ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೬

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೬

ಭಾನು ಮಂಡಲ

ನಭೋ ಮಂಡಲದ ಮಹಾವಲಯದಲಿ

ಪ್ರಭಾ ಪುಂಜ ನೀನು ;

ಚರಾಚರಗಳಿಗೆ ಪರಾಪರಗಳಿಗೆ

ಜೀವಶಕ್ತಿ ಭಾನು !

 

ಭೂಮಿ ಮಂಡಲಕೆ ಭಾನು ಮಂಡಲವೆ

ಅತ್ಯಮೂಲ್ಯ ಸೊತ್ತು ;

ಜೀವರಾಶಿಗಳ ಜೀವಕೋಶಗಳ

ಜೀವನಕ್ಕೆ ಪತ್ತು !

 

ನಿನ್ನ ಕಿರಣಗಳು ಜೀವ ಸ್ಫುರಣಗಳು

ಬದುಕಿಗದುವೆ ಮೂಲ ;

ಜೀವರಾಶಿಗಳ ಭವ್ಯ ಸಂಕುಲಕೆ

ದಿವ್ಯ ಪ್ರಾಣ ಮೂಲ !

 

ಚರಾಚರಗಳಲಿ ಪರಾಪರಗಳಲಿ

ನೀನು ಸುಪ್ತ ಜಾಲ ;

ಜೀವ - ಜಂತುಗಳ ಭಾವ ತಂತುಗಳ

ಮಹಾಶಕ್ತಿ ಮೂಲ !

 

ನಭೋ ಮಂಡಲದ ಪ್ರಭಾವಲಯದಲಿ

ಸುಪ್ತಶಕ್ತಿ ನೀನು ;

ಚರಾಚರಗಳಲಿ ಪರಾಪರಗಳಲಿ

ಸರ್ವಶಕ್ತ ಭಾನು !

***

ಬಯಕೆ

ಬಯಕೆಗಳನು ಮೊದಲು ಬಿಗಿದು

ಕಟ್ಟಿಹಾಕಬೇಕು

ಬಳಿಕ ಬಯಕೆ ಹುಟ್ಟಿಕೊಳುವು-

ದನ್ನು ತಿಳಿಯಬೇಕು !

 

ಕಳ್ಳನೊಬ್ಬ ಕತ್ತಲೆಯಲಿ

ಮಾಯವಾದ ಹಾಗೆ

ಬೆಳಕನೊಮ್ಮೆ ಅವನ ಕಡೆಗೆ

ಚೆಲ್ಲಿ ಮತ್ತೆ ಹೀಗೆ !

 

ಅಡಗಿಕೊಂಡನೆಲ್ಲಿ ಎಂದು

ಹುಡುಕಿಕೊಳ್ಳಬೇಕು

ಹುಡುಕಿಕೊಂಡ ಬಳಿಕ ತ್ವರಿತ

ಗಟ್ಟಿಗೊಳಿಸಬೇಕು !

 

ಕಳವು ಮಾಡುವವಗೆ ನಿಜಕು

ಇರುವುದೊಂದೆ ದಾರಿ ;

ಕಳವು ಮಾಡಿ ತಿರುಗಿ ಬರಲು

ಬೇಕು ಅದೇ ದಾರಿ !

 

ಬಯಕೆಗಳನು ಸೃಷ್ಟಿಮಾಡಿ

ತೂರಿಬಿಟ್ಟರೇನು?

ನಿಯತವಾಗಿ ಬಯಕೆಗಳನು

ಮೆಟ್ಟಿ ಹಾಕು ನೀನಿ !

***