ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.

ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.

ಬರಹ

ನಮ್ಮ ದೇಶ ಕಂಡ ಅಪ್ರತಿಮ ಪ್ರತಿಭೆಯ ಭಾರತ ರತ್ನ, ವಿಜ್ನಾನಿ-ರಾಷ್ಟ್ರಪತಿ ಡಾ.ಅವುಲ್ ಫಕೀರ್ ಜೈನುಲ್ಲಾಬ್ದೀನ್ ಅಬ್ದುಲ್ ಕಲಾಂ (ಡಾ.ಎ.ಪಿ.ಜೆ.ಅಬ್ದುಲ್ ಕಲಾಂ) ಅವರ ಹುಟ್ಟಿದ ಹಬ್ಬವಿಂದು. ನಮ್ಮ ಪತ್ರಿಕೆಗಳು ಮರೆತೇ ಹೋದ ಸುದ್ದಿ ಇದು. ಕಾರಣ ಈಗ ಅವರು ಮಾಜಿ. ಹಾಗಾಗಿ ನಮ್ಮ ಮಾಧ್ಯಮಗಳಿಗೆ ಇದು ‘ಅಪತ್ರಿಕಾವಾರ್ತೆ’!

ಆದರೆ ಲಕ್ಷಾಂತರ ಸಂಪದಿಗರು, ಸಂಪದ ಓದುಗರ ಪರವಾಗಿ ಆತ್ಮೀಯ ಸು.ಶ್ರೀ. ಸವಿತಾ ಎಸ್.ಆರ್. ಅವರು ನಿನ್ನೆಯೇ ಶುಭ ಕೋರಿದ್ದಾರೆ. ಆ ಪ್ರಕ್ರಿಯೆಯ ಮುಂದುವರೆದ ಭಾಗವಾಗಿ ಈ ಲೇಖನ. ಅವರಿಗೊಂದು ನುಡಿ ಶುಭಾಶಯ.

ದೇಶದ ವೈಜ್ನಾನಿಕ ಸಂಶೋಧನಾ ಕೇಂದ್ರವೊಂದರಲ್ಲಿ ರಕ್ಷಣೆಗೆ ಸಂಬಂಧಿಸಿದ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲಾಗಿತ್ತು. ಯೋಜನೆಯನ್ನು ಅತಿ ಶೀಘ್ಹ್ರದಲ್ಲಿ ಪೂರ್ಣಗೊಳಿಸಬೇಕಾದ ಅನಿವಾರ್ಯತೆ ತಲೆದೋರಿತ್ತು. ಮೇಲಾಗಿ ಪೂರ್ಣಗೊಳಿಸಲು ಕೇಂದ್ರ ನೀಡಿದ ಅವಧಿ ಸಹ ಅತಿ ಕಡಿಮೆ ಇತ್ತು.

೭೦ ಜನ ವಿಜ್ನಾನಿಗಳು ಹಗಲು-ಇರುಳುಗಳನ್ನು ಏಕಗೊಳಿಸಿ ದೇಶಕ್ಕಾಗಿ ದುಡಿಯುತ್ತಿದ್ದರು. ರಜೆಯ ಮಾತಿರಲಿ, ವಾರದ ರಜೆಯನ್ನೂ ಸಹ ಪಡೆದುಕೊಳ್ಳುವ ಅವಕಾಶವಿರಲಿಲ್ಲ. ಹಾಗೆಯೇ ೪ ತಿಂಗಳುಗಳ ಕಾಲ ಸತತ ದುಡಿದ ವಿಜ್ನಾನಿಗಳು ಕೆಲಸದ ಒತ್ತಡ ಹಾಗು ‘ಬಾಸ್’ನ ಬೇಡಿಕೆಗಳನ್ನು ಈಡೇರಿಸಲು ಹೆಣಗಿ ಸುಸ್ತಾಗಿದ್ದರು. ಆದರೆ ಆ ಬಾಸ್ ಹಾಗಿದ್ದರು. ಅವರ ನಡೆ-ನುಡಿಯಿಂದಾಗಿ ಎಲ್ಲರೂ ‘ಫೋರ್ಸ್ದ್ ವಿಧೇಯರಾಗಿದ್ದರು’! ಮಾತ್ರವಲ್ಲ ಅಂತಹ ಅಪರಿಮಿತ ಒತ್ತಡದ ಮಧ್ಯೆ ಬೇರೆ ಉದ್ಯೋಗ ಹುಡುಕುವ ಬಗ್ಗೆ ಯಾರೂ ಯೋಚಿಸುವ ಗೊಡವೆಗೂ ಹೋಗಿರಲಿಲ್ಲ!

ಇಂತಹ ಪರಿಸ್ಥಿಯಲ್ಲಿ ಆ ಕೇಂದ್ರದ ವಿಜ್ನಾನಿಯೊಬ್ಬರು ಬಾಸ್ ಬಳಿಗೆ ಬಂದು, "ಸಾರ್..ನಾನು ಇವತ್ತು ಬೇಗ ಮನೆಗೆ ಹೋಗಬೇಕು. ನಮ್ಮ ಮನೆಯ ಪಕ್ಕದ ಬೃಹತ್ ಮೈದಾನದಲ್ಲಿ ವಸ್ತು ಪ್ರದರ್ಶನ ಬಂದಿದ್ದು ನನ್ನ ಪುಟ್ಟ ಮಕ್ಕಳನ್ನು ಅಲ್ಲಿಗೆ ಕರೆದುಕೊಂಡು ಹೋಗುವುದಾಗಿ ಭರವಸೆ ಕೊಟ್ಟಿದ್ದೇನೆ" ಎಂದರು. ಬಾಸ್ ಅಂದು ಅರ್ಧ ಗಂಟೆ ಮುಂಚೆ ಮನೆಗೆ ಹೋಗಲು ಕೇಂದ್ರದ ಆ ಹಿರಿಯ ವಿಜ್ನಾನಿಗೆ ಅನುಮತಿ ನೀಡಿದರು.

ಆ ವಿಜ್ನಾನಿ ಎಂದಿನಂತೆ ಕೆಲಸದಲ್ಲಿ ತೊಡಗಿಕೊಂಡರು. ಮಧ್ಯಾನ್ಹ ಊಟದ ಬಳಿಕವೂ ಅವರ ಕೆಲಸ ಮುಂದುವರೆದಿತ್ತು. ಅವರ ಕೆಲಸ ಮುಗಿಯುವ ಹಂತದಲ್ಲಿತ್ತು. ಆದರೆ ಕೆಲಸದಲ್ಲಿ ಅವರು ಎಷ್ಟು ತನ್ಮಯರಾಗಿದ್ದರು ಎಂದರೆ ಅವರು ತಮ್ಮ ಕೈಗಡಿಯಾರ ನೋಡಿಕೊಂಡಿದ್ದು ರಾತ್ರಿ ೮.೩೦ಕ್ಕೆ. ಮಕ್ಕಳಿಗೆ ಅವರು ಕೊಟ್ಟ ಮಾತು ನೆನಪಿಗೆ ಬಂತು. ಓಡೋಡಿ ಬಾಸ್ ಚೇಂಬರ್ ಗೆ ಬಂದರು. ಅವರು ಅಲ್ಲಿರಲಿಲ್ಲ. ಕೊನೆಗೆ ಉಪಾಯಗಾಣದೇ ಅಪರಾಧಿ ಮನೋಭಾವದಿಂದ ಮನೆ ಕೆಡೆಗೆ ನಡೆದರು.

ಮನೆಯಲ್ಲಿ ಪೂರ್ತಿ ಮೌನ. ವಾತಾವರಣ ಸ್ಫೋಟಕ ಸ್ಥಿತಿ ತಲುಪಿತ್ತು. ಮಕ್ಕಳೂ ಕಾಣಿಸಲಿಲ್ಲ. ಪತ್ನಿ ಸೋಫಾದಲ್ಲಿ ಕುಳಿತು ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದರು. ಈ ವಿಜ್ನಾನಿ ತಾನು ಏನು ಮಾತನಾಡಿದರೂ ಸ್ಪೋಟಕ ಪ್ರತಿಕ್ರಿಯೆ ಬಂದೇ ಬರುತ್ತದೆ ಎಂದು ಮಾತು ಆರಂಭಿಸಲು ತಡವರಿಸುತ್ತಿದ್ದರು. ಆದರೆ ಹೇಗಾದರೂ ಮಾಡಿ ತಪ್ಪು ಮಾಡಿದವರು ಮೊದಲು ಪ್ರಾರಂಭಿಸಬೇಕು ಎನ್ನುವುದು ಲೋಕಾರೂಢಿ!
ಆದರೆ ಅವರ ಪತ್ನಿಯೇ ಮೊದಲು ಮಾತಿಗಿಳಿದರು. "ಕಾಫಿ ಮಾಡಿಕೊಡಲೇ ಅಥವಾ ಹಸಿವಾಗಿದ್ದರೆ ಊಟಕ್ಕೆ ಬಡಿಸಲೇ?"

ಸ್ವಲ್ಪ ಸಮಾಧಾನ ಎನಿಸಿತು ಇವರಿಗೆ. ‘ನೀನು ಕಾಫಿ ಕುಡಿಯುವುದಾದರೆ ನಾನೂ ಕುಡಿಯುತ್ತೇನೆ.. ಅದಿರಲಿ ಮಕ್ಕಳೆಲ್ಲ ಎಲ್ಲಿ?’ ಸ್ವಲ್ಪ ಹಿಂಜರಿಕೆಯಿಂದಲೇ ಪ್ರಶ್ನಿಸಿದರು.

‘ನಿಮಗೊತ್ತಿಲ್ಲವೇ?..! ನಿಮ್ಮ ಬಾಸ್ ಬಂದು ಮಕ್ಕಳನ್ನು ವಸ್ತು ಪ್ರದರ್ಶನಕ್ಕೆ ಕರೆದುಕೊಂಡು ಹೋಗಿದ್ದಾರೆ..’

ವಿಜ್ನಾನಿಗೆ ಅಚ್ಚರಿಯಾಯಿತು.

ನಿಜವಾಗಿ ಆಗಿದ್ದೇನು ಎಂದರೆ..

ವಿಜ್ನಾನಿಗೆ ಬಹು ಬೇಗ ಮನೆಗೆ ಹೋಗಲು ಅನುಮತಿ ನೀಡಿದ್ದ ಬಾಸ್, ಅವರು ಕೆಲಸದಲ್ಲಿ ತನ್ಮಯರಾಗಿ ತಮ್ಮನ್ನು ತೋಡಗಿಸಿಕೊಳ್ಳುತ್ತಿದ್ದ ರೀತಿ ನೋಡಿ, ಈ ವ್ಯಕ್ತಿ ಬೇಗ ಮನೆಗೆ ಹೋಗುವ ಸ್ಥಿತಿಯಲ್ಲಿ ಇಲ್ಲ ಎಂದು ಅರಿತರು. ಆದರೆ ಅವರ ಮನೆಯಲ್ಲಿ ಪುಟ್ಟ ಮಕ್ಕಳು ಅವರಿಗಾಗಿ ಕಾಯುತ್ತಿದ್ದಾರೆ ಎಂಬ ಅರಿವು ಅವರಿಗಿತ್ತು. ನಮ್ಮ ಕೆಲಸಗಳಿಗಾಗಿ ಮನೆಯವರು ಪರಿತಪಿಸುವಂತಾಗಬಾರದು ಎಂದುಕೊಂಡವರೆ, ಮಕ್ಕಳನ್ನು ಪ್ರದರ್ಶನಕ್ಕೆ ಕರೆದೊಯ್ಯುವ ಜವಾಬ್ದಾರಿಯನ್ನು ತಾವೇ ತೆಗೆದುಕೊಂಡರು.

ನಮ್ಮ ಬಾಸ್ ಯಾವತ್ತೂ ಇಂತಹ ಕೆಲಸಗಳನ್ನು ಮಾಡಬೇಕು ಅಂತಲ್ಲ. ಒಂದು ಸಲವಾದರೂ ಹೀಗೆ ನಡೆದುಕೊಂಡರೆ ಅವರ ಕೈ ಕೆಳಗಿನ ಸಿಬ್ಬಂದಿ ವಿಧೇಯರಾಗಿ ನಡೆಯುವುದರಲ್ಲಿ ಯಾವ ಸಂದೇಹವಿಲ್ಲ.

ಅತ್ಯಂತ ಒತ್ತಡ ಹಾಗು ತುಂಬಾ ಕೆಲಸಗಳ ಹೊರತಾಗಿಯೂ ವಿಜ್ನಾನಿಗಳು ತಮ್ಮ ಬಾಸ್ ಅವರ ಆಜ್ನೆ ಹಾಗು ಸಲಹೆಗಳನ್ನು ಪಾಲಿಸುತ್ತ ಮೈಮುರಿದು ದುಡಿಯಲು ಇದು ಕಾರಣವಾಗಿತ್ತು. ಅಂದ ಹಾಗೆ ಆ ಬಾಸ್ ಯಾರು ಗೊತ್ತೆ?

ನಮ್ಮ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ! ತಮಿಳುನಾಡಿನ ರಾಮೇಶ್ವರಂ ನ ಬಡ ಬೆಸ್ತರ ಕುಟುಂಬದಲ್ಲಿ ಜನಿಸಿ, ವೃತ್ತ ಪತ್ರಿಕೆಗಳನ್ನು ಅಣ್ಣ ಜಲಾಲುದ್ದೀನ್ ನೊಂದಿಗೆ ಮನೆ ಮನೆಗೆ ಹಂಚಿದ ವ್ಯಕ್ತಿ. ನಮ್ಮ ಪೀಳಿಗೆಗೆ ಕನಸುಗಳನ್ನು, ಆಸೆಗಳನ್ನು ಬಿತ್ತಿದ ಮಹಾನ್ ಮಾನವತಾವಾದಿ. ೩೫ಕ್ಕೂ ಹೆಚ್ಚು ದೇಶಿ-ವಿದೇಶಿ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟ್ರೇಟ್ ಪಡೆದ, ನಮ್ಮ ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರಕ್ಕೆ ಪಾತ್ರರಾದ ಜಾತಿ-ಮತದ ಎಲ್ಲೆಗಳನ್ನು ಮೀರಿ ನಿಂತ ಆಸ್ತಿ.

ಅವರು ನೂರ್ಕಾಲ ಆರೋಗ್ಯದಿಂದ ಬಾಳಲಿ ಎಂಬುದೇ ನಮ್ಮ ಹಾರೈಕೆ. ಸದ್ಯ ಅಣ್ಣಾ ವಿಶ್ವವಿದ್ಯಾಲಯ, ಚೆನ್ನೈ ನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿರುವ ಪ್ರೊ.ಕಲಾಂ ಅವರಿಗೆ ಇದು ಸಂಪದಿಗರ ಹುಟ್ಟಿದ ಹಬ್ಬದ ಶುಭಾಶಯ.