ಗಣಿತಜ್ಞರ ರಸಪ್ರಸಂಗಗಳು

ಗಣಿತಜ್ಞರ ರಸಪ್ರಸಂಗಗಳು

ಪುಸ್ತಕದ ಲೇಖಕ/ಕವಿಯ ಹೆಸರು
ರೋಹಿತ್ ಚಕ್ರತೀರ್ಥ
ಪ್ರಕಾಶಕರು
ಅಯೋಧ್ಯಾ, ಗಿರಿನಗರ, ಬೆಂಗಳೂರು
ಪುಸ್ತಕದ ಬೆಲೆ
ಬೆಲೆ: ರೂ. 99.00, ಮುದ್ರಣ: ಅಕ್ಟೋಬರ್ 2020

ಅಯೋಧ್ಯಾ ಪ್ರಕಾಶನದ ೧೪ ನೇ ಪುಸ್ತಕವಾಗಿ ಹೊರಬಂದಿರುವ ‘ಗಣಿತಜ್ಞರ ರಸಪ್ರಸಂಗಗಳು' ಬರೆದಿರುವವರು ಸ್ವತಃ ಗಣಿತ ಬೋಧಕರಾದ ರೋಹಿತ್ ಚಕ್ರತೀರ್ಥ ಇವರು. ಗಣಿತ ಬಹುತೇಕ ಮಂದಿಗೆ ಕಬ್ಬಿಣದ ಕಡಲೆಯೇ. ಪಿಯುಸಿಯಿಂದ ಪದವಿಯವರೆಗೆ ನಾನೂ ಗಣಿತವನ್ನೇ ಒಂದು ವಿಷಯವಾಗಿ ಕಲಿತರೂ ನನಗಿನ್ನೂ ಗಣಿತ ಅರ್ಥವೇ ಆಗಿಲ್ಲ. ಇದು ನನ್ನ ವೈಯಕ್ತಿಕ ಸಮಸ್ಯೆ. ಆದರೆ ಗಣಿತದಲ್ಲಿ ಬರೆದದ್ದು ಸರಿಯಾದರೆ ನೂರಕ್ಕೆ ನೂರು ಅಂಕ ಗ್ಯಾರಂಟಿ ಎಂದು ಆಗ ಪ್ರಚಲಿತವಾಗಿದ್ದ ಮಾತು. (ಆದರೆ ಈಗ ಭಾಷಾ ವಿಷಯದಲ್ಲೂ ಶೇಕಡಾ ನೂರು ಅಂಕಗಳನ್ನು ಕೊಡುತ್ತಾರೆ). ಸುಮಾರು ೫೦ಕ್ಕೂ ಮಿಕ್ಕಿದ ಖ್ಯಾತ ಗಣಿತಜ್ಞರ ರಸನಿಮಿಷಗಳನ್ನು ಕಟ್ಟಿಕೊಡುವ ಕೆಲಸ ರೋಹಿತ್ ಮಾಡಿದ್ದಾರೆ. ಅವರು ಗಣಿತವನ್ನೇ ಬೋಧಿಸುವುದರಿಂದ ಈ ಕೆಲಸ ಅವರಿಗೆ ಸ್ವಲ್ಪ ಸುಲಭವಾಗಿರಬಹುದು. 

ರೋಹಿತ್ ಅವರೇ ತಮ್ಮ ‘ಒಂದೆರಡು ಮಾತು’ಗಳಲ್ಲಿ ಬರೆದಂತೆ ಗಣಿತಜ್ಞರೆಂದರೆ ಯಾವುದೋ ಲೋಕದಿಂದ ಇಳಿದು ಬಂದ ಅನ್ಯಗ್ರಹ ಜೀವಿಗಳು ಅಥವಾ ಇಲ್ಲಿದ್ದರೂ ಯಾವುದೋ ಲೋಕದಲ್ಲಿ ವಿಹರಿಸುತ್ತಿರುವಂತೆ ಕಾಣುವ ಮಾನಸ ವಾಸಿಗಳೆಂಬ ನಂಬಿಕೆ ಜನಸಾಮಾನ್ಯರಲ್ಲಿದೆ. ಗಣಿತಜ್ಞರು ಬರೆಯುವ ಕಗ್ಗದಲ್ಲಿ ನಮ್ಮಂತಹ ಬಡಪಾಯಿ ಜೀವಿಗಳಿಗೆ ಅದು ಭೂತ ಬಂಗಲೆಯಲ್ಲಿ ಜೇಡಗಳು ಬಲೆ ನೇಯ್ದ ಹಾಗೆ ಸಮೀಕರಣಗಳು ಕಾಣಿಸುತ್ತವೆ. ಆದರೂ ಇವೆಲ್ಲಾ ರಸ ಪ್ರಸಂಗಗಳನ್ನು ಓದಿದ ಮೇಲಾದರೂ ಕೆಲವರಿಗೆ ಗಣಿತದಲ್ಲಿ ಆಸಕ್ತಿ ಮೂಡಿದರೆ ತಮ್ಮ ಪ್ರಯತ್ನ ಸಾರ್ಥಕವಾಗುತ್ತದೆ ಎಂದು ಲೇಖಕರ ನಂಬಿಕೆ. ಇದರಲ್ಲಿರುವ ಒಂದು ಪ್ರಸಂಗ (ಒಂದೇ ಉತ್ತರ) ವನ್ನು ಯಥಾವತ್ತಾಗಿ ನಿಮ್ಮ ಎದುರಿಡುತ್ತಿದ್ದೇನೆ. ಅದನ್ನು ಓದಿದ ಮೇಲೆ ನಿಮಗೆ ಈ ಪುಸ್ತಕದಲ್ಲಿರುವ ಇತರೆ ಪ್ರಸಂಗಗಳ ಬಗ್ಗೆ ಖಂಡಿತವಾಗಿಯೂ ಕುತೂಹಲ ಮೂಡುತ್ತದೆ ಎಂಬುದುದರಲ್ಲಿ ಸಂಶಯವಿಲ್ಲ. 

ಆರ್ನೆಸ್ಟ್ ಎಡ್ವರ್ಡ್ ಕುಮ್ಮರ್, ಹತ್ತೊಂಬತ್ತನೇ ಶತಮಾನದ ಅತ್ಯಂತ ಪ್ರತಿಭಾವಂತ ಗಣಿತಜ್ಞ. ಆದರೆ ಅವನ ಪರಿಣಿತಿ ಇದ್ದುದ್ದು ಬೀಜಗಣಿತದಲ್ಲಿ. ಕೂಡುವ- ಗುಣಿಸುವ ಪ್ರಾಥಮಿಕ ಕೆಲಸಗಳೆಲ್ಲಾ ಅವನಿಗೆ ಹಿಡಿಸುತ್ತಲೇ ಇರಲಿಲ್ಲ. ಅಂತಹ ಸಂದರ್ಭ ಬಂದಾಗಲೆಲ್ಲಾ ಬಾಲಿಶವಾದ ತಪ್ಪು ಮಾಡುತ್ತಿದ್ದ. ಒಮ್ಮೆ ತರಗತಿಯಲ್ಲಿ ಯಾವುದೋ ಲೆಕ್ಕ ಮಾಡುತ್ತ ನಡುವೆ, 7X9 ಎಂಬುವುದರ ಉತ್ತರ ಬರೆಯಬೇಕಾಯಿತು. “ಏಳೋಂಬತ್ಲಿ... ಏಳೋಂಬತ್ಲಿ.. ಎಂದು ಯೋಚಿಸುತ್ತಾ ಚಡಪಡಿಸುತ್ತ ನಿಂತ ಕುಮ್ಮರ್ ನನ್ನು ಸ್ವಲ್ಪ ಆಟವಾಡಿಸೋಣ ಎಂದು ಕೀಟಲೆ ವಿದ್ಯಾರ್ಥಿಯೊಬ್ಬ ‘ಸರ್, ೬೧ ಎಂದ. ಕುಮ್ಮರ್ ಅದನ್ನು ಬರೆಯುವಷ್ಟರಲ್ಲಿ ಇನ್ನೊಬ್ಬ ‘ಅಲ್ಲ, ೬೯’ ಎಂದ. ಇದರಿಂದ ಕಿರಿಕಿರಿಗೊಂಡ ಕುಮ್ಮರ್ ತಿರುಗಿ, ‘ಅದು ಹೇಗೆ ಒಂದು ಪ್ರಶ್ನೆ ಎರಡು ಉತ್ತರ ಕೊಡಲಿಕ್ಕೆ ಸಾಧ್ಯ? ಒಂದೋ ಅದು ಇಲ್ಲವೇ ಇದು ಆಗಿರಬೇಕು. ಯಾವುದು ಅಂತ ಬೇಗ ನಿರ್ಧರಿಸಿ" ಎಂದ.

ಹೀಗಿದ್ದರು ನಮ್ಮ ಮರೆಗುಳಿ, ಅನ್ಯಮನಸ್ಕ ಗಣಿತಜ್ಞರು. ಎಲ್ಲಾ ರಸ ಪ್ರಸಂಗಗಳು ಹೀಗೇ ಇಲ್ಲ. ಕೆಲವು ಭಾವನಾತ್ಮಕ ಪ್ರಸಂಗಗಳೂ ಇವೆ. ಖ್ಯಾತ ಭಾರತೀಯ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಮತ್ತು ಅವರ ಪತ್ನಿಯ ನಡುವಿನ ಒಂದು ಸನ್ನಿವೇಶ ತುಂಬಾನೇ ಭಾವುಕವಾಗಿದೆ. ಇಂತಹ ಹಲವಾರು ಪ್ರಸಂಗಗಳು ಈ ಪುಸ್ತಕದ ಒಳಗೆ ಅಡಕವಾಗಿದೆ. ೮೭ ಪ್ರಸಂಗಗಳು ಇವೆ. ತುಂಬಾ ಕಿರು ಪ್ರಸಂಗಗಳಾಗಿರುವುದರಿಂದ ಒಮ್ಮೆಲೇ ಇಡೀ ಪುಸ್ತಕವನ್ನು ಓದಿ ಮುಗಿಸಬಹುದು. ಪುಸ್ತಕದ ಕೊನೆಗೆ ಸುಮಾರು ೫೦ ಕ್ಕೂ ಅಧಿಕ ಗಣಿತಜ್ಞರ ವಿವರಗಳನ್ನು ನೀಡಿರುವುದು ಬಹಳ ಉತ್ತಮವಾದ ಸಂಗತಿ. ಏಕೆಂದರೆ ಈ ಪುಸ್ತಕದಲ್ಲಿರುವ ಬಹಳಷ್ಟು ಗಣಿತಜ್ಞರು ನಮಗೆ ಪರಿಚಿತರಲ್ಲ. ವಿವರಗಳೊಂದಿಗೆ ಅವರ ಭಾವಚಿತ್ರವೂ ಇದ್ದಿದ್ದರೆ ಪುಸ್ತಕಕ್ಕೆ ಇನ್ನಷ್ಟು ಕಳೆ ಬರುತ್ತಿತ್ತು ಎನ್ನುವುದು ನನ್ನ ಅಭಿಮತ. ಮುಂದಿನ ಮುದ್ರಣದ ಸಮಯದಲ್ಲಿ ಲೇಖಕರು ಈ ಬಗ್ಗೆ ಗಮನಹರಿಸಬಹುದೇನೋ? 

ಪುಸ್ತಕದ ತುಂಬೆಲ್ಲಾ ಶೈಲೇಶ್ ಕುಮಾರ್ ಉಜಿರೆ ಅವರ ವ್ಯಂಗ್ಯ ಚಿತ್ರಗಳು ರಾರಾಜಿಸುತ್ತಿವೆ. ಇವುಗಳು ಪ್ರಸಂಗಗಳಿಗೆ ಬಹಳಷ್ಟು ಪೂರಕವಾಗಿವೆ. ಅವುಗಳಲ್ಲಿ ಆಯ್ದ ಚಿತ್ರಗಳನ್ನು ಮುಖಪುಟಕ್ಕೆ ಬಳಸಿಕೊಂಡಿದ್ದಾರೆ. ಸುಮಾರು ೧೨೦ ಪುಟಗಳ ಪುಟ್ಟ ಪುಸ್ತಕವನ್ನು ಗಣಿತದ ಮೇಲೆ ಆಸಕ್ತಿ ಇಲ್ಲದವರೂ ತಮ್ಮ ಓದಿನ ಕುತೂಹಲವನ್ನು ತಣಿಸಲು ಓದಿಕೊಳ್ಳಬಹುದು.