ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨

ಕಳೆದ ವಾರ ಕೆ ಪಿ ಭಟ್ಟರ ಎರಡು ಕವನಗಳನ್ನು ಆಯ್ದು ಪ್ರಕಟ ಮಾಡಿದ್ದೆವು. ಈ ವಾರವೂ ಎರಡು ಕವನಗಳನ್ನು ಪ್ರಕಟ ಮಾಡಲಿದ್ದೇವೆ.

ನಡುವೆ ಖಾಲಿ ಖಾಲಿ

ಮೇಲೆ ಬಾನು ಕೆಳಗೆ ಭೂಮಿ

ನಡುವೆ ಖಾಲಿ - ಖಾಲಿ ;

ಖಾಲಿಯಾದಲ್ಲಿ ಹಾಲಿ

ಸುಡುವ ಬಿಸಿಲ ಬೇಲಿ !

 

ಸೂರ್ಯಬಿಂಬ ಬೆಳಕು ತುಂಬ

ಲೋಕಕ್ಕೆಲ್ಲ ಬಿಸಿಲು

ಅಲ್ಲಿ - ಇಲ್ಲಿ ಎಲ್ಲೆಯಿರದ

ಧಗೆಗೆ ಬಗೆಯ ಹುಯಿಲು

 

ರವಿಯ ಬೆಳಕಿನುರಿಯ ಜ್ವಾಲೆ

ಬುವಿಯನೆಲ್ಲ ಚುಂಬಿಸಿ ;

ಜೀವಿಗಳಿಗೆ ಚೈತನ್ಯದ

ಸಾರಗಳನು ತುಂಬಿಸಿ !

 

ಮೇಲೆ ನೋಡೆ ಆಕಾಶದ

‘ನಿರಾಕಾರ’ ಬೋಧನೆ ;

ಕೆಳಗೆ ನೋಡೆ ಭೂಮಿಗಿಹುದು

ವೈವಿಧ್ಯದ ಸಾಧನೆ !

 

ಮೇಲೆ ಬಾನು ಕೆಳಗೆ ಭೂಮಿ

ನಡುವೆ ಖಾಲಿ - ಖಾಲಿ

ಖಾಲಿಯಾದ ತಾಣದಲ್ಲಿ

ನಿರಾವರಣ ಪಾಲಿ !

***

ಹತ್ತಿರ - ದೂರ

ನಾನೂ ನೀನೂ ಹತ್ತಿರವಿದ್ದರು

ಮನಸು ದೂರ - ದೂರ

ನಾಗಾಲೋಟದ ಪ್ರಕ್ರಿಯೆಯಲ್ಲಿ

ಮನವಪಾರ ಪಾರ !

 

ನಾನೂ ನೀನೂ ಕೈಕೈ ಹಿಡಿದರು

ಮನಸು ಹರಿವುದೆಲ್ಲಿ?

ನಾನೂ ನೀನೂ ಜತೆ - ಜತೆಗಿದ್ದರು

ಕನಸು ಬಿರಿವುದೆಲ್ಲಿ?

 

ಹತ್ತಿರ - ದೂರ ಎಂಬುದೆಲ್ಲವೂ

ಮನಸಿಗಷ್ಟೇ ಬದ್ಧ

ಮನಸಿಗೆ ಮನಸು ಬೆಸುಗೆಗೊಂಡರೆ

ಅದೇ ಸರ್ವಸಿದ್ಧ !