ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೧

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೧

ಕೆ.ಪಿ.ಭಟ್ಟರ ‘ನನ್ನ ಮಾತು’ ಕೊನೆಯ ಭಾಗ

ಇಲ್ಲಿ ಇನ್ನೊಂದು ಮಾತು ಹೇಳದಿದ್ದರೆ ನನ್ನ ಮನಸ್ಸಿಗೆ ವೇದನೆಯಾಗುತ್ತದೆ. ಶ್ರೀ ಸನದಿಯವರು ತಮ್ಮ ಸಮಗ್ರ ಕಾವ್ಯವನ್ನು ನನ್ನಲ್ಲಿ ಮುದ್ರಣಕ್ಕೆ ಕೊಟ್ಟಾಗ ನನ್ನಲ್ಲಿಗೆ ಹಲವಾರು ಸಲ ಭೆಟ್ಟಿ ಕೊಟ್ಟಿದ್ದರು. ಹಾಗೆ ನೋಡಿದರೆ ನನಗೆ ನನ್ನ ಸುದೀರ್ಘ ಬದುಕಿನಲ್ಲಿ ಆತ್ಮೀಯರೆನ್ನಿಸಿಕೊಂಡವರು ವಿರಳರೆಂದೇ ಹೇಳಬೇಕು. ಅಡಿಗರಂಥವರನ್ನು ಹತ್ತಿರದಿಂದ ಕಾಣಲು ಕಾರಣರಾಗಿದ್ದ ದಿ. ಶ್ರೀ ಆರ್. ಕೆ. ಕುಲಕರ್ಣಿ ಅವರನ್ನು ಈ ಸಂದರ್ಭದಲ್ಲಿ ನಾನು ನೆನಪಿಸಿಕೊಳ್ಳಲೇ ಬೇಕು. ಅವರು ಉ.ಕ. ಜಿಲ್ಲಾ ಸಹಕಾರಿ ಯೂನಿಯನ್ನಿನ ಕಾರ್ಯದರ್ಶಿಗಳಾಗಿದ್ದರು.

ಇನ್ನೊಬ್ಬರು ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಗಳಾಗಿದ್ದ ಶ್ರೀ ಉಮೇಶ ಚಂದಾವರ. ಇವರು ನನ್ನ ಅನೇಕ ವರುಷಗಳ ಒಡನಾಟದ ಹಿರಿಯ ಮಿತ್ರರಾಗಿದ್ದರು. ಚುಟುಕು ಕವಿ ಶ್ರೀ ವಿ. ಆರ್. ಶಿಬಾಡ ಕೂಡ ಹಿರಿಯ ಒಡನಾಡಿಗಳಲ್ಲಿ ಒಬ್ಬರು. ಶ್ರೀ ಚಂದಾವರ ಅವರಿಂದಲೇ ಸದ್ಯ ನನಗೆ ಆತ್ಮೀಯ ಮಿತ್ರರಾದ ಡಾ॥ ಎಂ. ಡಿ. ನಾಯ್ಕ ಅವರ ಪರಿಚಯವಾದದ್ದು.

ಸನದಿಯವರ ಸಮಗ್ರ ಕಾವ್ಯವನ್ನು ಮುದ್ರಣ ಮಾಡುವಾಗ ತಪ್ಪುಗಳನ್ನು ತಿದ್ದಲು, ಕವನಗಳ ಪುಟಗಳನ್ನು ಎರಡು-ಮೂರು ಸಲ ಓದಲೇಬೇಕಾಗುತ್ತದೆ. ನಾನು ಹಲವು ಕವಿಗಳ ಅನೇಕ ಸಂಕಲನಗಳನ್ನು ಓದಿದ್ದೇನೆ. ಆದರೆ ಸನದಿಯವರ ಕವನಗಳನ್ನು ಓದುವಾಗ ಒಂದು ಹೊಸ ಅನುಭವ ವೇದ್ಯವಾಗುತ್ತದೆ. ಏಕೆಂದರೆ ಅವರ ಕವನಗಳು ಅರಬೀ ಸಮುದ್ರದ ತೆರೆಗಳಂತೆ ಅಬ್ಬರಿಸುವದಿಲ್ಲ. ಪೂರ್ವ ಸಮುದ್ರದ ಆಕರ್ಷಣೀಯ ಗಂಭೀರತೆ, ವಿಶಾಲತೆಗಳನ್ನು ಅವು ನೆನಪಿಗೆ ತರುತ್ತವೆ; ಮತ್ತು ಮನಸ್ಸಿನಲ್ಲಿ ನೆಲೆಯೂರಲು ಪ್ರಯತ್ನಿಸುತ್ತವೆ. ಅವರ ಕವಿತೆಗಳು ಅಲ್ಲಲ್ಲಿ ಕವಲೊಡೆಯದೆ, ನೇರವಾಗಿ ತನ್ನ ಗುರಿಯ ಕಡೆಗೆ ಧಾವಿಸುತ್ತವೆ.

ಒಂದು ರೀತಿಯಲ್ಲಿ ಬರೆಯುವ ಚಾಳಿಯಿಂದ ವಿಮುಖನಾದ ನನಗೆ ಬಿಡುವಾದಾಗ ಪುನಃ ಬರೆಯುವ ಉತ್ಸಾಹ ಮೂಡಲು ಶ್ರೀ ಸನದಿಯವರ ಕಾವ್ಯ ಸರಣಿಯೂ, ಕಾವ್ಯಸ್ಪುರಣೆಯೂ ಕಾರಣವಾಗಿರಬಹುದು ಎನಿಸುತ್ತದೆ. ಇದು ನನ್ನ ವೈಯಕ್ತಿಕ ಅನಿಸಿಕೆಯೆಂದರೂ ಸರಿಯೇ. ಏಕೆಂದರೆ ಅನ್ನಿಸಿದ್ದನ್ನು ಅರುಹಿ ಮನಸ್ಸನ್ನು ಹುಗುರಗೊಳಿಸಿಕೊಳ್ಳುವುದು ಒಳ್ಳೆಯದಲ್ಲವೇ? ನನ್ನ ಈ ಕೃತಿಗೆ ಮುನ್ನುಡಿಯ ನಾಲ್ಕು ಮಾತುಗಳನ್ನು ಬರೆದು ಕೊಡಬೇಕೆಂದು ವಿನಂತಿಸಿದಾಗ ಅವರು ತುಂಬಾ ಆನಂದದಿಂದ ನನ್ನ ವಿನಂತಿಯನ್ನು ಈಡೇರಿಸಿದರು ಮತ್ತು ಕೆಲವು ತಿದ್ದುಪಡಿಯನ್ನೂ ಸೂಚಿಸಿ ಉಪಕರಿಸಿದರು. ಅವರಿಗೆ ನನ್ನ ಅನಂತ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.

ಈ ಪದ್ಯಗಳನ್ನು “ಕಾನಡಾವೃತ್ತ” ವಾರಪತ್ರಿಕೆಯಲ್ಲಿ ಪ್ರತಿವಾರವೂ ಒಂದೊಂದರಂತೆ ಪ್ರಕಟಿಸಿದ ನನ್ನ ಕಿರಿಯ ಮಿತ್ರ ಶ್ರೀ ಶ್ರೀಕಾಂತ ಶ್ಯಾನಭಾಗ ಅವರನ್ನು ಈ ಸಂದರ್ಭದಲ್ಲಿ ನಾನು ಸ್ಮರಿಸಿಕೊಳ್ಳುತ್ತೇನೆ. ಇದನ್ನು ಅಂದವಾಗಿ ಮುದ್ರಿಸಿದ ಶ್ರೀ ಗಜಾನನ ಆಫ್‌ಸೆಟ್‌ನ ಮಾಲಿಕರಾದ ಶ್ರೀ ಹರೀಶ ಭಟ್ಟರಿಗೂ, ಡಿ.ಟಿ.ಪಿ. ಮತ್ತು ಮುಖಪುಟ ವಿನ್ಯಾಸ ಮಾಡಿಕೊಟ್ಟ ಶ್ರೀ ಗಜಾನನ ಪೇಪರ್ ಮಾರ್ಟ ಮಾಲಕ ಶ್ರೀ ಅರುಣ ಭಟ್ಟ ಅವರಿಗೂ ಈ ಕಾರ್ಯದಲ್ಲಿ ಸಹಕರಿಸಿದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. - ಹಂದಿಗೋಣ ಕೃಷ್ಣ ಭಟ್ಟ

ಈ ಕೃತಿಯನ್ನು ಕೆ ಪಿ ಭಟ್ಟರು “ಅಕಾಲ ಮೃತ್ಯುವಿಗೆ ಎರವಾದ ತಂದೆ ಶ್ರೀ ಪರಮೇಶ್ವರ ಭಟ್ಟ ಮತ್ತು ದೀರ್ಘಕಾಲ ಬಾಳಿದ ತಾಯಿ ಶ್ರೀಮತಿ ಕಾಶಿ ಇವರುಗಳಿಗೆ ಪ್ರೀತಿಪೂರ್ವಕ ಅರ್ಪಣೆ” ಮಾಡಿದ್ದಾರೆ.

***

ಈ ಮರದ ನೆರಳಿನಲಿ

ಈ ಮರದ ನೆರಳಿನಲಿ ಮೈಯೊಡ್ಡಿದವರೆಷ್ಟೊ

ಲೆಕ್ಕವಿಟ್ಟವರಾರು ಹೇಳಿ ಮತ್ತೆ?

ಈ ಮರದ ಅಡಿಯಲ್ಲಿ ತಲೆಯಿಟ್ಟು ಸಂತವಿಸಿ -

ಕೊಂಡವರು ಇನ್ನೆಷ್ಟೊ ಇಹರು ಗೊತ್ತೇ?

 

ದಪ್ಪನೆಯ ಕೊಂಬೆಗಳು ಹಚ್ಚಹಸುರಿನ ಎಲೆಗ-

ಳನು ಹೊತ್ತು ಕಂಗೊಳಿಸುತಿರುವೀ ಪರಿ;

ಚಪ್ಪರದ ಸಿಂಗಾರವನು ನೆನೆಸಿಕೊಳ್ಳುವೊಡೆ

ನಯದ ನೋಂಪಿನ ಸೋಂಪಿಗೂ ಅಚ್ಚರಿ !

 

ದಾರಿಹೋಕರೆ ಇರಲಿ, ಪಶು-ಪಕ್ಷಿಗಳೆ ಇರಲಿ

ಎಲ್ಲರಿಗು ಎಲ್ಲ ಕಾಲಕು ಸ್ವಾಗತ

ಕೋರಿ ತನ್ನಾಶ್ರಯವ ಭೇದ-ಭಾವವ ಮರೆತು

ನಿಲ್ಲುವೀ ಮೇರುತರಹದ ಅದ್ಭುತ !

 

ತನಗೆ ತಾನೇ ತನ್ನ ಸತ್ವವೆಲ್ಲವ ಹೀರಿ -

ಕೊಳುತ ಭೂಮಿಯ ತಂಪ ತನ್ನ ಕಡೆಗೆ 

ಆಕರಿಸಿ ಶೇಖರಿಸಿ ಸಮನಾಗಿ ಸಂಗ್ರಹಿಸಿ

ಬಳಿಕ ಹಂಚುವದದನೆ ಎಲ್ಲರೆಡೆಗೆ !

 

ತನ್ನತನದಭಿಮಾನ, ಹೆಮ್ಮೆಗಳ ಬದಿಗಿಟ್ಟು 

ಉನ್ನತಿಯ ಮಾರ್ಗವನು ತೋರಿಸುತ್ತ

ಇನ್ನಿಲ್ಲದನುಕಂಪನುಭೂತಿ ಸೂಸುತ್ತ

ತನ್ನತನದಾದರ್ಶವನು ಸಾರುತ !

 

ಎಲ್ಲೆ ಇಲ್ಲದ ತನ್ನ ಮೇರು ಸಂಭ್ರಮ ತೋರು -

ವಲ್ಲಿ ಇದಕೆಣೆಯಿಹುದೆ ಹೇಳಿ ನೀವೆ !

ಅಲ್ಲೆ ಮೈ ಚಾಚಿಕೊಳ್ಳುತ ನಮ್ಮ ಮೈ-ಮನವ

ಉಲ್ಲಸಿತಗೊಳಿಸಿಕೊಳೆ ಅನ್ಯ ತಾವೆ?

 

ಈ ಮರದ ನೆರಳಿನಲಿ ಮೈಯೊಡ್ಡಿದವರೆಷ್ಟೊ

ಲೆಕ್ಕವಿಟ್ಟವರಾರು ಹೇಳಿ ಮತ್ತೆ

ಲೆಕ್ಕಕ್ಕೆ ಸಿಲುಕದಿಹ, ತರ್ಕಕ್ಕೆ ನಿಲುಕದಿಹ

ಮಿಕ್ಕ ಮಿಗತೆಗು ಮೀರಿ ನಿಂತ ಸೊತ್ತೆ !

***