ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೮

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೮

‘ಈ ಮರದ ನೆರಳಿನಲಿ’ ಕೃತಿಗೆ ಮುನ್ನುಡಿ ಬರೆದ ಬಿ ಎ ಸನದಿ ಅವರ ಮಾತುಗಳ ಕೊನೆಯ ಭಾಗ…

'ಸೂರ್ಯನ ಪ್ರಖರತೆ ಚಂದ್ರನ ಸೌಮ್ಯತೆ' ಬೇರ್ಪಡಿಸಲು ಬರದನುಬಂಧ' ಎಂಬ ತೀರ್ಮಾನದಿಂದ ಮುಕ್ತಾಯಗೊಳ್ಳುವ ಕವಿತೆಯ ಆಲೋಚನೆಯೇ ಸಂಕಲನದ ಕೊನೆಯಲ್ಲಿರುವ 'ಕತ್ತಲೆಗೆ' ಎಂಬ ಕವಿತೆಯಲ್ಲೂ ಅನುರಣಿಸಿದಂತಿದೆ. ಈ ನಾಟಕೀಯತೆಯ ತಂತ್ರವು ಇವರ 'ಸಮುದ್ರ ರಾಜನಿಗೆ', 'ಆಕಾಶವೊಂದು ದಿನ' ಎಂಬ ಕವಿತೆಯಲ್ಲಿಯೂ ಪರಿಣಾಮಕಾರಿಯಾಗಿ ಒಡಮೂಡಿದ್ದನ್ನು ಗಮನಿಸಬಹುದು.

ಈ ಸಂಗ್ರಹದಲ್ಲಿರುವ ದೇವ ನಿನ್ನೊಡನೇನ ಬೇಡಲಿ? ಬೇಡವಾದ ಶೃಂಖಲೆ, ಮೃತ್ಯುವೆಂದರೇನು?, ಸದ್ಗುರು, ಸ್ಮರಣಾದರುಣಾಚಲ, ಕೊರಡಿನಲ್ಲಿ ಕೂಡ, ದೇಹವೆಂಬ ದೇಗುಲ, 'ನಾನು' ಎಂಬ ಚಿದಾನಂದ, ಬೇಕು-ಬೇಡ, ದಾತನ ಸ್ಮರಣೆ, ಗಂಗೆ, ಬಂದುದೆಲ್ಲಿಂದ ? ಮೀಟು ತಂತಿಯ, ಗಮನ ಹರಿಸು ಇತ್ಯಾದಿ ಕವನಗಳನ್ನೆಲ್ಲ ಒಂದು ನಿರ್ದಿಷ್ಟ ವರ್ಗಕ್ಕೆ ಸೇರಿಸಬಹುದು. ಕವಿಯ ದೈವಿಕ ಚಿಂತನೆ ಹಾಗೂ ಆಧ್ಯಾತ್ಮಿಕ ಒಲವು ಈ ಕವನಗಳ ಮೂಲದ್ರವ್ಯ ಮಿಕ್ಕ ಬಹುತೇಕ ಕವನಗಳಲ್ಲಿ ಕವಿಯ ಪ್ರಕೃತಿ-ಪ್ರೀತಿಯೇ ಪ್ರಮುಖವಾಗಿ ಉಸಿರಾಡಿದೆ. ಈ ಸಂಗ್ರಹದ ಪ್ರಧಾನ ಕವನ 'ಈ ಮರದ ನೆರಳಿನಲಿ' ಒಂದು ಉತ್ತಮ ಭಾವಗೀತೆ.

"ಈ ಮರದ ನೆರಳಿನಲಿ ಮೈಯೊಡ್ಡಿದವರೆಷ್ಟೊ 

ಲೆಕ್ಕವಿಟ್ಟವರಾರು ಮರು ಹೇಳಿ ಮತ್ತೆ ?

ಈ ಮರದ ಅಡಿಯಲ್ಲಿ ತಲೆಯಿಟ್ಟು ಸಂತವಿಸಿ-

ಕೊಂಡವರು ಇನ್ನೆಷ್ಟೋ ಇಹರು ಗೊತ್ತೆ ?

ಇಂಥ ಮರ 'ತನ್ನತನದಭಿಮಾನ ಹೆಮ್ಮೆಗಳ ಬದಿಗಿಟ್ಟು ಉನ್ನತಿಯ ಮಾರ್ಗವನು ತೋರಿಸುತ್ತ' ಮನುಷ್ಯ ಜನ್ಮ ನಿಸರ್ಗಸಿರಿಗೆ ಉಪಕೃತವಾಗಿರುವ ಸತ್ಯವನ್ನು ಈ ಕವನ ಸೂಚಿಸುವುದು. 'ಹತ್ತಿರ-ದೂರ' ಎಂಬ ಪುಟ್ಟ ಕವನ ಕವಿಯ ವೈಯಕ್ತಿಕ ಚಿಂತನೆಯ ಉತ್ತಮ ಉದಾಹರಣೆ. 'ರಾವಣ' ಎಂಬ ಕವನ ಪೌರಾಣಿಕ ಪ್ರತಿಮೆಯೊಂದರ ಮೂಲಕ ಮನುಷ್ಯ ಸ್ವಭಾವದಲ್ಲಿ ನಿಹಿತವಾಗಿರುವ ದೌರ್ಬಲ್ಯಗಳನ್ನು ವಿಶ್ಲೇಷಿಸುವ ಒಳ್ಳೆಯ ಪ್ರಯತ್ನವಾಗಿದೆ. 'ಇದೆಯೆಂದರೆ ಇದೆ' ಕವನದಲ್ಲೊಂದು ಗಹನ ತಾತ್ವಿಕ ಚಿಂತನೆ ಮೈದಾಳಿದ್ದರೆ 'ಯಾರು ಯಾರಿಗೆ .ಆಸರೆ' ಎಂಬ ಕವನದಲ್ಲಿ ಪರಸ್ಪರಾವಲಂಬನೆಯ ಅನಿವಾಕ್ಯತೆಯನ್ನು ಸಂಕೇತಿಸುವ ಸಾಮಾಜಿಕ ಶೃಂಖಲೆಯ ವಿವರಣೆಯಿದೆ. ಹೀಗೆ ಒಂದೊಂದೇ ದೃಷ್ಟಾಂತವನ್ನು ಎತ್ತಿ ತೋರಿಸುತ್ತ ಹೋದರೆ, ಇನ್ನೂ ಸಾಕಷ್ಟು ಹೇಳಬಹುದು. ಆದರೆ ಮೂಗಿಗಿಂತ ಮೂಗುತಿಯೇ ದೊಡ್ಡದಾದರೂ ಚೆಂದಲ್ಲ ತಾನೆ? ಶ್ರೀ ಕೆ. ಪಿ. ಭಟ್ಟರ ಈ ಕವನಗಳು ಅವರ ಸುದೀರ್ಘ ಜೀವನಾನುಭವದ ಮತ್ತು ಪರಿಪಕ್ವ ಮನಸ್ಸಿನ ಚಿಂತನೆಗಳಿಂದ ಮೂಡಿ ಬಂದಂಥವು. ಮೂಡು ಬಂದಾಗಲೆಲ್ಲ ಅವರ ಹೃದಯದ ಹಕ್ಕಿ ಹಾಡಿಕೊಂಡಂಥವು. ಹಾಡುವುದೇ ಅದರ ಧರ್ಮ. ಆದರೆ ಯಾವ ಹಕ್ಕಿಯೂ ಲೋಕದ ಜನ ತನ್ನ ದನಿಯನ್ನಾಲಿಸಿ ವ್ಹಾ ವ್ಹಾ ಎನ್ನಬೇಕೆಂಬ ಅಪೇಕ್ಷೆಯಿಟ್ಟುಕೊಂಡು ಹಾಡುವದಿಲ್ಲ. ಭಟ್ಟರ ಒಂದು ಕವಿತೆಯೇ (ರಾಗವಾವುದೊ) ಹೇಳುವಂತೆ-

“ರಾಗವಾವುದೊ ತಾಳವಾವುದೊ 

ಹಾಡನಂತೂ ಹಾಡುವೆ 

ಕೇಳುಗರ ಮನ ತಣಿಯದಿದ್ದರು 

ತಣಿದರೂ ನಲಿದಾಡುವೆ !”

ಕೇಳುಗರು ತಣಿಯಲಿ ಬಿಡಲಿ, ಶ್ರೀ ಕೆ. ಪಿ. ಭಟ್ಟ ಅವರ ಹೃದಯದ ಹಕ್ಕಿ ಹಾಡುತ್ತಲೇ ಇರಲೆಂದು ನಾನು ಹಾರೈಸುತ್ತೇನೆ. ಎಂದಿದ್ದಾರೆ ಬಿ. ಎ. ಸನದಿ.

***

ಒಮ್ಮೆ ಸುಮ್ಮನಿದ್ದು ನೋಡು

ಒಮ್ಮೆ ಸುಮ್ಮನಿದ್ದು ನೋಡು

ಎಂಥ ವಿಸ್ಮಯ;

ಮನಸಿನಾಳವನ್ನು ತಿಳಿಯೆ

ಮನ ಅಯೋಮಯ !

 

ಮನಸಿಗೊಂದು ಕನಸು ಬೇಕು

ನೆನೆಸಿಕೊಳ್ಳಲು ;

ಕನಸಿಗೂನೂ ಮನಸು ಬೇಕು

ಮೂಡಿಕೊಳ್ಳಲು !

 

ಕನಸು ಹುಟ್ಟಿ ಬರುವುದೆಲ್ಲಿ?

ಮನಸಿನಲ್ಲಿಯೆ ;

ಮನಸಿನಲ್ಲಿ ಕನಸು ಹುಟ್ಟಿ

ಅಳಿವುದಲ್ಲಿಯೆ !

 

ಮನದಿ ಮೂಡಿ ಬಂದ ಕನಸು

ಮನಸಿನಲ್ಲಿಯೆ ;

ಕನಸ ಬಿಟ್ಟು ಮನಸು ಮತ್ತೆ

ಕನಸಿನಲ್ಲಿಯೆ !

 

ಕನಸು-ಮನಸು, ಮನಸು ಕನಸು

ಎಲ್ಲವೂ ಭ್ರಮೆ ;

ಮನಸು ನೆಲಸೆ ಹೃದಯ ಬೇಕು

ಅಲ್ಲಿಯೆ ಕ್ಷಮೆ !