ಕೋಲ್ಕತ್ತಾದ ಬೀದಿಗಳಲ್ಲಿ ನಡೆದಾಡುತ್ತಾ… (ಭಾಗ 1)

ಕೋಲ್ಕತ್ತಾದ ಬೀದಿಗಳಲ್ಲಿ ನಡೆದಾಡುತ್ತಾ… (ಭಾಗ 1)

ಕೆಲವು ದಿನಗಳ ಹಿಂದೆ ನಾನು ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದ ಪ್ರವಾಸದಲ್ಲಿದ್ದೆ. ಅಲ್ಲಿನ ಬೀದಿಗಳಲ್ಲಿ, ಗೆಳೆಯರೊಂದಿಗೆ ಕಾಲ್ನಡಿಗೆಯಲ್ಲಿ ಸಾಕಷ್ಟು ಸಂಚಾರ ಮಾಡಿದೆ. ಆಗ ಕೊಲ್ಕತ್ತಾದ ಆರ್ ಜೆ ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಅತ್ಯಾಚಾರದ ವಿರುದ್ಧ ಅನೇಕ ಸಂಘಟನೆಗಳು ಬಹಿರಂಗ ಪ್ರದರ್ಶನ, ಪ್ರತಿಭಟನೆ ಮಾಡುತ್ತಿದ್ದವು. ಇನ್ನೊಂದು ಕಡೆ ಅದೇ ಸಂದರ್ಭದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸಲ್ಮಾನ ಸಹೋದರರು ಬೃಹತ್ ಆದ ಧಾರ್ಮಿಕ ಮೆರವಣಿಗೆ ಮಾಡುತ್ತಿದ್ದರು.

ಈ ಸಂದರ್ಭದಲ್ಲಿ ಸಹಜವಾಗಿಯೇ ಅತ್ಯಾಚಾರಕ್ಕೊಳಗಾದ ಮಹಿಳೆಯ ಬಗ್ಗೆ ಮನಸ್ಸು ಒಂದಷ್ಟು ಯೋಚಿಸುತ್ತಿತ್ತು. ಅದೇ ದಿನ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ಸಹ ಪ್ರತಿಭಟನಾ ನಿರತರ ಪ್ರತಿನಿಧಿಗಳೊಂದಿಗೆ ಸಂಧಾನದ ಮಾತುಕತೆಯನ್ನು ನಡೆಸುತ್ತಿದ್ದರು. ಅದರ ಮುಂದಿನ ಫಲಿತಾಂಶ ಮಾಧ್ಯಮಗಳ ಮೂಲಕ ಮುಂದೆ ತಿಳಿಯಲಿದೆ. ಆದರೆ ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಗೆಳೆಯರ ಮೆರವಣಿಗೆ ನೋಡಿದಾಗ ನನ್ನಲ್ಲಿ ಹಾದುಹೋದ ಕೆಲವು ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಏಕೆಂದರೆ ಗಣೇಶ ಉತ್ಸವ ಮತ್ತು ಈದ್ ಮಿಲಾದ್ ಮೆರವಣಿಗೆಡಳ ಸಂದರ್ಭದಲ್ಲಿ ಒಂದಷ್ಟು ಅಹಿತಕರ ಘಟನೆಗಳು ನಡೆಯುತ್ತಿರುವುದರಿಂದ… ಭಾರತೀಯ ಮುಸ್ಲಿಮರ ಬಗ್ಗೆ ನಾವು ತಳೆಯಬಹುದಾದ ನಿಲುವು ಹೇಗಿರಬೇಕು? ಧರ್ಮದ ಆಧಾರದಲ್ಲಿ ನಿರ್ಧರಿಸಬೇಕೆ ? ಸಂವಿಧಾನದ ಆಧಾರದ ಮೇಲೆ ನಿರ್ಧರಿಸಬೇಕೆ ? ಸತ್ಯ ಮತ್ತು ಸಮನ್ವಯದ ಆಧಾರದ ಮೇಲೆ ನಿರ್ಧರಿಸಬೇಕೆ ? ನೈತಿಕತೆಯ ಆಧಾರದ ಮೇಲೆ ನಿರ್ಧರಿಸಬೇಕೆ ? ಪ್ರಕೃತಿಯ ಮೂಲದಿಂದ ನಿರ್ಧರಿಸಬೇಕೆ ? ಅವರ ಈಗಿನ ನಡವಳಿಕೆಗಳ ಆಧಾರದ ಮೇಲೆ ನಿರ್ಧರಿಸಬೇಕೆ ? ಐತಿಹಾಸಿಕ ಮತ್ತು ಜಾಗತಿಕ ಪರಿಸ್ಥಿತಿಯ ಮೇಲೆ ನಿರ್ಧರಿಸಬೇಕೆ ? ದೇಶದ ಶಾಂತಿ ಸುವ್ಯವಸ್ಥೆಯ ಆಧಾರದ ಮೇಲೆ ನಿರ್ಧರಿಸಬೇಕೆ ? ಚುನಾವಣಾ ರಾಜಕೀಯದ ಆಧಾರದ ಮೇಲೆ ನಿರ್ಧರಿಸಬೇಕೆ ?

ಹೀಗೆ ನಾನಾ ಪ್ರಶ್ನೆಗಳು ಮುಸ್ಲಿಂ ಅಲ್ಲದ, ಯಾವುದೇ ಪಕ್ಷ, ಸಿದ್ದಾಂತದ ಒಲವುಗಳಿಲ್ಲದ ಸಾಮಾನ್ಯ ಜನರನ್ನು ಕಾಡುತ್ತಿದೆ. ಮುಸ್ಲಿಮರನ್ನು ಪ್ರೀತಿಸಬೇಕೆ ? ದ್ವೇಷಿಸಬೇಕೆ ? ಸಮಾನತೆ, ಸ್ವಾತಂತ್ರ್ಯ, ಹಕ್ಕು ಮತ್ತು ಕರ್ತವ್ಯಗಳು ಸಮಾನವೇ ಅಥವಾ ಪ್ರತ್ಯೇಕವೇ ? ಅವರು ನಮ್ಮೊಳಗಿನ ಒಬ್ಬರೇ ಅಥವಾ ಎಂದೆಂದಿಗೂ ನಮಗಿಂತ ಭಿನ್ನವೇ ? ಅವರನ್ನು ಸಂಪೂರ್ಣ ನಂಬಬೇಕೆ ಅಥವಾ ಅನುಮಾನ ವ್ಯಕ್ತಪಡಿಸಿ ಅವರ ಮೇಲೆ ನಿಯಂತ್ರಣ ಸಾಧಿಸಬೇಕೆ ? ಎಂಬುದು ಜನಸಾಮಾನ್ಯರ ಗೊಂದಲ.

ಮೂಲಭೂತವಾಗಿ ಒಂದು ವಿಷಯವನ್ನು ಗ್ರಹಿಸಬೇಕಾದರೆ ಮನಸ್ಸು ವಿಶಾಲವಾಗಿರಬೇಕು, ಸಮಗ್ರತೆಯನ್ನು ಹೊಂದಿರಬೇಕು, ಪ್ರೀತಿ, ಮಾನವೀಯತೆ, ನಾಗರೀಕತೆಯನ್ನು ಅಳವಡಿಸಿಕೊಂಡಿರಬೇಕು, ದ್ವೇಷ, ಅಸೂಯೆ ಮುಂತಾದ ಅರಿಷಡ್ವರ್ಗಗಳ ಮೇಲೆ ನಿಯಂತ್ರಣ ಹೊಂದಿರಬೇಕು. ಆಗ ವಿಷಯವನ್ನು ಗ್ರಹಿಸುವುದು ಸುಲಭವಾಗುತ್ತದೆ. ಮನಸ್ಸು ಪೂರ್ವಾಗ್ರಹ ಪೀಡಿತವಾದರೆ ಅಥವಾ ಕೆಲವು ಘಟನೆಗಳಿಂದ ಪ್ರಭಾವ ಹೊಂದಿದ್ದರೆ ವಿಷಯವನ್ನು ಅರ್ಥ ಮಾಡಿಕೊಳ್ಳುವುದು, ವಾಸ್ತವ ನೆಲೆಯಲ್ಲಿ ಅರಿಯುವುದು ಕಷ್ಟವಾಗುತ್ತದೆ. ಆದರೂ ಒಂದಷ್ಟು ಸಮಚಿತ್ತ ಮನೋಭಾವದಿಂದ ಈ ವಿಷಯವನ್ನು ವಿಮರ್ಶಿಸುವ ಪ್ರಯತ್ನವಿದು.

ಮೂಲಭೂತವಾಗಿ ಸಿಂಧೂ ನದಿ ನಾಗರಿಕತೆಯ ಹಿಂದೂ ಜೀವನಶೈಲಿಯ ದೇಶ ಈ ಭಾರತ ಉಪಖಂಡ. ನಂತರದಲ್ಲಿ ಇಸ್ಲಾಂ ಧರ್ಮದ ಸಾಮ್ರಾಜ್ಯ ಶಾಹಿಗಳು ಅಂದಿನ ವಿಸ್ತರಣಾವಾದದ ಭಾಗವಾಗಿ ಭಾರತದ ಮೇಲೆ ದಂಡೆತ್ತಿ ಬಂದು ಕೆಲವು ಭಾಗಗಳಲ್ಲಿ ಅಧಿಪತ್ಯ ಸ್ಥಾಪಿಸಿದರು. ಸಹಜವಾಗಿ ಆ ಆಕ್ರಮಣ, ಇಸ್ಲಾಂ ಮತ್ತು ಇಲ್ಲಿನ ಸನಾತನ ಧರ್ಮದ ಆಚರಣೆಗಳು ಭಿನ್ನ ಮತ್ತು ವಿರುದ್ಧ ಆಚರಣೆಗಳನ್ನು ಹೊಂದಿರುವ ಕಾರಣಕ್ಕಾಗಿ ದ್ವೇಷ ಬೆಳೆದುಬಂದಿತು. ಅಲ್ಲದೇ ಮುಸ್ಲಿಂ ದಾಳಿಕೋರರು ಇಲ್ಲಿನ ದೇವಾಲಯಗಳ ಮೇಲೆ ದಾಳಿ ಮಾಡಿ ಅದನ್ನು ದ್ವಂಸಗೊಳಿಸಿದ ಘಟನೆಗಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಇಲ್ಲಿನ ಜನರಲ್ಲಿ ಇಸ್ಲಾಂ ಬಗ್ಗೆ ಅಸಹನೆ ಬೆಳೆಯಲು ಕಾರಣವಾಯಿತು.‌

ಆಗಲೂ ಭಾರತವೇನು ಐಕ್ಯವಾಗಿರಲಿಲ್ಲ. ಇಲ್ಲಿನ ವಿವಿಧ ಪ್ರಾಂತ್ಯಗಳ ರಾಜರ ನಡುವೆಯೇ ಭೀಕರ ಯುದ್ದಗಳು ನಡೆದಿದೆ ಎಂಬುದು ಐತಿಹಾಸಿಕ ಸತ್ಯ. ಇಲ್ಲಿನ ಜಾತೀಯತೆ, ಪ್ರಾದೇಶಿಕತೆಯ ಭಿನ್ನತೆಯಿಂದಾಗಿ ಭಾರತ ಎಂಬ ಒಟ್ಟು ಪರಿಕಲ್ಪನೆ ಆಗ ಅಷ್ಟಾಗಿ ಇರಲಿಲ್ಲ. ಹೀಗಿರಬೇಕಾದರೆ, ಬ್ರಿಟಿಷರು, ಪೋರ್ಚುಗೀಸರು, ಫ್ರೆಂಚರು, ಡಚ್ಚರು ನಮ್ಮನ್ನು ಆಕ್ರಮಿಸಿದ್ದು, ಅವರನ್ನು ಹೊರಗಟ್ಟಲು ಹಿಂದೂ ಮುಸ್ಲಿಂ ಮುಂತಾದ ಎಲ್ಲರೂ ಒಂದಾಗಿದ್ದು, ಅದಕ್ಕೆ ಗಾಂಧಿಯವರು ನಾಯಕತ್ವ ವಹಿಸಿದ್ದು, ನಂತರದಲ್ಲಿ ಅನೇಕ ಏರುಪೇರುಗಳಾಗಿ ಧರ್ಮದ ಆಧಾರದ ಮೇಲೆ ಭಾರತ ಪಾಕಿಸ್ತಾನ ವಿಭಜನೆಯಾಗಿದ್ದು, ಪಾಕಿಸ್ತಾನ ಇಸ್ಲಾಂ ಧಾರ್ಮಿಕ ದೇಶವಾದರೆ, ಭಾರತ ಮಹಾತ್ಮ ಗಾಂಧಿಯವರ ಅತ್ಯುನ್ನತ ಮಾನವತಾವಾದದ ಆದರ್ಶದ  ಆಧಾರದಲ್ಲಿ ಸರ್ವಧರ್ಮ ಸಮನ್ವಯತೆಯ ಜಾತ್ಯಾತೀತ ರಾಷ್ಟ್ರವಾಗಿದ್ದು, ವಿಭಜನೆಯ ಸಮಯದಲ್ಲಿ ನಡೆದ ಹಿಂದೂ ಮುಸ್ಲಿಂ ಹತ್ಯಾಕಾಂಡ, ಅದರಲ್ಲೂ ಪಾಕಿಸ್ತಾನದಲ್ಲಿ ಅಲ್ಲಿನ ಹಿಂದೂಗಳ ಮೇಲೆ ನಡೆದ ಅತಿಹೆಚ್ಚು ಹಿಂಸೆಗಳು ಎಲ್ಲವೂ ಸೇರಿ ಹಿಂದೂ ಮುಸ್ಲಿಂ ದ್ವೇಷ ಒಳಗೊಳಗೆ ಹೊಗೆಯಾಡುತ್ತಲೇ ಇತ್ತು.

ದೇಶದಲ್ಲಿ ಆಗಾಗ ಮತೀಯ ಘಟನೆಗಳು ಸಂಭವಿಸುತ್ತಿದ್ದವು. ಆದರೆ ಬಾಬರಿ ಮಸೀದಿ ಧ್ವಂಸ ಮತ್ತು ಗುಜರಾತಿನ ಗೋಧ್ರಾ ಘಟನೆಯ ಹತ್ಯಾಕಾಂಡ ಮುಸ್ಲಿಮರಿಗೆ ಹಿಂದೂ ಧಾರ್ಮಿಕ ಮುಖಂಡರ ಮೇಲೆ ಕೋಪ ಹೆಚ್ಚಿಸಿದರೆ, ಕಾಶ್ಮೀರಿ ಪಂಡಿತರ ಮೇಲೆ ಅಲ್ಲಿನ ಮುಸ್ಲಿಂ ಭಯೋತ್ಪಾದಕರ ಹತ್ಯಾಕಾಂಡ ಹಿಂದೂಗಳಿಗೆ ಮುಸ್ಲಿಂ ಧಾರ್ಮಿಕ ನಾಯಕರ ಮೇಲೆ ಆಕ್ರೋಶ ಹೆಚ್ಚು ಮಾಡಿದೆ. ಇದರ ಜೊತೆಗೆ ಚುನಾವಣಾ ರಾಜಕೀಯ ಸಹ ತನ್ನ ಕೊಡುಗೆ ನೀಡುತ್ತಿದೆ. ಕಾಂಗ್ರೆಸ್ ಮುಸ್ಲಿಂ ತುಷ್ಟೀಕರಣದ ನಿಲುವುಗಳನ್ನು ಅತಿರೇಕ ಎಂಬಂತೆ ಮಾಡಿದರೆ ಇದರ ಜಾಡು ಹಿಡಿದ ಬಿಜೆಪಿ ಹಿಂದೂಗಳಲ್ಲಿ ಮುಸ್ಲಿಮರ ಮೇಲಿನ ದ್ವೇಷ ಹೆಚ್ಚಾಗುವಂತೆ ತಂತ್ರ ಹೆಣೆಯುತ್ತಿದೆ. ಈಗ ನಿಜವಾದ ಸಮಸ್ಯೆ ಇರುವುದು ಭಾರತೀಯ ಸಾಮಾನ್ಯ ಜನರ ನಿಲುವುಗಳಲ್ಲಿ. ಏಕೆಂದರೆ ಮಾಧ್ಯಮಗಳು ಸೇರಿ ಬಹುತೇಕ ಜನರು ಮುಸ್ಲಿಂ ಎಂದರೆ ಭಯೋತ್ಪಾದಕರು, ತಂಟೆಕೋರರು, ಆಕ್ರಮಣಕಾರಿಗಳು, ದೇಶಕ್ಕಿಂತ ಧರ್ಮಕ್ಕೆ ಮಹತ್ವ ಕೊಡುತ್ತಾರೆ, ಅವರು ಅಪಾಯಕಾರಿ ಜನರು ಎಂದು ಭಾವಿಸುವಂತೆ ಮಾಡಲಾಗಿದೆ.

ಹಾಗಾದರೆ ವಾಸ್ತವ ಏನು ? ನಮ್ಮ ದೇಶದಲ್ಲಿ ಈಗ ಸುಮಾರು 20 ಕೋಟಿ ಮುಸ್ಲಿಮರಿದ್ದಾರೆ. ನೂರಾರು ವರ್ಷಗಳಿಂದ ಇಲ್ಲಿಯ ಮಣ್ಣಿನಲ್ಲಿ ಬೆರೆತು ಹೋಗಿದ್ದಾರೆ. ಜನಜೀವನ ಭಾರತದ ಸಂಸ್ಕೃತಿಗೆ ಒಗ್ಗಿ ಹೋಗಿದೆ. ಈಗ ಭಾರತವೇ ಅವರ ಮಾತೃ ದೇಶ. ಆದರೆ ಕೆಲವು ಮೂಲಭೂತವಾದಿ ಹಿಂದುತ್ವದ ಸಂಘಟನೆಗಳು ಇದನ್ನು ಒಪ್ಪುತ್ತಿಲ್ಲ. ಅವರನ್ನು ಎರಡನೇ ದರ್ಜೆಯ ನಾಗರಿಕರಂತೆ ನೋಡುತ್ತಿವೆ. ಹಿಂದುಗಳ ನಂತರ ಮುಸ್ಲಿಮರು ಎಂಬ ಭಾವನೆ ಬೆಳೆಯುತ್ತಿದೆ, ಅದಕ್ಕೆ ಪ್ರತಿಕ್ರಿಯೆಯಾಗಿ ಕೆಲವು ಕಡೆ ಮುಸ್ಲಿಮರು ಸಹ ಪ್ರಚೋದನಕಾರಿಯಾಗಿ ಮಾತನಾಡುವ, ಹಿಂಸಾತ್ಮಕವಾಗಿ ವರ್ತಿಸುತ್ತಿರುವ‌ ಘಟನೆಗಳು ನಡೆಯುತ್ತಿವೆ. ಸೇಡು - ದ್ವೇಷ ಭುಗಿಲೆದ್ದಿದೆ.

ಕಾರಣಗಳು, ಇತಿಹಾಸ ಏನೇ ಇರಲಿ, ಮುಸ್ಲಿಮರು ಈಗ ಭಾರತದ ಅವಿಭಾಜ್ಯ ಅಂಗ ಮತ್ತು ಪರಿಪೂರ್ಣ ಭಾರತೀಯರೇ. ಇಲ್ಲಿ ಯಾವುದೇ ವ್ಯಕ್ತಿಗೆ ಇರುವ ಎಲ್ಲಾ ರೀತಿಯ ಹಕ್ಕು ಮತ್ತು ಕರ್ತವ್ಯಗಳು ಅವರಿಗೆ ಸಂವಿಧಾನಾತ್ಮಕವಾಗಿ ಇದೆ. ಅವರು ಎರಡನೇ ದರ್ಜೆ ಅಥವಾ ವಲಸಿಗರು ಎಂಬುದು ತಪ್ಪಾಗುತ್ತದೆ ಮತ್ತು ಪ್ರಚೋದನೆಯಾಗುತ್ತದೆ. ಅಲ್ಲದೆ ಅವರಲ್ಲಿ ಅಭದ್ರತೆಯ ಭಾವನೆ ಬೆಳೆಯಲು ಕಾರಣವಾಗಿ ಅದನ್ನು ಅಲ್ಲಿಯ ಮೂಲಭೂತವಾದಿಗಳು ದುರುಪಯೋಗ ಪಡಿಸಿಕೊಳ್ಳುತ್ತಾರೆ.

(ಇನ್ನೂ ಇದೆ)

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ