ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೦

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೦

ಪುಲಕಿತವಾಯಿತು ನೆಲ

ಪುಲಕಿತವಾಯಿತು ನೆಲ, ನೀ ಸುರಿಯಲು

ಮುಂಗಾರಿನ ಮಳೆಯೆ

ಕಲುಷಿತವೆಲ್ಲವ ತೊಳೆಯುತ ಹರಿಯುವ 

ಜಲಧಾರೆಯ ಸೆಲೆಯೆ!

 

ಸುಡು-ಸುಡು ಬಿಸಿಲಿಗೆ ಬಣ - ಬಣ ಒಣಗುತ

ಮೈಯೊಡ್ಡಿದ ಭೂಮಿ

ಕಣ-ಕಣದಲು ಜಲಧಾರೆಯ ಹೀರುತ

ಜಲಾವರ್ತಗಾಮಿ !

 

ಭೂತಾಯಿಗೆ ಹಸಿರುಡುಗೆಯನುಡಿಸುತ

ಮಾತಾಯಿಯ ಚೆಲುವು

ಮಾತಾಡಿತು ಚೆಲುವು

ಮಾತಾಡಿತು ಕಂಗೊಳಿಸುತ ಕಂಗಳ

ಆ ತಾಯಿಯ ಒಲವು !

 

ಹೊಸ ಚಿಗುರಿಗೆ ಹೊಸ ಜೀವವ ತುಂಬುವ

ಮನಮೋಹಕ ದಾತೆ

ಕಸಗಳಿಗೂ ಸಹ ಕಸುವನು ನೀಡುವ

ಮೃತ್ಯುಂಜಯ ಮಾತೆ !

 

ಪುಲಕಿತವಾಯಿತು ನೆಲ ನೀ ಸುರಿಯಲು

ಮುಂಗಾರಿನ ಮಳೆಯ

ಕಲುಷಿತವೆಲ್ಲವ ತೊಳೆಯುವ ಕಳೆಯುವ

ಮುಂಗಾರಿನ ಕಳೆಯೇ !

***

ಮೀಟು ತಂತಿಯ

ಮೀಟು ತಂತಿಯ ನಾದ ಮಿಲನಕೆ

ಗಾನಗಂಗೆಯ ತುಡಿತಕೆ ;

ನಾಟುವಂದದ ತಾಳ - ಮೇಳಕೆ

ಸಾನುರಾಗದ ದುಡಿತಕೆ !

 

ಭಾವಮಾಲೆಯ ನಾದಲೀಲೆಯ 

ಕಲ್ಪನೆಯ ಆಲೋಕಕೆ ;

ಜೀವ ತುಂಬುವ ಭವ್ಯ ಬಿಂಬದ

ನಂಬಿಕೆಯ ಅಭಿಷೇಕಕೆ !

 

ದಿವ್ಯ ಮಿಲನದ ಸವ್ಯ ಸಲಿಲದ

ನವ್ಯ ರೂಪಿನ ಚಿಂತನ ;

ಭವ್ಯ ಭಾವದ ಕವ್ಯ ಕಲ್ಪದ

ಸತ್ವ ಸಿಂಚನ ಮಂಥನ !

 

ಮೀಟು ತಂತಿಯ ನಾದ ಮಿಲನದ 

ಗಾನಗಂಗೆಯ ತುಡಿತಕೆ ;

ನಾಟುವಂದದ ತುಡಿತ - ಮಿಡಿತಕೆ

ಹಿಡಿದ ನಾಡಿಯ ಬಡಿತಕೆ !

***