ಗೀತಾಮೃತ - 41

ಗೀತಾಮೃತ - 41

*ಅಧ್ಯಾಯ ೧೧*

      *ಕಿರೀಟಿನಂ ಗದಿನಂ ಚಕ್ರಿಣಂ  ಚ  ತೇಜೋರಾಶಿಂ ಸರ್ವತೋದೀಪ್ತಿಮಂತಮ್/*

*ಪಶ್ಯಾಮಿ ತ್ವಾಂ ದುರ್ನಿರೀಜ್ಷ್ಯಂ ಸಮಂತಾದ್ವೀಪ್ತಾನಲಾರ್ಕದ್ಯುತಿಪಪ್ರಮೇಯಮ್//೧೭//*

ಮುಕುಟದಿಂದ ಅಲಂಕೃತನಾಗಿ ಗದಾಧಾರಿಯಾಗಿ ಮತ್ತು ಚಕ್ರಪಾಣಿಯಾಗಿ ಹಾಗೆಯೇ ಎಲ್ಲ ಕಡೆಗಳಿಂದ ಪ್ರಕಾಶಮಾನವಾದ ತೇಜ:ಪುಂಜದಂತೆಯೂ , ಪ್ರಜ್ವಲಿತ ಅಗ್ನಿ ಮತ್ತು ಸೂರ್ಯನ ಸದೃಶಜ್ಯೋತಿರ್ಯುಕ್ತನೂ, ಕಷ್ಟದಿಂದ ನೋಡಲ್ಪಡಲು ಯೋಗ್ಯನಾದ ಮತ್ತು ಎಲ್ಲ ಕಡೆಗಳಿಂದ ಅಪ್ರಮೇಯ ಸ್ವರೂಪಿಯಾದ ನಿನ್ನನ್ನು ನಾನು ನೋಡುತ್ತೇನೆ.

      *ತ್ವಮಕ್ಷರಂ ಪರಮಂ ವೇದಿತವ್ಯಂ ತ್ವಮಸ್ಯ ವಿಶ್ವಸ್ಯ ಪರಂ ವಿಧಾನಮ್/*

*ತ್ವಮವ್ಯಮ್ ಶಾಶ್ವತಧರ್ಮಗೋಪ್ತಾ ಸನಾತನಸ್ತ್ವಂ  ಪುರುಷೋ ಮತೋ ಮೇ//೧೮//*

     ನೀನೇ ತಿಳಿಯಲು ಯೋಗ್ಯನಾದ ಪರಮ ಅಕ್ಷರನು ಅರ್ಥಾತ್ ಪರಬ್ರಹ್ಮ ಪರಮಾತ್ಮನಾಗಿದ್ದೀಯೆ.ನೀನೇ ಈ ಜಗತ್ತಿನ ಪರಮ ಆಶ್ರಯನಾಗಿದ್ದೀಯೆ.ನೀನೇ ಅನಾದಿಯಾದ ಧರ್ಮದ ರಕ್ಷಕನಾಗಿದ್ದೀಯೆ ಮತ್ತು ನೀನೇ ಅವಿನಾಶಿ ಮತ್ತು ಸನಾತನ ಪುರುಷನಾಗಿದ್ದೀಯೆ ಹೀಗೆಂದು ನನ್ನ ಅಭಿಪ್ರಾಯವಾಗಿದೆ.

***

*ಅನಾದಿಮಧ್ಯಾಂತಮನಂತವೀರ್ಯ ಮನಂತಬಾಹುಂ ಶಶಿಸೂರ್ಯನೇತ್ರಮ್/*

*ಪಶ್ಯಾಮಿ ತ್ವಾಂ ದೀಪ್ತಹುತಾಶವಕ್ರ್ತಂ ಸ್ವತೇಜಸಾ ವಿಶ್ವಮಿದಂ ತಪನ್ತಮ್//೧೯//*

    ನಿನ್ನನ್ನು ಆದಿ,ಅಂತ್ಯ ಮತ್ತು ಮಧ್ಯದಿಂದ ರಹಿತನಾಗಿ, ಅನಂತ ಸಾಮರ್ಥ್ಯ ದಿಂದ ಕೂಡಿದವನಾಗಿ,ಅನಂತ ಬಾಹುಗಳನ್ನು ಹೊಂದಿದವನಾಗಿ,ಚಂದ್ರ ಸೂರ್ಯರೂಪವಾದ ನೇತ್ರಗಳುಳ್ಳವಾಗಿ, ಪ್ರಜ್ವಲಿತ ಅಗ್ನಿರೂಪೀ ಮುಖವುಳ್ಳವನಾಗಿ ಮತ್ತು ನಿನ್ನ ತೇಜಸ್ಸಿನಿಂದ ಈ ಜಗತ್ತನ್ನು ಬೆಳಗುವವನಾಗಿ ನಾನು ನೋಡುತ್ತೇನೆ.

    *ದ್ಯಾವಾಪೃಥಿವ್ಯೋರಿದಮಂತರಂ ಹಿ ವ್ಯಾಪ್ತಂ ತ್ವಯೈಕೇನ ವಿಶಶ್ಚ ಸರ್ವಾ:/*

*ದೃಷ್ಟ್ವಾದ್ಭುತಂ  ರೂಪಮುಗ್ರಂ ತವೇದಂ ಲೋಕತ್ರಯಂ ಪ್ರವ್ಯಥಿತಂ ಮಹಾತ್ಮನ್//೨೦//*

       ಹೇ ಮಹಾತ್ಮನೇ! ಈ ಸ್ವರ್ಗ ಮತ್ತು ಪೃಥ್ವಿಯ ನಡುವಿನ ಸಂಪೂರ್ಣ ಆಕಾಶ ಹಾಗೂ ಎಲ್ಲಾ ದಿಕ್ಕುಗಳೂ ನಿನ್ನೊಬ್ಬನಿಂದಲೇ ಪರಿಪೂರ್ಣವಾಗಿವೆ; ಹಾಗೂ ನಿನ್ನ ಈ ಅಲೌಕಿಕವಾದ ಮತ್ತು ಭಯಂಕರ ವಾದ ರೂಪವನ್ನು ನೋಡಿ ಮೂರೂ  ಲೋಕಗಳು ಅತಿಯಾದ ಭಯದಿಂದ  ನಡುಗುತ್ತಿವೆ.

***

 *ರೂಪಂ ಮಹತ್ತೇ ಬಹುವಕ್ತ್ರನೇತ್ರಂ ಮಹಾಬಾಹೋ ಬಹುಬಾಹೂರುಪಾದಮ್/*

*ಬಹೂದರಂ ಬಹುದಂಷ್ಟ್ರಾಕರಾಲಂ ದೃಷ್ಟ್ವಾಲೋಕಾ: ಪ್ರವ್ಯಥಿತಾಸ್ತಥಾಹಮ್//೨೩//*

    ಹೇ ಮಹಾಬಾಹುವೇ! ನಿನ್ನ ಅನೇಕ ಮುಖಗಳು ಮತ್ತು ಬಹುನೇತ್ರಗಳುಳ್ಳ ,ಅನೇಕ ಬಾಹುಗಳೂ,ತೊಡೆಗಳು ಮತ್ತು ಕಾಲುಗಳುಳ್ಳ ,ಅನೇಕ ಉದರಗಳುಳ್ಳ ಮತ್ತು ಹಲವು ಕೋರೆದಾಡೆಗಳ ಕಾರಣದಿಂದ ಅತ್ಯಂತ ವಿಕರಾಳವಾದ, ಮಹತ್ತಾದ ರೂಪವನ್ನು ನೋಡಿ ಎಲ್ಲ ಜನರು ವ್ಯಾಕುಲರಾಗುತ್ತಿದ್ದಾರೆ ಹಾಗೂ ನಾನೂ ಕೂಡ ವ್ಯಾಕುಲನಾಗುತ್ತಿದ್ದೇನೆ.

       *ನಭ:ಸ್ಪೈಶಂ ದೀಪ್ತಮನೇಕವರ್ಣಂ ವ್ಯಾತ್ತಾನನಂ ದೀಪ್ತವಿಶಾಲನೇತ್ರಮ್/*

*ದೃಷ್ಟ್ವಾ ಹಿ ತ್ವಾಂ ಪ್ರವ್ಯಥಿತಾಂತರಾತ್ಮಾ ಧೃತಿಂ ನ ವಂದಾಮಿ ಶಮಂ ಚ ವಿಷ್ಣೋ//೨೪//*     ಏಕೆಂದರೆ ಹೇ ವಿಷ್ಣುವೇ! ಆಕಾಶವನ್ನು ಸ್ಪರ್ಶಿಸುವ ,ದೇದೀಪ್ಯಮಾನವಾದ ಅನೇಕ ಬಣ್ಣಗಳಿಂದ ಕೂಡಿದ ಹಾಗೂ ತೆರೆದಿರುವ ಮುಖ ಮತ್ತು ಪ್ರಕಾಶಮಾನ ವಿಶಾಲವಾದ ನೇತ್ರಗಳಿಂದ ಯುಕ್ತವಾದ  ನಿನ್ನನ್ನು ನೋಡಿ,ಭಯಭೀತವಾದ ಅಂತ:ಕರಣವುಳ್ಳವನಾದ ನಾನು ಧೈರ್ಯ ಮತ್ತು ಶಾಂತಿಯನ್ನು ಪಡೆಯುವುದಿಲ್ಲ.

***

*ದಂಷ್ಟ್ರಾಕರಾಲಾನಿ ಚ ತೇ ಮುಖಾನಿ  ದೃಷ್ಟೈವ ಕಾಲಾನಲಸನ್ನಿಭಾನಿ /*

*ದಿಶೋ ನ ಜಾನೇ ನ ಲಭೇ ಚ ಶರ್ಮ ಪ್ರಸೀದ ದೇವೇಶ ಜಗನ್ನಿವಾಸ //೨೫//*

    ಕೋರೆದಾಡೆಗಳ ಕಾರಣದಿಂದ ವಿಕರಾಳವಾದ,ಪ್ರಳಯ ಕಾಲದ ಅಗ್ನಿಗೆ ಸಮಾನವಾಗಿ ಪ್ರಜ್ವಲಿತವಾದ ನಿನ್ನ ಮುಖಗಳನ್ನು ನೋಡಿ ನಾನು ದಿಕ್ಕುಗಾಣದವನಾಗಿದ್ದೇನೆ ಮತ್ತು ನೆಮ್ಮದಿಯನ್ನೂ ಪಡೆಯದವನಾಗಿದ್ದೇನೆ.ಆದ್ದರಿಂದ ಹೇ ದೇವೇಶನೇ! ಹೇ ಜಗನ್ನಿವಾಸನೇ ! ನೀನು ಪ್ರಸನ್ನನಾಗು.

      *ಅಮೀ ಚ ತ್ವಾಂ ದೃತರಾಷ್ಟ್ರಸ್ಯ ಪುತ್ರಾ: ಸರ್ವೇ ಸಹೈವಾವನಿಪಾಲಸಂಘೈ/*

*ಭೀಷ್ಮೋ ದ್ರೋಣ: ಸೂತಪುತ್ರಸ್ತಥಾಸೌ ಸಹಾಸ್ಮದೀಯೈರಪಿ ಯೋಧಮುಖ್ಯೈ//೨೬//*

  ಈ ಎಲ್ಲಾ ದೃತರಾಷ್ಟ್ರನ ಪುತ್ರರೂ,ರಾಜರುಗಳ ಸಮುದಾಯ ಸಹಿತರಾಗಿ ನಿನ್ನೊಳಗೆ ಪ್ರವೇಶಿಸುತ್ತಿದ್ದಾರೆ ಮತ್ತು ಭೀಷ್ಮ ಪಿತಾಮಹರು,ದ್ರೋಣಾಚಾರ್ಯ ರು ಹಾಗೂ ಆ ಕರ್ಣ ಮತ್ತು ನಮ್ಮ ಪಕ್ಷದವರೂ ಸಹ ಪ್ರಧಾನಯೋಧರ ಸಹಿತ ಕಾಣುತ್ತಿದ್ದಾರೆ.

***

(ಸಾರ ಸಂಗ್ರಹ) - ವಿಜಯಾ ಶೆಟ್ಟಿ ಸಾಲೆತ್ತೂರು

ಚಿತ್ರ: ಇಂಟರ್ನೆಟ್ ತಾಣ ಕೃಪೆ