ಕಿವುಡು ವನದೇವತೆ (ವಿಶ್ವಕಥಾಕೋಶ -೨೪)

ಕಿವುಡು ವನದೇವತೆ (ವಿಶ್ವಕಥಾಕೋಶ -೨೪)

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಧಾನ ಸಂಪಾದಕರು: ನಿರಂಜನ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೬೫.೦೦, ಮುದ್ರಣ: ೨೦೧೧

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.

ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ ಇದೇ ಮೊತ್ತಮೊದಲನೆಯದು.

ಇದೊಂದು ಬೃಹತ್ ಯೋಜನೆ. ಒಟ್ಟು ೨೫ ಸಂಪುಟಗಳಲ್ಲಿ ಇದರ ಪ್ರಕಟಣೆ. ಜಗತ್ತಿನ ಅತ್ಯುತ್ತಮ ಸಣ್ಣ ಕಥೆಗಳ ಈ ಮಹಾ ಸಂಕಲನವನ್ನು ಸಂಪಾದಿಸುವ ಗುರುತರವಾದ ಹೊಣೆಯನ್ನು ಹೊತ್ತವರು ಖ್ಯಾತ ಸಾಹಿತಿಯೂ, ಸ್ವತಃ ಶ್ರೇಷ್ಟ ಕಥೆಗಾರರೂ ಆದ ನಿರಂಜನರು.”

ಇದು ವಿಶ್ವಕಥಾಕೋಶದ ಮೊದಲ ಮುದ್ರಣದ ಸಮಯದಲ್ಲಿ ಬರೆದ ಪ್ರಕಾಶಕರ ನುಡಿ. ಈ ಕಥಾಕೋಶದ ಎಲ್ಲಾ ಪ್ರತಿಗಳು ಮುಗಿದು ಹೋದ ಕಾರಣ, ಹೊಸ ಓದುಗರಿಗೂ ಪುಸ್ತಕ ದೊರೆಯಬೇಕು ಎಂಬ ಸದಾಶಯದಿಂದ ೨೦೧೧ರಲ್ಲಿ ಎಲ್ಲಾ ಪುಸ್ತಕಗಳ ದ್ವಿತೀಯ ಹಾಗೂ ೨೦೧೨ರಲ್ಲಿ ತೃತೀಯ ಮುದ್ರಣ ಮಾಡಲಾಯಿತು. ದ್ವಿತೀಯ ಮುದ್ರಣದ ಸಮಯದಲ್ಲಿ ಪ್ರಕಾಶಕರು ಬರೆದ ನುಡಿ ಹೀಗಿದೆ. 

“ನವಕರ್ನಾಟಕ ಪ್ರಕಾಶನದ ೫೦ರ ಸಂಭ್ರಮದಲ್ಲಿ ‘ವಿಶ್ವಕಥಾಕೋಶ'ದ ಇಪ್ಪತ್ತೈದು ಸಂಪುಟಗಳನ್ನು ಪುನರ್ಮುದ್ರಿಸಿ ಓದುಗರ ಕೈಗಿಡುತ್ತಿದ್ದೇವೆ. ಮೂವತ್ತು ವರ್ಷಗಳ ಕಾಲ ಅಲಭ್ಯವಾಗಿದ್ದ ಜಗತ್ತಿನ ಸಾಹಿತ್ಯ ಕಥಾ ಕಣಜ ಬೆಳಕು ಕಾಣುವ ಸಮಯದಲ್ಲಿ ಈ ಯೋಜನೆಯ ಹೊಣೆ ಹೊತ್ತ ಶ್ರೇಷ್ಟ ಕಥೆಗಾರ, ಸಾಹಿತಿ ನಿರಂಜನರು ನಮ್ಮೊಂದಿಗೆ ಇದ್ದಿದ್ದರೆ, ನವಕರ್ನಾಟಕದ ಚಿನ್ನದ ಹಬ್ಬ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಈ ಸಂಪುಟಗಳನ್ನು ಅವರಿಗೆ ಅರ್ಪಿಸಿ, ಅವರನ್ನು ನೆನೆಯುತ್ತೇವೆ.”

ಈ ಸಂಪುಟದ ಬೆಲೆ ಕೈಗೆಟಕುವಂತಿದೆ. ಅದಕ್ಕೆ ಕಾರಣ ಇನ್ಫೋಸಿಸ್ ಫೌಂಡೇಶನ್ ಇದರ ಅಧ್ಯಕ್ಷೆಯಾದ ಶ್ರೀಮತಿ ಸುಧಾ ಮೂರ್ತಿಯವರು. ಈಗ ನಮ್ಮ ಕೈಯಲ್ಲಿರುವುದು ವಿಶ್ವಕಥಾಕೋಶದ ಇಪ್ಪತ್ತನಾಲ್ಕನೆಯ ಸಂಪುಟ ‘ಕಿವುಡು ವನದೇವತೆ'. ವಿಶ್ವಕಥಾಕೋಶದ ಈ ಸಂಪುಟದಲ್ಲಿ ದಕ್ಷಿಣ ಅಮೇರಿಕಾ ದೇಶಗಳ ಕಥೆಗಳಿವೆ. ಜ್ವಲಂತ ಭೂಖಂಡದ ಜ್ವಲಂತ ಸಾಹಿತ್ಯ. ಅಲ್ಲಿಂದ ಆರಿಸಿದ ಹದಿನಾಲ್ಕು ಕಥೆಗಳನ್ನು ಈ ಸಂಪುಟದಲ್ಲಿ ಜೋಡಿಸಲಾಗಿದೆ. ಇದು ಓದುಗರ ಪ್ರೀತಿಗೆ ಪಾತ್ರವಾಗುತ್ತದೆನ್ನುವ ನಂಬಿಕೆಯನ್ನು ಸಂಪಾದಕರು ವ್ಯಕ್ತ ಪಡಿಸುತ್ತಾರೆ. ಇದರಲ್ಲಿ ನಿಕಾರಾಗ್ವಾ, ಗ್ವಾತೇಮಾಲಾ, ಕೋಸ್ತರಿಕಾ, ಕೋಲಂಬಿಯಾ, ಬೇನೇಷ್ಟೇಲಾ, ಬೊಲಿವಿಯಾ, ಚೀಲೀ, ಅರ್ಜೆಂಟೀನಾ, ಉರುಗ್ವೇ, ಬ್ರೆಜಿಲ್ ಮುಂತಾದೆಡೆಯ ಅಪರೂಪದ ಕಥೆಗಳ ಸಂಗ್ರಹವಿದೆ. 

ಈ ಪುಸ್ತಕದಲ್ಲಿ ಇರುವ ೧೪ ಕಥೆಗಳೆಂದರೆ, ಕಿವುಡು ವನದೇವತೆ (ರೂಬೇನ್ ದಾರೀಓ), ಮನೆತನದ ಗೌರವ (ಕಾರ್ಲೋಸ್ ವೀಲ್ಡ್ ಓಸ್ಟಿನಾ), ಔದಾರ್ಯ (ರಿಕಾರ್ದೋ ಫೇರ್ನಾಂದೇಸ್-ಗಾರ್ಸಿಯಾ), ಮಂಗಳವಾರ ಮದ್ಯಾಹ್ನದ ಲಘು ನಿದ್ರೆ ( ಗಾಬ್ರಿಯಲ್ ಗಾರ್ಸಿಯಾ ಮಾರ್ಕೋಸ್), ಓವೇಹೋನ್ (ಲೂಯೀಸ್ ಮಾನ್ ವೇಲ್ ಉರ್ಬಾನೇಹೋ ಆಖೇಲ್ ಪೋಲ್), ಕ್ರಿಯೋಲ್ ಪ್ರಜಾಪ್ರಭುತ್ವ ( ರೂಫೀನೋ ಬ್ಲಾಂಕೋ ಫೋಂಬೋನಾ), ಸಲ್ಲಪಿಸುವ ಎರಡು ಪಾರಿವಾಳಗಳು (ರಿಕಾರ್ದೋ ಪಾಲ್ಮಾ), ಪಿಗ್ ಮಾಲಿಯೋನ್ ವೃತ್ತಾಂತ (ಬೇಂತೋರಾ ಗಾರ್ಸಿಯಾ ಕಾಲ್ದೇರೋನ್), ಬಾವಿ (ಆಗಸ್ಟೋ ಸೆಸ್ಪೆಡೆಸ್), ಲುಸೇರೋ (ಓಸ್ಕಾರ್ ಕಾಸ್ತ್ರೋಸ್ ಜೆಡ್), ರಹಸ್ಯಮಯ ಪವಾಡ (ಹೋರ್ಹೆ ಲುಯಿಸ್ ಬೋರ್ಹೇಸ್), ಮೂರು ಪತ್ರಗಳು -ಒಂದು ಟಿಪ್ಪಣಿ (ಓರುತಿಯೋ ಕುರೋಗಾ) ಅನುಚರನ ತಪ್ಪೊಪ್ಪಿಗೆ (ಜೆ.ಎಂ. ಮಕಾದೋ ದ ಅಸಿಸ್), ವಿದೂಶಕನ ಪಶ್ಚಾತ್ತಾಪ (ಮೋಂತೇರೋ ಲೋಬಾತೋ). 

ಇಲ್ಲಿರುವ ಎಲ್ಲಾ ಕಥೆಗಳ ಲೇಖಕರ ಬಗ್ಗೆ ಪುಟ್ಟದಾದ ಮಾಹಿತಿಯನ್ನು ಕೊನೆಯ ಪುಟಗಳಲ್ಲಿ ನೀಡಲಾಗಿದೆ. ಇದರಿಂದ ಅಪರಿಚಿತರಾಗಿರುವ ಲೇಖಕರನ್ನು ಪರಿಚಯ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇಲ್ಲಿರುವ ಕಥೆಗಳನ್ನು ಈಶ್ವರಚಂದ್ರ ಇವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ದ್ವಿತೀಯ ಮುದ್ರಣವನ್ನು ಪ್ರಕಾಶಕರು ಈ ಸಂಪುಟದ ಮುಖ್ಯ ಸಂಪಾದಕರಾದ ನಿರಂಜನ ಅವರಿಗೇ ಅರ್ಪಿಸಿದ್ದಾರೆ. ಪುಸ್ತಕ ಸುಮಾರು ೧೬೦ ಪುಟಗಳನ್ನು ಹೊಂದಿದೆ. ದಕ್ಷಿಣ ಅಮೇರಿಕಾ ದೇಶಗಳ ಕಥೆಗಳನ್ನು ಓದಿ ಆನಂದಿಸಲು ಇದು ಸೂಕ್ತ ಪುಸ್ತಕವಾಗಿದೆ.