ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೭

‘ಈ ಮರದ ನೆರಳಿನಲಿ’ ಕೃತಿಗೆ ಮುನ್ನುಡಿ ಬರೆದ ಬಿ ಎ ಸನದಿ ಅವರ ಮಾತುಗಳ ಮುಂದಿನ ಭಾಗ…
ಪ್ರಕೃತಿಯಲ್ಲಿಯೇ ಒಂದು ಬಗೆಯ ವೈವಿಧ್ಯ ತುಂಬಿದ್ದು ಅದರಲ್ಲಿಯೇ ಪರಸ್ಪರ ಅವಲಂಬನೆಯಿರುವುದನ್ನೂ ಆ ಅವಲಂಬನೆಯ ಹೊಂದಾಣಿಕೆಯಲ್ಲೇ ಸಹಜ ಸೌಂದರ್ಯದ ಜೀವಂತಿಕೆಯಿರುವುದನ್ನೂ ಇವರ ಅನೇಕ ಕವಿತೆಗಳು ಸೊಗಸಾಗಿ ಬಿಂಬಿಸಿವೆ. ಈ ವೈವಿಧ್ಯವನ್ನು ಮೆರೆಯುವ ವಿಶ್ವದ ಅಗಾಧತೆಯನ್ನೂ ಬಿಂಬಿಸುವ ಭಟ್ಟರ 'ನಡುವೆ ಖಾಲಿ ಖಾಲಿ' ಪದ್ಯವನ್ನು ಗಮನಿಸಿ :
"ಮೇಲೆ ನೋಡೆ ಆಕಾಶದ
'ನಿರಾಕಾರ' ಬೋಧನೆ
ಕೆಳಗೆ ನೋಡೆ ಭೂಮಿಗಿಹುದು
ವೈವಿಧ್ಯದ ಸಾಧನೆ !
ಪ್ರಕೃತಿ ತನ್ನ ನಿತ್ಯ ನೂತನ ಚಟುವಟಿಕೆಯಿಂದ ಮಾನವ ಜನಾಂಗಕ್ಕೆ ಹಲವೊಂದು ರೀತಿಯ ಪಾಠಗಳನ್ನೂ ಕಲಿಸುತ್ತದೆ. ಮಾನಸಿಕ ಜಡತನವನ್ನು ಕಳೆಯುವಂಥ ನವ ಚೇತನದ ಚಿಲುಮೆ ಚಿಮ್ಮಿಸುತ್ತದೆ. ಮಹಾಕವಿ ಕುವೆಂಪುರಂಥವರು “ಸುರ್ಯೋದಯ ಚಂದ್ರೋದಯ ದೇವರ ದಯೆ ಕಾಣೋ !" ಎಂದು ಪ್ರಕೃತಿಯಲ್ಲಿ ದೈವಿಕತೆಯ ಆವಿಷ್ಕಾರವನ್ನರಸಿ ಸಂತೋಷಿಸುತ್ತಾರೆ. ದ. ರಾ. ಬೇಂದ್ರೆಯವರಂಥ ವರಕವಿಗಳು ಮೂಡಲ ಮನೆಯ ಚೆಲುವಿನ ಹಲವೊಂದು ಭಾವಭಂಗಿಗಳನ್ನು ಗುರುತಿಸಿ "ಇದು ಬರಿ ಬೆಳಗಲ್ಲೋ ಅಣ್ಣಾ" ಎಂದು ಉದ್ಗಾರವೆತ್ತುತ್ತಾರೆ. ಹೀಗೆಯೇ ಹಲವೊಂದು ಕವಿಗಳು ನಿಸರ್ಗ ರಮಣೀಯತೆಯನ್ನು ಕುರಿತು ತಮ್ಮ ತಮ್ಮ ಅನಿಸಿಕೆಗಳನ್ನು ತಮ್ಮ ಕಾವ್ಯದಲ್ಲಿ `ದಾಖಲಿಸಿದ್ದಾರೆ. ಪ್ರೇಮ-ಪ್ರಣಯದ ಬಗೆಗಾಗಲೀ, ಪ್ರಕೃತಿ-ಪ್ರೀತಿಯ ಬಗೆಗಾಗಲೀ ಒಂದಿಲ್ಲೊಂದು ಸಮಯ-ಸನ್ನಿವೇಶದಲ್ಲಿ ಕವನಗಳನ್ನು ಬರೆಯದಿರುವ ಕವಿಗಳೇ ವಿರಳ. ಆದರೆ, ಇಲ್ಲಿಯ ಕವನಗಳು ಕವಿಯ ಇಳಿವಯಸ್ಸಿನ ರಚನೆಗಳು. ಮಾದರಿಗೆಂಬಂತೆ ಒಂದು ಸಖೀಗೀತೆ (ದಾತನ ಸ್ಮರಣೆ) ಈ ಸಂಗ್ರಹದಲ್ಲಿದೆ. ಅದೂ 'ದಾತನ ಸ್ಮರಿಸುವ ಬಾರೆ ಸಖಿ' ಎಂಬ ದೈವಿಕ ಚಿಂತನೆಗೆ ಕರೆಕೊಡುವ ಧಾಟಿಯ ಹಾಡು. ಇಲ್ಲಿಯ 'ಸಖಿ' ಕವಿತೆಯ ಪ್ರಾಣವೂ ಆಗಿರಬಹುದು. ಅವನ 'ಬಾಳ ಸೂರ್ಯ' ಜೀವನ ಚೇತನವೂ ಆಗಿರಬಹುದು. ಈ ಸಂಗ್ರಹದಲ್ಲಿರುವ ಏಕಮೇವ ವಾತ್ಸಲ್ಯಗೀತೆಯೆಂದರೆ 'ನನ್ನ ಪುಟ್ಟಿ' ! ತುಂಬ ಸೊಗಸಾದ ಪದ್ಯ. 'ಮುದವ ಸೂಸುವ ಮುದ್ದು ಮುಖದಲಿ ಮಂದಹಾಸದ ಕಿರುನಗೆ' ಬೀರುವ ಈ ಪುಟ್ಟ ಜೀವ ಯಾರಿಗಾದರೂ ಮುದ ನೀಡಬಲ್ಲುದೆಂಬಂತೆ ಈ ಕವಿತೆಯ ಮಾಟ. ಇದು ಕವಿಯ ಲೌಕಿಕ ಬದುಕಿನ ಬಳುವಳಿ. ಉಳಿದ ಬಹುತೇಕ ಕವನಗಳು ಕವಿಯ ದೈವಿಕ ಮತ್ತು ತಾತ್ವಿಕ ಚಿಂತನೆಯ ನಿಲುವಳಿ. ಈ ನಡುವೆ, ವೈಯಕ್ತಿಕ ನೆಲೆಯ ಚಿಂತನೆ ಮತ್ತು ಪ್ರಕೃತಿ ಪ್ರೀತಿಯ ಸುಂದರ ಕವನಗಳ ಕಾಣಿಕೆ. 'ಮೇಲೆ ಬಾನು ಕೆಳಗೆ ಭೂಮಿ ನಡುವೆ ಖಾಲಿ ಖಾಲಿ' ಎಂಬಂತಿದ್ದ ನಮ್ಮ ವಿಶ್ವಕ್ಕೆ ಬೆಳಕು ನೀಡಿ ಆ 'ಖಾಲೀತನ'ವನ್ನು ತುಂಬಿ ಬಿಡುವ ಸೂರ್ಯ-ಚಂದ್ರರ ಕಾರ್ಯವಿಶೇಷವನ್ನು ಬಣ್ಣಿಸುವ 'ಚಕೋರವೆಂದಿತು' ಕವಿತೆಯಲ್ಲಿ ಬಳಸಿದ ನಾಟಕೀಯತೆ ವಿಷಯಕ್ಕೆ ಪೂರ್ವಪೀಠಿಕೆಯಾಗಿ ಮನಸೆಳೆಯುವಂತಿದೆ :
ಚಕೋರವೆಂದಿತು ಚಂದ್ರಮನಿಗೆ ನೀ
ದಿನವೂ ಕ್ಷೀಣಿಪುದೇತಕ್ಕೆ ?
ಚಂದ್ರಮನೆಂದನು ; ಚಕೋರಿ ಈ ಪರಿ
ಕತ್ತಲೆಗಳುಕುವುದೇತಕ್ಕೆ ?
(ಇನ್ನೂ ಇದೆ)
***
ಈ ನಮ್ಮ ಹಳ್ಳಿಯಲಿ
ಈ ನಮ್ಮ ಹಳ್ಳಿಯಲಿ
ಬೆಳಕು ಹರಿಯುವ ಮುನ್ನ
ಆರುಹುವವರಾರು ಗೊತ್ತೇ?
ಕತ್ತಲೆಯ ಪಯಣವನು
ಮತ್ತಿಳೆಯೆಅ ಆಯನವನು
ತಿಳಿಸುವವರಾರು ಮತ್ತೆ?
ನಸುಕಿನಲೆ ಇಂಪಾದ
ದನಿಯುಲಿಯ ತೇಲಿಸುವ
ಹಕ್ಕಿಗಳ ಹಿಂಡು - ಹಿಂಡು
ಕಲರವಗಳುಲಿವಿನಲಿ
ಮುಂಬೆಳಗ ಸ್ವಾಗತಿಸ-
ಲವುಗಳದೆ ದುಂಡು-ದಂಡು !
‘ಕಾಲ’ವನು ಗುರುತಿಸುವ
ಕಾಗೆಗಳು ಇವೆಯಲ್ಲ
ಅವುಗಳಿಗು ಒಂದು ಸರದಿ !
‘ಯಾಮ’ಗಳ ಯಾನವನು
ಸಮನಾಗಿ ಅರಿತಿರುವ
ಅವುಗಳದೆ ಮಿಗಿಲು ವರದಿ !
***