ಗುಕೇಶ್ ಗೆಲುವು ಭಾರತದ ಪಾಲಿಗೆ ಸುವರ್ಣ ವರ್ಷ

ಭಾರತದ ಗ್ರ್ಯಾಂಡ್ ಮಾಸ್ಟರ್ ಗುಕೇಶ್ ದೊಮ್ಮರಾಜು ಅವರು ೧೮ ವರ್ಷ ವಯಸ್ಸಿನಲ್ಲೇ ವಿಶ್ವ ಚೆಸ್ ಚಾಂಪಿಯನ್ ಪಟ್ಟಕ್ಕೆ ಏರಿ ಇತಿಹಾಸ ಸೃಷ್ಟಿಸಿದ್ದಾರೆ. ಅತಿ ಕಿರಿಯ ವಿಶ್ವ ಚಾಂಪಿಯನ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಕ್ರಿಕೆಟ್ ಜನಪ್ರಿಯವಾಗಿರುವ ದೇಶದಲ್ಲಿ ಚೆಸ್ ಕ್ರಾಂತಿಗೆ ನಾಂದಿ ಹಾಡಿದ ವಿಶ್ವನಾಥನ್ ಆನಂದ್ ಈ ಹಿಂದೆ ಐದು ಬಾರಿ ವಿಶ್ವ ಚಾಂಪಿಯನ್ ಆಗಿದ್ದರು. ಈಗ ಗುಕೇಶ್, ವಿಶ್ವ ಚಾಂಪಿಯನ್ ಆದ ಭಾರತದ ಎರಡನೇ ಆಟಗಾರ ಎನಿಸಿದ್ದಾರೆ. ಚೀನಾದ ಡಿಂಗ್ ಲಿರೆನ್ ವಿರುದ್ಧ ವಿಶ್ವ ಚಾಂಪಿಯನ್ ಶಿಪ್ ನ ೧೪ ಪಂದ್ಯಗಳ ಫೈನಲ್ ಅನ್ನು ೭.೫ - ೬.೫ ರಿಂದ ಗೆದ್ದು ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದಾರೆ.
ಗುಕೇಶ್ ಸಾಕಷ್ಟು ಪೂರ್ವ ತಯಾರಿಯೊಂದಿಗೆ ಆಟವಾಡಿದರು. ಹೀಗಾಗಿ ಅದ್ಭುತ ಆಟದ ಮೂಲಕ ಗೆಲುವು ತಮ್ಮದಾಗಿಸಿಕೊಂಡರು. ಅವರ ವಿಜಯದ ಕಿರೀಟವು ಭಾರತದ ಪಾಲಿಗೆ ಸುವರ್ಣ ವರ್ಷ ಎಂದೇ ಹೇಳಬಹುದು. ವಿಶ್ವ ಚಾಂಪಿಯನ್ ಶಿಪ್ ಆಡುವುದು ಪ್ರತಿಯೊಬ್ಬ ಚೆಸ್ ಆಟಗಾರನ ಕನಸು. ಆದರೆ ದೀರ್ಘ ಅವಧಿಯ ಫೈನಲ್ ಆಟ ಆಡಲು ಸಾಕಷ್ಟು ಸಿದ್ಧತೆಯ ಜೊತೆಗೆ ಗಟ್ಟಿ ಮನೋಬಲ ಬೇಕು. ಗುಕೇಶ್ ಅವರ ಕಠಿಣ ಪರಿಶ್ರಮ, ಕಂಡಿದ್ದ ಕನಸು, ಅದಕ್ಕೆ ನೀರೆರೆಯಲು ಪೋಷಕರ ತ್ಯಾಗ ಮತ್ತು ಫೈನಲ್ ನಲ್ಲಿ ಅವರ ತಂಡದ ಸಿದ್ಧತೆ ಎಲ್ಲವೂ ಫಲ ನೀಡಿದೆ. ಆಟದಲ್ಲಿ ಅಪೂರ್ವ ಏಕಾಗ್ರತೆ, ಬೋರ್ಡ್ ನಲ್ಲಿ ಪ್ರತಿ ನಡೆಗೆ ಮೊದಲು ಆಳವಾದ ಲೆಕ್ಕಾಚಾರ, ಪಂದ್ಯ ಡ್ರಾ ಸ್ಥಿತಿಯಲ್ಲಿದ್ದರೂ ಕೊನೆಯ ಹಂತದವರೆಗೆಗೂ ಅವಕಾಶ ಅರಸುವ ಸಕಾರಾತ್ಮಕ ಮನೋಭಾವ - ಇವೆಲ್ಲಾ ಗುಣಗಳು ಅವರಿಗೆ ಅನುಭವಿ ಎದುರಾಳಿಯ ವಿರುದ್ಧ ಸೆಣಸಾಡುವಲ್ಲಿ ಧೈರ್ಯ ಮೂಡಿಸಿವೆ. ಗುಕೇಶ್ ಅವರ ಈಗಿನ ಸಾಧನೆಯು ದೇಶದಲ್ಲಿ ಚೆಸ್ ಬೆಳವಣಿಗೆಗೆ ಇನ್ನಷ್ಟು ಶಕ್ತಿ ತುಂಬುವುದರಲ್ಲಿ ಅನುಮಾನವಿಲ್ಲ. ಭಾರತ ಎಂಬುದು ಅದ್ಭುತ ಪ್ರತಿಭೆಗಳಿರುವ ರಾಷ್ಟ್ರ. ಇಲ್ಲಿ ಚೆಸ್ ಮಾತ್ರವಲ್ಲ ಎಲ್ಲ ಕ್ಷೇತ್ರಗಳಲ್ಲೂ ಭವಿಷ್ಯ ಉಜ್ವಲವಾಗಿದೆ. ಹೊಸ ಸಾಧನೆಗಳು ಹಾಗೂ ದಾಖಲೆಗಳು ನಿರ್ಮಾಣವಾಗಬೇಕಿದೆ.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೧೪-೧೨-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ