ಕೇಂದ್ರದ ನೆರವಿನ ನಿರೀಕ್ಷೆ

ಕೇಂದ್ರದ ನೆರವಿನ ನಿರೀಕ್ಷೆ

ರಾಜ್ಯದಲ್ಲಿನ ಬರ ಪರಿಸ್ಥಿತಿ ಅಧ್ಯಯನಕ್ಕೆ ಬಂದಿದ್ದ ಅಧಿಕಾರಿಗಳ ಮೂರು ತಂಡಗಳು ಬರಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ರೈತರ ಸಂಕಷ್ಟಗಳನ್ನು ಆಲಿಸಿವೆ. ಸಂಪ್ರದಾಯದಂತೆ ಅಧ್ಯಯನ ಪ್ರವಾಸ ಮುಗಿಸಿದ ನಂತರ ರಾಜ್ಯದ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ಮಾಡುವ ವೇಳೆ ರಾಜ್ಯದಲ್ಲಿನ ಪರಿಸ್ಥಿತಿ ಬಗ್ಗೆ ಕೇಂದ್ರದ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಬರ ಪರಿಸ್ಥಿತಿ ಮನವರಿಕೆಯಾಗಿರುವುದು ಅವರ ಮಾತುಗಳಲ್ಲಿ ವ್ಯಕ್ತವಾಗಿದೆ.

ರಾಜ್ಯದಲ್ಲಿ ಮಳೆ ಇದೇ ರೀತಿ ಮುಂದುವರೆದರೆ ಹಿಂಗಾರು ಬೆಳೆ ಕೈತಪ್ಪುವುದು ಅಷ್ಟೇ ಅಲ್ಲ, ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದು ಎಂಬ ಆತಂಕವನ್ನು ಕೇಂದ್ರ ತಂಡದ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ರಾಜ್ಯದ ವಸ್ತು ಸ್ಥಿತಿಯನ್ನು ತಾವು ಮನಗಂಡಿದ್ದು ಕೇಂದ್ರ ಸರಕಾರಕ್ಕೆ ನೈಜ ಪರಿಸ್ಥಿತಿಯ ಬಗ್ಗೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಸಮಾಧಾನಕರ ಸಂಗತಿ ಎಂದರೆ ಕೇಂದ್ರ ತಂಡಕ್ಕೆ ಬರ ಪರಿಸ್ಥಿತಿ ಮನವರಿಕೆಯಾಗಿರುವುದು. ಕೇಂದ್ರದ ಅಧಿಕಾರಿಗಳು ಆಗಮಿಸುವ ಸಂದರ್ಭದಲ್ಲಿ ಕಾಡಿದ್ದ ಆತಂಕ ಎಂದರೆ ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಮಳೆಯಾಗಿ ಹಸಿರು ಕಾಣಿಸತೊಡಗಿತ್ತು. ಈ ದೃಶ್ಯಗಳನ್ನು ಗಮನಿಸಿ ಕೇಂದ್ರ ತಂಡ ವ್ಯತಿರಿಕ್ತ ಅಭಿಪ್ರಾಯಕ್ಕೆ ಬಂದರೆ ಹೇಗೆ ಎಂಬ ಸಹಜ ಆತಂಕ ಇತ್ತು. ಆದರೆ ಅಧ್ಯಯನ ಪ್ರವಾಸದ ವೇಳೆ ಬರದ ಭೀಕರತೆ ಅರಿವಾಗಿದೆ ಎಂದು ಅವರು ಹೇಳಿರುವುದು ಸಮಾಧಾನಕರ ಸಂಗತಿ.

ರಾಜ್ಯ ಸರಕಾರ ಸಲ್ಲಿಸಿರುವ ವರದಿಯ ಬಗ್ಗೆಯೂ ಕೇಂದ್ರ ತಂಡ ಮೆಚ್ಚುಗೆ ವ್ಯಕ್ತ ಪಡಿಸಿದೆ. ವರದಿ ಅವರಿಗೆ ತೃಪ್ತಿಕರವಾಗಿದೆ ಎನ್ನುವುದು ಅವರ ಮಾತುಗಳಲ್ಲೇ ವ್ಯಕ್ತವಾಗಿದೆ. ಮಳೆ ಇದೇ ರೀತಿ ಕೈಕೊಟ್ಟರೆ ಪರಿಸ್ಥಿತಿ ಗಂಭೀರವಾಗಬಹುದೆನ್ನುವ ಕಳಕಳಿಯನ್ನು ವ್ಯಕ್ತಪಡಿಸಿದೆ. ಬೆಳೆ ಹಾನಿ ಚಿತ್ರಣದ ವರದಿಯನ್ನು ರಾಜ್ಯ ಸರ್ಕಾರ ಅಂಕಿ-ಅಂಶಗಳೊಂದಿಗೆ ಕೇಂದ್ರ ಅಧ್ಯಯನ ತಂಡಕ್ಕೆ ಒದಗಿಸಿದೆ. ಕೇಂದ್ರ ಸರಕಾರದ ಮಾರ್ಗಸೂಚಿ ಪ್ರಕಾರವೇ ರಾಜ್ಯಕ್ಕೆ ೪೮೦೦ ಕೋಟಿ ರೂ. ನೆರವು ಬಿಡುಗಡೆ ಮಾಡಬೇಕು ಎಂದು ಸರ್ಕಾರ ಮನವಿ ಮಾಡಿದೆ.

ಇದುವರೆಗೆ ರಾಜ್ಯಕ್ಕೆ ಬರ ಪರಿಸ್ಥಿತಿ ಅಧ್ಯಯನ ಮಾಡಲು ಆಗಮಿಸುತ್ತಿದ್ದ ತಂಡಗಳು, ಬರ ಅಧ್ಯಯನದೊಂದಿಗೆ ಪ್ರಮುಖ ಪ್ರವಾಸಿ ತಾಣಗಳಿಗೂ ಭೇಟಿ ನೀಡುತ್ತಿದ್ದವು. ಆದರೆ ಈ ಬಾರಿ ಆಗಮಿಸಿದ್ದ ಕೇಂದ್ರದ ಅಧಿಕಾರಿಗಳು ಬರಪೀಡಿತ ಜಿಲ್ಲೆಗಳ ಹೊರತುಪಡಿಸಿ ಬೇರೆಡೆ ಪ್ರವಾಸ ಮಾಡಿಲ್ಲ. ಬರ ಅಧ್ಯಯನ ಪ್ರವಾಸವನ್ನು ಕಾಟಾಚಾರ ಎನ್ನುವಂತೆ ಮಾಡಿ ಮುಗಿಸಿಲ್ಲ ಎನ್ನುವುದು ಅವರ ಮಾತುಗಳಲ್ಲೇ ವ್ಯಕ್ತವಾಗಿದೆ.

ಫಸಲ್ ಬೀಮಾ ಯೋಜನೆ ಪ್ರತಿಫಲ ರೈತರಿಗೆ ಸಿಗುತ್ತಿಲ್ಲ ಎಂಬ ಮಾಹಿತಿಯನ್ನೂ ರಾಜ್ಯ ಸರಕಾರ ಕೇಂದ್ರ ತಂಡದ ಗಮನಕ್ಕೆ ತಂದಿದೆ. ಬರ ಘೋಷಣೆಯ ಮಾರ್ಗಸೂಚಿಗಳನ್ನೂ ಬದಲಾವಣೆ ಮಾಡಬೇಕು ಎನ್ನುವುದು ರಾಜ್ಯ ಸರಕಾರದ ಮತ್ತೊಂದು ಬೇಡಿಕೆಯಾಗಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ೪೭೫ ಕೋಟಿ ರೂ. ಪಾವತಿ ಬಾಕಿ ಇದ್ದು, ತಕ್ಷಣ ಬಾಕಿ ಹಣ ಬಿಡುಗಡೆ ಮಾಡಬೇಕು ಎಂಬ ಕೋರಿಕೆ ಸಲ್ಲಿಸಿದೆ. ಅಧ್ಯಯನ ಪ್ರವಾಸ ಮುಗಿಸಿರುವ ಕೇಂದ್ರ ತಂಡ ಒಂದು ವಾರದೊಳಗೆ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದೆ. ಅವರ ಆಶಾದಾಯಕ ಮಾತುಗಳು ವರದಿಯಲ್ಲಿ ವ್ಯಕ್ತವಾಗಿ ರಾಜ್ಯಕ್ಕೆ ನಿರೀಕ್ಷಿತ ನೆರವು ಲಭಿಸಿದರೆ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸಹಾಯವಾಗಲಿದೆ. 

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೦-೧೦-೨೦೨೩

ಚಿತ್ರ ಕೃಪೆ: ಇಂಟರ್ನೆಟ್ ತಾಣ