ಗಮಕ ಕಲೆಯ ಪ್ರಸ್ತುತತೆ ( ಭಾಗ -೧ )
ಗಮಕ ಕಲೆಯ ಪ್ರಸ್ತುತತೆ ( ಭಾಗ -೧ )
ಗಮಕಕಲೆಯ ಪ್ರಸ್ತುತತೆಯ ಕುರಿತಾಗಿ ಚರ್ಚೆಗೆ ತೊಡಗುವಾಗ ಮೊದಲು ಪ್ರಸ್ತುತತೆ ಎಂಬ ಪದದ ಕುರಿತು ಗ್ರಹಿಸಬೇಕು. ಯಾವುದು ಪ್ರಸ್ತುತ ? ಯಾವುದು ಅಪ್ರಸ್ತುತ ? ಇದರ ಆಯ್ಕೆಗೆ ಮಾನದಂಡಗಳೇನು ? ಗುಣ ಸತ್ವ ಮೌಲ್ಯವೇ ? ಜನಾಭಿಪ್ರಾಯವೇ ? ಹೆಚ್ಚು ಚಲಾವಣೆಯಲ್ಲಿದ್ದುದು ಪ್ರಸ್ತುತವೆಂದು, ಬಹು ಜನ ಹೆಚ್ಚು ಸುಲಭವಾಗಿ ಮೆಚ್ಚದ್ದನ್ನು ಅಪ್ರಸ್ತುತವೆಂದು ಕರೆದುಬಿಡೋಣವೇ ? ಅದು ಹೇಗೆ ಸರಿ ? ರೋಗಿಗೆ ಔಷಧವು ಅವಶ್ಯವಾದುದು. ರೋಗವು ಪ್ರಸ್ತುತವೆಂದಾದರೆ ಔಷಧಿಯ ಪ್ರಸ್ತುತತೆ ಅನಿವಾರ್ಯ. ರೋಗಿಗೆ ಪ್ರಿಯವೆನಿಸದಿದ್ದರೂ ಅದುಬೇಕು. ಸಮಾಜದಲ್ಲೂ ಕೆಲವು ಸಂಗತಿಗಳು ಹಾಗೆಯೇ ಅನ್ವಯವಾಗುವಂತದ್ದು. ಇದರಲ್ಲಿ ಜನಾಕರ್ಷಣೆ ಅಥವಾ ಜನಾಭಿಪ್ರಾಯವೇ ಪ್ರಧಾನವಾಗುವುದಿಲ್ಲ. ಗುಣ ಮೌಲ್ಯವುಳ್ಳದ್ದು ತನ್ನ ಮೌಲ್ಯಗಳಿಂದಾಗಿಯೇ ಸಾರ್ವಕಾಲಿಕ ಮಹತ್ವವನ್ನು ಗಳಿಸುತ್ತದೆ. ಅವು ಎಲ್ಲ ಕಾಲದಲ್ಲೂ ಪ್ರಸ್ತುತವೇ. ಜನರು ಹಸಿವು, ದುಃಖ ಭೀತಿಗಳಿಂದ ಕಂಗಾಲಾಗಿರುವಾಗ ಕಾವ್ಯಗಳು ಬೇಕಾಗುವುದಿಲ್ಲ. ಅಂತೆಯೇ ಉನ್ಮಾದದ ಮೋಜು ಮಸ್ತಿಗಳಿಗೂ ಇವು ಬೇಡ. ಸಮಚಿತ್ತನಾಗಿ ಜಗತ್ತನ್ನು ಅರಿಯಲು ಹೊರಟವನಿಗೆ ಕಾವ್ಯಗಳು, ಭಿನ್ನ ಭಿನ್ನ ಸನ್ನಿವೇಶಗಳು, ಚಿತ್ರಣಕ್ರಮಗಳು ಅತ್ಯಂತ ಪ್ರಸ್ತುತವೆನಿಸುತ್ತದೆ.
ನಮ್ಮ ಮಹಾ ಕಾವ್ಯಗಳನ್ನು ಜನರಿಗೆ ಮುಟ್ಟಿಸುವಲ್ಲಿ ಗಮಕ ಕಲೆ ವಹಿಸುತ್ತಿರುವ ಪಾತ್ರ ಬಹು ಮಹತ್ವದ್ದಾಗಿದೆ. ಬಹಳ ಹಿಂದೆ ಜನ ಅನಕ್ಷರಸ್ಥರಿದ್ದರು. ಅವರು ಕಾವ್ಯಗಳನ್ನು ಸ್ವತಃ ಓದಲು ಅಶಕ್ತರಾಗಿದ್ದರು. ಹಾಗಾಗಿ ಗಮಕ ಕಲೆ ಅವಶ್ಯವಾಗಿತ್ತು. ಇತ್ತೀಚಿನ ದಿನಗಳಲ್ಲಿ ಎಲ್ಲರು ಅಕ್ಷರಸ್ಥರಾಗಿದ್ದಾರೆ. ಎಲ್ಲ ಕಾವ್ಯಗಳ ಮುದ್ರಿತ ಪ್ರತಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರು ಗಮಕ ಕಲೆ ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗಿ ಮಹತ್ವದ ಪಾತ್ರವನ್ನು ನಿರ್ವಹಿಸಬೇಕಿದೆ. ಕಾರಣವಿಷ್ಟೇ. ಈಗಿನ ಅಕ್ಷರಸ್ಥರನೇಕರಿಗೆ ಕನ್ನಡ ಮತ್ತು ಸಂಸ್ಕೃತಗಳನ್ನು ಓದಲುಬಾರದು. ಕನ್ನಡವನ್ನು ಮಾತಾಡಲಷ್ಟೇ ಕಲಿತವರು ಸಂಸ್ಕೃತಿಯ ಸಾರವನ್ನು ಅರಿಯಬೇಕಾದರೆ ನಮ್ಮ ಅಮೂಲ್ಯ ಕಾವ್ಯಗಳನ್ನು ಕೇಳಿಯಾದರೂ ತಿಳಿಯಬೇಕಿದೆ. ಇದು ಗಮಕ ಕಲೆಯಿಂದ ಮಾತ್ರವೇ ಸಾಧ್ಯವಾಗಬೇಕಾದ ಕಾರ್ಯ. ಕನ್ನಡವನ್ನು ಓದಲು ಕಲಿತವರೆಲ್ಲರು ಕಾವ್ಯಗಳನ್ನು ಓದಿ ಅರ್ಥೈಸಿ ಕೊಳ್ಳುತ್ತಾರೆಂದು ಹೇಳುವಂತಿಲ್ಲ. ಇಂತಹವರಿಗೆ ಗಮಕಕಲೆ ಒಂದು ಸಾಧನ. ಇಂದಿನ ಓದಿನ ಬಗ್ಗೆ ಕವಿ ಬೇಂದ್ರೆಯವರು ಹೀಗೆ ಹೇಳುತ್ತಾರೆ. ( ೮೦ ರ ದಶಕದ ಮಾತು) "ಕುರುಡೋದು ಎಂಬ ನಾಣ್ಣುಡಿಯಿದೆ. ಆದರೆ ಕಿವುಡೋದು ಎಂಬ ಮಾತು ರೂಡಿಯಾಗುವುದಗತ್ಯ. ಇಂಗ್ಲಿಷ್ ಶಾಲೆಗಳು ಪ್ರಚಾರಕ್ಕೆ ತರುತ್ತಿರುವ ಸೈಲೆಂಟ್ ರೀಡಿಂಗ್ ಕಣ್ಣೋದಿಗೆ ಸರಿಹೋಗುವ ಮಾತು . ಕಿವಿಯಿಂದೀಂಟಿಸುವ ಪ್ರಯತ್ನವು ಕವಿ ಗಮಕಿಗಳದಾದರೆ, ಕಣ್ಣಿಂದೋದಿಸುವ ಪ್ರಯತ್ನವು ನಮ್ಮ ಶಿಕ್ಷಣಕರ್ತರದು. ಸಾವಕಾಶವಾಗಿ ಚಿತ್ರಗಳನ್ನು ಕಿವಿಯಿಂದ ನೋಡಿಸುವ ಪ್ರಯತ್ನವನ್ನು ಅವರು ಮಾಡಬಹುದೇನೋ." ಹಾಗೆಯೇ "ಸಂಗೀತ ಮತ್ತು ಸಾಹಿತ್ಯಗಳು ಪರಸ್ಪರ ಪೂರಕಗಳು. ಸರಸ್ವತಿಯ ಸ್ಥನದ್ವಂದ್ವಗಳು." ವರಕವಿಯ ಮಾತುಗಳು ಎಷ್ಟು ಅರ್ಥವತ್ತಾಗಿದೆ. ನಿಜ ನಮ್ಮವರಿಗೆ ಕಾವ್ಯಗಳನ್ನು ಓದಲು ಬರುವುದಿಲ್ಲ. ರಾಷ್ಟ್ರಕವಿ ಕುವೆಂಪುರವರು ಒಂದು ಕಡೆ ಹೀಗೆ ಹೇಳುತ್ತಾರೆ. " ಸರಿಯಾಗಿ ಓದಲು ಬಾರದಿದ್ದರೆ ಕಾವ್ಯದ ಅರ್ಥಸ್ವಾರಸ್ಯಗಳು ಓದುಗರಿಗೆ ದೊರಕುವುದೇ ಇಲ್ಲ. ಕವನಗಳಾಗಲೀ, ನಾಟಕಗಳಾಗಲೀ, ಬರಿಯ ಭಾವಗಳು ಮಾತ್ರವೇ ಅಲ್ಲ. ಭಾವ-ಲಯ ಬದ್ದವಾದ ಭಾಷೆಯಲ್ಲಿ ಮೈವೆತ್ತ ರಸಕಾವ್ಯಗಳು. ಉತ್ತಮ ಗಮಕಿಗಳು ಕನ್ನಡ ಕಾವ್ಯಗಳನ್ನು ಓದಿದರೆ ವಾಣಿಯ ವೈಖರಿಯೇ ಭಾವದ ಮಹಿಮೆಯನ್ನು ಪದಗಳ ಅರ್ಥವನ್ನು ಎಲ್ಲರಿಗು ತಿಳಿಸಿಬಿಡುವುದು."
ಗಮಕ ಮತ್ತು ಗಮಕಿಗಳ ಕುರಿತಾದ ತಜ್ಞರ ಮಾತುಗಳನ್ನು ಒಮ್ಮೆ ಗಮನಿಸೋಣ .
- ಡಾ|| ಎಂ. ಚಿದಾನಂದಮೂರ್ತಿ : "ಗಮಕಿಯು ಕಾವ್ಯಕ್ಕೂ ಮತ್ತು ಸಹೃದಯರಿಗೂ ಮಧ್ಯವರ್ತಿಯಾಗಿರುವನು. ಸಮಾಜದಲ್ಲಿ ಗಮಕಿಗೆ ಕವಿಗಿರುವಷ್ಟು ಪ್ರಮುಖ ಸ್ಥಾನವಿರದಿದ್ದರೂ ಕವಿಯ ನಂತರದ ಪ್ರಮುಖ ಸ್ಥಾನವು ಆತನಿಗೆ ಮೀಸಲು .
- ಪ್ರೊ. ಜಿ. ವೆಂಕಟಸುಬ್ಬಯ್ಯ : "ಒಬ್ಬ ಕವಿಯ ಕಾವ್ಯವನ್ನು ಗಮಕಿಯು ಎಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾನೆಂಬುದು ಅವನ ವಾಚನದಲ್ಲಿ ವ್ಯಕ್ತವಾಗುತ್ತದೆ. ಕವಿಯ ಅರ್ಥಕ್ಕೆ ಎಷ್ಟೆಷ್ಟು ಹತ್ತಿರ ಗಮಕಿ ಸುಳಿಯಬಲ್ಲನೋ ಅಷ್ಟಷ್ಟು ಅವನ ಗಮಕವು ಸಾರ್ಥಕವಾಗುತ್ತದೆ."
- ವಿ.|| ಎಂ.ವಿ. ಸೀತಾರಾಮಯ್ಯ : "ಛಂದೋಲಯ, ಅರ್ಥಯತಿ, ಶಬ್ದಾರ್ಥ ಗುಣ ಇವುಗಳ ಸಮನ್ವಯ ಸಿದ್ಧಿಯಿಂದ ಕೂಡಿದ ಕಾವ್ಯದ ವಾಚಿಕ ನಿರೂಪಣೆಯೇ ಗಮಕ. ಈ ಗಮಕಕ್ಕೆ ಸಂಗೀತ ರಾಗಗಳ ಬಳಕೆ ಪರಿಣಾಮಕಾರಿ ಸಾಧನವಾದರೂ ಗಮಕದಲ್ಲಿ ಶಬ್ಧೋಚ್ಚಾರಣಾ ಪ್ರಕ್ರಿಯೆಗೆ ಪ್ರಾಮುಖ್ಯ."
- ವಿ.|| ರಾ.ನರಸಿಂಹಾಚಾರ್ಯ : "ಗಮಕಿಗಿರಬೇಕಾದ ಮುಖ್ಯ ಲಕ್ಷಣಗಳು ರಾಗ-ಸಾಹಿತ್ಯ-ಭಾವ ಈ ಮೂರೂ ಕಲೆಗಳಲ್ಲಿಯೂ ಸಮಾನತೆಯನ್ನು ಸಾಧಿಸಿದವನೇ ಉತ್ತಮ ಗಮಕಿಯಾಗಬಲ್ಲನು."
ಗಮಕ ಕಲೆಯಿಂದಾಗುವ ಪ್ರಯೋಜನಗಳು :
ಕಾವ್ಯಗಳು ವ್ಯಕ್ತಿಯನ್ನು ಸುವಿಚಾರಿಯನ್ನಾಗಿ ಮಾಡುತ್ತದೆ. ಸದಾಲೋಚನೆಗಳಿಗೆ ತೊಡಗಿಸುತ್ತದೆ. ಸತ್ಕಾರ್ಯಗಳಲ್ಲಿ ಪ್ರವೃತ್ತಿಯು, ಅಸತ್ಕಾರ್ಯಗಳಲ್ಲಿ ನಿವೃತ್ತಿಯೂ ಉಂಟಾಗುವಂತೆ ಮಾಡುವುದು ಕಾವ್ಯದ ಪರಮ ಪ್ರಯೋಜನ. ಕುಮಾರವ್ಯಾಸ ಹೇಳುವಂತೆ ವೇದ ಪಾರಾಯಣದ ಫಲ, ಗಂಗಾದಿ ತೀರ್ಥ ಸ್ನಾನ ಫಲ, ತಪಸ್ಸಿನ ಫಲ, ಕನ್ಯಾದಾನ ಫಲ, ಯಾಗಗಳ ಫಲಗಳ ಬಗ್ಗೆ ನಮಗೆ ಸ್ಪಷ್ಟತೆಯಿಲ್ಲವಾದರೂ ಒಂದಂತೂ ನಿಜ. ಕಾವ್ಯಗಳ ಅಧ್ಯಯನ, ಆಸ್ವಾದನೆ ಮಾಡಿರುವ ವ್ಯಕ್ತಿಗಳ ನಡವಳಿಕೆಗಳು ಅದನ್ನು ಮಾಡದವರ ನಡೆ ನುಡಿಗಳಿಗಿಂತ ಮೇಲ್ಮಟ್ಟದಲ್ಲಿರುತ್ತವೆ. ಸಾಂದರ್ಭಿಕ ಜಾಣ್ಮೆ, ಪ್ರತ್ಯುತ್ಪನ್ನಮತಿ, ಸಮುಚಿತ ಉದಾಹರಣೆಗಳು ಆದರ್ಶಗಳ ಪರಿಕಲ್ಪನೆ ಇವೆಲ್ಲವುಗಳ ಮಿಳಿತದಿಂದ ಕಾವ್ಯಗಳು ವ್ಯಕ್ತಿಗಳನ್ನು ಸುಸಂಸ್ಕೃತರನ್ನಾಗಿಸುವ ಸಾಧನ. ಬೌಧ್ಧಿಕತೆಗೆ ಒರೆಗಲ್ಲು. ಇಂದಿನ ಸಮಾಜದ ಅಗತ್ಯ ಇದೇ ಆಗಿದೆ. ಎಲ್ಲೆಡೆ ಬ್ರಷ್ಟಾಚಾರ, ಅಪ್ರಾಮಾಣಿಕತೆ, ಗುಂಡಾಗಿರಿ, ಕೃತಘ್ನತೆ, ವಚನ ಬ್ರಷ್ಟತೆ, ಸ್ವಜನ ಪಕ್ಷಪಾತಗಳು ತಾಂಡವವಾಡುತ್ತಿರುವ ಇಂದಿನ ದಿನಗಳಲ್ಲಿ ಒಂದು ಸುಂದರ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಗಮಕ ಕಲೆಯು ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುವ ಶಕ್ತಿಯನ್ನು ಹೊಂದಿದೆ. 'ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು' ಎಂಬ ಕವಿವಾಣಿ ಸುಳ್ಳಲ್ಲ. ಮೈಯಲ್ಲಿ ಮಿಂಚನ್ನು ಸುಳಿಸುವ ಶಕ್ತಿ ಕುಮಾರವ್ಯಾಸನೊಬ್ಬನಲ್ಲೇ ಅಲ್ಲ. ಕನ್ನಡದ ಅನೇಕ ಕಾವ್ಯಗಳಲ್ಲಿ ಅಂತಹುದೇ ಶಕ್ತಿ ಹುದುಗಿದೆ. ಕನ್ನಡದ ಜಾಣ ಜಾಣೆಯರದನ್ನು ಕಾಣಬೇಕಿದೆ.
- ಮನದ ದುಃಖ ತುಮುಲಗಳಿಂದ ಬಿಡುಗಡೆ ಪಡೆಯಲು, ನವೋತ್ಸಾಹವನ್ನು ಪಡೆದುಕೊಳ್ಳಲು ಜೀವನೋಲ್ಲಾಸ ಪ್ರೇರಣೆ ನೀಡಬಲ್ಲುದು.
- ಹಿಂದೆ ವರಪರೀಕ್ಷೆಗೆ ಜೈಮಿನಿ ಭಾರತವನ್ನು ಓದಿಸುತ್ತಿದ್ದರಂತೆ. ಒಂದೂ ತಪ್ಪಿಲ್ಲದಂತೆ ಜೈಮಿನಿ ಭಾರತದ ಪದ್ಯಗಳನ್ನು ಓದುವವನಿಗೆ ಜಾಣನೆಂಬ ಬೇರೆ ಪ್ರಮಾಣಪತ್ರದ ಅವಶ್ಯಕತೆ ಇರಲಿಲ್ಲವಂತೆ. ಅದು ಇಂದಿಗೂ ಸತ್ಯವೇ. ಇಂದು ಸರಳವಾದ ಕುಮಾರವ್ಯಾಸ ಭಾರತವನ್ನೇ ಓದುವುದು ಅನೇಕರಿಗೆ ಬಲು ಕಷ್ಟ.
- ಗಮಕ ವಾಚನವು ಸುತ್ತಲ ಪರಿಸರದ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡುತ್ತದೆ.
- ವಿವಿಧ ಕಾವ್ಯಗಳನ್ನು ಛಂದಸ್ಸುಗಳನ್ನು ಬಲ್ಲ ಗಮಕಿಯು ಸುತ್ತಲಿನ ಸಮಾಜದ ಗೌರವಾದರಗಳಿಗೆ ಪಾತ್ರನಾಗುತ್ತಾನೆ. ಸ್ವಯಂ ರಚನಾ ಸಾಮರ್ಥ್ಯವುಳ್ಳವರು ತಮ್ಮ ಕವಿತಾ ಶಕ್ತಿಯಿಂದ ಬದುಕಿದ್ದಾಗ ರಾಜ ಮರ್ಯಾದೆಯಲ್ಲದೆ ಮುಂದೆ ಅಮರಸ್ಥಾನವನ್ನು ಗಳಿಸುತ್ತಾರೆ.
- ಬಾಲ್ಯದಲ್ಲಿ ಕಾವ್ಯಗಳ ಪ್ರೀತಿ, ಅರಿವು ಬೆಳೆಸಿಕೊಂಡವರು ಮುಂದೆ ಕವಿ, ಸಾಹಿತಿ, ವಾಗ್ಮಿ ಮುಂತಾಗಿ ಸಾರಸ್ವತ ಲೋಕದಲ್ಲಿ ವಿಹರಿಸುತ್ತಾರೆ. ವಿಶಿಷ್ಟ ವರ್ಚಸ್ಸಿಗೆ ಇದು ಕಾರಣವಾಗಬಲ್ಲುದು.
- ಮಹಾಕವಿಗಳ ಮಹಾಕಾವ್ಯಗಳ ಶ್ರವಣವು ಸುಂದರ ಜಗತ್ತನ್ನು ಕಾಣಿಸಬಲ್ಲುದು. 'ಸತ್ಯಂ ಶಿವಂ ಸುಂದರಂ' ಎಂಬಂತೆ ಜಗದ ನೈಜ ಸೌಂದರ್ಯಾನುಭೂತಿಯನ್ನು ಹೊಂದಲು ಸಾಧ್ಯವಾಗಬಹುದು.
- · ಮುಖ್ಯವಾಗಿ ಶಾಂತಿ, ದಯೆ, ವಿಚಾರಪರತೆ, ಉದಾರತೆ, ಗಳಂತಹ ಉನ್ನತ ಮೌಲ್ಯಗಳ ಅರಿವು ಬರುವುದಲ್ಲದೆ ತನ್ನ ವೈಯಕ್ತಿಕ, ಕೌಟು0ಭಿಕ, ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಕರ್ತವ್ಯದ ಅರಿವು ಮೂಡುತ್ತದೆ.
ಇದು ಸ್ಪರ್ಧಾಯುಗ. ಎಲ್ಲ ರಂಗಗಳಲ್ಲಿ ಪೈಪೋಟಿಯಿದೆ. ಕಲಾಕ್ಷೇತ್ರವು ಇದಕ್ಕೆ ಹೊರತಲ್ಲ. ವಿವಿಧ ಕಲೆಗಳ ನಡುವಿನ ಪೈಪೋಟಿ ಒಂದೆಡೆಯಾದರೆ ದೂರದರ್ಶನದಂತಹ ಪ್ರಭಾವೀ ಮಾಧ್ಯಮದ ಜತೆ ಸೆಣಸಾಡುವ ಅನಿವಾರ್ಯತೆ ಇನ್ನೊಂದು ಕಡೆ. ಇವೆಲ್ಲದರ ನಡುವೆಯೂ ಗಮಕ ಕಲೆಯೆಡೆಗೆ ಅಭಿಮಾನಿಗಳನ್ನು ಗೆಲ್ಲಬೇಕಾದರೆ ಗಮಕಿಗಳು ವ್ಯಾಖ್ಯಾನಕಾರರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಪರಿಣತಿಯನ್ನು ಪಡೆದಿರಬೇಕಾಗುತ್ತದೆ. ಸಿದ್ಧತೆಯಿಲ್ಲದೆ, ಸಮರ್ಪಕವಲ್ಲದೆ ಕಾರ್ಯಕ್ರಮಗಳನ್ನು ನೀಡುವ ಗಮಕಿಗಳು ವ್ಯಾಖ್ಯಾನಕಾರರು ತಾವು ಪ್ರಸ್ತುತ ಪಡಿಸಿದ ಕಾರ್ಯಕ್ರಮದ ಯಶಸ್ಸನ್ನು ಮಾತ್ರವಲ್ಲದೆ ಗಮಕ ಕಲೆಯ ಜನಪ್ರೀಯತೆಯನ್ನು ಫಣಕ್ಕೊಡ್ಡುತ್ತಾರೆ. ವಿದ್ವಾಂಸರುಗಳು ಗಮಕ ಶಬ್ಧದ ಅರ್ಥವನ್ನು ವಿವೇಚಿಸಿ ಪುಷ್ಟೀಕರಿಸಿ ಹೇಳುವ ವಿವರಣೆಯಂತೆ "ಗಮಕಿಗಳು ಭಾವ ಸೂಚಕರಾಗಿದ್ದರು. ಈ ಭಾವಸೂಚನೆಗೆ ಅವರು ಕೈಗೊಳ್ಳುತ್ತಿದ್ದ ಸಾಧನಗಳು ಕೆಲವು ೧) ವ್ಯಕ್ತವರ್ಣೋಚ್ಚಾರಣೆ ೨) ಸುಶ್ರಾವ್ಯತೆ ೩) ಪದವಿಭಾಗ ನಿರ್ಧಾರ ೪) ಛಂದೋಲಯ ೫) ಉಚಿತ ಸಂಗೀತ
ಇವು ಒಂದೊಂದು ಕವಿಯ ಭಾವವನ್ನು ಸ್ಪಷ್ಟಪಡಿಸುವಲ್ಲಿ ಶಕ್ಯವಾಗಿರುವಾಗ ಇವೆಲ್ಲವೂ ಸಮತಾನದಲ್ಲಿ ಸೇರಿದರೆ ಸೃಷ್ಟಿಯಾಗುವ ರಸ ವೈವಿಧ್ಯವನ್ನು ಯಾರುತಾನೆ ಮೆಚ್ಚಲಾರರು ?
( ಮುಂದುವರಿಯುವುದು )
Comments
ಉ: ಗಮಕ ಕಲೆಯ ಪ್ರಸ್ತುತತೆ ( ಭಾಗ -೧ ) ...
In reply to ಉ: ಗಮಕ ಕಲೆಯ ಪ್ರಸ್ತುತತೆ ( ಭಾಗ -೧ ) ... by raghumuliya
ಉ: ಗಮಕ ಕಲೆಯ ಪ್ರಸ್ತುತತೆ ( ಭಾಗ -೧ ) ...
ಉ: ಗಮಕ ಕಲೆಯ ಪ್ರಸ್ತುತತೆ ( ಭಾಗ -೧ ) ...
In reply to ಉ: ಗಮಕ ಕಲೆಯ ಪ್ರಸ್ತುತತೆ ( ಭಾಗ -೧ ) ... by RAMAMOHANA
ಉ: ಗಮಕ ಕಲೆಯ ಪ್ರಸ್ತುತತೆ ( ಭಾಗ -೧ ) ...
ಉ: ಗಮಕ ಕಲೆಯ ಪ್ರಸ್ತುತತೆ ( ಭಾಗ -೧ ) ...
In reply to ಉ: ಗಮಕ ಕಲೆಯ ಪ್ರಸ್ತುತತೆ ( ಭಾಗ -೧ ) ... by RAMAMOHANA
ಉ: ಗಮಕ ಕಲೆಯ ಪ್ರಸ್ತುತತೆ ( ಭಾಗ -೧ ) ...