ಕಾವೇರಿಯ ಅಳಲು...

ಕಾವೇರಿಯ ಅಳಲು...

ಭಾಗ ಮಂಡಲದ ತಲಕಾವೇರಿಯ ಪ್ರಕೃತಿಯ ಮಡಿಲಿನಿಂದ ನಾನು ಸೃಷ್ಟಿಯ ಮಗಳು ಜಲಮೂಲಕನ್ಯೆ ಕಾವೇರಿ ಮಾತನಾಡುತ್ತಿದ್ದೇನೆ. ಸಾಮಾನ್ಯವಾಗಿ ನಾನು ಮೌನಿ. ನನ್ನ ಪಾಡಿಗೆ ನನ್ನ ಕೆಲಸ ಮಾಡಿಕೊಂಡಿರುತ್ತೇನೆ. ಆದರೆ ನನ್ನ ಸೃಷ್ಟಿಕರ್ತ ಹೇಳಿದ್ದಕ್ಕಾಗಿ ನನ್ನ ಅಭಿಪ್ರಾಯ ತಿಳಿಸುತ್ತಿದ್ದೇನೆ.

ಅಲ್ಲ ಮಕ್ಕಳೇ, ಏನೋ ಹಣ ಅಧಿಕಾರ ಆಸ್ತಿ ಜಾತಿ ಧರ್ಮ ಅದು ಇದು ಅಂತ ಆಗಾಗ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುತ್ತೀರಿ. ಅದು ಅಸಭ್ಯವಾದರೂ ಮನುಜ ಗುಣ ಎಂದು ನಿರ್ಲಕ್ಷಿಸಬಹುದು. ಏಕೆಂದರೆ ' ಮಾಡಿದ್ದುಣ್ಣೋ ಮಹರಾಯ”. ಆದರೆ ನನಗೆ ಅರ್ಥವಾಗದೇ ಇರುವುದು ನಿಮಗೆ ನಿಯಂತ್ರಣವೇ ಇಲ್ಲದ ಪ್ರಕೃತಿಯ ಕೊಡುಗೆಯಾದ ನೀರಿಗಾಗಿ ಏಕೆ ಬಡಿದಾಡಿಕೊಳ್ಳುತ್ತಿದ್ದೀರಿ. ನಾನು ಮತ್ತು ನಮ್ಮ  ಸೃಷ್ಟಿಕರ್ತ ಉಗಮದಿಂದಲೂ ನಮ್ಮ ಕರ್ತವ್ಯಗಳನ್ನು ನಿರ್ವಂಚನೆಯಿಂದ ಮಾಡಿಕೊಂಡು ಬರುತ್ತಿದ್ದೇವೆ. ಕೆಲವೊಮ್ಮೆ ನಿಮ್ಮಗಳ ದುರಾಸೆಯಿಂದ ಪ್ರಕೃತಿಯ ಮೇಲೆ ಹಲ್ಲೆಗಳಾಗಿ ನಮಗೆ ಅನಾರೋಗ್ಯವಾದರೂ ನಮ್ಮ ಜೀವ ಜಂತುಗಳಿಗೆ ತೊಂದರೆ ಆಗಬಾರದೆಂದು ಮಳೆ ಸುರಿಸುತ್ತಲೇ ಇದ್ದೇವೆ.

ನನ್ನ ಮೂಲ ಸ್ಥಾನಗಳಲ್ಲಿ ತಲ ಕಾವೇರಿಯು ಒಂದು. ಇಲ್ಲಿ ಸ್ಥಳ ಪ್ರಶಸ್ತವಾಗಿರುವುದರಿಂದ ನನ್ನ ಒಂದು ಶಾಖೆ ಇಲ್ಲಿಂದಲೇ ಹರಿಯುತ್ತದೆ. ಇದು ಇಂದು ನಿನ್ನೆಯದಲ್ಲ. ಸಾವಿರಾರು ವರ್ಷಗಳಿಂದಲೂ ಹರಿಯುತ್ತಿದೆ. ಜನ ಜಾನುವಾರು ಮತ್ತು ಇಡೀ ಜೀವಸಂಕುಲ ಇದರಿಂದ ಬದುಕುತ್ತಿದೆ. ಆದರೆ ನೀವು ನಿಮ್ಮ ನಾಲಗೆ ಹೊರಳುವ ರೀತಿಗೆ ಅನುಗುಣವಾಗಿ ಭಾಷೆಯನ್ನು ಸೃಷ್ಟಿಸಿಕೊಂಡು ಅದರಿಂದಾಗಿಯೇ ಗಡಿಗಳನ್ನು ನಿರ್ಮಿಸಿಕೊಂಡು ಹುಚ್ಚರಂತೆ ನಿಮ್ಮದಲ್ಲದ ನೀರಿಗೆ ಹೊಡೆದಾಡುತ್ತಿರುವಿರಿ. ನನ್ನನ್ನು ನಿಯಂತ್ರಿಸಲು  ಕೋರ್ಟು ಕಚೇರಿಗೆ ಅಲೆದಾಡುತ್ತಿರುವಿರಿ.

ನಿಮಗೆ ಸಾಕಷ್ಟು ನೀರು ಶತಶತಮಾನಗಳಿಂದ ಸಿಗುತ್ತಿದ್ದರೂ, ಕೆರೆ ಕಟ್ಟೆಗಳು ತುಂಬುತ್ತಿದ್ದರೂ ಕಾಲ ಬದಲಾದಂತೆ ಕೆರೆಗಳನ್ನು ನಾಶಪಡಿಸಿ ಜನಸಂಖ್ಯೆಯನ್ನು ವೃದ್ಧಿಸಿಕೊಂಡಿದ್ದರ ಪರಿಣಾಮ ಸಮಸ್ಯೆ ಉಂಟಾಗಿದೆ. ಅದನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದನ್ನು ಬಿಟ್ಟು ನಿಮ್ಮ ಭಿನ್ನತೆಗೆ ನನ್ನನ್ನೇಕೆ ಜರಿಯುತ್ತೀರಿ. ಹಂಚಿ ತಿನ್ನುವುದು ಬರುವುದಿಲ್ಲವೇ. ಹೊಡೆದಾಡಿ ಬಡಿದಾಡುವುದು ನಿಮ್ಮ ಜಾಯಮಾನವೇ?

ಸಾವಿರಾರು ವರ್ಷದ ಮಾನವ ಇತಿಹಾಸದ ಅನುಭವ ನಿಮಗೆ ಬುದ್ಧಿ ಕಲಿಸಿಲ್ಲವೇ. ಅದೇನೋ ಪ್ರಜಾಪ್ರಭುತ್ವವಂತೆ, ಪ್ರಧಾನ ಮಂತ್ರಿಯಂತೆ, ಮುಖ್ಯಮಂತ್ರಿಯಂತೆ, ನೀರಾವರಿ ಮಂತ್ರಿಯಂತೆ, ವಕೀಲರಂತೆ, ನ್ಯಾಯಾಧೀಶರಂತೆ, ವಿಜ್ಞಾನಿಗಳಂತೆ, ನೀರಾವರಿ ತಜ್ಞರಂತೆ, ಜಗದ್ಗುರುಗಳಂತೆ, ಮಹರ್ಷಿಗಳಂತೆ, ಬುದ್ದಿಜೀವಿಗಳಂತೆ, ಜ್ಯೋತಿಷಿಗಳಂತೆ ಐಎಎಸ್‌ ಅಧಿಕಾರಿಗಳಂತೆ  ಇನ್ನೂ ಏನೇನೋ ಟೈಟಲ್ ಗಳು ಇದ್ದರೂ ಏಕೆ ನ್ಯಾಯಯುತವಾಗಿ ಹಂಚಿಕೊಂಡು ಉಪಯೋಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗಲಭೆ, ಪ್ರತಿಭಟನೆಗಳು, ಬಂದ್, ಬೆಂಕಿ, ಆತ್ಮಹತ್ಯೆ, ಹೊಡೆದಾಟ ಲಾಠಿಚಾರ್ಜ್ ಇದೆಲ್ಲಾ ಬೇಕಾ, ಛೆ...

ನೈಸರ್ಗಿಕ ಸಂಪನ್ಮೂಲಗಳನ್ನು ಯಾವ ಜಾತಿ, ಧರ್ಮ, ಭಾಷೆ, ಪ್ರದೇಶದ ಬೇದವಿಲ್ಲದೆ ಜೀವಸಂಕುಲಗಳ ಉಪಯೋಗಕ್ಕೆ ಸಂಪೂರ್ಣ ಬಳಸಬೇಕು. ಇಲ್ಲದಿದ್ದರೆ ನಿಮ್ಮನ್ನು ನಾಗರೀಕರೆಂದು ಹೇಗೆ ಕರೆಯುವುದು. ಏನೋ ಒಮ್ಮೆ ಭಿನ್ನಾಭಿಪ್ರಾಯ ಬಂದಾಗ ಕುಳಿತು ಮಾತನಾಡಿ ಕೊಡು - ಕೊಳ್ಳುವ ಮೂಲಕ ಬಗೆಹರಿಸಿಕೊಳ್ಳದೆ ಹತ್ತಾರು ವರ್ಷಗಳಿಂದ ಹೇಗೆ ಜಗಳ ಮಾಡುತ್ತಿರುವಿರಿ. ಇದು ಸರಿಯೇ? ಖಂಡಿತ ಇದು ಸರಿಯಲ್ಲ. ಇನ್ನಾದರೂ ಒಂದಿಷ್ಟು ಒಳ್ಳೆಯ ಬುಧ್ಧಿ ಉಪಯೋಗಿಸಿ ಹೊಂಚಿ, ವಂಚಿಸಿ ತಿನ್ನದೆ ಹಂಚಿ ತಿನ್ನಿ. ಇದರ ಮೇಲೆ ನಿಮ್ಮಿಷ್ಟ. ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಎಲ್ಲರಿಗೂ ಒಳ್ಫೆಯದಾಗಲಿ.

( ಶತಮಾನಗಳಿಂದ ನಮ್ಮದೇ ದೇಶದ ಎರಡು ರಾಜ್ಯಗಳ ನಡುವೆ ನೀರಿನ ಹಂಚಿಕೆ ಸಾಧ್ಯವಾಗದೆ ಎಷ್ಟೊಂದು ಹಣ ಸಮಯ ಅಧಿಕಾರ ಮಾನವ ಸಂಪನ್ಮೂಲಗಳು ಮತ್ತು ಅವರೆಲ್ಲರ ಶ್ರಮ ನಿರಂತರವಾಗಿ ವ್ಯರ್ಥವಾಗುತ್ತಿದೆ. ಪ್ರಕೃತಿ ನೀಡುವ ಉಚಿತ ಕೊಡುಗೆಗೆ ನಾವು ದುಡ್ಡು ಕೊಟ್ಟು ಹೊಡೆದಾಡುವುದು. ಯೋಚಿಸಲೂ ಸಮಯವಿಲ್ಲದೇ ಅಸಹಜ ನಡವಳಿಕೆಯನ್ನೇ ಸಹಜ ಎಂದು ಭಾವಿಸಿ ಹಾಗೇ ಬದುಕುತ್ತಿರುವ ಮುಗ್ದ ಮತ್ತು ಮೂರ್ಖರು ನಾವು ಎಂದೆನಿಸುವುದಿಲ್ಲವೇ. ಕಾವೇರಿ ವಿವಾದಕ್ಕಾಗಿ ಇನ್ನೂ ಎಷ್ಟು ಹಣ ಅಧಿಕಾರ ಮತ್ತು ಇತರ ಸಂಪನ್ಮೂಲಗಳನ್ನು ಬಳಸಬೇಕೋ ಗೊತ್ತಿಲ್ಲ. ಒಟ್ಟಿನಲ್ಲಿ ಅನಾಗರಿಕ ಸಮಾಜದ ಶಿಶುಗಳು ನಾವು.....)

-ವಿವೇಕಾನಂದ ಎಚ್ ಕೆ. ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ