ಕಾಡಿನಲ್ಲಿ ಬೆಳದಿಂಗಳು (ವಿಶ್ವಕಥಾಕೋಶ -೩)

ಕಾಡಿನಲ್ಲಿ ಬೆಳದಿಂಗಳು (ವಿಶ್ವಕಥಾಕೋಶ -೩)

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಧಾನ ಸಂಪಾದಕರು: ನಿರಂಜನ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೬೫.೦೦, ಮುದ್ರಣ: ೨೦೧೧

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.

ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ ಇದೇ ಮೊತ್ತಮೊದಲನೆಯದು.

ಇದೊಂದು ಬೃಹತ್ ಯೋಜನೆ. ಒಟ್ಟು ೨೫ ಸಂಪುಟಗಳಲ್ಲಿ ಇದರ ಪ್ರಕಟಣೆ. ಜಗತ್ತಿನ ಅತ್ಯುತ್ತಮ ಸಣ್ಣ ಕಥೆಗಳ ಈ ಮಹಾ ಸಂಕಲನವನ್ನು ಸಂಪಾದಿಸುವ ಗುರುತರವಾದ ಹೊಣೆಯನ್ನು ಹೊತ್ತವರು ಖ್ಯಾತ ಸಾಹಿತಿಯೂ, ಸ್ವತಃ ಶ್ರೇಷ್ಟ ಕಥೆಗಾರರೂ ಆದ ನಿರಂಜನರು.”

ಇದು ವಿಶ್ವಕಥಾಕೋಶದ ಮೊದಲ ಮುದ್ರಣದ ಸಮಯದಲ್ಲಿ ಬರೆದ ಪ್ರಕಾಶಕರ ನುಡಿ. ಈ ಕಥಾಕೋಶದ ಎಲ್ಲಾ ಪ್ರತಿಗಳು ಮುಗಿದು ಹೋದ ಕಾರಣ, ಹೊಸ ಓದುಗರಿಗೂ ಪುಸ್ತಕ ದೊರೆಯಬೇಕು ಎಂಬ ಸದಾಶಯದಿಂದ ೨೦೧೧ರಲ್ಲಿ ಎಲ್ಲಾ ಪುಸ್ತಕಗಳ ದ್ವಿತೀಯ ಮುದ್ರಣ ಮಾಡಲಾಯಿತು. ಆ ಸಮಯದಲ್ಲಿ ಪ್ರಕಾಶಕರ ನುಡಿ ಹೀಗಿದೆ.

“ನವಕರ್ನಾಟಕ ಪ್ರಕಾಶನದ ೫೦ರ ಸಂಭ್ರಮದಲ್ಲಿ ‘ವಿಶ್ವಕಥಾಕೋಶ'ದ ಇಪ್ಪತ್ತೈದು ಸಂಪುಟಗಳನ್ನು ಪುನರ್ಮುದ್ರಿಸಿ ಓದುಗರ ಕೈಗಿಡುತ್ತಿದ್ದೇವೆ. ಮೂವತ್ತು ವರ್ಷಗಳ ಕಾಲ ಅಲಭ್ಯವಾಗಿದ್ದ ಜಗತ್ತಿನ ಸಾಹಿತ್ಯ ಕಥಾ ಕಣಜ ಬೆಳಕು ಕಾಣುವ ಸಮಯದಲ್ಲಿ ಈ ಯೋಜನೆಯ ಹೊಣೆ ಹೊತ್ತ ಶ್ರೇಷ್ಟ ಕಥೆಗಾರ, ಸಾಹಿತಿ ನಿರಂಜನರು ನಮ್ಮೊಂದಿಗೆ ಇದ್ದಿದ್ದರೆ, ನವಕರ್ನಾಟಕದ ಚಿನ್ನದ ಹಬ್ಬ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಈ ಸಂಪುಟಗಳನ್ನು ಅವರಿಗೆ ಅರ್ಪಿಸಿ, ಅವರನ್ನು ನೆನೆಯುತ್ತೇವೆ.”

ಈ ಸಂಪುಟದ ಬೆಲೆ ಕೈಗೆಟಕುವಂತಿದೆ. ಅದಕ್ಕೆ ಕಾರಣ ಇನ್ಫೋಸಿಸ್ ಫೌಂಡೇಶನ್ ಇದರ ಅಧ್ಯಕ್ಷೆಯಾದ ಶ್ರೀಮತಿ ಸುಧಾ ಮೂರ್ತಿಯವರು. ಈಗ ನಮ್ಮ ಕೈಯಲ್ಲಿರುವುದು ವಿಶ್ವಕಥಾಕೋಶದ ಮೂರನೆಯ ಸಂಪುಟ -’ಕಾಡಿನಲ್ಲಿ ಬೆಳದಿಂಗಳು’ ಎಂಬ ಹೆಸರಿನ ವಿಯಟ್ನಾಂ ದೇಶದ ಕಥೆಗಳು. ಈ ಪುಸ್ತಕದ ಪ್ರಸ್ತಾವನೆಯಲ್ಲಿ ಪ್ರಧಾನ ಸಂಪಾದಕರು ಹೀಗೆ ಬರೆಯುತ್ತಾರೆ 

“ನೀವು ಓದಬೇಕಾದ ಹನ್ನೊಂದು ವಿಯೆಟ್ನಾಮೀ ಕಥೆಗಳು ಈ ಸಂಪುಟದಲ್ಲಿವೆ. ವಿವರಣೆಯ ಗೊಡವೆಗೆ ಹೋಗದೆ ಅವನ್ನೇ ಓದಿದರೂ ರಸಾಸ್ವಾದನೆಗೆ ಕುಂದು ಉಂಟಾಗುವುದಿಲ್ಲ. ವಿಯೆಟ್ನಾಮೀ ಜನತೆಯ ಹಾಗೂ ಅವರ ರಾಷ್ಟ್ರವನ್ನು ಕುರಿತ ಪರಿಚಯದಿಂದ ಆ ರಸಾಸ್ವಾದನೆ ತೀವ್ರವಾಗುತ್ತದೆ. ವಯಸ್ಸಿನ ಅಂತರವನ್ನು ಗಮನಿಸದೇ, ಹೆಣ್ಣು ಗಂಡು ಭೇದವಿಲ್ಲದೆ, ಜನ ಒಂದಾಗಿ ವಸಹತುಗಾರರ ಹಾಗೂ ಸಾಮ್ರಾಜ್ಯವಾದಿಗಳಿಂದ ತಮ್ಮ ರಾಷ್ಟ್ರವನ್ನು ಬಂಧಮುಕ್ತಗೊಳಿಸಿ, ನವ ಸಮಾಜವನ್ನು ನಿರ್ಮಿಸುತ್ತಿರುವುದು ಮಹಾಕಾವ್ಯಕ್ಕೆ ಯೋಗ್ಯವಾದ ವಸ್ತು. ಇಲ್ಲಿರುವ ಹನ್ನೊಂದು ಕಥೆಗಳು ಆ ಕಾವ್ಯದ ಕೆಲ ಪುಟಗಳಷ್ಟೇ ಆಗಬಲ್ಲುವು. ಆದರೆ ಈ ಪುಟಗಳ ಪ್ರತಿ ಸಾಲಿನಲ್ಲೂ ಕಬ್ಬಿಣದ ಕುದುರೆ ಹತ್ತಿ, ವೈರಿಗಳನ್ನು ಸೋಲಿಸಿ, ಆಕಾಶದ ಎತ್ತ್ರರಕ್ಕೆ ಏರಿ ಅದೃಶ್ಯನಾದ ವೀರಪುರುಷನ ಪಡಿನೆರಳನ್ನೇ ಕಾಣುವಿರಿ.”

ಇಲ್ಲಿರುವ ಹನ್ನೊಂದು ಕಥೆಗಳೆಂದರೆ ಕಾಡಿನಲ್ಲಿ ಬೆಳದಿಂಗಳು (ಮಿನಃ ಚಾವ್), ದೂರದ ತಾರೆಗಳು (ಲೀ ಮಿಂಗ್ ಖುಯೆ), ತಾಯಿಯ ಕರುಳು (ವು ಲೆ ಮಾಯ್), ಕಿಡಿಗಳು (ಕ್ಸು ಆನ್ ಕಂಗ್). ಸವೆಯದ ದಾರಿಯಲ್ಲಿ (ಕ್ಯು ಆನ್ ಟ್ರಿಂಗ್), ಅಡಿಕೆ ಮರಗಳ ಸುವಾಸನೆ ( ಚು ವ ನ್), ಕ್ರೀಡಾ ಪ್ರೇಮ ( ಎನ್. ಕಂಗ್ ಹ್ ಅನ್), ಮಗ ( ಆನ್ಹ್ ಡುಕ್), ಕ್ಸನು ಮರಗಳ ಕಾಡು ( ನ್ವ್ಗೆನ್ ಟ್ರಂಗ್ ಥನ್ಹ್), ದಂತದ ಹಣಿಗೆ ( ನ್ವ್ಗೆನ್ ಸಂಗ್), ಡಿಯೆನ್ ಬಿಯೆನ್ ಫೂನ ಗಡಿಯಾರದವನು (ಹುಉ ಮಾಯ್) 

ಇಲ್ಲಿರುವ ಕೆಲವು ಕಥೆಗಳ ಲೇಖಕರ ಬಗ್ಗೆ ಪುಟ್ಟದಾದ ಮಾಹಿತಿಯನ್ನು ಕೊನೆಯ ಪುಟಗಳಲ್ಲಿ ನೀಡಲಾಗಿದೆ. ಇದರಿಂದ ಅಪರಿಚಿತರಾಗಿರುವ ಲೇಖಕರನ್ನು ಪರಿಚಯ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇಲ್ಲಿರುವ ಎಲ್ಲ ಕಥೆಗಳನ್ನು ಸಿ.ಪಿ.ರವಿಕುಮಾರ್ ಇವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ದ್ವಿತೀಯ ಮುದ್ರಣವನ್ನು ಪ್ರಕಾಶಕರು ಈ ಸಂಪುಟದ ಮುಖ್ಯ ಸಂಪಾದಕರಾದ ನಿರಂಜನ ಅವರಿಗೇ ಅರ್ಪಿಸಿದ್ದಾರೆ. ಪುಸ್ತಕ ೧೬೦ ಪುಟಗಳನ್ನು ಹೊಂದಿದೆ. ವಿಯಟ್ನಾಂ ದೇಶದ ಕಥೆಗಳನ್ನು ಓದಿ ಆನಂದಿಸಲು ಇದು ಸೂಕ್ತ ಪುಸ್ತಕವಾಗಿದೆ.