ಕೆಮ್ಮಣ್ಣು ಗುಂಡಿ ಪ್ರವಾಸ ಕಥನ
ಬಾ ಚಾರಣಿಗ, ಬಾ ಚಾರಣಿಗ ಕರೆಯುತಿಹುದು
ಮೋಹಕ ಮಲೆನಾಡು.
ಸುಲಲಿತ ವಿಹಂಗಮ ಕಲರವ ತುಂಬಿಹ,
ಸುಮಧುರ ಸುಂದರ ಬೀಡು.
ನಿರ್ಮಲ ಹಸಿರಿನ, ನಿಶ್ಚಲ ಶೃಂಗದ,
ಸ್ವರ್ಗದ ಸಿರಿನಾಡು.
ಧವಲ ಝರಿಗಳು, ನಿರ್ಮಲ ನದಿಗಳು,
ಉಲಿಯುತಿಹವು ಇಂಪಿನ ಹಾಡು.
ಕರಿಮೋಡವೇ ನಾಚುವ ಕರಿಧೂಮದೂರಿಂದ,
ವಾಹನ ಸಾಗರವನೊತ್ತ ರಸ್ತೆ ರಣರಂಗದಿಂದ,
ಕಿವಿಗಡಚಿಕ್ಕುವ ಶಬ್ಧಾಸುರನ ಗುಹೆಯಿಂದ,
ಓಡಿಬಾ ಪಯಣಿಗನೆ, ಸುರನೋಟಗಳ ತವರಿಗೆ,
ತರುಲತೆಗಳು ಕುಣಿದೇಳಿಸುವ ತಂಬೆರಲಿನ ಹೊನ್ನಾಡಿಗೆ,
ವನಸುಮಗಳು ಸವಿಗಂಪನು ಪಸರಿಸಿಹ ನೆಲೆಯೂರಿಗೆ.
ಪಟ್ಟಣದ ದಟ್ಟನೆಗೆ ಸೊರಗಿಹ ಮನವನು ತಣೀಸಲು,
ಜಡತನುವಿನ ಕಣಕಣದಲು ಉತ್ಸುಂಗವನು ತುಂಬಲು,
ಎದೆಯೊಳಗಿನ ಮರುಭೂಮಿಯ ಹಸಿರಿನಿಂದ ಕರಗಿಸಲು,
ಬಾ ಇಲ್ಲಿ ತಬ್ಬಿ ನಿಲ್ಲು ಪ್ರಕೃತಿಯೆಂಬ ತಾಯಿಯನು,
ಹೃದಯಂಗಮ ವನನೋಟದಿ ಓಡಿಸು ದೃಷ್ಟಿಮಬ್ಬನು,
ಹರುಷದಿಂದ ವನದಿ ಬೆರೆತು ಅಳಿಸು ಮನದ ಮಂಕನು.
ಗೆಳೆಯರೊಡನೆ ಮಜದಿ ಆಡುವ ಕಾಫಿತೋಟದೆಡೆಯಲಿ.
ಚಿಮ್ಮಿನೆಗೆದು ನೀರೆರಚುವ ತೊರೆಯದಾಟುವ ಭರದಲಿ.
ಕಾಫಿ ಟೀಯನು ಕುಡಿದು ನಲಿಯುವ ಮುಂಜಾನೆ ಮಂಜಲಿ.
ಮೇಡಲಲೆಯುತ ಕ್ಷಿತಿಜರಂಗದಿ ವರ್ಣನಾಟಕ ನೋಡುವ.
ಝರಿಯ ಅಲೆಯಲಿ ಮುಳುಗೇಳುತ ನೀರಿನೆದೆಯಲಿ ಕುಣಿಯುವ.
ಹುಲ್ಲ ಹಾಸಲಿ ಮಲಗಿ ಮೇಲೆ ಮೋಡದಾಟವ ನೋಡುವ.
ಎಲ್ಲ ನೋವನು ಮರೆಯುವ,
ಎಲ್ಲ ಚಿಂತೆಯ ನೀಗುವ,
ಮೊಗದಿ ನಗುವ ಚೆಲ್ಲುವ,
ನಮ್ಮೆದೆಯನು ವನದೆದೆಯಲಿ ಬೆಸೆದು ಸ್ವರ್ಗವನೇ ಕಾಣುವ.
ಹೀಗೆ ಮೋಹಕ ಮಲೆನಾಡಿನ ಚಾರಣಿಗನೊಬ್ಬನು ತನ್ನ ಸ್ನೇಹಿತರನ್ನು ಕೂಗಿ ಕರೆಯಲು, ಅವನ ಕೂಗು ನಮ್ಮ ಸ್ನೇಹವೃಂದದ ಹೃದಯಬಾಗಿಲನ್ನು ಕೂಡ ತಟ್ಟಿತು. ಇದರಿಂದಾಗಿಯೇ ಇರಬಹುದು, ಬಹು ಕಾಲದ ನಂತರ( ಒಂದೂವರೆ ವರ್ಷ ತರುವಾಯ), ಒಂದು ವಾರಾಂತ್ಯದಲ್ಲಿ 'ಕೆಮ್ಮಣ್ಣುಗುಂಡಿಯ' ಪ್ರವಾಸವನ್ನು ಕೈಗೊಂಡೆವು. ಆ ಪ್ರವಾಸದ ಸಿಹಿಸದಸ್ಯರುಗಳ ಹೆಸರು ಈ ಕೆಳಗಂತಿವೆ:
ಚಂದ್ರು-ಭವ್ಯ
ಚನ್ನ-ಗೀತ
ಚೆಲುವ-ಲತ
ಚೇತನ್ - ಸೌಮ್ಯ
ಕಾಮೇಶ್ - ಪದ್ಮ
ಏಲ್ಲ ವೀರಪತಿಯರು ತಮ್ಮ ಅಕ್ಷರದ್ವಯನಾಮಾಂಕಿತ ಪತ್ನಿಯರಜೊತೆಗೂಡಿ :-)..ಚೆಲುವನ ಮನೆಯ ಮುಂದೆ ನಿಂತಿದ್ದ 'ಸ್ವರಾಜ್-ಮಜ಼್ದ' ಹತ್ತಿದೆವು. "ಶ್ರೀ ಮದ್ ರಮಾರಮಣ" ಎಂದು ಸರಸಿಜಾಕ್ಷನನ್ನು ಪ್ರಾರ್ಥಿಸಿ ಪಯಣವನ್ನು ಪ್ರಾರಂಬಿಸಿದೆವು. ಸಾಮಾನ್ಯದಂತೆ ತಾಮುಂದು ನಾ ಮುಂದು ಎಂದು ಎಲ್ಲ ನಾಲಿಗೆಗಳು, ರಣಹದ್ದುಗಳು ಆಹಾರವನ್ನು ಮುದ್ದುವಂತೆ, ಮಾತುಕತೆಗಳನ್ನು ಕಿತ್ತೆಳದಾಡಿದುವು. ಗಂಟಲಧ್ವನಿಗಳು ತಾರಕಕ್ಕೇರಿ ಅಲ್ಲಿದ್ದ ಉಪಗ್ರಹಗಳನ್ನೇ ಅಲುಗಾಡಿಸಬಹುದೇನೊ ಎಂಬಂತೆ ಭಯಂಕರವಗಿತ್ತು. ಆ ವಿಷಯಗಳು ಎಷ್ಟು ವಿಚಿತ್ರವೂ, ವಿಲಕ್ಷಣವೂ ಆಗಿತ್ತೆಂದರೆ, ನನ್ನ ಸ್ಮೃತಿಯು ಅವುಗಳನ್ನು ಜ್ನ್ಯಾಪಕಕ್ಕೂ ಇಟ್ಟುಕೊಳ್ಳದೆ, ಹಠದಿಂದ ಸುಮ್ಮನೆ ಕುಳಿತಿತ್ತು. ಎಲ್ಲರನ್ನು ಹೊತ್ತಿ ಓಡುತ್ತಿದ್ದ 'ಮಜ್ದ' ಮೊದಲು ನಿಂತಿದ್ದು ಎನ್-ಎಚ್-೪ ಹೆದ್ದಾರಿಯ ಸೆರಗಿನಲ್ಲಿ. ದಾರಿಯುದ್ದಕ್ಕೂ ಡಿವೈಡರ್ ಇದ್ದುದರಿಂದ, ಡಿವೈಡರ್ ನ ಪಕ್ಕಕ್ಕೇ ಗಾಡಿ ನಿಲ್ಲಿಸಿದೆವು. ನಮ್ಮ ಪೈಲ್ವಾನ್ ಚನ್ನಕೇಶವ ತನ್ನ ೩೧ ವರ್ಷಗಳನ್ನು, ಸಾಧ್ಯವಾದಷ್ಟು ಸಫಲವಾಗಿ, ಸಾರ್ಥಕವಾಗಿ, ಸಾಂಗವಾಗಿ, ಬಾಳಿನ ಸುಖ-ದುಖಃಗಳು ಸರಿ-ಸಮವಾಗಿವೆಯೇ ಎಂದು ತೂಗಿನೋಡದೆ, ಬಂದ ಬದುಕನ್ನು ಸಂಪೂರ್ಣವಾಗಿ, ಸಹೃದಯನಾಗಿ ಸ್ವೀಕರಿಸಿ, ತಾಳ್ಮೆಯಿಂದ ಅನುಭವಿಸಿ, ಸ್ವಧೈರ್ಯದಿಂದ ಎದುರಿಸಿ ಅಂದು ಸುಪೂರ್ಣಗೊಳಿಸಿದ್ದ. ಅವನ ಹುಟ್ಟುಹಬ್ಬವನ್ನು ಎಲ್ಲರೊಂದಿಗೆ ರಾತ್ರಿ ೧೨ ಗಂಟೆ ಆಗುವ ಮುಂಚೆಯೇ ಆಚರಸಿಸಬೇಕಾದುದ್ದರಿಂದ,ಗಾಡಿಯನ್ನು ಮಧ್ಯದಾರಿಯಲ್ಲೇ ವಿಧಿಯಿಲ್ಲದೆಯೆ ನಿಲ್ಲಿಸಬೇಕಾಯಿತು. ಕೆಳಗಿಳಿದು ಆಚರಿಸೋಣವೆಂದರೆ ಲಾರಿಗಳು ಒಂದರ ಮೇಲೊಂದರಂತೆ ನಮ್ಮ ಗಾಡಿಯನ್ನು ತಾಗುವಂತೆಯೇ ಅತಿವೇಗವಾಗಿ ಚಲಿಸುತ್ತಿದ್ದವು. ಲಾರಿಯ ರಭಸಕ್ಕೆ ಗಾಡಿಯ ಜೊತೆ ನಮ್ಮ ನಾಡಿಗಳು ನಡುಗುತ್ತಿದ್ದುದರಿಂದ ಕೇಕನ್ನು ಗಾಡಿಯಲ್ಲೇ ಕತ್ತರಿಸುವುದೆಂದು ನಿರ್ಣಯವಾಯಿತು.
ಕೇಕ್ ಇತ್ತು, ಕತ್ತಿಯಿತ್ತು, ಮೇಣದಬತ್ತಿಯಿತ್ತು, ಆಚರಿಸುವ ಹುಮ್ಮನ್ನಸಿತ್ತು, ಡ್ರೈವರ್ ಕೊಟ್ಟ ಬೆಂಕಿಪೊಟ್ಟಣವೂ ಇತ್ತು ಆದರೆ ಬೆಂಕಿ ಕಡ್ಡಿಗೆ ಏಕೋ ಮನಸ್ಸಿರಲಿಲ್ಲ. ನುರಿತ ಹಲವಾರು ಕೈಗಳ ಧೀರಪ್ರಯತ್ನಿಕ್ಕೂ ಮಣಿಯದೇ, ಬೆಂಕಿಕಡ್ಡಿಯು ತನ್ನ ಅಸ್ತಿತ್ತ್ವದ ಮೂಲಕಾರ್ಅಣವನ್ನೇ ಮರೆತು, ನಮ್ಮ ಉಗ್ರದೃಷ್ಟಿಗೆ ದೃಷ್ಟಿಕೊಟ್ಟು, ನಮ್ಮ ತಾಳ್ಮೆಯನ್ನು ಕೆಣಕಲೆಳಸುವಂತೆ ದಿಟ್ಟಿಸಿ ನೋಡುತ್ತಿತ್ತು. ವಾಮನನ ಮುಂದೆ ಬಲಿಯು ಸೋತಂತೆ ನಾವು ಬೆಂಕಿಕಡ್ಡಿಗೆ ಮಣಿದು, ೧೨ ಘಂಟೆ ಮೀರುವ ಭಯದಲ್ಲಿ, ಚಪ್ಪಳೆ ತಟ್ಟಿ , ಮೋಬತ್ತಿ ಹತ್ತಿಸದೆ, ಹಾಗೆಯೆ ಕೇಕ್ ಕಟ್ ಮಾಡಿ, ಹುಟ್ಟು ಹಬ್ಬ ಮುಗಿಸಿದೆವು. ಫೋಟೊಗೋಸ್ಕರ ಮಾತ್ರ ಚನ್ನ ಬತ್ತಿಯನ್ನು ಆರಿಸುವ ಭಂಗಿಯಲ್ಲಿ ನಿಂತು, ಫೋಟೋ ತೆಗೆಸುಕೊಂಡ. ತದನಂತರ ಮುಂದುವರೆದ ನಮ್ಮ ಪ್ರಯಾಣದಲ್ಲಿ ನಮ್ಮ ಧ್ವನಿಗಳು ತಿಳಿಹರಟೆಯಿಂದ ಮೊದಲುಗೊಂಡು, ತೀವ್ರ ಹರಟೆಯ, ಹಾಡುಗಳ, ಹುಡುಗಾಟದ ಜಾಗವನ್ನೆಲ್ಲಾ ಸುತ್ತಿ, ದಣಿದು, ಸೊರಗಿ ಕಂಠಶಯನದಲ್ಲಿ ನಿರ್ಬಲವಾಗಿ ಮಲಗಿದ್ದವು. ಮಾತುಕತೆಗಳಿಲ್ಲದ್ದರಿಂದ ಕಣ್ಗಳಿಗೂ ನಿದ್ದೆಯಾವರಿಸಿ, ಎಲ್ಲರೂ ಸೀಟಿನೊಳಗೆ, ಗಾಡಿಯ ಜೋಗುಳವನ್ನು ಕೇಳುತ್ತ ಮಲಗಿದೆವು.
ಸುಮಾರು ೫:೦೦ ಘಂಟೆಯ ಹೊತ್ತಿಗೆ, ನಮ್ಮ ಗಾಡಿ ರಾಬಿನ್ ಅವರ 'ಹೋಂಮ್ ಸ್ಟೇ' ಮೈಮುರಿಯುತ್ತ ನಿಂತಿತು. ರಾಬಿನ್ ದಂಪತಿಗಳು, ಸಜ್ಜನಿಕೆಯಿಂದ ನಮ್ಮನ್ನು ಆದರಿಸಿ ನಾವು ಇಳಿದುಕೊಳ್ಳಲು ಬೇಕಾದ ಎಲ್ಲ ವ್ಯವಸ್ಥೆಗಳನ್ನು ಪರಿಚಯಿಸಿದರು. ನಂತರ ಆ ದಿನವು ನಾವು ನೋಡಬಹುದಂತ ಸ್ಥಳಗಳ ಹಾಗು ವೇಳಪಟ್ಟಿಯ ವಿವರಣೆಗಳನ್ನು ಕೊಟ್ಟು, ಹಿಂದೆಯಿದ್ದ ಅವರ ಮನೆಯ ಕಡೆಗೆ ಹೊರಟರು. ಮುಸುಗತ್ತಲಿನಲಿ ವಾಕ್ ಮಾಡಲು ನಮ್ಮ ತಂಡವೂ ಸಜ್ಜಾಯಿತು. ಮನೆಯಿಂದ ಕೊಂಚದೂರದವರೆಗೂ ತಂಗಾಳಿಯಲ್ಲಿ ನಡೆಯುತ್ತ ಸಾಗಿದೆವು. ರಾಬಿನ್ ಅವರ ಮನೆ ೨೦ ಎಕರೆ ಕಾಫಿ ತೋಟದ ಹೃದಯಭಾಗದಲ್ಲಿದೆ. ಮನೆಯಹಿಂದೆಯೇ ಒಂದು ಸಣ್ಣ ಕಾಲುವೆಯೂ ಹರಿಯುತ್ತಿದೆ. ಇವರ ಎಸ್ಟೇಟ್ ಸುತ್ತಲೂ ಕೂಡ ಮತ್ತಲವು ಎಸ್ಟೇಟ್ ಗಳು ಇವೆ. ಮನೆಯಿಂದ ನಡೆಯುತ್ತ ಸ್ವಲ್ಪ ದೂರ ಬರುವಷ್ಟರಲ್ಲಿ, ಕತ್ತಲು ಹೊಸದಿನಕ್ಕೆ ಸುಸ್ವಾಗತವನ್ನು ಕೋರಿ ಮಾಯವಾಯಿತು, ಪಕ್ಷಿಸಂಕುಲಗಳು ಎಂದಿನಂತೆ ಮುಂಜಾನೆಯ ಕರ್ಮಾದಿಗಳನ್ನು ನೆರವೇರಿಸಲು ಚಿಲಿಪಿಲಿಗುಡುತ್ತಿದ್ದವು, ಆಕಾಶವು ತಿಳಿನೀಲಿ ಬಣ್ಣ ಬಳಿದುಕೊಂಡು ತಿರೆಯತ್ತ ನಗುತ್ತಿತ್ತು, ಕತ್ತಲೆಯಲ್ಲಿ ಮರೆಯಾಗಿದ್ದ ಹಸಿರು ತಿಳಿಬೆಳಕಿನಲ್ಲಿ ಮೈತೊಳೆದು ಶುಭ್ರಶೋಭೆಯಿಂದ ಕಂಗೊಳಿಸುತ್ತಿತ್ತು. ಹೊರಗಿನ ಸುಂದರತೆಯಲ್ಲಿ ನಾವೂ ಮಿಂದು ಅದನ್ನು ನಮ್ಮ ಕ್ಯಾಮರಾದಲ್ಲಿ ಬಚ್ಚಿಡುವ ಸಲುವಾಗಿ ಹಲವು ಭಂಗಿಗಳಲ್ಲಿ ನಿಂತು, ಕೂತು ಫೋಟೋಗಳನ್ನು ತೆಗೆಸಿಕೊಂಡೆವು. ಸ್ವಲ್ಪ ಹೊತ್ತು ಅಡ್ಡಾಡಿದ ಮೇಲೆ ಮತ್ತೆ ಮನೆಗೆ ಹಿಂದಿರುಗಿದೆವು.
ಸ್ನಾನವನ್ನು ಮುಗಿಸಿ, ಬಿಸಿ ಬಿಸಿಯಾಗಿ ತಯಾರಾಗಿದ್ದ ಪೂರಿ, ಅವರೆಯ ಪಲ್ಯ, ಪುದೀನ-ತೆಂಗು ಮಿಶ್ರಣ ಚಟ್ನಿಯಾನು ತಿನ್ನುವಷ್ಟರಲ್ಲಿ ಸಮಯ ೯:೩೦ ಗಂಟೆ ಮೀರಿತ್ತು. ತಿಂಡಿಯ ನಂತರ ನಾವು ಹೊರಟಿದ್ದು 'ಹಬ್ಬೆ" ಜಲಪಾತವನ್ನು ವೀಕ್ಷಿಸಲು. ಜಲಪಾತಕ್ಕೆ ಹೋಗುವ ದಾರಿ ಬಹಳ ದುಸ್ಥಿತಿಯಲ್ಲಿರುವುದರಿಂದ ಅಲ್ಲಿಗೆ ಜೀಪ್ ಬಿಟ್ಟರೆ ಬೇರಾವ ಗಾಡಿಯು ಹೋಗಲಾಗುವುದಿಲ್ಲ. ಜೀಪ್ ಒಂದನ್ನು ಬಾಡಿಗೆಗೆ ಪಡೆದು ಜಲಪಾತದೆಡೆಗೆ ಹೋದೆವು. ದಾರಿಯು ಸುಮಾರಾಗಿಯೇ ಇದ್ದುದುದರಿಂದ ೧೨೦೦/- ಯ ಬಾಡಿಗೆ ಜಾಸ್ತಿಯಾಯಿತೆಂದು ಎಲ್ಲರಿಗು ಅನಿಸಿತಾದರೂ, ಆ ಸಂಶಯ ಒಡೆಯಲು ಬಹಳ ಹೊತ್ತು ಬೇಕಾಗಿರಲಿಲ್ಲ. ರಸ್ತೆ ಎಂಬುದಕ್ಕೆ ಯಾವ ದೃಷ್ಟಿಯಿಂದಲೂ ನಾವದನ್ನು ಕರೆಯುವುದ್ದಕ್ಕೆ ಲಾಯಕ್ಕಿರಲಿಲ್ಲ. ಗಾಡಿಗಳು ಓಡಾಡಬಹುದಾದ ಯಾವ ಗುಣಲಕ್ಷಣಗಳೂ ಲೇಶವಾದರೂ ಅದಕ್ಕಿರಲಿಲ್ಲ. ವಿವಿಧಗಾತ್ರಗಳ ಕಲ್ಲುಗಳಿಂದ ತುಂಬಿಹೋಗಿದ್ದ ರಸ್ತೆ ಗಾಡಿಯನ್ನು ಎತ್ತೆಸೆಯುತ್ತಿತ್ತು. ಅಲ್ಲಲ್ಲಿ ಕಲ್ಲುಗಳಬದಲು ಹೆಬ್ಬಂಡೆಗಳದ್ದೇ ಕಾರುಬಾರು. ಮತ್ತೊಂದು ಕಡೆ ಕೊರಕಲು ಬಿದ್ದು ಕಣಿವೆಯಂತಾಗಿದ್ದ ದಾರಿ. ಒಂದು ತರದಲ್ಲಿ ಜೀಪು ಸಾಗುವ ಬದಲು, ಕುಪ್ಪಳಿಸುತ್ತ ಹೋಗುತ್ತಿದೆ ಎನ್ನಬಹುದಾಗಿತ್ತು. ಇಂತಹ ದಾರಿಯೊಳಗೆ ಸಾಗುತ್ತಿದ್ದ ನಮ್ಮ ದೇಹಗಳೋ ನೆಗೆಯುತ್ತ, ಕುಕ್ಕುತ್ತಾ, ಕೆಲವೊಮ್ಮೇ ಹಾರುತ್ತ ತಮ್ಮ ಗುರುತ್ವವನ್ನೇ ( ಸೆಂಟರ್ ಆಫ್ ಗ್ರಾವಿಟಿ) ಕಳೆದುಕೊಂಡು ಕಂಗಾಲಗಿದ್ದವು. ಹೆಣ್ಣು ಮಕ್ಕಳು "ಅಮ್ಮ, ಅಯ್ಯೋ ಎಂದು ಚೀರುತ್ತಿದ್ದರೇ, ಗಂಡುಗಳು ದಾರಿಯನ್ನು ಸುಸ್ತಿಯಲ್ಲಿಡದ ಸರ್ಕಾರವನ್ನು ಹೀಗಳೆಯುತ್ತಿದ್ದರು. ಅದರಲ್ಲಿಯೂ ಚೆಲುವ ತನ್ನ ಕಣ್ಣುಗಳನ್ನು ತಾನೆ ನಂಬದವನ ಹಾಗೆ "ಹೇಗೊ ಜನರು ಇಲ್ಲಿ ಒಡಾದುತ್ತಾರೆ?" ಎಂದು ತನ್ನ ಬೇಸರಯುಕ್ತ ಪ್ರಶ್ನೆಯನ್ನು ಆಗಾಗ್ಗೆ ಎಲ್ಲರ ಮುಂದಿಡುತ್ತಿದ್ದ. ನಮ್ಮ ಚೇತನ ದುಖಃದಲ್ಲೂ ನಗುವ ವೀರಸನ್ಯಾಸಿಯಂತೆ ನಮ್ಮೆಲ್ಲರ ಫಜೀತಿಯನ್ನು ನೋಡಿ ಕಿಸಿಯುತ್ತಿದ್ದ. ಸುಮಾರು ಅರ್ಧ ಗಂಟೆಯ ಸಾಹಸಮಯ ,ತ್ರಾಸಮಯ ಪ್ರಯಾಣದ ನಂತರ ಹಬ್ಬೆ ಜಲಪಾತದ ಸನಿಹಕ್ಕೆ ಬಂದೆವು.
ಜಲಪಾತವು ಜೀಪು ನಿಂತ ಜಾಗದಿಂದ. ಒಂದು ಫರ್ಲಾಂಗ್ ದೂರವಿದ್ದು, ಕಾಲ್ನಡಿಗೆಯಲ್ಲೇ ಹೋಗಬೇಕಿತ್ತು. ನಡೆಯುವ ದಾರಿಯಲ್ಲಿ ೨- ೩ ಸಣ್ಣ ತೊರೆಗಳು ಸಿಗುತ್ತವೆ. ಹಳ್ಳ ದಿಣ್ಣೆಗಳನ್ನು ಇಳಿದೇಳುತ್ತ, ತೊರೆಗಳನ್ನು ದಾಟುವಾಗಲೇ ನಮಗೆ ಗೊತ್ತಗಿದ್ದು, ನಮ್ಮ ಗುಂಪಿನಲ್ಲಿ 'ವ್ಯಾಘ್ರಮುಖಗೋವೊಂದು' ಇದೆಯೆಂದು. ಆ ಗೋವೇ ಚನ್ನನ ಮಹಾಮಡದಿ 'ಗೀತ'. ಮೊಣಕಾಲುದ್ದದ ಕಿರುತೊರೆಯೊಳಗೂ ನಡೆಯಲು ಹೆದರುತ್ತಿದ್ದ ಈ ಹೆಣ್ಣು ಚನ್ನನ ಕೈ ಆನ್ನು ಸುತಾರಮ್ ಬಿಡುತ್ತಿರಲಿಲ್ಲ. ನಮ್ಮೆಲ್ಲರ ಉತ್ತೇಜನಾಕಾರಿ ವೀರವಾಣಿಗಳಿಂದಲೂ, ಧೈರ್ಯಕೊಡುವ ಅಭಯವಚನಗಳಿಂದಲೂ ಪ್ರೇರಿತಳಾಗದ ಅವಳ ನಡುಗೆ, ಮಂದಗತಿಯಲ್ಲೇ ಸಾಗಿತ್ತು. ಅವಳು ಚನ್ನನ ಕೈಯನ್ನು ಎಷ್ಟು ಬಿಗಿಯಾಗಿ ಹಿಡಿದಿದ್ದಳೆಂದರೇ, ಅವನ ಹೃದಯಕ್ಕೆ ಅವಳ ಬಿಗಿಹಿಡಿತವನ್ನು ದಾಟಿ ರಕ್ತವನ್ನು ಸಾಗಿಸುವಷ್ಟರಲ್ಲಿ ಸಾಕುಬೇಕಾಗಿರಬೇಕು. ಹೀಗೆ ನಿಧಾನವಾಗಿ ಸಾಗಿದ ನಮ್ಮ ಗುಂಪು ಕೊನೆಗೂ ಜಲಪಾತದ ಬುಡವನ್ನು ತಲುಪಿಯೇ ಬಿಟ್ಟೆವು.
ಎಂಥಾ ಹೃದಯವಿಸ್ಮಿತ ನಿಸರ್ಗ ಸೌಂದರ್ಯ. ಸುತ್ತಲೂ ಮಲೆಗಳನ್ನು ಅಪ್ಪಿದ್ದ ಮಹೀರುಹಮಂಟಪದಲ್ಲಿ, ಸೃಷ್ಟಿಯ ಮಾಹೇಂದ್ರಜಾಲ ದೃಷ್ಯಮಾಧುರ್ಯವನ್ನು ಕಲೆ ಹಾಕಿತ್ತು. ಆಗಸದ ಅಂಚಿನಿಂದ ಧುಮುಕುವ ಕ್ಷೀರಧಾರೆಯಂತಿದ್ದ ಶ್ವೇತವರ್ಣಿನಿ, ನಿರ್ಮಲವಾಹಿನಿ, ಸುಕೋಮಲ ಸುಹಾಸಿನಿ 'ಹಬ್ಬೆ', ನಮ್ಮೆಲ್ಲರ ಮನಸೂರೆಗೊಂಡಿದ್ದಳು. ನೋಟದೆತ್ತರಕ್ಕು ನಿಂತಿದ್ದ ಜಲಪಾತ, ನಮ್ಮೆರಡು ಕಣ್ಗಳಲೂ ಪ್ರತಿಬಿಂಬವಾಗಿ ರೂಪಗೊಂಡು, ಮನದಾಳದ ಮಾನಸಸರೋವರವನ್ನು ಸೇರಿ ಪರಾತ್ಪರ ಅನುಭವವನ್ನು ಉತ್ಫುಲಗೊಳಿಸಿತ್ತು. ಎರೆಡು ಹಂತವಾಗಿ ಧುಮುಕುವ ಇಂತಹ ಜಲಪಾತವನ್ನು ನಾನು ಹಿಂದೆಂದೂ ನೋಡಿರಲಿಲ್ಲ. ಜಲಪಾತದ ಕೊರೆವ ನೀರಿನಲ್ಲಿಳಿದು ಆತವಾಡುತ್ತ ಅಲ್ಲಿಯೇ ಸ್ವಲ್ಪ ಕಾಲಕಳೆದೆವು. ನಾವು ಆ ತಾಣಕ್ಕೆ ಹೋದಾಗ, ಬೇರಾವ ಪ್ರವಾಸಿಗರ ಗುಂಪು ಇಲ್ಲದೆ, ಅನಪೇಕ್ಷಿತ ಏಕಾಂತವು ನಮಗೊದಗಿತು. ತೃಪ್ತಿಯಾಗುವವರೆಗೂ ಅಲ್ಲಿದ್ದು ನೀರಿನಾಟದ ಮೋಜನ್ನು, ಹಸಿರಿನ ಸಿರಿಯನ್ನು ಸವಿದು ನಮ್ಮ ಮುಂದಿನ ಕಾರ್ಯಕ್ರಮದಂತೆ ಜ಼ಡ್-ಪಾಯಿಂಟ್ ಗೆ ಹೋಗಲು ಸಿದ್ಧವಾದೆವು.
ಜ಼ಡ್-ಪಾಯಿಂಟ್ ಒಂದು ಶಿಖರ ಶ್ರ್ಂಗ ತಾಣ. ಅಲ್ಲಿಗೆ ಹೋದರೆ ಇಡೀ ಕೆಮ್ಮಣ್ಣುಗುಂಡಿಯ ಪಕ್ಷಿನೋಟವನ್ನು ಕಾಣಬಹುದೆಂದು ನೋಡಿದವರು ನಮಗೆ ಹೇಳಿದ್ದರು. ಮುಖ್ಯರಸ್ತೆಯಿಂದ ಕಾಲ್ನಡಿಗೆಯಲ್ಲಿ ೩ ಕಿ.ಮೀ ನಡೆದರೆ, ಜ಼ಡ್-ಪಾಯಿಂಟ್ ನ ನೆತ್ತಿಯನ್ನು ತಲಪಬಹುದು. ನಾವೆಲ್ಲ ಒಬ್ಬರ ಹಿಂದೆ ಒಬ್ಬರು ಕಡಿದಾದ ದಾರಿಯಲ್ಲಿ ಚಿಕ್ಕ ಸೈನ್ಯದಂತೆ ನಡೆಯುತ್ತ ಹೊರೆಟೆವು. ಹೋಗುವಾಗ ಎಡೆಗಡೆ ಆಳವಾದ ಪ್ರಪಾತವಿದ್ದರೆ, ಬಲಗಡೆ ಗುಡ್ಡ, ಹೆಬ್ಬಂಡೆಗಳಿವೆ. ಹೋಗುವಾಗ ಕಣಿವೆಯ ಹಲವು ಸುಮನೋಹರ ದೃಶ್ಯಗಳು ಕಾಣಸಿಗುತ್ತವೆ. ಜ಼ಡ್-ಪಾಯಿಂಟ್ ಮೇಲೆ ತಲುಪಿದಾಗ, ರುದ್ರರಮಣೀಯ ಪ್ರಕೃತಿ ಸೌಂದರ್ಯ ನಮ್ಮ ಕಣ್ ತಣಿಸಿದವು. ದೂರದ ಹಳ್ಳಿಗಳ ಹೊಲಗದ್ದೆಗಳು, ವನ ಸರೋವರಗಳು, ದಿಗಂತದಲ್ಲಿ ಮಾಂತ್ರಿಕವಾಗಿ ಬೆಸೆದುಕೊಂಡಿದ್ದ ಶಿಖರಪಂಕ್ತಿ, ಪೈರಸಿರಿನ ಹುಲ್ಲಿನ ಹೊದಿಕೆಯನ್ನು ಹೊತ್ತ ಮಹಾಶಿಖರ, ಅನಂತ ಕಾಲದಿಂದಲೂ ತಪಗೈಯ್ಯುತ್ತಿರುವಂತೆ ನಮ್ಮೆದುರೇ ಕುಳಿತಿದ್ದ ರೀತಿ ನಮ್ಮ ಹೃದಯದಲ್ಲಿ ಸುಮಧುರ ದೃಷ್ಯಕಾವ್ಯವೊಂದನ್ನು ಹಾಡಿತ್ತು. ಅದೃಷ್ಟವೂ ಅಲ್ಲಿಯೂ ನಮ್ಮ ಕೈ ಹಿಡಿದಿತ್ತು. ನಮ್ಮನ್ನು ಬಿಟ್ಟರೆ ಬೇರೆ ಯಾರು ಅಲ್ಲಿ ಇರಲಿಲ್ಲ. ಫೋಟೊಗಳನ್ನು ತೆಗೆಸಿಕೊಂಡು, ನೆರಳಿನಲ್ಲಿ ಎಲ್ಲರೂ ಕುಳಿತು ಪ್ರಕೃತಿಸೌಂದರ್ಯವನ್ನು ಸವಿಯುವಲ್ಲಿ ಮಗ್ನರಾದೆವು. ಸ್ವಲ್ಪ ಹೊತ್ತಿನ ಬಳಿಕ ದೂರದಲ್ಲಿದ್ದ ಶಿಖರದ ತುದಿಯಲ್ಲಿ ಕುಳಿತುಕೊಳ್ಳಬೇಕೆನಿಸಿತು. ನಾನು ಭವ್ಯ ತುದಿಗೆ ನಿಧಾನವಾಗಿ ತೆವಳುತ್ತ ಹೋಗಿ, ಕಾಲ್ಗಳನ್ನು ಪ್ರಪಾತದ ದಿಕ್ಕಿಗೆ ಇಳಿಬಿಟ್ಟು ಕುಳಿತೆವು. ಕೊಂಚ ದುಸ್ಸಾಹಸವೆನಿಸಿದರೂ ಸಾರ್ಥಕವೆನಿಸಿತು. ಕೆಳಗಿನ ಬೀಕರ ಪ್ರಫಾತ, ಸುತ್ತಲಿನ ದಿವ್ಯ ವೈಶಲ್ಯ ಹಸಿರು , ದೀರ್ಘದಿಗಂತದಲ್ಲಿ ಮೋಡಗಳ ವರ್ಣ ವೈಶಿಷ್ಟ್ಯ, ತನುವಿಗಪ್ಪಳಿಸುತ್ತಿದ್ದ ಸುಶೀತಲ ತಂಗಾಳಿ ಒಂದು ಘಳಿಗೆ ಪ್ರಾಪಂಚಿಕಸಂಭಂಧವನ್ನೇ ಮರೆಯುವಂತೆ ನಮ್ಮನ್ನು ಮಂತ್ರಮುಗ್ಧರನ್ನಾಗಿಸಿತ್ತು. ಪ್ರಕೃತಿಮಾತೆ ತನ್ನ ತೋಳ ತೆಕ್ಕೆಯಲ್ಲಿ ನಮ್ಮನ್ನು ಬಂಧಿಸಿ,ಮುದ್ದಾಡಿ ಮೇಲಕ್ಕೆಸೆದು, ಹಿಡಿದು ಸುತ್ತಲೂ ತಿರುಗಿಸಿ ಮತ್ತೆ ತಬ್ಬಿ ಮುತ್ತಿಕ್ಕಿದಂತಾಯಿತು. ಕೆಲಕಾಲ ಮೌನಧಾರಿಗಳಾಗಿ ಇಬ್ಬರು ಅಲ್ಲೇ ಕುಳಿತು ಮತ್ತೆ ಹೋಗಿ ಗುಂಪಿಗೆ ಸೇರಿದೆವು. ಅಲ್ಲಿಂದ ಎಲ್ಲರೂ ಮತ್ತೆ ಹೋಮ್ ಸ್ಟೇಗೆ ಮರಳಿ, ಸ್ವಲ್ಪ ವಿಶ್ರಾಂತಿಸಿ, ಊಟವನ್ನು ಮುಗಿಸಿದೆವು. ಹೊರಗೆ ಛಳಿಯಿದ್ದುದರಿಂದ ನಮಗಾಗಿ ರ್ಆಬಿನ್ ಬಿಸಿ ಕಾಯಿಸಲು ಸೌಧೆ ಹಾಗು ಬೆಂಕಿಯ ವ್ಯವಸ್ಥೆ ಮಾಡಿದ್ದರು. ಎಲ್ಲರೂ ಅದರ ಬಳಿ ಸೇರಿ ಮತ್ತೆ ಹರಟೆಯ ಮಹಾ ಸಭೆಯನ್ನೇ ಸೃಷ್ಟಿಸಿದ್ದೆವು. ರಾತ್ರಿ ಮತ್ತೆ ಹೊರಗಡೆ ಆಲೂಗೆಡ್ಡೆ, ಪನ್ನೀರ್ ಹಾಗು ಕೋಳಿಯನ್ನು ಸುಟ್ಟಿ ತಿಂದೆವು. ದಣಿದ ದೇಹಕ್ಕೆ ರುಚಿಕರ ಭಕ್ಷ್ಯ ಬಿದ್ಧಾಕ್ಷಣ ನಿದ್ರಾಯಕ್ಷಿಣಿ, ತನ್ನ ಮಂತ್ರದಂಡದಿಂದ ನಮಗೆಲ್ಲ ಮಂತ್ರವನ್ನು ಪ್ರೋಕ್ಷಿಸಿ ಶಯನಾವಸ್ಥೆಗೆ ದೂಡಿದಳು.
ಮರುದಿನ ಬೆಳಿಗ್ಗೆ ಎದ್ದಾಗ ಗಂಟೆ ೮ ಆಗಿತ್ತು. ಬಿಸಿ ಬಿಸಿ ಕಾಫಿ ಹೀರಿ, ಸ್ನಾನವನ್ನೂ ಮುಗಿಸಿ ತಿಂಡಿ ತಿಂದು ನಮ್ಮ ಪ್ರವಾಸದ ಕೊನೆಯ ತಾಣವನ್ನು ನೋಡಲು ಸಜ್ಜಾದೆವು. ಮನೆಯ್ ಹಿಂದೆಯೆ ಕಡಿದಾದ ಬೆಟ್ಟವಿದ್ದು, ಬೆಟ್ಟದ ಮೇಲೆ "ಕಲ್ಲತ್ತಿ ಗಿರಿ " ಜಲಪಾತವಿತ್ತು. ಮನೆಯಿಂದ ಒಂದೂವರೆಗಂಟೆಯ ನಡಿಗೆಯಲ್ಲಿ ನಾವಲ್ಲಿಗೆ ತಲುಪ ಬಹುದಿತ್ತು. ಸರಿಯೆಂದು ಎಲ್ಲರೂ ಜಲಪಾತ ನೋಡಲು ಕಾಫಿ ಎಸ್ಟೇಟ್ ನ ಮಧ್ಯದಲ್ಲಿ ನುಸುಳುತ್ತ ಹೊರೆಟೆವು. ನಡೆಯುವ ದಾರಿ ಮೊದಲು ಅನಾಯಾಸವಾಗಿದ್ದು, ನಂತರ ಕಡಿದಾಗಲು ಶುರುವಾಯಿತು. ಮೇಡುಗಳು ಒಂದಾದರ ಮೇಲೊಂದು ಸಿಕ್ಕಿ, ವೇಗ ಮಂದವಾಯಿತು. ಚನ್ನನ್ನ ಪತ್ನಿ ಗೀತಾಳಿಗಾಗಿ ಕಾಯುವ ಸಲುವಾಗಿ ನಮಗೆಲ್ಲ ಆಗ್ಗಗ್ಗೆ ಸ್ವಲ್ಪ ವಿಶ್ರಾಂತಿ ದೊರೆಯುತ್ತಿತ್ತು. ಪ್ರತಿ ಮೇಡನ್ನು ಹತ್ತುವಾಗ ಬೆದರಿ ನಡೆಯುತ್ತಿದ್ದ ಅವಳನ್ನು, ಅಶ್ವಮೇಧಯಗದ ಕುದುರೆಯನ್ನು ಕಾಯುವ ಹಾಗೆ, ನಾವೆಲ್ಲರೂ ಅವಳ ಹಿಂದೆ ಮುಂದೆ ಸಹಾಯಾರ್ಥ ಜೊತೆಯಲ್ಲೇ ಇದ್ದೆವು. ಬೆಟ್ಟದ ತುದಿಗೆ ಬಂದು ಮುಟ್ಟಿದಾಗ ಎದುರಿಗಿದ್ದ ಸುಂದರ ಜಲಪಾತ ಎಲ್ಲರ ಹರ್ಷೋದ್ಗಾರಕ್ಕೆ ಕಾರಣವಾಯಿತು. ಎಳೆ ಬಿಸಿಲಿದ್ದರೂ ಕೊರೆಯುತ್ತಿದ್ದ ನೀರೊಳಗೆ ಇಳಿಯಲು ಯಾರಿಗೂ ದೈರ್ಯವಿರಲಿಲ್ಲ. ಕಾಲಿಟ್ಟರೇನೆ ಮೈ ನಡುಗಿಸುತ್ತಿದ್ದ ನೀರಿನ ಶೀತ, ಜಲಪಾತದಡಿಯಲ್ಲಿ ನಿಲ್ಲುವ ನಮ್ಮ ಕನಸನ್ನು ಹೆಪ್ಪುಗಟ್ಟಿಸಿತ್ತು. ಆದರೂ ಛಲ ಬಿಡದೆ ಜಲಪಾತದೊಳಗೆ ನುಗ್ಗಿದ್ದು ಭವ್ಯ ಮತ್ತೆ ಲತ. ಇವರ ಧೈರ್ಯವನ್ನು ಮೆಚ್ಚುವಂತಹುದ್ದೆ. ಅವರನ್ನು ನಂಬಿ ನಾನು ಕೂಡ ಮನಃಸ್ಥೈರ್ಯವನ್ನು ತೆಗೆದುಕೊಂಡು ಸುರಿವ ನೀರಿಗೆ ಮೈಯೊಡ್ಡಿ ನಿಂತೆ. 'ಜೈ ವೀರಾಂಜನೇಯ' ಎಂದು ಜೋರಾಗಿ ಕೋಗಿ ಕೊರೆವ ತೀವ್ರ ಛಳಿಯನ್ನು ಶಮನಗೊಳಿಸಲು ಭಗವಂತನನ್ನೇ ಈ ಭೂಮಿಗೆ ಕರೆದೆ :-). ಸಹಸ್ರ ಸೂಜಿಗಳು ಒಂದೇ ಸಮನೆ ನನ್ನ ಮೈಯ್ಯನ್ನು ಚುಚ್ಚುವಂತ್, ನೀರನಿಗಳು ಪಟಪಟನೆ ನನ್ನ ಮೇಲೆ ಬೀಳತೊಡಗಿದವು. ಉಸಿರು ಶ್ವಾಸಕೋಶದೊಳಗೇ ಬಂಧಿಯಾಯಿತು, ತಲೆಯು ಸಿಡಿದು ಶತಛಿಧ್ರವಾಗುವುದೇನು ಎಂಬಂತೆ ನೋಯತೊಡಗಿತು. ಆದರು ಅವನ್ನೇಲ್ಲ ಧಿಕ್ಕರಿಸಿ ಬಂಡೇಯಂತೆ ಅಲ್ಲಿಯೇ ನಿಂತೆ. ಸ್ಪರ್ಶೇಂದ್ರಿಯದ ಅರಿವನ್ನು ಪಲ್ಲಟಗೊಳಿಸಿ ಆಗುತ್ತಿರುವ ಛಳಿಯನ್ನು ಶಮನಗೊಳಿಸಲು ಚಿತ್ತವನ್ನು ಬೇರ್ಎಡೆ ಕೇಂದ್ರೀಕರಿಸಲು ಸಾಹಸ ಪಟ್ಟೆ. ಸ್ವಲ್ಪ ಹೊತ್ತು ಅಲ್ಲಿ ನಿಂತೆನಾದರೂ, ಬಹುಕಾಲ ನೀರಿನ ಕೊರೆತವನ್ನು ತಾಳಲಾಗಲಿಲ್ಲ. ಜಲಪಾತದಡಿಯಿಂದ ಪಕ್ಕದ ಹಾಸುಗಲ್ಲಿಗೆ ಬಂದು ನಿಂತೆ. ಅನುಭವ ಮೈನವಿರೇಳಿಸುವಂತಿತ್ತು. ದೇಹ ಹಗುರಾಗಿತ್ತು. ಉಸಿರು ತನ್ನ ಸ್ವಸ್ಥಳಕ್ಕೆ ಬಂದು ವಿಶ್ರಾಂತಿಸತೊಡಗಿತು. ಬಟ್ಟೆಯನ್ನು ಬದಲಾಯಿಸಿ ಸುತ್ತಲಿನ ಸೌದರ್ಯವನ್ನು ಕವಿಮನದಲ್ಲಿ ಆಸ್ವಾಧಿಸತೊಡಗಿದೆ. ಏಕೋ ಸ್ವಲ್ಪ ಹೊತ್ತು ಬಂಡೆಯ ಮೇಲೆಕುಳಿತು ಕಣ್ಮುಚ್ಚಿ ಧ್ಯಾನಮಾಡುವಂತೆನಿಸಿತು. ಬಂಡೆಯ ಮೇಲೆ ಚಕ್ಕಂಬಕ್ಕಳವಾಗಿ ಕುಳಿತೇ ಬಿಟ್ಟೆ. ಜಲಪಾತದ ಭೋರ್ಗರೆವ ಸದ್ದಿನ ನಡುವೆ ಕಣ್ಮುಚ್ಚಿ ಕುಳಿತ ನನ್ನ ಅನುಭವ ಪರಮಾನಂದವಾಗಿತ್ತು. ಆ ಆನಂದವು ಕಾವ್ಯವಾಗಿದ್ದು ಹೀಗೆ :
ಗಿರಿ ಜಲಧಾರೆಯೆದುರು ಕುಳಿತೆ
ಕಲ್ಲು ಬಂಡೆಯ ಸ್ನಿಗ್ದ ಪೀಠದಿ.
ಬಿದ್ದ ಜಲದಿಂದ್ದೆದ್ದ ತುಂತುರು,
ತಂಪನೆರಚುತ ಚಿಮ್ಮಿದೆ.
ಪವನ ಶೀತಲದಲೆಯು ಬೀಸಿದೆ,
ವನದ ಕಂಪನು ಸೂಸಿದೆ.
ಸುರಿವ ಜಲದ ಘೋರ್ಅ ಘರ್ಜನೆ,
ಎಲ್ಲ ಶಬ್ಧವ ಅಳಿಸಿದೆ.
ಕಣ್ಣ ಮುಚ್ಚಲು ನಾನು ಧ್ಯಾನದಿ,
ನೋಡಲೊಂದೆ ಶೂನ್ಯ ದೃಷ್ಟಿಯು,
ಕೇಳಲೊಂದೆ ರುದ್ರ ಧನಿಯು,
ತಪ್ತ, ತ್ರಸ್ತಗಳಾವು ಇಲ್ಲ ಎದೆಯಲಿ.
ದುಗುಡ ಬೆಚ್ಚಿದೆ, ಚಿಂತೆ ಅತ್ತಿದೆ,
ಪ್ರಕ್ಷುಭ್ಧ ಸೈನ್ಯವು ಓಡಿದೆ.
ರುದ್ರಬೀಷಣ ಧ್ವನಿಗೆ ಹೆದರಿ,
ಮನದ ಗೊಂದಲ ಕರಗಿದೆ.
ಉಸಿರು ಕೇಳದು, ಬೆಳಕು ಕಾಣದು,
ಸುತ್ತಲಿರುವ ಜಗವ ಅರಿಯದು,
ಶಾಂತ ಚಿತ್ತದಿ ಮನವು ದೇಹದಿ
ಮರೆತು ನಿಂತಿದೆ ತನ್ನನು.
ರುದ್ರಗಾನದ ಧ್ವನಿಯು ಎದೆಯಲಿ,
ಅನೇಕವಾಗಿ ಪ್ರತಿದ್ವನಿಸಿ,
ಅನೇಕ ಬಾವಗಳನ್ನೇಕ ಗೊಳಿಸಿ,
ನಿರ್ಲಿಪ್ತಧಾರೆಯ ಹರಿಸಿದೆ.
ನನ್ನೇ ನಾನು ಮರೆತು ಕುಳಿತ,
ಕ್ಷಣವನೆಂದು ಮರೆಯನು.
ಮತ್ತೆ ಬರುವೆ ಜಲಪಾತ ಕೇಳು..
ಎಂದೂ ಮರೆಯದಿರೆನ್ನನು.
ನಿನ್ನ ಮಡಿಲಲಿ ಶಿಶುವಿನಂದದಿ,
ಮರೆತು ಮಲುಗುವೆ ಜಗವನು.
ನಿನ್ನ ಧಾರೆಯ ನನ್ನೊಳರಿಸುತ,
ಸುಷುಪ್ತಿಯಲ್ಲಿರಿಸು ನನ್ನನು.
ಕಲ್ಲತ್ತಿಗಿರಿಯ ಜಲಪಾತದಲ್ಲಿ ರಸಮಯ ಕಾಲವನ್ನು ಕಳೆದು ಮತ್ತೆ ನಾವು ತಂಗಿದ್ದ ಮನೆಗೆ ಮರಳಿದೆವು. ಬರುವಷ್ಟರಲ್ಲಿ ರಾಬಿನ್ ಅವರ ಮಕ್ಕಳು ಮನೆಯ ಹೊರಗೆ ಆಟವಾಡುತ್ತಿದ್ದರು. ಆವರೊಡನೆ ನಾವು ಮಕ್ಕಳಾಗಿ ಬೆರೆತು ಆಟವಾಡಿದೆವು. ರ್ಆಬಿನ್ ಅವರ ಮಗಳು ಒಂದು ಹಾಡಿಗೆ ತನ್ನ ಶಾಲೆಯಲ್ಲಿ ಪ್ರದರ್ಶಿಸಿದ ಡಾನ್ಸ್ ಒಂದನ್ನು ಮತ್ತೆ ನಮ್ಮ ಮುಂದೆ ಮಾಡಲು ಇಚ್ಚಿಸಿ, ಡಾನ್ಸ್ ಶುರು ಮಾಡಿದಳು. ಆವಳೊಂದಿಗೆ ನಮ್ಮ ಹೆಣ್ಣುಮಕ್ಕಳೂ ಕೂಡ ಕುಣಿದು, ಒಂದು ನೃತ್ಯ ಸಮೂಹವನ್ನೇ ಸೃಷ್ಟಿಸಿದ್ದರು. ನೃತ್ಯ ಮುಗಿಯುವ ಹೊತ್ತಿಗೆ ಭೋಜನ ಸಿದ್ದವಾದಿದ್ದುದರಿಂದ, ಎಲ್ಲರೂ ಕೂಡಿ ಊಟ ಮಾಡಿದೆವು. ಊಟ ಮುಗಿಸಿ ಬೆಂಗಳೂರಿಗೆ ವಾಪಾಸಗಲು ಗಂಟು ಮೂಟೆಯನ್ನೂ ಕಟ್ಟಿದ್ದಾಯಿತು. ಎಲ್ಲರೊಡನೆ ಕೊನೆಯ ಫೋಟವನ್ನು ಮನೆಯ ಅಂಗಳದಲ್ಲಿ ತೆಗೆಸಿಕೂಂಡಿದ್ದೂ ಆಯಿತು. ಎಲ್ಲರ ಮನಸ್ಸಿನಲ್ಲೂ ಒಂದು ತರಹ ಬೇಸರ, ದುಃಖ. ಇಂತಹ ಸುಂದರ,ಸೊಬಗಿನ, ನಿಸರ್ಗ ಲಾವಣ್ಯದಲ್ಲಿ ಕಳೆದ ಪ್ರತಿಯೊಂದು ಸಂತಸದ ಕ್ಷಣಗಳು, ಇನ್ನೇನು ಮುಗಿಯುವುದರಲ್ಲಿದೆ ಎಂಬ ಕಹಿ ಸತ್ಯವನ್ನು ಮನಗಂಡ ನಮ್ಮ ಮನಸ್ಸುಗಳು ಬಾಡಿ ಮುದುಡಿದ್ದವು. ಆದರೆ ಚಿಂತಿಸಿ ಪ್ರಯೋಜನವಿಲ್ಲ, ಮನಸ್ಸಿಗೆ ಇಷ್ಟವಾಗುವ ಕೆಲಸವನ್ನೇ ನಿರಂತರವಾಗಿ ಮಾಡುವ ಸ್ವಾತಂತ್ರ್ಯವೂ, ಸಾಮರ್ಥ್ಯವೂ ನಮಗಿಲ್ಲ ಎಂಬುದನ್ನು ಅರಿತು ಎಲ್ಲರು ಅಲ್ಲಿಂದ ಬೆಂಗಳೂರಿಗೆ ಹೊರಡಲೂ ಮಜ್ದ ಹತ್ತಿದೆವು. ನಾವು ತಂಗಿದ್ದ ಸರ್ವ ಕಾಲವು ಬಹಳ ಸೌಹಾರ್ಧತೆಯಿಂದಲೂ, ಪ್ರೀತಿಯಿಂದಲೂ ನಮ್ಮ ಸೌಖ್ಯವನ್ನು ನೋಡಿಕೊಂಡ ರಾಬಿನ್ ಸಂಸಾರಕ್ಕೆ ನಾವೆಂದು ಕೃತಜ್ನ್ಯರು.