ಕಾಡು ಕಾಯುವ ಶಾಲಾ ಮಕ್ಕಳು

ಕಾಡು ಕಾಯುವ ಶಾಲಾ ಮಕ್ಕಳು

"ನಮ್ಮ ಕಿವಿ ಮತ್ತು ಕಣ್ಣುಗಳು ದಿನದ ಇಪ್ಪತ್ತನಾಲ್ಕು ಗಂಟೆಗಳಲ್ಲೂ ಜಾಗೃತವಾಗಿರುತ್ತವೆ. ಮರಕ್ಕೆ ಕೊಡಲಿಯ ಏಟು ಬೀಳುವ ಕ್ಷೀಣ ಸದ್ದು ಕೇಳಿದ ತಕ್ಷಣವೇ ನಾವು ಹೊರಡುತ್ತೇವೆ. ಮರ ಕಡಿಯುವ ಖದೀಮರನ್ನು ಹಿಡಿದು ಹಾಕಲು ನಾವು ನಾಲ್ಕರಿಂದ ಹತ್ತು ಮಕ್ಕಳು ನಮ್ಮನಮ್ಮ ಕೋಲು ಝಳಪಿಸುತ್ತಾ ನಿರ್ಭಯವಾಗಿ ಕಾಡಿನೊಳಗೆ ನುಗ್ಗುತ್ತೇವೆ” ಎಂದೊಬ್ಬ ಬಾಲಕ ಹೇಳುತ್ತಿದ್ದಂತೆ ರೋಮಾಂಚನ.

ಇದು ಒರಿಸ್ಸಾದ ಗೋದ್‌ಭಾಂಗಾ ಹಳ್ಳಿಯ ಸ್ವಸ್ತಿಕ್ ಮಾಧ್ಯಮಿಕ ಇಂಗ್ಲಿಷ್ ಶಾಲೆಯ ಮಕ್ಕಳ ಸಾಹಸದ ಕತೆ. ಆ ಹಳ್ಳಿಯ ಜನರೆಲ್ಲ ರೆಂಗಾಲಿ ಜಲಾಶಯ ಯೋಜನೆಯಿಂದಾಗಿ ಸ್ಥಳಾಂತರಗೊಂಡ ನಿರ್ವಸಿತರು. ರಾಷ್ಟ್ರೀಯ ಹೆದ್ದಾರಿ 6ರ ಪಕ್ಕದಲ್ಲಿದ್ದರೂ ಆ ಹಳ್ಳಿಯಲ್ಲಿ ಯಾವ ಸೌಕರ್ಯವೂ ಇಲ್ಲ.

ಅಲ್ಲಿ ಎಲ್ಲ ನಿರಾಶೆಗಳ ನಡುವೆ ಶಾಲಾಮಕ್ಕಳ ಪರಿಸರ ರಕ್ಷಣೆಯದೇ ಭರವಸೆಯ ಬೆಳಕು. ಆ ಶಾಲೆಯ ಮಕ್ಕಳು ಪಕ್ಕದ ಗುಡ್ಡದಲ್ಲಿರುವ ಮುನ್ನೂರು ಎಕ್ರೆ ಕಾಡನ್ನು ಕಾಪಾಡಲು ಪಣ ತೊಟ್ಟಿದ್ದಾರೆ. ಅವರ ಉತ್ಸಾಹ ಹಾಗೂ ಕಾಳಜಿ ಆ ಪ್ರದೇಶದುದ್ದಕ್ಕೂ ಸಕಾರಾತ್ಮಕ ಸಂದೇಶ ರವಾನಿಸಿದೆ. ಇತರ ಶಾಲೆಗಳ ಮಕ್ಕಳೂ ಈಗ ಕಾಡು ರಕ್ಷಿಸಲು ಮುಂದಾಗಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ, ಸುತ್ತಮುತ್ತಲಿನ ಹಳ್ಳಿಗರೂ ಕಾಡು ಕಾಪಾಡುವ ಕಾಯಕಕ್ಕೆ ಕೈಜೋಡಿಸ ತೊಡಗಿದ್ದಾರೆ.

ದಿಯೊಘರ್ ಜಿಲ್ಲೆಯ ಬಾರ್-ಕೋಟೆ ತಾಲೂಕಿನ ಸ್ವಸ್ತಿಕ್ ಮಾಧ್ಯಮಿಕ ಇಂಗ್ಲಿಷ್ ಶಾಲೆಯ ಹಿಂಭಾಗದಲ್ಲಿರುವ ಹಾತಿಪಹಾಡ್ ಗುಡ್ಡದ ಕಾಡಿನ ಎತ್ತರದ ಸಾಲ್ ಮರಗಳು ಈಗ ನಮ್ಮನ್ನು ಕೈಬೀಸಿ ಕರೆಯುತ್ತಿವೆ. ಆದರೆ ಈ ಗುಡ್ಡದ ಕಾಡು ಯಾವುದೇ ಸರಕಾರಿ ದಾಖಲೆಯಲ್ಲಿ ನಮೂದಾಗಿಲ್ಲ! ಯಾಕೆಂದರೆ, ಸರಕಾರಿ ದಾಖಲೆಗಳ ಪ್ರಕಾರ ರೆಂಗಾಲಿ ಜಲಾಶಯದ ಹಿನ್ನೀರಿನಲ್ಲಿ ಈ ಗುಡ್ಡ ಮುಳುಗಡೆ ಆಗಿದೆ.

ಗೋದ್‌ಭಾಂಗಾದ ಹಿರಿಯ ಪ್ರಾಥಮಿಕ ಶಾಲೆ ಹಿನ್ನೀರಿನಲ್ಲಿ ಮುಳುಗಿದಾಗ ಹೊಸಜಾಗದಲ್ಲಿ ಶಾಲೆ ಆರಂಭ. ಆದರೆ ಅಲ್ಲಿನ ಮಕ್ಕಳಿಗೆ ಹತ್ತಿರದಲ್ಲೆಲ್ಲೂ ಮಾಧ್ಯಮಿಕ ಶಾಲೆ ಇರಲಿಲ್ಲ. ನಿರ್ವಸಿತರ ಅಹವಾಲುಗಳಿಗೆ ಸರಕಾರ ಕಿವಿಗೊಡಲೇ ಇಲ್ಲ.

ಈ ಸನ್ನಿವೇಶದಲ್ಲಿ ಹೆಡ್-ಮಾಸ್ಟರ್ ರಮಾಕಾಂತ್ ಪ್ರಧಾನ್ 1989ರಲ್ಲಿ ಮಾಧ್ಯಮಿಕ ಶಾಲೆಯ ಜವಾಬ್ದಾರಿ ವಹಿಸಿಕೊಳ್ಳಲು ಮುಂದಾದರು. ಹಳ್ಳಿಗರು ನಿರ್ಮಿಸಿದ ಎರಡು ಕೋಣೆಗಳಲ್ಲಿ ಆರಂಭದ ಎರಡು ವರುಷ ಶಾಲೆ ನಡೆಸಿದರು.

ಆ ಸಂದರ್ಭದಲ್ಲಿ ಬೋಳುಬೋಳಾದ ಹಾತಿ ಪಹಾಡ್ (ಆನೆಯಾಕಾರದ ಗುಡ್ಡ) ಕಾಣುತ್ತಿದ್ದಂತೆ ಅವರಿಗೊಂದು ಯೋಚನೆ ಮಿಂಚಿತು - ಅಲ್ಲಿ ಕಾಡು ಬೆಳೆಸುವ ಯೋಚನೆ. ಅಲ್ಲಿ 1985ರಲ್ಲಿ ಅಣೆಕಟ್ಟು ನಿರ್ಮಿಸುವ ಮುನ್ನ ಆ ಗುಡ್ದದ ಮರಗಳನ್ನೆಲ್ಲ ಕಡಿದು ಗುಡ್ಡವನ್ನು ಬೋಳು ಮಾಡಲಾಗಿತ್ತು. ಅವರು ಮೊದಲಾಗಿ ಸಮಾಲೋಚನೆ ನಡೆಸಿದ್ದು ಶಾಲಾಮಕ್ಕಳೊಂದಿಗೆ. "ಹಸುರು ಸೈನಿಕ”ರಾಗಲು ಶಾಲಾಮಕ್ಕಳೆಲ್ಲರ ಒಕ್ಕೊರಲಿನ ಒಪ್ಪಿಗೆ. ಗುಡ್ಡದ ಬುಡದ ಮನೆಗಳಲ್ಲಿ ವಾಸಿಸುವ ಆ ಮಕ್ಕಳಿಗೆ ಗುಡ್ದದಲ್ಲಿ ಬೆಳೆಸುವ ಕಾಡು ತಮ್ಮದೇ ಎಂದನಿಸಿತು.

ಆದರೆ ಹೆತ್ತವರಿಗೆ ಹಾಗನಿಸಿರಲಿಲ್ಲ. ಅದೆಲ್ಲ ಜಲಾಶಯ ಪ್ರಾಧಿಕಾರದ ಸೊತ್ತೆಂದು ಅವರ ಅನಿಸಿಕೆ. 1991ರಿಂದ ಕಾಡು ಕಾಯಲು ಶುರು ಮಾಡಿದ ತಮ್ಮ ಮಕ್ಕಳ ಕಾಯಕ ಕಾಣುತ್ತಕಾಣುತ್ತ ಕ್ರಮೇಣ ಹೆತ್ತವರಿಗೂ ಕಾಡಿನ ಬಗ್ಗೆ ಪ್ರೀತಿ ಬೆಳೆಯಿತು.

ಶಾಲಾಮಕ್ಕಳ ಕಾಡು ಕಾಯುವ ಕಾಯಕ ಕಳೆದ ದಶಕಗಳಲ್ಲಿ ನಿರಂತರವಾಗಿ ನಡೆದು ಬಂದಿದೆ. ಇದಕ್ಕೆ ತಮ್ಮದೇ ವಿಧಾನಗಳನ್ನು ಶಾಲಾಮಕ್ಕಳು ರೂಪಿಸಿದ್ದಾರೆ. ಕೋಲು ಹಿಡಿದುಕೊಂಡು ಕಾಡಿನ ಉದ್ದಗಲದಲ್ಲಿ ಗುಂಪುಗಳಲ್ಲಿ ಅವರ ಸಂಚಾರ. ಮರಗಳ್ಳರನ್ನು  ಹಿಡಿದಾಗ ಅವರನ್ನು ತಮ್ಮ ಅಧ್ಯಾಪಕರ ಬಳಿಗೆ ಕರೆತರುವ ಪರಿಪಾಠ. ಮರಗಳ್ಳರು ಶಾಲೆಗೆ ಬರಲೊಪ್ಪದಿದ್ದರೆ, ಅಧ್ಯಾಪಕರನ್ನೇ ಕಾಡಿಗೆ ಕರೆತರುತ್ತಾರೆ. ಇದಕ್ಕೂ ಮರಗಳ್ಳರು ಮಣಿಯದಿದ್ದರೆ, ಅರಣ್ಯ ಇಲಾಖೆಯ ಅಧಿಕಾರಿಗಳ ನೆರವು ಪಡೆಯುತ್ತಾರೆ. ಆದರೆ ಅಂತಹ ಪ್ರಕರಣಗಳು ತೀರಾ ವಿರಳ.
“ಮರಗಳ್ಳರನ್ನು ಹಿಡಿದು ಶಿಕ್ಷಿಸಿ, ಶತ್ರುಗಳನ್ನಾಗಿ ಮಾಡುವುದು ನಮ್ಮ ಉದ್ದೇಶವಲ್ಲ. ಹಳ್ಳಿಗರೆಲ್ಲ ವನಸಂರಕ್ಷಣಾ ಆಂದೋಲನದಲ್ಲಿ ಪಾಲ್ಗೊಳ್ಳಬೇಕೆಂಬುದೇ ನಮ್ಮ ಆಶಯ” ಎನ್ನುತ್ತಾರೆ ಪ್ರಧಾನ್.

“ಶಾಲಾಮಕ್ಕಳೇ ಕಾಡು ಕಾಯುವುದು ಬಹಳ ಪರಿಣಾಮಕಾರಿ. ಯಾಕೆ ಗೊತ್ತೇ? ಮರಗಳ್ಳರು ಉರುವಲಿಗಾಗಿ ಅಥವಾ ಮೋಪಿಗಾಗಿ ಕಾಡಿನೊಳಗೆ ಕಳ್ಳ ಹೆಜ್ಜೆಯಿಡುತ್ತಾರೆ. ಅಂಥವರಿಗೆ ಶಾಲಾಮಕ್ಕಳ ಕೈಯಲ್ಲಿ ಸಿಕ್ಕಿಬೀಳೋದು ನಾಚಿಕೆಗೇಡು. ಇದರಿಂದಾಗಿ ಕಾಡುಗಳ್ಳತನ ಬಹಳ ಕಡಿಮೆಯಾಗಿದೆ” ಎಂದು ವಿವರಿಸುತ್ತಾರೆ, ಸಹಾಯಕ ಅಧ್ಯಾಪಕ ಪ್ರಸಾರ ಸಾಹು.

“ಮೊದಲ ಸಲ ಕಾಡುಗಳ್ಳನೊಬ್ಬ ಸಿಕ್ಕಿಬಿದ್ದಾಗ ನಾವು ದಂಡ ವಸೂಲಿ ಮಾಡೋದಿಲ್ಲ. ಆದರೆ ಅವನು ಕದ್ದಿರುವ ಸೌದೆ ಅವನ ಕುಟುಂಬದ ಅಗತ್ಯಕ್ಕೆ ಬೇಕಷ್ಟೇ ಇರಬೇಕು. ಸೌದೆ ಕಡಿಯಲು ಕಾಡಿನೊಳಗೆ ಹೋಗುವವರು ಅರಣ್ಯ ರಕ್ಷಣಾ ಸಮಿತಿಯ ಅನುಮತಿ ಪಡೆದೇ ಹೋಗಬೇಕು" ಎಂದು ದನಿಗೂಡುಸುತ್ತಾನೆ ವಿದ್ಯಾರ್ಥಿ ಧರಣಿಧರ್ ಮಹಾಂತ.

ಕಾಡುಗಳ್ಳನೊಬ್ಬ ತನ್ನ ಕುಟುಂಬದ ಅಗತ್ಯಕ್ಕಿಂತ ಜಾಸ್ತಿ ಸೌದೆ ಕಡಿದಿದ್ದರೆ ಅದನ್ನು ವಶಪಡಿಸಿಕೊಂಡು ಶಾಲೆಯಲ್ಲಿ ಶೇಖರಿಸುತ್ತಾರೆ. ಹೀಗೆ ಸಂಗ್ರಹವಾದ ಸೌದೆಯನ್ನು ಕೊನೆಗೆ ಹಳ್ಳಿಗರಿಗೇ ವಿದ್ಯಾರ್ಥಿಗಳು ಹಂಚುತ್ತಾರೆ. ಶಾಲಾಮಕ್ಕಳು ದಂಡ ನಿರ್ಧರಿಸುವ ಕ್ರಮವೂ ಚೆನ್ನಾಗಿದೆ. "ನಿನಗೆಷ್ಟು ದಂಡ ಹಾಕಬೇಕು” ಎಂದು ಮರಗಳ್ಳನನ್ನೇ ಕೇಳುತ್ತಾರೆ! ರೂಪಾಯಿ ಐದರಿಂದ ರೂಪಾಯಿ ಹತ್ತರ ತನಕ ದಂಡ ವಿಧಿಸುವುದು ವಾಡಿಕೆ.

ವರುಷಗಳೂ ಉರುಳಿದಂತೆ ಹಾತಿ ಪಹಾಡ್‌ನ ಕಾಡು ದಟ್ಟವಾಗಿದೆ. ಇದರಿಂದ ಹಳ್ಳಿಗರಿಗೆಲ್ಲ ಲಾಭವಾಗಿದೆ. 1997ರಲ್ಲಿ ಮೊದಲ ಸಲ ಕಾಡಿನಲ್ಲಿ ಸಾಮೂಹಿಕವಾಗಿ ಸೌದೆ ಕಡಿದಾಗ ಪ್ರತಿ ಮನೆಗೂ 15 ದಿನಗಳಿಗೆ ಬೇಕಾದಷ್ಟು ಸೌದೆ ಸಿಕ್ಕಿತ್ತು. ಅನಂತರ 2001 ಮತ್ತು 2003ರಲ್ಲಿ ಮೂರ್ನಾಲ್ಕು ತಿಂಗಳುಗಳಿಗೆ ಸಾಕಾಗುವಷ್ಟು ಸೌದೆ ಪ್ರತಿ ಮನೆಗೂ ಲಭಿಸಿತ್ತು.

ಈಗ ಆಂದೋಲನದ ಲಾಭ ಹಳ್ಳಿಗರಿಗೆ ಮನದಟ್ಟಾಗಿದೆ. ಶಾಲಾಮಕ್ಕಳಂತೂ ಕಾಡು ಕಾಯುವ ಕಾಯಕವನ್ನು ಪವಿತ್ರ ವ್ರತದಂತೆ ಮುಂದುವರಿಸಿದ್ದಾರೆ. ವನಮಹೋತ್ಸವ, ಪರಿಸರ ಜಾಗೃತಿಗಾಗಿ ಸೈಕಲ್ ಜಾಥಾ, ಶಾಲಾ ಆವರಣದಲ್ಲಿ ತರಕಾರಿ ಕೃಷಿ - ಇವೆಲ್ಲ ಅಲ್ಲಿನ ಶಾಲಾಮಕ್ಕಳ ಕಲಿಕೆಯಲ್ಲಿ ಹಾಸುಹೊಕ್ಕಾಗಿವೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಇವತ್ತು ಹಲವಾರು ಸಸ್ಯಗಳನ್ನು ಗುರುತಿಸಬಲ್ಲನು/ ಬಲ್ಲಳು ಎಂಬುದೇ ಮಹತ್ತರ ಸಾಧನೆ. ರಾತ್ರಿಯಲ್ಲಿಯೂ ಕಾಡು ಕಾಯಲಿಕ್ಕಾಗಿ 60 ಮಕ್ಕಳಿಗೆ ಶಾಲೆಯಲ್ಲೇ ಉಳಿಯುವ ವ್ಯವಸ್ಥೆ ಮಾಡಲಾಗಿದೆ. ಹಗಲುರಾತ್ರಿಯೆನ್ನದೆ ಕಾಡು ಕಾಯುವ ಶಾಲಾಮಕ್ಕಳ ಹಸುರುಪ್ರೀತಿಗೆ ಸಾಟಿಯುಂಟೇ?

ಸಾಂದರ್ಭಿಕ ಫೋಟೋ ಕೃಪೆ: ವಿಡೆವೋ.ನೆಟ್