ಕಾನನ ಜನಾರ್ದನ

ಕಾನನ ಜನಾರ್ದನ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ ಕೆ ಎನ್ ಗಣೇಶಯ್ಯ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೩೯೫.೦೦, ಮುದ್ರಣ: ೨೦೨೨

‘ಕಾನನ ಜನಾರ್ದನ' ಎಂಬುವುದು ಕೆ ಎನ್ ಗಣೇಶಯ್ಯ ಅವರ ಮತ್ತೊಂದು ರೋಚಕ ಕಾದಂಬರಿ. ಪುಸ್ತಕದ ಬೆನ್ನುಡಿಯಲ್ಲಿ “ ಮೇಘಾಲಯದ ಪರ್ವತಗಳ ಮೇಲೆ ಚರಿತ್ರೆಯ ವಿದ್ಯಾರ್ಥಿಗಳಿಗೆ ಶಿಲಾಯುಗದ ಮಾನವನ ಸಂಸ್ಕೃತಿಯ ಪಳೆಯುಳಿಕೆಯೊಂದನ್ನು ಪರಿಚಯಿಸುತ್ತಿದ್ದ ಪಲ್ಲವಿಗೆ ಬಂದ ಕರೆಯೊಂದು ಆಕೆಯನ್ನು ತಲ್ಲಣಗೊಳಿಸುತ್ತದೆ. ಅಮೇರಿಕದ ಕಂಪೆನಿಯೊಂದಿಗೆ ಕೈ ಜೋಡಿಸಿದ ಮುಂಬೈನ ಉದ್ಯಮಿಯೊಬ್ಬ ಭಾರತದ ಧಾರ್ಮಿಕ ಮತ್ತು ಸಂವಿಧಾನದ ನಿಲುವನ್ನೆ ಬದಲಾಯಿಸುವ ಷಡ್ಯಂತ್ರಕ್ಕೆ ಕೈ ಹಾಕುತ್ತಾನೆ. ಕನ್ನಡದ ಕಾದಂಬರಿಕಾರ ನಾಗಯ್ಯನವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯಿಂದಾಗಿ ಅವರು ಮೂರ್ಛ್ಹಾಸ್ಥಿತಿ ತಲುಪುತ್ತಾರೆ. ಆ ಹಲ್ಲೆಯ ಹಿಂದಿನ ರಹಸ್ಯವೂ ಅವರು ಬರೆದ ಕಾದಂಬರಿಯಲ್ಲಿಯೇ ಅಡಗಿರಬಹುದು ಎಂಬ ಅನುಮಾನ ಮೂಡುತ್ತದೆ. ಆದರೆ ಮೂರು ಸಾವಿರ ವರ್ಷಗಳ ಹಿಂದಿನ ಮಾನವನ ಬಗೆಗಿನ ಆ ಕಾದಂಬರಿಯ ವಸ್ತುವಿಗೂ ಅವರ ಮೇಲೆ ನಡೆದ ಹಲ್ಲೆಗೂ ಯಾವ ರೀತಿಯ ಸಂಬಂಧ ಇರಲು ಸಾಧ್ಯ?

ಶಿಲಾಯುಗದಲ್ಲಿ ದಕ್ಷಿಣ ಭಾರತದ ಕಾಡಿನ ಜನ ಪೂಜಿಸುತ್ತಿದ್ದ ಸ್ಥಾನಿಕ ದೈವಗಳ, ಅವರು ನಿರ್ಮಿಸುತ್ತಿದ್ದ ಶಿಲಾವ್ಯೂಹಗಳ, ಸುತ್ತ ಹೆಣೆದ ಕಥಾಹಂದರಕ್ಕೂ, ವರ್ತಮಾನದಲ್ಲಿ ನಡೆಯುತ್ತಿದ್ದ ಜಾಗತಿಕ ಬೆಳವಣಿಗೆಗೂ ಯಾವ ರೀತಿಯ ನಂಟಿರಲು ಸಾಧ್ಯ? ಆ ನಂಟೇ ನಾಗಯ್ಯನವರ ಮೇಲಿನ ಹತ್ಯೆಯ ಪ್ರಯತ್ನಕ್ಕೆ ಕಾರಣವಾಯಿತೇ?

ಇಂತಹ ಹಲವು ಪ್ರಶ್ನೆಗಳ ಸುತ್ತ ಬೆಳೆದ ಈ ಚಾರಿತ್ರಿಕ ಕಾದಂಬರಿಯು ಮೂರು ಸಾವಿರ ವರ್ಷಗಳ ಹಿಂದೆ ದಕ್ಷಿಣ ಭಾರತದ ಕಾಡುಗಳಲ್ಲಿ ನೆಲೆಯಾಗಿದ್ದ ಶಿಲಾಯುಗದ ಮಾನವನ ಸಂಸ್ಕೃತಿ ಮತ್ತು ಧಾರ್ಮಿಕ ನಂಬಿಕೆಗಳ ವಿಕಾಸದ ಬಗ್ಗೆ ಒಂದು ಕಿರುನೋಟವನ್ನು ಕಟ್ಟಿಕೊಡುತ್ತದೆ. ಕನ್ನಡ ಕಾದಂಬರಿ ಲೋಕದಲ್ಲಿಯೇ ಒಂದು ಅನನ್ಯ ಪ್ರಯತ್ನ ‘ಕಾನನ ಜನಾರ್ದನ."