ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೯

ಕಳೆದ ವಾರ ‘ಈ ಮರದ ನೆರಳಿನಲಿ’ ಕೃತಿಯ ಮುನ್ನುಡಿಯನ್ನು ಓದಿರುವಿರಿ. ಈ ವಾರ ಕೃತಿಯ ಲೇಖಕರಾದ ಕೆ ಪಿ ಭಟ್ಟರು ‘ನನ್ನ ಮಾತು’ ಬರಹದಲ್ಲಿ ಬರೆದ ಅನಿಸಿಕೆಗಳು…
“ನನ್ನ ಇಳಿ ವಯಸ್ಸಿನಲ್ಲಿ ಈ ಕವನ ಸಂಕಲನವನ್ನು ಹೊರ ತರುತ್ತಿದ್ದೇನೆ. ಸುಮಾರು ಮುಕ್ಕಾಲು ಶತಮಾನ ಕಾಲ ಅವಿರತ ದುಡಿಮೆಯಲ್ಲೇ ಜೀವನ ಸಾಗಿಸಿದ ನಾನು ಸಂಸಾರ ನಿರ್ವಹಣೆಗಾಗಿ ನಿರಂತರ ಕಾರ್ಯನಿರ್ವಹಿಸಬೇಕಾಯಿತು. ಕೇವಲ ಒಂಭತ್ತನೆಯ ವಯಸ್ಸಿನಲ್ಲಿಯೆ, ದುಡಿಯುವ ತಂದೆಯನ್ನು ಕಳೆದುಕೊಂಡ ನಾನು ಜೀವನ ನಿರ್ವಹಣೆಯ ಕಾರಣ ಮಾಧ್ಯಮಿಕ ಶಾಲೆಯ ಮೆಟ್ಟಿಲನ್ನೇರಲೇ ಇಲ್ಲ.
ಹದಿನೈದರ ವಯಸ್ಸಿನಲ್ಲಿಯೇ ಮುದ್ರಣಾಲಯದಲ್ಲಿ ಅಕ್ಷರ ಜೋಡಣೆಯ ಕೆಲಸಗಾರನಾಗಿ ಹದಿನೈದು ವರ್ಷ ಕಾಲ ದುಡಿದು, ಆಮೇಲೆ ಸಹೋದರರ, ಮಿತ್ರರ ಸಹಕಾರದಿಂದ ಒಂದು ಮುದ್ರಣಾಲಯವನ್ನು ಪ್ರಾರಂಭಿಸಿದೆ. ಕೆಲಸಗಾರನಾಗಿರುವಷ್ಟು ಕಾಲ ನನ್ನ ಮಿತ್ರರ ಸಹಕಾರದಿಂದ, ಆಗಿನ ಪ್ರಸಿದ್ಧ ಸಾಹಿತಿಗಳಾದ ಶರಶ್ಚಂದ್ರ ಚಟರ್ಜಿ, ಶಿವರಾಮ ಕಾರಂತ, ಅ.ನ.ಕೃ., ತ.ರಾ.ಸು., ಪುರಾಣಿಕ, ಕುಳಕುಂದ ಶಿವರಾಯ, ಕುವೆಂಪು, ಬೇಂದ್ರೆ, ಮಾಸ್ತಿ, ದೇವುಡು ಇನ್ನೂ ಅನೇಕ ಸುಪ್ರಸಿದ್ಧ ಸಾಹಿತಿಗಳ ಕೃತಿಗಳನ್ನು ಓದುವ ಸೌಭಾಗ್ಯ ನನ್ನದಾಯಿತು.
ಅದೇ ಸಮಯದಲ್ಲಿ ನಾನು ಸುಮಾರು ಹನ್ನೆರಡಕ್ಕೂ ಮೇಲ್ಪಟ್ಟು ಚಿಕ್ಕ ಕತೆಗಳನ್ನು ಬರೆದಿದ್ದು, ಅವು ಉಡುಪಿಯ "ರಾಯಭಾರಿ” ಧಾರವಾಡದ “ಜಯ ಕರ್ನಾಟಕ” ಮೊದಲಾದ ಪತ್ರಿಕೆಗಳಲ್ಲಿ ಪ್ರಕಾಶಿತಗೊಂಡವು. ಶ್ರೀ ಪಾಂಡೇಶ್ವರ ಗಣಪತಿ ರಾಯರು ಹೊನ್ನಾವರದಲ್ಲಿಯ "ನಾಗರಿಕ" ಪತ್ರಿಕೆಯ ಸಂಪಾದಕರಾಗಿದ್ದರು. ನಾನೊಂದು ಕವಿತೆಯನ್ನು ಪ್ರಪ್ರಥಮ ಬಾರಿಗೆ ಪ್ರಕಟನೆಗಾಗಿ ಅವರಿಗೆ ಕಳುಹಿಸಿದೆ. ಕವನ ಮುಟ್ಟಿದೊಡನೆ ಅವರಿಂದ ನನಗೊಂದು ಅಂಚೆ ಕಾರ್ಡ ಬಂದಿತು : "ನಿಮ್ಮ ಕವನ ಚೆನ್ನಾಗಿದೆ, ಮುಂದಿನ ಸಂಚಿಕೆಯಲ್ಲಿ ಪ್ರಕಟಿಸುತ್ತೇನೆ" ಎಂದು. ಆಮೇಲೆ ಅದು ಪ್ರಕಟವಾಯಿತು. ಆದರೆ ಕೆಲಸದ ಒತ್ತಡದಿಂದ ನಾನು ಪುನಃ ಬರೆಯುವುದು ಸಾಧ್ಯವಾಗಲಿಲ್ಲ.
(ಮುಂದಿನ ವಾರಕ್ಕೆ)
***
ಬಾಳ ಸೂರ್ಯ
ರತ್ನಾಕರನು ತನ್ನ ರಕ್ತಕಾಂತಿಯನುಗುಳಿ
ಹಗಲ ಮುಕ್ತಾಯವನು ಸೂಚಿಸುತಿರೆ
ದಿನದ ಕಾಲವು ಕಳೆಯಿತೆನುವುದನು ತಾವರಿತ
ಹಕ್ಕಿ - ಪಕ್ಕಿಗಳೆಲ್ಲ ಗೂಡು ಸೇರೆ !
ಕೊಂಕಣದ ದಿನ್ನೆಯಲಿ ಚಿಕ್ಕ ಗುಡಿಸಲಿನ ಬಳಿ
ಹೆಣ್ಣೊಂದು ಯಾರನ್ನೊ ಕಾಯುತಿತ್ತು
ನೆಲಕೆ ತುದಿಗಾಲೊತ್ತಿ ತಳಮಳಿಸಿ ತವಕದಲಿ
ಹುಡುಕುದೃಷ್ಟಿಯನತ್ತ ಬೀರುತಿತ್ತು !
ಬೆಳಕು ಹರಿಯುವ ಮುನ್ನ ಕೈಬಲೆಯ ಕೈವಿಡಿದು
‘ಕೊಂತಲ’ದಿ ಕೈಂಕರ್ಯದಲಿ ತೊಡಗುತ
ಬೆಳಕೀವ ನೇಸರನ ಮನಸಾರೆ ಸ್ಮರಿಸುತ್ತ
ಸುಳಿಯಲೆಗಳನು ದಾಟಿ ಮುನ್ನಡೆಯುತ !
ಬೆಳಕು ಇಂಗುವ ಮುನ್ನ ತಟಕೆ ಕಾಲಿರಿಸುವುದೆ
ತಪ್ಪದೆಯೆ ನಡೆವಂಥ ನಿತ್ಯಕ್ರಮ
ಇಂದೇಕೆ ತಡವಾಯ್ತು ತಿಳಿಯಲಾಗದ ಒಗಟು
ತಳಮಳದ ತುಮುಲಗಳದೇ ವಿಭ್ರಮ !
“ಈ ನನ್ನ ಮನದನ್ನ ಬಾರದಿಹನೇಕಿನ್ನು
ನೇಸರನು ನೇಪಥ್ಯಕೆರವಾದರು?
ಈಗೆನ್ನ ಮನದಳಲ ಅದುಮಿಕೊಳ್ಳುವುದೆಂತು?
ದಳ್ಳುರಿಯ ಬೇಗೆಯಲಿ ನಾ ಬೆಂದರು” !
ಅನಿತರೊಳಗಾಗಮಿಸಿ ಅವನ ನೇಹಿಗರೆಲ್ಲ
ಅಂಜುತ್ತ ಅಳುಕುತ್ತ ಇಂತೆಂದರು :
ನೀರಿನೆಲೆಗಳ ನಡುವೆ ಸೇರಿ ಹೋಗಿಹ ಅವನ
ಕಳವಳದ ಸಂಗತಿಯನರುಹಿ ಹೀಗೆ :
“ನೀರಿನುಯ್ಯಾಲೆಯಲಿ ನಿನ್ನವನು ಸೇರಿದನು
ಹಿಂದಿರುಗಿ ಬರಲಾರದಂಥ ಸಿಂಧು”
ಕೇಳುತಲೆ ಬೇಗೆಯದು ಭುಗಿಲೆಂದು ವ್ಯಾಪಿಸಿತು
ಕುಸಿದುಬಿದ್ದಳು ಅವಳು ಮೂರ್ಛೆ ಬಂದು !
ಅವಳ ಬಾಳ ಸೂರ್ಯ ಮುಳುಗಿ
ಹೋದ ಕಥೆಯಿದು ;
ಇವಳ ಪಾಲಿಗಿರುವ ಬಾಳ
ಕಹಿಯ ವ್ಯಥೆಯಿದು !
***