ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೧

ಆಕಾಶವೊಂದು ದಿನ
ಭೂಮಿಗೆಂದಿತು ಹೀಗೆ :
“ ಯಾಕಾಗಿ ನನ್ನತ್ತ ನೋಡುತಿರುವೆ?”
ಈ ಪ್ರಶ್ನೆಗಾಕಾಶ
ಭೂಮಿಗೆಂದಿತು ಹೀಗೆ :
“ಬೇಕಾದ ರೀತಿಯಲಿ ನಿನ್ನ ಮುದ್ದಿಸಲೆಂದು”
ಭೂತಾಯಿಯ ಪ್ರಕೃತಿಲೀಲೆ -
ಗಾಕಾಶವೆ ಕನ್ನಡಿ ;
ಆಕಾಶಕೆ ಭೂಮಾತೆಯ
ವೈವಿಧ್ಯವೆ ಮುನ್ನುಡಿ !
ಮೇಲೆ ನೋಡೆ ನಿರಾಕಾರ
ನಿರಭ್ರತೆಯ ವಿಭ್ರಮ ;
ಲೀಲೆಯಾಗಿ ಪರಿವರ್ತಿತ -
ವಾದ ದಿವ್ಯ ಸಂಭ್ರಮ !
ಪ್ರಕೃತಿ ತನ್ನ ಲಾಲಿತ್ಯದ
ವೈವಿಧ್ಯದ ದೃಶ್ಯವ
ಬೆತ್ತಲಾಗಿ ತೋರಿಕೊಳುತ
ಆಕಾಶದ ಸ್ಪರ್ಶವ
ನಿನಗೆ ನಾನು ನನಗೆ ನೀನು
ತೋರಿಕೊಳುವ ಅಂತರ
ಮೇಲೆ-ಕೆಳಗೆ ಆಚೆ - ಈಚೆ
ಇರದೆ ಇರೆ ನಿರಂತರ
ನಿರಾಕಾರ ದರ್ಶನಕ್ಕೆ
ಸಾಕಾರದ ಸ್ಪರ್ಶನ
ಚಿದಾಕಾಶ ನಿದರ್ಶನಕೆ
ಸದವಕಾಶ ದರ್ಶನ !
***
‘ನಾನು’ ಎಂಬ ಚಿದಾನಂದ
‘ತಾನು’ ಎಂಬ ಅಹಂಕಾರ-
ವನ್ನು ಹರಣ ಮಾಡು
‘ನಾನು’ ಎಂಬ ಚಿದಾನಂದ
ಭಾವ ಸ್ಫುರಣೆ ನೀಡು !
ನನ್ನದೆಂಬುದೆಲ್ಲವನ್ನು
ನಿನ್ನ ಪದಕೆ ಸುರಿದು
ನಿನ್ನ ದಯೆಗೆ ತಲೆಯ ಬಾಗಿ
ನನ್ನತನವ ತರಿದು !
ನನ್ನ ಮೋಹ ಮದಗಳನ್ನು
ಗಂಟು ಕಟ್ಟಿ ಎಸೆದು
ನಿನ್ನ ನೇಹ-ಗೇಹಗಳಿಗೆ
ನಂಟು ಮಾಡಿ ಬೆಸೆದು !
ನಾನು ಬೇರೆ ನೀನು ಬೇರೆ
ಎಂಬ ದ್ವಂದ್ವ ತರಿದು
ಸಾನುರಾಗದಿಂದ ನಿನ್ನ
ಬಿಂಬದಲ್ಲಿ ಬೆರೆದು !
‘ತಾನು’ ಎಂಬ ಅಹಂಕಾರ-
ವನ್ನು ಹರಣ ಮಾಡು ;
‘ನಾನು’ ಎಂಬ ಚಿದಾನಂದ
ದಲ್ಲಿ ಲೀನ ಮಾಡು !
***