ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೪

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೪

ಮೃತ್ಯುವೆಂದರೇನು?

ಮೃತ್ಯುವನ್ನು ಮನಸಿನಲ್ಲಿ

ನೆನಪಿಸುತ್ತ ನೀನು ;

ಸತ್ಯವನ್ನು ಅರಿಯಬೇಕು

ನಿತ್ಯದಲ್ಲು ತಾನು !

 

ಮೃತ್ಯುವೆಂದರೇನು ಎಂದು 

ಮೊದಲು ತಿಳಿಯಬೇಕು ;

ಸತ್ಯವನ್ನು ತಿಳಿಯಲದುವೆ\

ಮೊದಲ ಪಾಠ ಸಾಕು !

 

ಆಸೆಯೆಂಬ ಮೂಸೆಗಳಿಗೆ

ಪ್ರಮುಖ ತಾಣವೆಲ್ಲಿ?

ಸೋಸಿ ತೆಗೆದರೂನು ಕೂಡ

ಮತ್ತೆ ಮನಸಿನಲ್ಲಿ !

 

ಮನಸು ಎಂಬ ಕನಸಿನೊಡೆಯ

ಅವಿತುಕೊಂಡನೇನು?

ಕನಲಿ ಅವನ ಹುಡುಕಿ ತಂದು

ಬಿಗಿದು ಕಟ್ಟು ನೀನು !

 

ಬಿಡಿಸಿಕೊಂಡು ಹೋದರವಗೆ

ಇಹುದೆ ಬೇರೆ ಜಾಗ?

ತುಡಿಸಿಕೊಂಡು ಪುನಃ ಸೇರ

ಬೇಕು ಅದೇ ಜಾಗ!

 

ಮೃತ್ಯುವನ್ನು ಮನಸಿನಲ್ಲಿ

ನೆನಪಿಸುತ್ತ ಈಗ ;

ಸತ್ಯವಾದುದೇನು ಎಂದು 

ತಿಳಿಯಬೇಕು ಬೇಗ !

***

ಅದೇ ಬಾನು

ಅದೇ ಬಾನು ಅದೇ ಸೂರ್ಯ

ಪಾರವಿರದ ಅದ್ಭುತ ;

ಅದೇ ಸತ್ಯ ಅದೇ ನಿತ್ಯ

ಸಾರ-ಸತ್ಯ ಭೂಷಿತ !

 

ಅದೇ ಭೂಮಿ ಅದೇ ಶರಧಿ

ಬದಲಾಗದ ಚಿತ್ರಣ ;

ಅದೇ ಚಿತ್ರ ಬಲು ವಿಚಿತ್ರ

ಪ್ರತಿ ಕ್ಷಣಕೂ ನೂತನ !

 

ಅದೇ ಸಂಜೆ ಅದೇ ಬೆಳಗು

ನಿತ್ಯ ಒಂದೆ ಹಾಡು ;

ಅದೇ ಸ್ಪಂದನಕ್ಕೆ ಜಾಡು

ಕೃತ -ಕೃತ್ಯತೆಗೀಡು !

 

ಅದೇ ಜನ ಅದೇ ಮನ

ಬದಲಾಗದ ಭೂಷಣ ;

ಅದೇ ನಡೆ ಅದೇ ತಡೆ

ಒಂದಕೊಂಡು ಪೋಷಣ !

 

ಅದೇ ಹಾವ ಅದೇ ಭಾವ

ಅದಕು- ಇದಕು ಸಂಗತ ;

ಅದೇ ಬದುಕು ಅದೇ ತದಕು

ಬಿಡಲಾಗದ ಇಂಗಿತ !