ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೫

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೫

ಸಮುದ್ರರಾಜನಿಗೆ

ಒಡೆಯುತ್ತಿತ್ತು ತೆರೆ ನಡುಗುತ್ತಿತ್ತು ತಿರೆ

ಭೋರ್ಗರೆಯುವ ಕಡಲಬ್ಬರ ಕರಕರೆ

ಹುಟ್ಟುತಿತ್ತು ಹುಟ್ಟಳಿಯುತಿತ್ತು ತೆರೆ

ನಿಮಿಷ-ನಿಮಿಷಕೆಡೆಬಿಡದ ತೆರೆಯ ಮೊರೆ !

 

ಯಾವ ಕಾರಣಕೆ ನೀನು ಬೊಬ್ಬಿಡುವೆ

ಕಡಲದೊರೆ ಕುಬೇರ?

ಜೀವಸಂಕುಲಕೆ ಜಲಜ ಸಂಪದಕೆ

ನೆಲೆಯ ನಿಧಿ ಸಮೀರ !

 

ಮಗಳು ಲಕ್ಷ್ಮಿ ನಿನ್ನೇಕನಾಡಿ ನಿಜ

ಚಿತ್ತಚಂಚಲವತಿ

ನಿಂತ ಕಡೆಗೆ ನೆಲೆಯಾಗಿ ನಿಲ್ಲದೈ -

ಸಿರಿಯ ಹಿರಿಯ ದಾತ್ರಿ !

 

ಏಕಪುತ್ರ ನಿನಗಿರುವುದೇನೊ ದಿಟ

ಆದೋಡೇನು ತೋಷ?

ಪೂರ್ಣಚಂದ್ರನಾಗಿರುವುದೊಂದೆ ದಿನ -

ದಿನವು ಬೇರೆ ವೇಷ !

 

ಒಡೆಯನಾದರೂ ಸಿರಿಯ ಸಂಪದಕೆ

ಕೊರಗುತಿರುವೆ ಏಕೆ?

ತಡೆಯಲಾರದೀ ದುಃಖದಳ್ಳುರಿಗೆ

ಬೇರೆ ಉಪಮೆ ಬೇಕೆ?

***

ಹೆಜ್ಜೆ ಗುರುತು

ಬಿಟ್ಟು ಹೋದ ಹೆಜ್ಜೆ ಗುರುತು

ಅಳಿಯದಂತೆ ಉಳಿದುಕೊಂಡು

ಕಳೆದುಹೋದ ದಿನಗಳನ್ನು

ನೆನೆಪಿಸುತ್ತಲಿರುವುದು ;

ಮರೆಯಬೇಕು ಹಳೆಯದನ್ನು 

ತೊರೆಯಬೇಕು ತಳಕುಗಳನು

ಆದರೇನು? ನೆನಪು ತಾನೆ

ತೂರಿಕೊಂಡು ಬರುವುದು !

 

ಕಟ್ಟಿಕೊಂಡ ಹಲವು ಕನಸ-

ನಿಟ್ಟುಕೊಡು ಮನಸ್ಸಿನಲ್ಲಿ

ಹುಟ್ಟಿಕೊಳುವ ಯೋಚನೆಗಳು

ಗಟ್ಟಿಯಾಗತೊಡಗಲು ;

ಬಿಟ್ಟು ಬಿಡುವ ಯೋಚನೆಗಳ

ಕಟ್ಟುಗಳನು ನಾಶಗೊಳಿಸಿ

ಕಟ್ಟಕಡೆಗೆ ನಿರಾತಂಕ

ಭಾವಗಳಲಿ ಮುಳುಗಲು !

 

ಬೇಡವೆನುವ ಭಾವಬಿಂಬ

ಕೂಡಿಕೊಂಡು ಮನದ ತುಂಬ

ಕಾಡುವಂತೆ ಗಮನವಿಟ್ಟು

ತಾನೆ ಬಲಿಯುತಿರುವುದು ;

ಮರೆತು ಬಿಡುವ ಮನೋಧೈರ್ಯ

ನಿರತವಾಗಿ ಭರಿತವಾಗಿ

ಸ್ಫುರಣಗೊಳುತ ಅನುರಣಿಸುತ

ಜೀವ ತಳೆದು ನಿಲುವುದು !

 

ಸೇರಿ ಬರುವ ನೆನಪುಗಳಿಗೆ

ಸಾರಿ-ಸಾರಿ ಹೇಳಿ-ಹೇಳಿ

ತೀರದಂಥ ಸೆಳೆತಗಳನು

ಕರಣಗೊಳಿಸಿಕೊಳುವುದು ;

ಬಿಟ್ಟು ಹೋದ ಹೆಜ್ಜೆ ಗುರುತು

ಅಳಿಯದಂತೆ ಉಳಿಸಿಕೊಂಡು

ಕಳೆದುಹೋದ ನೆನಪುಗಳನು

ಮರಳಿ- ಮರಳಿ ತರುವುದು !

***