ಕಾಳಿಂಗ ನಾವಡರ ನೆನಪಿನಲ್ಲಿ…

ಕಾಳಿಂಗ ನಾವಡರ ನೆನಪಿನಲ್ಲಿ…

1989ನೇ ಇಸವಿಯ ಡಿಸೆಂಬರ ತಿಂಗಳು ಇರಬೇಕು, ಆತ್ರಾಡಿಯ ನಮ್ಮ ಮನೆಯಿಂದ ಮೂರು ಕಿಲೋ ಮೀಟರ್ ದೂರದ ಪರ್ಕಳದ ಪಂಚಾಯತು ಆಫೀಸಿನ ಬಳಿ ಸಾಲಿಗ್ರಾಮ ಮೇಳದವರಿಂದ "ಚೆಲುವೆ ಚಿತ್ರಾವತಿ" ಟೆಂಟಿನ ಯಕ್ಷಗಾನ ಅಂತ ಬೆಳಗ್ಗೆಯಿಂದ ಅಟೋ ರಿಕ್ಷಾಕ್ಕೆ ಕಟ್ಟಿದ ಮೈಕದಲ್ಲಿ ನಮ್ಮ ಮನೆ‌ಮುಂದಿನ ರಸ್ತೆಯಲ್ಲಿ ಕೂಗಿಕೊಂಡು ಹೋಗುತ್ತಿದ್ದಾಗ ಆಲಿಸಿದ ನಾನು ಆಗಲೇ ಸಾಕಷ್ಟು ಹೆಸರು ಮಾಡಿ ಮನೆಮಾತಾಗಿದ್ದ ಕಾಳಿಂಗ ನಾವಡರನ್ನು ನೋಡುವ, ಅವರ ಭಾಗವತಿಗೆ ಕೇಳುವ ಸದಾವಕಾಶ ಬಂತು ಅಂತ ಹಿಗ್ಗಿದ್ದೆ. 

ನಾನು ನೋಡಿದ ನಾವಡರ ಮೊದಲ‌ ಹಾಗೂ ಕೊನೆಯ ಟೆಂಟಿನ ಆಟ "ಚೆಲುವೆ ಚಿತ್ರಾವತಿ". ಎಲ್ಲದಕ್ಕೂ ನಿರ್ಬಂಧ ಹೇರುತ್ತಿದ್ದ ನಮ್ಮಪ್ಪ ಆ ದಿನ ಆಟ ನೋಡುವುದಕ್ಕೆ ಅನುಮತಿ ಕೊಟ್ಟದ್ದು ಇಂದಿಗೂ ನನಗೆ ಆಶ್ಚರ್ಯದ ಸಂಗತಿ. ಖುಷಿ ಖುಷಿಯಿಂದಲೆ ರಾತ್ರಿ ಎಂಟು ಗಂಟೆ ಸುಮಾರಿಗೆ ಸೈಕಲ್ ಸವಾರಿ ಮಾಡಿಕೊಂಡು ಆತ್ರಾಡಿಯಿಂದ ರಂಗಸ್ಥಳದತ್ತ ಧಾವಿಸಿದ್ದೆ.

ರಾತ್ರಿ ಎರಡೂರವರೆ ಗಂಟೆಯವರೆಗೆ ಯಾವುದೇ ಸ್ವಾರಸ್ಯವಿಲ್ಲದೆ ಸಾಗುತ್ತಿದ್ದ ಯಕ್ಷಗಾನ ಆನಂತರ ಪೂರ್ತಿ ಯು ಟರ್ನ್ ಪಡೆದು ಗಂದರ್ವ ಲೋಕಕ್ಕೆ ಕರೆದೊಯ್ದು ಬಿಟ್ಟಿತು. ರಂಗಸ್ಥಳಕ್ಕೆ ನಾವಡರ ಪ್ರವೇಶ ಆಗುತ್ತಿದ್ದಂತೆ ಅಡ್ಡ ಕಟ್ಟಿದ ಪರದೆಕೋಲುಗಳು ಪಟಪಟಾಂತ ಅಡ್ಡ ಬಿದ್ದವು. ಕ್ಷಣಾರ್ಧದಲ್ಲಿ ಟೆಂಟಿನ ಆಟ ಬಯಲಾಟವಾಯ್ತು. ಎಲ್ಲೆಲ್ಲೂ ಉಸಿರು ಬಿಗಿ ಹಿಡಿದು ವೀಕ್ಷಿಸುವ ಜನಸಾಗರ. ನಾವಡರ ಸ್ವರ ಮಾಧುರ್ಯವನ್ನು ಏನೆಂದು ಬಣ್ಣಿಸಲಿ. ಯಕ್ಷ ಗಂಧರ್ವ ಕಿನ್ನರ ಕಿಂಪುರುಷರೆಲ್ಲರೂ ಆಗಸದಲ್ಲಿ ನೆರೆದರೆಂದೇ ಭಾಸವಾಗುತ್ತಿತ್ತು. 

"ಧರಣಿ ಮಂಡಲ ಮಧ್ಯದೊಳಗೆ...". ಭಾಮಿನಿ ಷಟ್ಪದಿಯ ಜಾನಪದ ಸಾಹಿತ್ಯವನ್ನು ಮೊದಲ ಬಾರಿ ಯಕ್ಷಗಾನ‌ ಶೈಲಿಯಲ್ಲಿ ನಾವಡರ ಕಂಠಸಿರಿಯಲ್ಲಿ‌ ಆಲಿಸಿದ ಸೌಭಾಗ್ಯ ನನ್ನದಾಯ್ತು. ನಭೂತೋ‌‌ ನಭವಿಷ್ಯತಿಃ ಧನ್ನನಾದೆ. ಮತ್ತೆ ಅವರ ಆಟ ನೋಡುವ ಅವಕಾಶ ಸಿಗಲೇ ಇಲ್ಲ. 1990ರ ಮೇ 28ರಂದು ಅವರು ವಾಹನ ಅಪಘಾತವಾಗಿ ಇಹಲೋಕ ತ್ಯಜಿಸಿದರು. ನನ್ನಂತಹ ಸಹಸ್ರಾರು ಅಭಿಮಾನಿಗಳನ್ನು ದುಃಖದ ಕಡಲಲ್ಲಿ ಮುಳುಗಿಸಿ ಯಕ್ಷಗಾನದ ಧ್ರುವತಾರೆಯೊಂದು ಕಣ್ಮರೆಯಾಯ್ತು! 

ನಂಬಲಸಾಧ್ಯ ಎಂಬಂತೆ ನೋಡನೋಡುತ್ತಲೆ ಇಂದಿಗೆ 35 ವರ್ಷಗಳೇ ಕಳೆದು ಹೋದವು. ಆದರೆ ಆ ಕಂಠಶ್ರೀ  ಇಂದಿಗೂ ಜೀವಂತ! ಇಂದಿಗೂ ಯಾರಿಂದಲೂ ಮೀರಿಸಲಾಗದ ಗಾನಮಾಧುರ್ಯವನ್ನು ಉಣಬಡಿಸಬಲ್ಲ ಅನರ್ಘ್ಯ ರತ್ನ!  ಅವರ ಶ್ರೀಮತಿಯವರು ಮತ್ತು ಮಗ ನಿನ್ನೆಯ "ಉದಯವಾಣಿ" ಕನ್ನಡ ದೈನಿಕದಲ್ಲಿ ಅವರ ಪುಣ್ಯಸ್ಮರಣೆ ಮಾಡಿದ್ದು ಓದಿದೆ. ಮನಸ್ಸು ಮತ್ತೆ ಮೂರು ದಶಕಗಳ ಹಿಂದೆ ಹೋಗಿ ಒಂದಷ್ಟು ಹೊತ್ತು ನಿರ್ಭಾವುಕತೆಯಿಂದ ಮಂತ್ರಮುಗ್ದನಾದೆ. ಮೌನವಾದೆ.  ಆ ದಿವ್ಯ ಚೇತನಕ್ಕೆ ಸಾಷ್ಟಾಂಗ ಪ್ರಣಾಮಗಳು! ನಮೋ ನಮಃ 

-ಮೌನಮುಖಿ-

(ಆತ್ರಾಡಿ ಪೃಥ್ವಿರಾಜ ಹೆಗ್ಡೆ, ನ್ಯಾಯವಾದಿ & ನೋಟರಿ - ಉಡುಪಿ)