ಕಾವ್ಯ ಚೇತನ ಎಚ್ಚೆಸ್ವಿ

ಕಾವ್ಯ ಚೇತನ ಎಚ್ಚೆಸ್ವಿ

ಕನ್ನಡ ಸಾಹಿತ್ಯ ಲೋಕದ ಶ್ರೀಮಂತಿಕೆಯನ್ನು ಭಾವಗೀತೆಗಳ ಮೂಲಕ ಹೆಚ್ಚಿಸಿದ ಹಿರಿಯ ಕವಿ ಎಚ್.ಎಸ್. ವೆಂಕಟೇಶ್ ಮೂರ್ತಿ ಅವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ದೊಡ್ಡ ಆಘಾತ ನೀಡಿದೆ. ಕಾದಂಬರಿ, ಕತೆ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಿನಿಮಾ ಸಾಹಿತ್ಯ, ರಂಗಭೂಮಿ, ಅನು ವಾದ ಹೀಗೆ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಎಚೆಸ್ವಿ ಅವರ ಕೊಡುಗೆ ಅನನ್ಯವಾದರೂ ಅವರನ್ನು ಕನ್ನಡಿಗರು ಗುರುತಿಸುವುದು ಕಾವ್ಯ ಚೇತನ ಎಂದೇ. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಎಚ್‌ಎಸ್ವಿ ಅವರು ಕನ್ನಡ ಭಾವಗೀತೆಗಳ ಭವ್ಯ ಪರಂಪರೆಯ ಪ್ರತಿನಿಧಿ ಎಂದರೆ ತಪ್ಪಾಗಲಾರದು. ಅವರು ತಮ್ಮ ಕವನಗಳ ಮೂಲಕ ನಾಡಿನ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಕನ್ನಡ ಸಾಹಿತ್ಯದ ಕಾವ್ಯ ಪರಂಪರೆಗೆ ಹೊಸ ಭಾಷ್ಯ ಬರೆದ ಎಚ್‌ಎಸ್‌ವಿ ಅವರ ಗೀತೆಗಳು ನಮ್ಮನ್ನು ಬೇರೊಂದು ಲೋಕದ ಭಾವಲಹರಿಗೆ ಕೊಂಡೊಯ್ಯುತ್ತವೆ.

'ತೂಗು ಮಂಚದಲ್ಲಿ', 'ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ ಎಲ್ಲ ಸೇರಿ ನನ್ನ ಬಾಯಿಗೆ ಬೆಣ್ಣೆ ಮೆತ್ತಿದರಮ್ಮ', 'ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಹೆಣ್ಣು', 'ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸ್ಸು', ಗೀತೆಗಳು ಸದಾ ನಮ್ಮ ಕಿವಿಗಳಲ್ಲಿ ಅನುರಣಿಸುತ್ತಲೇ ಇವೆ. ಎಚ್ಚೆಸ್ವಿ ಅವರ ಪ್ರತಿ ಸಾಹಿತ್ಯವು ಭಾವನಾತ್ಮಕತೆ, ಗ್ರಾಮೀಣ ಜೀವನದ ಚಿತ್ರಣ, ಭಾಷೆಯ ಸರಳತೆ ಮತ್ತು ಆಳವಾದ ಅರ್ಥವನ್ನೊಳಗೊಂಡಿವೆ. ಗ್ರಾಮೀಣ ಪ್ರದೇಶ ದಲ್ಲಿ ಬೆಳೆದ ಅವರು ಯಕ್ಷಗಾನ, ಬಯಲಾಟ ಹಾಗೂ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶರಂತಹ ಹಿರಿಯ ಕವಿಗಳ ಕೃತಿಗಳಿಂದ ಪ್ರೇರಿಪಿತರಾಗಿ ಕನ್ನಡದಲ್ಲಿ 100ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಬುದ್ಧ ಚರಣ ಮಹಾ ಕಾವ್ಯದೆ ಮೂಲಕ ಅವರು ಸಾಹಿತ್ಯದ ಮತ್ತೊಂದು ಮಜಲನ್ನು ಸ್ಪರ್ಶಿಸಿದ್ದರು. ಅವರ ಅಲಿಕೆಯಿಂದ ಕನ್ನಡ ಸಾರಸ್ವತ ಲೋಕ ನಿಜಕ್ಕೂ ಬಡವಾಗಿದೆ. ಎಚ್‌ಎಸ್ವಿ ಅವರು ಇನ್ಮುಂದೆ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಕವನಗಳು ನಮ್ಮ ಮನದಲ್ಲಿ ಅಚ್ಚಳಿಯದೇ ಉಳಿದಿವೆ. ಹೋಗಿ ಬನ್ನಿ...

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೩೧-೦೫-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ