ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೮

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೮

ಕೊರಡಿನಲ್ಲಿ ಕೂಡ…

ಕೊರಡಿನಲ್ಲಿ ಕೂಡ ಉರಿವ

ಸತ್ವ ತುಂಬಿದೆ ;

ಬರಡಿನಲ್ಲು ಕೂಡ ಮೊಳೆವ

ತತ್ವದಿಂಬಿದೆ !

 

ಮಣ್ಣಿನಲ್ಲು ಪಾರವಿರದ -

ಪಾರ ಗುಣಗಳು ;

ಹೊನ್ನಿಗಿರದಪಾರ ಶಕ್ತಿ-

ಸಾರದಣುಗಳು !

 

ಚರ್ಮಚಕ್ಷುಗಳಿಗೆ ಕಾಣ-

ದಿರುವ ವಿಸ್ಮಯ ;

ಸರ್ವ ಪ್ರಾಣಿಗಳಲು ಹುದುಗಿ-

ಕೊಂಡ ಸಂಭ್ರಮ !

 

ಗಾಳಿ ಸರ್ವ ಪ್ರಾಣಿಗಳಿಗು 

ಪ್ರಾಣ ನೀಡುತ

ಕಾಣದಂತೆ ಕಾರ್ಯಗೈದು

ತ್ರಾಣವೀಯುತ !

 

ಕಣ್ಣುಗಳಿಗೆ ಕಾಣದಂತೆ

ತನ್ನ ಕಾಯಕ -

ವನ್ನು ಮಾಡಿ ಮುಗಿಸುವಂಥ

ಸ್ಪರ್ಶದಾ ಸುಖ !

 

ಕೊರಡಿನಲ್ಲಿ ಕೂಡ ಉರಿವ 

ಸತ್ವ ತುಂಬಿದೆ ;

ಬರಡಿನಲ್ಲಿ ಕೂಡ ಬೆಳೆವ 

ಶಕ್ತಿಗಿಂಬಿದೆ !

***

ದೇಹವೆಂಬ ದೇಗುಲ

ದೇಹದ ದೇಗುಲದಲ್ಲಿ ಮನೆ ಮಾಡಿಹ

ಆತ್ಮಕೆ ದಿಕ್ಕಿನ ಕಟ್ಟಿಲ್ಲ

ದಿಕ್ಕುಗಳೆಲ್ಲಕು ದಿಕ್ಕಾಗಿರುವುದು

ಮಿಕ್ಕೆಲ್ಲಕು ದಿಶೆ ಬಿಟ್ಟಿಲ್ಲ

 

ಉತ್ತರ, ದಕ್ಷಿಣ, ಪಶ್ಚಿಮ, ಪೂರ್ವ

ದಿಕ್ಕುಗಳಿಗೆ ದಕ್ಕದ ದೃಷ್ಟಿ

ಮೇಲ್ಗಡೆ ಕೆಳಗಡೆ ಆಚೆಗೆ ಈಚೆಗೆ

ಲೆಕ್ಕಕೆ ಸಿಕ್ಕದ ಈ ಸೃಷ್ಟಿ !

 

ಅಪರಂಪಾರದ ಪಾರಾವಾರಕೆ

ಪರಿಧಿಯ ಗೆರೆಯಿದೆಯೇ?

ಪ್ರಕಾಶಮಾನದ ವಿಕಾಸದದ್ಭುತ

ಶರಧಿಗೆ ನೆಲೆಯಿದೆಯೇ?

 

ಕಣ್ಣಿಗೆ ಕಾಣದ ತಿಳಿವಿಗೆ ನಿಲುಕದ

ಅದೃಶ್ಯದೀ ಶಕ್ತಿ

ವಿಸ್ಮಯ ಹುಟ್ಟಿಸಿ ನಿರಾಶೆ ಸೃಷ್ಟಿಸಿ 

ನೀಡಲಿದೆಯೆ ಮುಕ್ತಿ?

 

ಮುಕ್ತನಾಗಬೇಕು ಎಂಬ

ಮುಕ್ತವಾದ ಭಾವನೆ

ಭುಕ್ತಿಯಾಗಿ ಶಕ್ತಿಯಾಗ-

ಲೆಂಬುದೇ ನಿವೇದನೆ !

***