ಕೃಷ್ಣದಾಸ್ ಕವನಗಳು...
ಕೃಷ್ಣ ನಾದ
ಕೊಳಲ ದನಿಯಲಿ
ಒಲಿದು ಬರುವೆಯ
ಉಸಿರ ಸೇರಲು ಗೆಳತಿಯೆ|
ಅಳಲ ಕೇಳಲು
ಎದೆಯು ಮಿಡಿದಿದೆ
ಭಾವ ಮೀಟಿದೆ ಒಡತಿಯೆ!|
ಮಳೆಯು ತುಂತುರು
ಮನಕೆ ಸುರಿದಿದೆ
ಒಲವೆ ಕುಣಿಯಲು ಬಾರೆಯ|
ಇಳೆಯು ತಣಿದಿದೆ
ಮನದ ತೋಟದಿ
ಹೂವು ಅರಳಿದೆ ತಾರೆಯ!|
ಭಾವ ಚಂದನ
ಘಮವ ಬೀರಿದೆ
ಗಮನ ಹರಿಯಲಿ ನನ್ನೆಡೆ|
ಯಾವ ಮೋಡಿಯೊ
ಮನವು ಸೋತಿದೆ
ಒಲುಮೆ ಸೇರಲು ಮುನ್ನಡೆ!|
ಮನದ ಹಕ್ಕಿಗೆ ಎಲ್ಲೆ ಎಲ್ಲಿದೆ
ಗೆಲುವು ಸಿಗಲೇ ಬೇಕಿದೆ|
ಕನಸ ಕಾಣುವ
ಕಾಲ ಮುಗಿಯಿತು
ಬಾರೆ ಅಂತರ ಏಕಿದೆ!|
***
ಮದುವೆ
*ಮದುವೆ ಸುಂದರ*
*ಮೂರು ಅಕ್ಷರ*
*ಖುಷಿಯ ನೇಸರ ಮೂಡಿದೆ*
*ಮಧುರ ಜೀವನ*
*ಪತಿಯ ಮನೆಯಲಿ*
*ಪ್ರೀತಿ ಮನೆಯನು ಮಾಡಿದೆ*
*ಅಪ್ಪ ಅಮ್ಮನ*
*ಅಣ್ಣ ತಮ್ಮನ*
*ಬದುಕ ಪೂರ್ತಿ ಮರೆಯಳು|*
*ತುಪ್ಪ ದೀಪವ*
*ಹಚ್ಚಿ ನಿತ್ಯವು*
*ಅತ್ತೆ ಮನೆಯಲಿ ಬೆರೆವಳು|*
*ಪತಿಯೆ ದೇವರು*
*ಎನುತ ಬಾಳುವ*
*ಹೆಣ್ಣು ತಾನೇ ಪೂಜಿತೆ|*
*ಸತಿಯ ಧರ್ಮವ*
*ಸತತ ಮಾಡುತ*
*ಮನೆಗೆ ಅವಳೇ ದೇವತೆ|*
*ಸಪ್ತ ಪದಿಗಳ*
*ವಚನ ಮರೆಯದೆ*
*ಮನವು ಮಾಗಿತು ಒಲವಲಿ|*
*ಸುಪ್ತ ಕನಸನು*
*ನನಸ ಮಾಡುವ*
*ಪಥದ ಒಸಗೆಯು ಒಲಿಯಲಿ|*
- ಕಾ.ವೀ.ಕೃಷ್ಣದಾಸ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
