ಗತಜನ್ಮ - ಮತ್ತೆರಡು ಕತೆಗಳು

ಗತಜನ್ಮ - ಮತ್ತೆರಡು ಕತೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಎಸ್ ಎಲ್ ಭೈರಪ್ಪ
ಪ್ರಕಾಶಕರು
ಸಾಹಿತ್ಯ ಭಂಡಾರ, ಬಳೇಪೇಟೆ, ಬೆಂಗಳೂರು - ೫೬೦೦೫೩
ಪುಸ್ತಕದ ಬೆಲೆ
ರೂ. ೯೦.೦೦, ಮುದ್ರಣ: ೨೦೨೪

‘ಗತಜನ್ಮ - ಮತ್ತೆರಡು ಕತೆಗಳು’ ಕಥಾ ಸಂಕಲನದಲ್ಲಿರುವ ‘ಗತಜನ್ಮ’ ಕಥೆಯನ್ನು ಎಸ್ ಎಲ್ ಭೈರಪ್ಪನವರು ತಮ್ಮ ಹೈಸ್ಕೂಲ್ ದಿನಗಳಲ್ಲಿ ಬರೆದದ್ದು ಎನ್ನುವುದೇ ಕುತೂಹಲಕಾರಿ ಸಂಗತಿ. ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವಂತೆ ಭೈರಪ್ಪನವರು ಇಂದಿನ ದಿನ ಏನು ಸಾಧಿಸಿದ್ದಾರೋ ಅದರ ಪ್ರಾರಂಭ ಆದದ್ದು ಅವರ ಹೈಸ್ಕೂಲ್ ದಿನಗಳಲ್ಲೇ ಎನ್ನಬಹುದು. ಭೈರಪ್ಪನವರ ಇಂದಿನ ಕಾದಂಬರಿಯ ಕಥಾವಸ್ತುಗಳಿಗೆ ಸರಿಸಾಟಿ ಇಲ್ಲ. ಅವರು ಪ್ರತೀ ಕಾದಂಬರಿಗೆ ಮುನ್ನ ಅದಕ್ಕೆ ಬೇಕಾದ ಸೂಕ್ತ ವ್ಯವಸ್ಥೆ ಹಾಗೂ ಆಳವಾದ ಅಧ್ಯಯನವನ್ನು ಮಾಡಿಯೇ ಇರುತ್ತಾರೆ. ಆದರೆ ಅವರ ಪ್ರಾರಂಭಿಕ ದಿನಗಳ ಬರವಣಿಗೆ ಹೇಗಿತ್ತು ಎನ್ನುವ ಕುತೂಹಲ ಇಂದಿನ ಜನಾಂಗವನ್ನು ಕಾಡಿಯೇ ಇರುತ್ತದೆ. ಈ ಕುತೂಹಲವನ್ನು ತಣಿಸಲು ಭೈರಪ್ಪನವರ ಮೂರು ಕಥೆಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗಿದೆ. 

೧೯೫೫ರಲ್ಲೇ ಈ ಕೃತಿ ಪ್ರಥಮ ಮುದ್ರಣದ ಭಾಗ್ಯ ಕಂಡಿದ್ದರೂ, ಆಗ ಎಸ್ ಎಲ್ ಭೈರಪ್ಪ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ ಆಗಿದ್ದರು. ಆದರೆ ಇಂದು ಅವರು ಕನ್ನಡ ಸಾಹಿತ್ಯ ಲೋಕದ ಒಂದು ಶಕ್ತಿಯಾಗಿ ಬೆಳೆದಿದ್ದಾರೆ. ಈ ಗತಜನ್ಮ ಕಥೆಯ ಕುರಿತಾಗಿ ೧೯೫೫ರಲ್ಲಿ ಪ್ರಕಾಶಕರು ಬರೆದ ಮಾತು ಹೀಗಿದೆ… 

“ಇದೊಂದು ಹೃದಯ ಸ್ಪರ್ಶಿಯಾದ ಕರುಣಾಜನಕ ಕಥೆ. ಅದನ್ನು ಓದಿದ ಓದುಗರ ಮನಸ್ಸು ಮೂಕಶೋಕದಲ್ಲಿ ಸಿಲುಕಿ, ಎಚ್ಚರಗೊಂಡ ಮೇಲೆ ಅವರಿಂದ ಬರಹಗಾರ ಮೆಚ್ಚುಗೆಯ ಬಳುವಳಿಯನ್ನು ಪಡೆಯುವುದರಲ್ಲಿ ಸಂಶಯವಿಲ್ಲ. ಇದು ಶ್ರೀಯುತ 'ಶಿಬಿರ'ರವರ ಮೊದಲ ಕೃತಿ. ಆದರೂ ಅವರ ತೀಕ್ಷ್ಯ ದೃಷ್ಟಿಕೋನ ಜನಜೀವನದಲ್ಲಿ ಹೇಗೆ ಹಾಸು ಹೊಕ್ಕಾಗಿದೆ ಎಂಬುದಕ್ಕೆ ನಿದರ್ಶನವಾಗಿ ನಿಂತಿದೆ.

ಶ್ರೀಯುತರು ಇನ್ನೂ ತರುಣರು. ಫಿಲಾಸಫಿ ಆನರ್ಸ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಇನ್ನೂ ಹಲವಾರು ಉತ್ತಮ ಕೃತಿಗಳನ್ನು ರಚಿಸಿ ಕನ್ನಡ ಜನತೆಗೆ ಕಾಣಿಕೆ ಸಲ್ಲಿಸಲಿ ಎಂದು ಹಾರೈಸುತ್ತೇವೆ.” ಇಲ್ಲಿ ‘ಶಿಬಿರ’ ಎಂದರೆ ಭೈರಪ್ಪನವರು ವಿದ್ಯಾರ್ಥಿ ಜೀವನದಲ್ಲಿ ಇರಿಸಿಕೊಂಡ ಕಾವ್ಯನಾಮವೇ ಇರಬೇಕು.

ಇನ್ನ್ ಲೇಖಕರ ನುಡಿಯಲ್ಲಿ ಭೈರಪ್ಪನವರು ಬರೆದದ್ದು…”'ಗತಜನ್ಮ' ನಾನು ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದಾಗ ಬರೆದದ್ದು. 'ಸತ್ತಿಲ್ಲ' ಮತ್ತು 'ಸಂಬಂಧ'ವನ್ನು ೧೯೬೮-೬೯ರ ನಡುವಿನಲ್ಲಿ 'ಕಸ್ತೂರಿ'ಗಾಗಿ ಅದರ ಸಂಪಾದಕರಾಗಿದ್ದ ಪಾ.ವೆಂ. ಆಚಾರ್ಯರ ಒತ್ತಾಯದಿಂದ ಬರೆದೆ. ಈ ಮೂರರ ಪ್ರತಿಗಳನ್ನು ರಕ್ಷಿಸಿ ಇಟ್ಟುಕೊಂಡು ಈಗ ಪ್ರಕಟಣೆಗೆ ಸಿದ್ಧಪಡಿಸಿದ ಸಾಹಿತ್ಯ ಭಂಡಾರದ ಬಂಧುಗಳಿಗೆ ನಾನು ಋಣಿ.”

ಈ ಕಥಾ ಸಂಕಲನದಲ್ಲಿ ಇರುವುದು ಮೂರು ಕಥೆ. ಗತಜನ್ಮ, ಸತ್ತಿಲ್ಲ ಮತ್ತು ಸಂಬಂಧ. ನಿಮ್ಮ ಓದಿಗಾಗಿ ಗತಜನ್ಮ ಕಥೆಯ ಒಂದು ಪುಟ್ಟ ಭಾಗವನ್ನು ಆಯ್ದು ನೀಡಲಾಗಿದೆ. ಓದಿ…

"ಆ ದಿನ ರಾತ್ರಿ ಗೌರಿ ಮನೆಯೊಳಗೆ ಬರುವಂತಿಲ್ಲ. ಹಿತ್ತಿಲ ಅಂಗಳದಲ್ಲಿಯೇ ಮಲಗಿದಳು. ಸಂಜೆ ಅವಳಿಗೆ ಆರತಿಯಾಯಿತು. ಮೈಗೆ ಅರಿಶಿನ ಬಣ್ಣದ ಸೀರೆಯನ್ನು ಉಡಿಸಿದರು. ಮೂರು ದಿನಕ್ಕೆ ಗೌರಿಯ ರೂಪು ಅರಳಿ ದುಂಡುಮಲ್ಲಿಗೆಗೆ ಯಾವ ವಿಧದಲ್ಲಿಯೂ ಕಡಿಮೆಯಿಲ್ಲದಂತೆ ಸೌಂದರ್ಯ ಸುಭಗೆಯ ಹುಚ್ಚು ಹೊಳೆಯಾಯಿತು. ನಾಲ್ಕನೆಯ ರಾತ್ರಿಯೂ ಅವಳಿಗೆ ಒಳಗೆ ಹೋಗಲು ಅವಕಾಶ ಸಿಗಲಿಲ್ಲ. ಅವಳ ತಾಯಿ ಸುಮ್ಮನೆ ಅಳುತ್ತಿದ್ದರು. ಆ ದಿನ ರಾತ್ರಿಯಂತೂ ಮಗಳನ್ನು ಬಿಗಿಯಾಗಿ ಅಪ್ಪಿಕೊಂಡು, 'ತಾಯೀ.....' ಮುಂದೆ ಮಾತನಾಡಲಾಗದೆ ಅತ್ತರು. ಮಾತೆಯ ಮಮತಾಪೂರ್ಣ ಕಣ್ಣೀರಿನಿಂದ ಮಗಳನ್ನು ತೋಯ್ದಿದರು. ಅವಳು ಅಳುವ ಕಾರಣ ಮುಗ್ಧ ಗೌರಿಗೆ ತಿಳಿಯಲೇ ಇಲ್ಲ. 

ಮರುದಿನ ಮನೆಯಲ್ಲಿ ಹಬ್ಬದ ಸಡಗರ. ಮುಂಜಾನೆಯೇ ಮನೆಯನ್ನು ಗುಡಿಸಿ ಸಾರಿಸಿ ಹಸೆಯಿಕ್ಕಿದರು. ಗೌರಿ ಹಿತ್ತಿಲ ಮೂಲೆಯಲ್ಲಿಯೇ ಕುಳಿತಿದ್ದಳು. ಮಧ್ಯಾಹ್ನ ಊಟವಾಯಿತು. ಸೊಗಸಾದ ಅಡುಗೆ, ರುಚಿಕರವಾದ ಭಕ್ಷ್ಯ, ಪಾಯಸವಾದರೂ, ಏಕೋ, ಎಲ್ಲರೂ ಅಳುತ್ತಿದ್ದರು. ಒಬ್ಬರೂ ಸರಿಯಾಗಿ ಊಟ ಮಾಡಲಿಲ್ಲ. ಗೌರಿಯ ಒಬ್ಬನೇ ಒಬ್ಬನಾದ ಅಣ್ಣನಂತೂ ತಲೆ ಎತ್ತಲಿಲ್ಲ. ತಂದೆ ಊಟವನ್ನೇ ಮಾಡಲಿಲ್ಲ. ಗೌರಿಯ ಹೃದಯದಲ್ಲಿ ಅವ್ಯಕ್ತ ತಳಮಳ. ಏನೂ ಅರ್ಥವಾಗಲಿಲ್ಲ. ಊಟವೂ ಸೇರಲಿಲ್ಲ.

ನಂತರ ಅವಳಿಗೆ ಹಳದಿ ಬಣ್ಣದ ಹೊಸ ಸೀರೆಯುಡಿಸಿದರು. ತಾಯಿ ತಮ್ಮ ಒಡವೆಗಳನ್ನೇ ಇಟ್ಟರು. ಮಗಳನ್ನು ಹಸೆಯ ಮೇಲೆ ನಿಲ್ಲಿಸಿ ಹಣೆಗೆ ಕುಂಕುಮವಿಟ್ಟರು. ರೇಶಿಮೆಯಂತಹ ನವಿರಾದ ಅವಳ ಕಪ್ಪು ತುರುಬಿಗೆ ದುಂಡುಮಲ್ಲಿಗೆಯನ್ನು ಮುಡಿಸಿದರು. ಆದರೂ ತಾಯಿಯ ಕಣ್ಣೀರು ನಿಲ್ಲಲೇ ಇಲ್ಲ. ಮಗಳು ಇದ್ದಕ್ಕಿದ್ದಂತೆಯೇ ತಾಯಿಯನ್ನು ಅಪ್ಪಿದಳು. ತಾಯಿ ಮೂರ್ಛೆ ಬಿದ್ದರು. ತಂದೆ ಕಣ್ಣೀರೊರೆಸಿಕೊಂಡು ಹಿರಿಯ ಮಗನಿಗೆ, 'ಅಮ್ಮನನ್ನು ನೋಡಿಕೊ ಮಗು' ಎಂದು ಹೇಳಿ ಮಗಳಿಗೆ, 'ನಡಿ, ತಾಯಿ, ಮಾವನ ಮಾವನ ಊರಿಗೆ ಹೋಗೋಣ' ಎಂದರು.

ಏನೂ ತಿಳಿಯದೆ ಆಶ್ಚರ್ಯದಿಂದ ಮಗಳು ಕೇಳಿದಳು, 'ಈಗ! ಏಕೆ ಅಣ್ಣಾ, ನನಗೆ ಮೊದಲು ಹೇಳಲೇ ಇಲ್ಲ?'

ಮಗಳ ದುಗುಡ ತುಂಬಿದ ಆಶ್ಚರ್ಯಚಕಿತ ನಯನಗಳನ್ನು ನೋಡಿ ತಂದೆ ಹೇಳಿದರು: 'ಮಾವನ ಊರನ್ನು ನೋಡಬೇಕು ಮಗು, ನಡೆ' ಎನ್ನುತ್ತಾ ಅವರು ತಮ್ಮ ಎದೆಯನ್ನು ಬಿಗಿಯಾಗಿ ಹಿಡಿದುಕೊಂಡರು.

'ಏಕೆ ಅಣ್ಣಾ, ಎದೆನೋವೇ?' ಗಾಬರಿಯಿಂದ ಗೌರಿ ಕೇಳಿದಳು.

ತಂದೆ ಮಗಳನ್ನು ತಬ್ಬಿ ತಮ್ಮ ಎದೆಗೆ ಅವಚಿಕೊಂಡರು. ಗೌರಿಯೂ ಅಳುತ್ತಾ, 'ಇವತ್ತು ಬೇಡಿ ಅಣ್ಣಾ. ಅಮ್ಮನಿಗೂ ಸ್ವಸ್ಥವಿಲ್ಲ.'”

ಸುಮಾರು ೭೫ ಪುಟಗಳ ಈ ಪುಟ್ಟ ಪುಸ್ತಕವನ್ನು ಓದಿದರೆ ಎಸ್ ಎಲ್ ಭೈರಪ್ಪನವರ ಪ್ರಾರಂಭಿಕ ದಿನಗಳ ಬರಹದ ಶೈಲಿ ಹೇಗಿತ್ತು ಎನ್ನುವುದು ವೇದ್ಯವಾಗುತ್ತದೆ.