ಕಾಶ್ಮೀರದ ಅಭಿವೃದ್ಧಿ ಮತ್ತೊಂದು ಎತ್ತರಕ್ಕೆ

ಪಾಕಿಸ್ತಾನವು ಪಹಲ್ಗಾಮ್ ಪ್ರವಾಸಿಗರ ನರಮೇಧ ನಡೆಸುವ ಮೂಲಕ ಕಾಶ್ಮೀರದ ಅಭಿವೃದ್ಧಿಯನ್ನು ತಡೆಯುವ ಮತ್ತು ಅಲ್ಲಿಗೆ ಪ್ರವಾಸಿಗರ ಆಗಮನವನ್ನು ಕಡಿಮೆಗೊಳಿಸುವ ಉದ್ದೇಶ ಹೊಂದಿದ್ದರೆ, ಅದರ ಉದ್ದೇಶವು ಈಡೇರದು ಎಂಬ ಸ್ಪಷ್ಟ ಸಂಕೇತವನ್ನು ಭಾರತವು ನೀಡಿದೆ. ಚೆನಾಬ್ ನದಿಯ ಮೇಲೆ ಕಟ್ಟಲಾಗಿರುವ ಅತ್ಯದ್ಭುತ ಕಮಾನು ರೈಲು ಸೇತುವೆಯನ್ನು ಶುಕ್ರವಾರ ಉದ್ಘಾಟಿಸಿದ ಪ್ರಧಾನಿ ಮೋದಿಯವರು ಕೂಡಾ ಅದೇ ಸಂದೇಶವನ್ನು ರವಾನಿಸಿದ್ದಾರೆ. "ಕಾಶ್ಮೀರದ ಅಭಿವೃದ್ಧಿಯನ್ನು ತಡೆಯಲೆತ್ನಿಸುವ ಯಾವುದೇ ಪ್ರಯತ್ನವನ್ನು ಯಶಗೊಳಿಸಲು ಬಿಡುವುದಿಲ್ಲ. ಕಾಶ್ಮೀರದ ಯುವಜನತೆಯ ಅಭಿವೃದ್ಧಿಯ ಕನಸನ್ನು ನನಸು ಮಾಡುವುದೇ ನಮ್ಮ ಉದ್ದೇಶ. ಅದನ್ನು ತಡೆಯಲೆತ್ನಿಸುವವರು ಮೊದಲು ನರೇಂದ್ರ ಮೋದಿಯನ್ನು ಎದುರಿಸಬೇಕಾಗುತ್ತದೆ'' ಎಂಬುದಾಗಿ ಅವರು ದಿಟ್ಟವಾಗಿ ಸಾರಿದ್ದಾರೆ. ಪಹಲ್ಗಾಮ್ ನರಮೇಧದ ಬಳಿಕ ಕಾಶ್ಮೀರಕ್ಕೆ ಮೊದಲ ಬಾರಿಯಾಗಿ ಭೇಟಿ ನೀಡಿದ ಪ್ರಧಾನಿಯವರು ನೆರೆ ರಾಷ್ಟ್ರದ ಕುಟಿಲ ತಂತ್ರಗಳಿಂದ ತಾವು ಎದೆಗುಂದಿಲ್ಲ ಎಂಬುದನ್ನು ಸ್ಪಷ್ಟಗೊಳಿಸಿದ್ದಾರೆ.
ಚೆನಾಬ್ ನದಿಯ ಮೇಲೆ ನಿರ್ಮಿಸಲಾಗಿರುವ ಈ ಸೇತುವೆಯು ಇಂಜಿನಿಯರಿಂಗ್ ಕೌಶಲ್ಯದ ಮೇರುಕೃತಿಯಾಗಿರುವ ಜತೆಗೇ 'ನವ ಕಾಶ್ಮೀರ'ದ ಸಂಕೇತವೂ ಆಗಿದೆ. ವಿಶ್ವದಲ್ಲೇ ಅತ್ಯಂತ ಎತ್ತರದ ಕಮಾನು ಸೇತುವೆಯಾಗಿರುವ ಇದು ಕಾಶ್ಮೀರದ ಅಭಿವೃದ್ಧಿಯನ್ನು ಕೂಡಾ ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದೆ. ಉಧಮಪುರ- ಶ್ರೀನಗರ - ಬಾರಾಮುಲ್ಲಾ ನಡುವಿನ ಪ್ರಮುಖ ಸಂಪರ್ಕ ಸೇತುವೆಯಾಗಿದ್ದು ಕಾಶ್ಮೀರ ಕಣಿವೆಯನ್ನು ರೈಲಿನ ಮೂಲಕ ದೇಶದ ಇತರ ಭಾಗದೊಂದಿಗೆ ನೇರವಾಗಿ ಸಂಪರ್ಕಿಸುತ್ತಿದೆ. ಶ್ರೀನಗರವನ್ನು ಭಾರತದ ಇತರ ಭಾಗದೊಂದಿಗೆ ಸಂಪರ್ಕಿಸುವ ಪ್ರಥಮ ರೈಲು ಸೇತುವೆಯಿದು ಎಂಬುದು ಇದರ ಮಹತ್ವವನ್ನು ಸಾರುತ್ತದೆ. ಸೇತುವೆಯ ಉದ್ಘಾಟನೆಯ ಜತೆಗೇ ಪ್ರಧಾನಿಯವರು ವಂದೇಭಾರತ್ ರೈಲು ಸಂಚಾರಕ್ಕೂ ಹಸಿರು ನಿಶಾನೆ ನೀಡಿದ್ದಾರೆ.
ಮೋದಿ ಸರಕಾರವು ಕಾಶ್ಮೀರವನ್ನು ಒಂದು ಸ್ವರ್ಗವನ್ನಾಗಿಸಲು ನಿರಂತರ ಪ್ರಯತ್ನ ನಡೆಸುತ್ತಿದ್ದರೆ, ಅಲ್ಲಿನ ಒಂದಿಷ್ಟು ಹೀನಮನಸ್ಸುಗಳು ಮಾತ್ರ ಇನ್ನೂ ಕಾಶ್ಮೀರವನ್ನು ನರಕವಾಗಿಯೇ ನೋಡಲು ಇಚ್ಛಿಸುತ್ತವೆಯೆಂಬುದು ಮಾತ್ರ ದುರದೃಷ್ಟಕರ. ಕಾಶ್ಮೀರದ ಅಭಿವೃದ್ಧಿಯಾಗುವುದೆಂದರೆ ದೇಶದ ಇತರ ಭಾಗಗಳಿಂದ ಜನರು ಅಲ್ಲಿಗೆ ಆಗಮಿಸಿ ತಮ್ಮ ಅಸ್ತಿತ್ವಕ್ಕೆ ಸಂಚಕಾರ ತರುತ್ತಾರೆ ಎಂಬಂತಹ ಅಪಪ್ರಚಾರ ನಡೆಸುವವರಿಗೂ ಕೊರತೆಯಿಲ್ಲ. ಇಂತಹ ಹೀನಮನಸ್ಸುಗಳ ಕಾರಣದಿಂದಾಗಿಯೇ ಪಹಲ್ಗಾಮ್ ನಂತಹ ದುರಂತ ನಡೆದುದು ಮತ್ತು ಈ ನರಮೇಧಕ್ಕೆ ಅಲ್ಲಿನ ಕೆಲವು ನಿವಾಸಿಗಳ ಪರೋಕ್ಷ ಬೆಂಬಲ ದೊರಕಿದ್ದು. ಆದರೆ ಈಗ ಕಾಶ್ಮೀರದ ಅಭಿವೃದ್ಧಿಯನ್ನು ಸ್ವಾಗತಿಸುವವರ ಸಂಖ್ಯೆಯೇ ಅಧಿಕವಿದೆ ಎಂಬುದು ಸಮಾಧಾನಕರ ಅಂಶ. ಅವರೇ ತಮ್ಮೊಳಗಿನ ದ್ರೋಹಿಗಳನ್ನೂ ದಮನಿಸುವ ಕೆಲಸ ಮಾಡಬೇಕು.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೭-೦೬-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ