ಗಡಿನಾಡ ಗಾಯಕಿ- ಸುಭಾಷಿಣಿ ರವಿಚಂದ್ರ

ಗಡಿನಾಡ ಗಾಯಕಿ- ಸುಭಾಷಿಣಿ ರವಿಚಂದ್ರ

ಗಡಿನಾಡು ಕಾಸರಗೋಡಿನಲ್ಲಿ ಕಲಾವಿದರು, ಕವಿಗಳು, ಸಾಹಿತಿಗಳು ಇನ್ನೆಷ್ಟೋ ಪ್ರತಿಭೆಗಳು ಕಾಸರಗೋಡಿನ ಮಣ್ಣಿನಿಂದ ಮುಖ್ಯವಾಹಿನಿಗೆ ಬಂದು ಮಿಂಚುತ್ತಿರುವರು. ಇದು ನಮ್ಮ ಕಾಸರಗೋಡಿನ ಪ್ರತಿಭೆಗಳು ಎಂದು ನಾವು ಹೆಮ್ಮೆ ಪಡುವ ವಿಷಯ. ಹಾಗೆಯೇ ಕಾಸರಗೋಡು ಜಿಲ್ಲೆಯ ಕಿದೂರು ಮಹದೇವ ದೇವರ ಪುಣ್ಯದ ಮಣ್ಣಲ್ಲಿ ಸೋಮಯ್ಯ ಹಾಗೂ ದೇವಕಿ ದಂಪತಿಯ ಪುತ್ರಿ ಸುಭಾಷಿಣಿ ರವಿಚಂದ್ರ ಕನ್ನಟಿಪ್ಪಾರೆ ಅವರು ಉತ್ತಮ ಅಂಗನವಾಡಿ ಅಧ್ಯಾಪಕಿ ಹಾಗೆಯೇ ಗಡಿನಾಡ ಗಾಯಕಿ ಎಂದು ಬಿರುದು ಪಡೆದಿದ್ದಾರೆ. ಇದೀಗ ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಪ್ರೇಕ್ಷಕರ ಮನಗೆದ್ದಿರುವರು.

ಸುಭಾಷಿಣಿ ಅವರು ಗಡಿನಾಡ ಕಾಸರಗೋಡಿನಲ್ಲಿ ಮಿಂಚುತ್ತಿರುವ ಅದ್ಭುತ ಗಾಯಕಿ. ಅವರ ಪತಿ ರವಿಚಂದ್ರ ಕನ್ನಟಿಪ್ಪಾರೆ ಸಮಾಜಸೇವಕರು ಉತ್ತಮ ಹಾಡುಗಾರರು ಕೂಡ. ಈ ದಂಪತಿಗಳ ಮಕ್ಕಳಾದ ಸುರಕ್ಷಾ, ಸೂರಜ್ ಉತ್ತಮ ಯಕ್ಷಗಾನ ಕಲಾವಿದರು. ಯಾವುದೇ ಗುರು ಇಲ್ಲದೆ ಯಾವುದೇ ಹಾಡನ್ನಾದರೂ ಇಂಪಾಗಿ ಹಾಡುವ ಸುಭಾಷಿಣಿ ಚಂದ್ರ ಅವರು ‘ಮೊಗದೋಳೆ’ ಹಾಡಿಗೆ ಗಡಿನಾಡ ಗಾಯಕಿ ಬಿರುದು ಪಡೆದ ಸುಭಾಷಿಣಿ ಅವರು ಇದೀಗ ಗಾಯನ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಸುಳ್ಯದಲ್ಲಿ ನಡೆದ ಚಂದನ ಸಾಹಿತ್ಯ ವೇದಿಕೆ ಸುಳ್ಯ ಹಾಗೂ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದವರು ಸುಭಾಷಿಣಿ ರವಿಚಂದ್ರ ಇವರಿಗೆ ಗಾಯನ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇದು ಗಡಿನಾಡ ಕಾಸರಗೋಡಿಗೆ ಹೆಮ್ಮೆಯ ವಿಷಯ. ಅವರ ಗಾಯನ ಇನ್ನೂ ಕೂಡ ಸಂಗೀತ ಕ್ಷೇತ್ರದಲ್ಲಿ ಮಿಂಚಲಿ, ಇನ್ನಷ್ಟು ಉತ್ತಮ ಅವಕಾಶಗಳು ಇವರಿಗೆ ದೊರೆಯಲಿ ಎಂದು ಹಾರೈಕೆ.

-ವಸಂತ ಬಾರಡ್ಕ