦ ರಲ್ಲಿ ಸೋಲಾಪೂರ ತೊರೆದು ಕರ್ನಾಟಕದ ಗಡಿಭಾಗ, ಬಸವಾದಿ ಶರಣರ ಕಾಯಕಭೂಮಿ ಬಸವಕಲ್ಯಾಣದಲ್ಲಿ ಭಕ್ತಿಭವನ ಕಟ್ಟಿಕೊಂಡು ನೆಲೆಸಿದರು. ೧೯೮೬ ರ ಜುಲೈ ೨೪ ರಂದು ಕನ್ನಡ ನೆಲದಲ್ಲಿ ಕೊನೆಯುಸಿರೆಳೆದರು. ಬಸವಕಲ್ಯಾಣದಲ್ಲಿರುವ ಅವರ ಸಮಾಧಿ (ಗದ್ದುಗೆ)ಯನ್ನು ಸ್ಮಾರಕ ಮಾಡುವ ಸೌಜನ್ಯವನ್ನು ಕೂಡಾ ನಮ್ಮ ಸರಕಾರಗಳು ತೋರಿಸುತ್ತಿಲ್ಲ.

ಕೊನೆಗೆ ಹನಿ : ಕನ್ನಡಿಗರೇ ಈ ರೀತಿಯಾಗಿ ಕನ್ನಡ ಉಳಿಸಲು ಬೆಳೆಸಲು ಅನೇಕರು ಹೋರಾಡಿದ್ದಾರೆ, ಆದರೆ ಆ ಹೋರಾಟದ ಹಾದಿಯಲ್ಲಿ ಬಂಗಾರದ ನಕ್ಷತ್ರ ಈ ನಮ್ಮ ತಾಯಿ ಜಯದೇವಿ ಲಿಗಾಡೆ. ಈ ತಾಯಿಯ ತತ್ವಗಳು ಸಮಾಜಪರ ಚಿಂತನೆಗಳು ಮತ್ತು ಕನ್ನಡ ನಾಡುನುಡಿಯ ವಿಚಾರಗಳನ್ನ ಮುಂದಿನ ಪೀಳಿಗೆಗೆ ಮುಟ್ಟಿಸುತ್ತ ಅವರ ಆಶೋತ್ತರಗಳನ್ನ ಈಡೇರಿಸಲು ನಾವೆಲ್ಲರೂ ಹೋರಾಡುತ್ತಲೇ ಇರಬೇಕು. ಈ ದಿನ (ಜೂನ್ ೨೩) ಜಯದೇವಿತಾಯಿ ಇವರ ಹುಟ್ಟು ಹಬ್ಬ. ಈ ದಿನದಂದು ನಾವು ಅವರನ್ನು ಸ್ಮರಿಸಲೇ ಬೇಕು.

-ಶರಣ ಶಿವಣ್ಣ ಗುಂಡಾನವರ

ಚಿತ್ರ ಕೃಪೆ: ಇಂಟರ್ನೆಟ್ ತಾಣ