ಕಸರತ್ತಿನ ಮೂಲಕ ಕಂಪ್ಯೂಟರ್ ಆಟ ಆಡಿ!

ಕಸರತ್ತಿನ ಮೂಲಕ ಕಂಪ್ಯೂಟರ್ ಆಟ ಆಡಿ!

ಕಸರತ್ತಿನ ಮೂಲಕ ಕಂಪ್ಯೂಟರ್ ಆಟ ಆಡಿ!

 

ಕಂಪ್ಯೂಟರನ್ನು ಆಟವಾಡಲು ಬಳಸುವ ಜನರೂ ಇದ್ದಾರೆ,ಅವರು ಎಕ್ಸ್‌ಬಾಕ್ಸ್ ಎನ್ನುವ ವ್ಯವಸ್ಥೆಯನ್ನು ಬಳಸಿ,ಕಂಪ್ಯೂಟರಿನ ಜತೆ ವ್ಯವಹರಿಸುವುದಿದೆ.ಮೌಸ್,ಕೀಲಿ ಮಣೆಯಂತೆ ಕಂಪ್ಯೂಟರಿನ ಜತೆ ವ್ಯವಹರಿಸಲು ಎಕ್ಸ್‌ಬಾಕ್ಸ್ ಅನುವು ಮಾಡುತ್ತದೆ.ಎಕ್ಸ್‌ಬಾಕ್ಸಿನ ಅನುಕೂಲ ಎಂದರೆ,ಅದು ಕಂಪ್ಯೂಟರ್ ಆಟಗಳಿಗೆ ಹೇಳಿ ಮಾಡಿಸಿದ ಹಾಗಿದೆ.ಈಗ ಮೈಕ್ರೋಸಾಫ್ಟ್ ಕೈನೆಟಿಕ್ ಎನ್ನುವ ಇನ್ನೊಂದು ತೆರನ ವ್ಯವಸ್ಥೆಯನ್ನು ರೂಪಿಸಿದೆ.ಇದರಲ್ಲಿ ಕಂಪ್ಯೂಟರಿನ ಮುಂದೆ ಆಂಗಿಕ ಭಾವ ಪ್ರದರ್ಶಿಸಿದರೂ,ಅದಕ್ಕೆ ಕಂಪ್ಯೂಟರ್ ಪ್ರತಿಕ್ರಿಯಿಸುವಂತೆ ಯೋಜಿಸಲಾಗಿದೆ.ಕಂಪ್ಯೂಟರ್ ಆಟಗಳನ್ನಾಡುವಾಗ,ಜನರು ಕಂಪ್ಯೂಟರ್ ಮುಂದೆ ಕುಳಿತು ಕೂಚು ಭಟ್ಟರಾಗುವುದು ತಪ್ಪಿಸುವುದು,ಹೊಸ ವ್ಯವಸ್ಥೆಯ ವಿಶೇಷ.ಕಂಪ್ಯೂಟರಿನ ಮುಂದೆ ಕೈಯಾಡಿಸಿದರೆ,ಅದಕ್ಕೆ ಕಂಪ್ಯೂಟರ್ ಪ್ರತಿಕ್ರಿಯಿಸುತ್ತದೆ.ವಿಡಿಯೋ ಕ್ಯಾಮರಾ,ಮೈಕ್ ಇಂತಹ ಸೆನ್ಸರುಗಳು ಇರುವ ವ್ಯವಸ್ಥೆಯ ಮೂಲಕ,ಇದು ಸಾಧ್ಯವಾಗುತ್ತದೆ.ಕಂಪ್ಯೂಟರ್‌ನಲ್ಲಿ ಕಾರ್ ರೇಸ್ ನಡೆಸಲು,ಕೈಯನ್ನು ಎಡ ಬಲಕ್ಕೆ ಬೀಸುತ್ತಾ,ತೆರೆಯಲ್ಲಿ ಕಾಣುವ ಕಾರನ್ನು ನಿಯಂತ್ರಿಸಬೇಕು.ಕಾರಿಗೆ ಬ್ರೇಕ್,ಎಕ್ಸಲೇಟರನ್ನು ಕಂಪ್ಯೂಟರೇ ನಿರ್ಧರಿಸುತ್ತದೆ.ವಿಡಿಯೋ ಗೇಮ್ಸ್‌ಗಳಿಗಾಗಿರುವ ಕೈನೆಟಿಕ್ ಬೆಲೆ ನಾಲ್ಕುನೂರು ಡಾಲರುಗಳು.ಈ ಬೆಲೆಗೆ ಇನ್ನೂರೈವತ್ತು ಜಿಬಿ ಸ್ಮರಣಶಕ್ತಿ ಸಿಗುತ್ತದೆ.ಮುನ್ನೂರು ಮತ್ತು ನೂರೈವತ್ತು ಡಾಲರುಗಳ ಬೆಲೆಗೂ ಕೈನೆಟಿಕ್ ಮತ್ತು ಎಕ್ಸ್‌ಬಾಕ್ಸ್ ಜತೆಯಾಗಿ ಸಿಗುತ್ತದೆ.
------------------------------------------
ಮೊಬೈಲುಗಳಲ್ಲೀಗ ಗೂಗಲ್ ದಿಡೀರ್ ಶೋಧ
ಅಂತರ್ಜಾಲದಲ್ಲಿ ಗೂಗಲ್ ದಿಡೀರ್ ಶೋಧ ಸೇವೆ ಒದಗಿಸಿದ ಬಗ್ಗೆ ನೀವು ಅರಿತಿದ್ದೀರಿ.ಇದೀಗ ಈ ಸೇವೆ ಮೊಬೈಲ್ ಸಾಧನಗಳಲ್ಲೂ ಸಿಗುತ್ತಿದೆ.ಐಫೋನ್ ಮತ್ತು ಅಂಡ್ರಾಯಿಡ್ ಕಾರ್ಯಾಚರಣೆ ವ್ಯವಸ್ಥೆ ಹೊಂದಿರುವ ಫೋನುಗಳಲ್ಲಿದು ಲಭ್ಯ.ಮೊದಲಾಗಿ ಮೊಬೈಲ್ ಬ್ರೌಸರಿನಲ್ಲಿ ಗೂಗಲ್ ತಾಣಕ್ಕೆ ಹೋಗಿ,ದಿಡೀರ್ ಶೋಧವನ್ನು ಚಾಲೂ ಮಾಡಿಟ್ಟರೆ,ಮುಂದೆ ಈ ಸೇವೆ ಲಭ್ಯವಾಗುತ್ತದೆ.ಈ ಸೇವೆಯ ಲಭ್ಯತೆ ಮೊಬೈಲ್ ಸಾಧನಗಳಲ್ಲಿ ಹೆಚ್ಚು ಪ್ರಸ್ತುತವೂ ಹೌದು.ಕೆಲವೇ ಶಬ್ದಗಳನ್ನು ಟೈಪಿಸಿದೊಡನೆ, ಬಳಕೆದಾರರ ಯಾವುದರ ಬಗ್ಗೆ ಶೋಧ ನಡೆಸುತ್ತಿರ ಬಹುದು ಎಂದು ಊಹಿಸಿ,ವಿವಿಧ ಫಲಿತಾಂಶಗಳನ್ನು ಪ್ರದರ್ಶಿಸುವುದರ ಮೂಲಕ,ಟೈಪಿಂಗ್ ಮಾಡುವ ಅವಶ್ಯಕತೆಯನ್ನು ಕಡಿಮೆಯಾಗಿಸುವುದು ದಿಡೀರ್ ಶೋಧ ಸೇವೆಯ ಹೆಗ್ಗಳಿಕೆಯಾಗಿದೆ.ಇತರ ಬಳಕೆದಾರರ ಶೋಧಕಾರ್ಯದಿಂದ ಗೂಗಲ್ ಈ "ಜ್ಞಾನ" ಗಳಿಸುತ್ತದೆ.
------------------------------------------------
ಬರ್ಮಾದ ಮೇಲೆ ಸೈಬರ್ ದಾಳಿ!
ಬರ್ಮಾದ ಅಂತರ್ಜಾಲ ತಾಣಗಳನ್ನು ಯಾರೂ ಸಂಪರ್ಕಿಸಲಾಗದಂತೆ ಸೈಬರ್ ದಾಳಿಗಳನ್ನು ಆಯೋಜಿಸಲಾಗಿದೆ.ಈ ದಾಳಿಗಳನ್ನು ಹಲವು ತಾಣಗಳ ಮೂಲಕ ಮಾಡಲಾಗುತ್ತಿದ್ದು,ದಾಳಿಯ ಉದ್ದೇಶ ಅಥವ ಮೂಲ ಯಾವುದು ಎನ್ನುವುದು ಸ್ಪಷ್ಟವಾಗಿಲ್ಲ.ಅಕ್ಟೋಬರ್ ಕೊನೆಯ ವಾರದಲ್ಲಿ ಆರಂಭವಾದ ದಾಳಿಗಳು ಇನ್ನೂ ಮುಂದುವರಿಯುತ್ತಿವೆ.ಬರ್ಮಾದಲ್ಲಿ ನಡೆಯಲಿರುವ ಚುನಾವಣೆಗಳ ಸಮಯದಲ್ಲಿ ದೇಶದಲ್ಲಿ ಏನು ನಡೆಯುತ್ತಿದೆ ಎನ್ನುವುದು ಹೊರ ಪ್ರಪಂಚಕ್ಕೆ ತಿಳಿಯದಂತೆ ಮಾಡುವುದು ಈ ದಾಳಿಯ ಉದ್ದೇಶವಾಗಿರಬಹುದು ಎನ್ನುವ ಗುಮಾನಿಯಿದೆ.ಹಾಗಿದ್ದರೆ,ದಾಳಿಯು ಅಲ್ಲಿನ ಮಿಲಿಟರಿ ಆಡಳಿತದ ಕುಮ್ಮಕ್ಕಿನಿಂದ ನಡೆಯುತ್ತಿರಬಹುದು.ಅಂತರ್ಜಾಲ ಸರ್ವರುಗಳಿಗೆ ಸುಮ್ಮನೆ ಬೇಡಿಕೆ ಸಲ್ಲಿಸಿ,ಅವನ್ನು ಬ್ಯುಸಿಯಾಗಿಸುವುದು,ಈ ದಾಳಿಗಳ ವೈಖರಿ.ನೈಜ ಬಳಕೆದಾರರ ಸಂಪರ್ಕ ಬೇಡಿಕೆಯನ್ನು ಸರ್ವರುಗಳು ಸ್ವೀಕರಿಸದಂತೆ ತಡೆಯುವುದೇ ಈ ನಮೂನೆಯ ದಾಳಿಗಳ ಉದ್ದೇಶವಾಗಿದೆ.
---------------------------------
ಬಿ ಎಸ್ ಎನ್ ಎಲ್‌ನ ಕೇಬಲ್ ಮೂಲಕ ಖಾಸಗಿ ಬ್ರಾಡ್‌ಬ್ಯಾಂಡ್!
ಬ್ರಾಡ್‌ಬ್ಯಾಂಡ್ ಸೇವೆಯನ್ನು ಇನ್ನಷ್ಟು ಜನರಿಗೆ ತಲುಪಿಸಲು,ಬಿ ಎಸ್ ಎನ್ ಎಲ್ ತನ್ನ ಕೇಬಲ್ ಜಾಲವನ್ನು ಇತರರ ಖಾಸಗಿ ಟೆಲಿಕಾಂ ಸೇವೆ ನೀಡುವವರೊಂದಿಗೂ ಹಂಚಿಕೊಂಡು ಮೂಲ ಸೌಕರ್ಯ ಬಳಸಿದವರಿಂದ ಶುಲ್ಕ ಪಡೆಯುವಂತಾಗಬೆಕೆಂದು ಟೆಲಿಕಾಂ ಇಲಾಖೆ ನೇಮಿಸಿದ ಸಮಿತಿಯೊಂದು ಶಿಫಾರಸು ಮಾಡಿದೆ.ಫೈಬರ್ ಜಾಲಗಳನ್ನು ದೇಶದ ತುಂಬೆಲ್ಲಾ ಹಬ್ಬಿವೆ.ಖಾಸಗಿ ಟೆಲಿಕಾಂ ಕಂಪೆನಿಗಳೂ ಇಂತಹ ಜಾಲವನ್ನು ಹಬ್ಬಿಸಿವೆ.ಆದರೆ ಚಂದಾದಾರನ ಮನೆ ತಲುಪಲು ಮನೆ ಮನೆಗೂ ಕೇಬಲ್ ಹಾಕುವುದು ದುಬಾರಿ ಕೆಲಸ,ಜತೆಗೆ ಅತ್ಯಂತ ಪ್ರಯಾಸದ್ದೂ ಹೌದು.ಆದರೆ ಬಿ ಎಸ್ ಎನ್ ಎಲ್ ಈಗಾಗಲೇ ದೇಶಾದ್ಯಂತ ಮೂರು ಕೋಟಿ ಮನೆಗಳ ಸಮೀಪದವರೆಗೂ ಹೋಗಿರುವ ತಾಮ್ರದ ಕೇಬಲ್ ಜಾಲವನ್ನು ಹೊಂದಿದೆ.ಬಿ ಎಸ್ ಎನ್ ಎಲ್‌ನ ಸ್ಥಿರ ದೂರವಾಣಿ ಸೇವೆ ಬರುವುದು ಇಂತಹ ಜಾಲದ ಮೂಲಕವೇ. ಇಂತಹ ಕೊನೆಯ ಮೈಲು ಸಂಪರ್ಕದ ಇನ್ನಷ್ಟು ಸದುಪಯೋಗಬಾಗಬೇಕು.ಖಾಸಗಿ ರಂಗದ ಟೆಲಿಕಾಂ ಸೇವೆ ಒದಗಿಸುವ ಕಂಪೆನಿಗಳಿಗೂ ಇದರ ಬಳಕೆಯ ಅವಕಾಶ ನೀಡುವುದರ ಮೂಲಕ ಇದನ್ನು ಸಾಧಿಸಬಹುದು ಎನ್ನುವುದು ಟೆಲಿಕಾಂ ಇಲಾಖೆಯ ಲೆಕ್ಕಾಚಾರ.ಬಿ ಎಸ್ ಎನ್ ಎಲ್‌ಗೆ ಇದರ ಬಳಕೆಯ ಮೊದಲ ಹಕ್ಕು ಇದೆ.ಆದರೆ ಉಳಿದಂತೆ ಇತರ ಸೇವೆ ನೀಡುವ ಕಂಪೆನಿಗಳಿಗೂ,ಈ ಜಾಲದ ಬಳಕೆಗೆ ಅವಕಾಶ ನೀಡಿ ತನ್ನ ಸೇವೆಗೆ ಶುಲ್ಕ ಪಡೆಯಬೇಕು ಎನ್ನುವುದು ಪ್ರಸ್ತಾಪ.ಏರ್‌ಟೆಲ್ ಅಂತಹ ಕಂಪೆನಿಗಳು ಹಳ್ಳಿಗಳಲ್ಲಿ ತನ್ನ ಸೇವೆ ನೀಡಲು ಈ ಪ್ರಸ್ತಾವ ಸಹಕಾರಿಯಾಗಲಿದೆ.
-----------------------------------------
ಶೇರು ಮಾರುಕಟ್ಟೆ:ವ್ಯವಹಾರ ನಿಲುಗಡೆ
ನವಂಬರ್ ಒಂದರ ಸೋಮವಾರ ಬಾಂಬೇ ಸ್ಟಾಕ್ ಎಕ್ಸ್‌ಚೇಂಜ್(ಬಿ ಎಸ್ ಇ) ಮಾರುಕಟ್ಟೆಯಲ್ಲಿ ತಾಂತ್ರಿಕ ವೈಫ್ಹಲ್ಯದಿಂದ ಮಧ್ಯಾಹ್ನ ಹನ್ನೆರಡರಿಂದ ಎರಡೂವರೆಯ ವರೆಗೆ ವ್ಯವಹಾರ ಸಾಧ್ಯವಾಗಲಿಲ್ಲ.ಇನ್ನೊಂದು ಮಾರುಕಟ್ಟೆ ಎನ್ ಎಸ್ ಇಯ ವ್ಯವಹಾರ ಅಬಾಧಿತವಾಗಿತ್ತು.ಹಾಗಾಗಿ,ಎರಡು ಮಾರುಕಟ್ಟೆಯಲ್ಲಿ ವ್ಯವಹಾರ ಮಾಡಬಲ್ಲವರಿಗೆ ಹೆಚ್ಚು ಸಮಸ್ಯೆ ಬಾಧಿಸಲಿಲ್ಲ.ಆದರೆ ಬಿ ಎಸ್ ಇಯಲ್ಲಿ ಮಾತ್ರಾ ವ್ಯವಹಾರಗೈಯ್ಯುವ ಬ್ರೋಕರುಗಳು ವ್ಯವಹಾರ ನಿಲ್ಲಿಸಿ,ಕೈಚೆಲ್ಲಿ ತಮ್ಮ ಗಿರಾಕಿಗಳಿಗೆ ಗಾಬರಿ ಹುಟ್ಟಿಸಿದರು.ಇಂತಹ ತಾಂತ್ರಿಕ ತೊಂದರೆಗಳು ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿದವರಿಗೆ ದುಸ್ವಪ್ನವಾಗಿ ಕಾಡುತ್ತವೆ.ದಿಡೀರ್ ಮಾರುಕಟ್ಟೆ ಕುಸಿತ,ಏರಿಕೆಗಳಿಗೆ ಇಂತಹ ನಿಲುಗಡೆಗಳು ಕಾರಣವಾಗುವುದಿದೆ.
--------------------------------
ಡಾ.ಪ್ರಸನ್ನ ಕುಮಾರ್ ಕೆ ಅವರ "ಹೋಮಿಯೋಪತಿ" ಪುಸ್ತಕ ಗೆಲ್ಲಿ!
*ಐ ಪಿ ವಿಳಾಸವನ್ನು ದ್ವಿಮಾನ ಪದ್ಧತಿಯಲ್ಲಿ ಬರೆದಾಗ ಎಷ್ಟು ಸ್ಥಾನಗಳು ಬೇಕು?ಮುಂದಿನ ಐಪಿ6ನಲ್ಲಿ ಎಷ್ಟು ಸ್ಥಾನಗಳಿವೆ?
*ಐಪಿ ವಿಳಾಸಗಳು ಮುಗಿಯುತ್ತಾ ಬಂದಿವೆ-ಕಾರಣವೇನು?
(ಉತ್ತರಗಳನ್ನು ಬಹುಮಾನ ಪ್ರಾಯೋಜಿಸಿದ ಡಾ.ಪ್ರಸನ್ನ ಕುಮಾರ್‌ರವರಿಗೆ ಮಿಂಚಂಚೆ ಮಾಡಿ,ವಿಷಯ:NS4 ನಮೂದಿಸಿ drprasa@gmail.com).
(
ಕಳೆದ ವಾರದ ಸರಿಯುತ್ತರಗಳು:*
*ಶಿವರಾಮ ಕಾರಂತ,ಸಪ್ಟಂಬರ್ 8
*ತಾಣಕ್ಕೆ ಎಷ್ಟು "ಹಿಟ್ಸ್" ಬಂದವೆನ್ನುವುದು ಮಾನದಂಡ
ಎಂಟು ಜನ ಸರಿಯುತ್ತರ ಕಳಿಸಿದ್ದು,ಬಹುಮಾನ ಗೆದ್ದ ರಾಧಾಕೃಷ್ಣ ಅವರಿಗೆ ಅಭಿನಂದನೆಗಳು.)
---------------------------------------------------
ಟ್ವಿಟರ್ ಚಿಲಿಪಿಲಿ
*ಎಲ್ಲಾ ಗ್ರಹಗಳೂ ಅಪ್ರದಕ್ಷಿಣಾಕಾರವಾಗಿ ಸೂರ್ಯನ ಸುತ್ತ ಸುತ್ತುತ್ತವಾದರೆ,ಶುಕ್ರಗ್ರಹ ಮಾತ್ರಾ ಸೂರ್ಯನಿಗೆ ಪ್ರದಕ್ಷಿಣೆ ಬರುತ್ತದೆ..
*ಜೈ-ಮಿನಿ-ಭಾರತ ಎನ್ನುವುದು ಮಿನಿಭಾರತದ ಬಗ್ಗೆ ಬರೆದ ಪುರಾಣ :)
*ಪಟಾಕಿಗಳು,ನಾಯಿಸ್‌ಗಳು,ಸ್ವೀಟುಗಳು,ತಿಂಡಿಗಳು,ಎಸ್ಸೆಮ್ಮೆಸ್ಸುಗಳು,ಗ್ರೀಟಿಂಗ್ಸುಗಳು...ಈ ಹಬ್ಬ ಇಷ್ಟೇನೇ..
-------------------------------------------------
ನಿಮ್ಮೊಡನೆ ವಿ ಆರ್ ಭಟ್ರು!
ತಂತ್ರಜ್ಞ,ಸಲಹೆಗಾರ ಮತ್ತು ತರಬೇತುದಾರರಾದ ವಿ ಆರ್ ಭಟ್ ಅವರು ತಮ್ಮ ಬರವಣಿಗೆಯನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳಲು http://nimmodanevrbhat.blogspot.com ಬ್ಲಾಗನ್ನು ಬಳಸಿಕೊಂಡಿದ್ದಾರೆ.ಈ ತಾಣಕ್ಕೆ ಬಂದವರಿಗೆ ವಿಡಂಬನೆ,ವಿಚಾರ,ಆಧ್ಯಾತ್ಮ,ಕವನಗಳು,ಚಿಂತನೆ ಹೀಗೆ ವೈವಿಧ್ಯಮಯ ಸಾಮಗ್ರಿಗಳು ಲಭ್ಯವಾಗುವಂತೆ ಭಟ್ಟರು ನೋಡಿಕೊಂಡಿದ್ದಾರೆ.
ಕಾವ್ಯ-ಸಾಹಿತ್ಯವೆಂಬ ಕಜ್ಜಾಯ ನೆಚ್ಚಿಕೊಂಡು ಹಂಚಿಕೊಳ್ಳಲು ನಿಮ್ಮೊಡನೆ ಹಂಚಿಕೊಳ್ಳಲು ಬ್ಲಾಗು ಅವಕಾಶ ನೀಡುತ್ತದೆ.
*ಅಶೋಕ್‌ಕುಮಾರ್ ಎ