ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೩

‘ಈ ಮರದ ನೆರಳಿನಲಿ’ ಕವನ ಸಂಕಲನದಿಂದ ಈ ವಾರ ಆಯ್ದ ಕವನಗಳು…
ಕನಸು
ಪುಡಿಯಾಗಿರುವ ನನ್ನ ಹಲವಾರು ಕನಸುಗಳ
ನಿಡಿಯಾಗಿಸಲು ನಾನು ಹೆಣಗಬೇಕು;
ನಿಡಿದಾದ ರೂಪಕನುಗುಣವಾದ ತೆರದಲ್ಲಿ
ಪಡಿ ಮೂಡಿಸಲು ಮತ್ತೆ ಸೆಣಸಬೇಕು !
ಮನದಲ್ಲಿ ಮೂಡಿಬಹ ಹಲವಾರು ಯೋಜನೆಗೆ
ಘನವಾದ ರೂಪವನು ನೀಡಬೇಕು;
ತನಗೆ ತನ್ನಷ್ಟಕ್ಕೆ ಪುಟಿದೆದ್ದು ಹೊರಬರುವ
ಅನಗತ್ಯ ಯೋಚನೆಯ ತಡೆಯಬೇಕು !
ಮನವೆಂಬ ಕಳ್ಳನನು ಹಿಡಿವ ಸಾಹಸವನ್ನು
‘ಅನುಮಾನ’ ವೆಂಬುವವ ಮಾಡಬಹುದೇ ?
ಮನವೆಂಬ ಕಳ್ಳನನು ಹಿಡಿವ ಗಟ್ಟಿಗತನವ
ಮನದಿಂದಲೇ ಮಾಡಿ ಮುಗಿಸಲಹುದೇ?
ಮನವೆಂಬ ಕಳ್ಳನನು ಹಿಡಿದು ಕಟ್ಟಲು ಬೇರೆ
ಜನವೇಕೆ ಮನವೆಂಬ ಪೋಲೀಸ ಸಾಕು;
ಮನವೆಂಬ ಕಳ್ಳನೂ ಪೋಲೀಸನೂ ಕೂಡ
ಕೊನೆಗೊಮ್ಮೆ ‘ನಿಜ’ದೆಡೆಗೆ ಸಾಗಬೇಕು !
***
ಇದೆಯೆಂದರೆ ಇದೆ
ಆಸ್ತಿಕನೆಂದನು ; ದೇವರು ಎಂದರೆ
ಶಿಲೆಯಲ್ಲೆ ‘ನೆಲೆ’ಯಾದವನು
ಆಸ್ತಿಕನೆಂದನು ; ದೇವರು ಎಂದರೆ
‘ನೆಲೆ’ಯಲ್ಲೇ ‘ಸೆಲೆ’ಯಾದವನು !
ನಾಸ್ತಿಕನೆಂದನು ; ದೇವರು ಎಂದರೆ
‘ನ-ಆಸ್ತಿ’ ಎಂಬುವ ಇಲ್ಲದವ ;
ಇಲ್ಲದ ದೇವರ ಸಲ್ಲದ ಪರಿಯಲಿ
ಪೂಜಿಸುವವನೇ ಸಲ್ಲದವ !
ಇದೆಯೆಂದರೆ ‘ಇದೆ’ ಇದರೆಂದರೆ ‘ಇರ’
‘ನಾನೆಂ’ಬುದು ತಾನೆದೆಯಲ್ಲ;
‘ನಾನಿಲ್ಲೆ’ನ್ನುವನಾವನು ದೊರೆಯನು
‘ನಾನೇ ಎಲ್ಲಕು ನಿಜ ಮೂಲ !’