ಗುರುವೆಂಬ ಅದ್ಭುತ ಶಕ್ತಿ

ಗುರುವೆಂಬ ಅದ್ಭುತ ಶಕ್ತಿ

ಅಜ್ಞಾನತಿಮಿರಾಂಧಸ್ಯ

ಜ್ಞಾನಾಂಜನ ಶಲಾಕಯಾ

ಚಕ್ಷುರುನ್ಮೀಲಿತಂ ಯೇನ ತಸ್ಮೈ

ಶ್ರೀ ಗುರುವೇ ನಮ://

ಅಜ್ಞಾನವೆಂಬ ಕತ್ತಲೆಯಿಂದ ಕುರುಡಾದ ಈ ಜಗತ್ತನ್ನು ಜ್ಞಾನವೆಂಬ ದೀಪಜ್ವಾಲೆಯಿಂದ ತೆರೆಸಿದ,ಹೋಗಲಾಡಿಸಿದ ಗುರುವೆಂಬ ಅದ್ಭುತ ಶಕ್ತಿಗೆ ಮಹಾ ಚೇತನಕ್ಕೆ ನಮೋ ನಮಃ ದಿನವೂ ಶಿಕ್ಷಕರ ದಿನವೇ. ಆದರೆ ಸಪ್ಟಂಬರ ೫ ರಂದು ವಿಶೇಷವಾಗಿ ಆಚರಿಸುವುದಕ್ಕೆ ಮಹತ್ವವಿದೆ.ಭಾರತದ ಮೊದಲ ಉಪರಾಷ್ಟ್ರಪತಿಯಾಗಿ, ಎರಡನೇ ರಾಷ್ಟ್ರಪತಿಯಾಗಿ ಉನ್ನತ ಹುದ್ದೆಯನ್ನು ಅಲಂಕರಿಸಿದ, ಬಹಳಷ್ಟು ವರ್ಷಗಳ ಕಾಲ ಅಧ್ಯಾಪಕರಾಗಿ ದುಡಿದ ಹಿರಿಯ ಚೇತನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬವನ್ನೇ ಅವರು ಶಿಕ್ಷಕರ ಮೇಲಿಟ್ಟಿರುವ ನಂಬಿಕೆ, ವಿಶ್ವಾಸ, ಅವರ ಕಷ್ಟಕಾರ್ಪಣ್ಯಗಳು, ಗುರುತರ ಹೊಣೆಗಾರಿಕೆಯನ್ನು ಅರಿತು “ರಾಷ್ಟ್ರೀಯ ಶಿಕ್ಷಕರ ದಿನ” ಆಚರಿಸಿರೆಂದು ಹೇಳಿದರು. ಎಂತಹ ಮಹಾನ್ ವ್ಯಕ್ತಿತ್ವಲ್ಲವೇ ಶ್ರೀಯುತರದು. ಅಳಿದ ಮೇಲೂ ನೆನೆಯುವುದೆಂದರೆ ಇದೇ ಅಲ್ಲವೇ? ಸ್ವಾರ್ಥದೆಡೆ ನಾವು ನಿಸ್ವಾರ್ಥವನ್ನು ಅಲ್ಲೊಂದು ಇಲ್ಲೊಂದು ಮಿಂಚುಹುಳದ ಬೆಳಕಿನಂತೆ ಕಾಣಬಹುದು.

ದೇಶದ ಎಲ್ಲಾ ಅಧ್ಯಾಪಕ ವೃಂದಕ್ಕೂ ಗೌರವ ಸಲ್ಲಿಸುವ ಸುದಿನ. ಎದೆಯ ಹಣತೆಯಲ್ಲಿ ಅಕ್ಷರ ಜ್ಯೋತಿ ಉರಿಸಿದ,ಅ ಜ್ಞಾನವನ್ನು ತೊಲಗಿಸಿದವ, ಸದೃಢ ಮನದಲ್ಲಿ ಸದೃಢ ಸಮಾಜ ನಿರ್ಮಾಣ ಮಾಡುವ,ಮಾಡಿದ ಕನಸುಗಾರ, ಬಾಳಿನೇಳಿಗೆಯೇ ಜೀವನದ ಪರಮಗುರಿಯೆಂದು ಸಾರಿದ, ಜೀವನಾನುಭವ, ಪರಿಸರ ಪ್ರಜ್ಞೆ ಮೂಡಿಸಿದವ, ರಾಷ್ಟ್ರನಿರ್ಮಾಣದಲ್ಲಿ ಮೊದಲ ಹೆಜ್ಜೆಯೂರಲು ಕಲಿಸಿದವ ವಿದ್ಯಾದಾನದ ಮೂಲಕ, ತಪ್ಪು-ಸರಿ ವ್ಯತ್ಯಾಸ ತಿಳಿಸಿದವ, ಜೀವನ ಶಿಕ್ಷಣ, ಸೋಲಿನಲ್ಲೂ ಬದುಕುವುದನ್ನು ಹೇಳಿಕೊಟ್ಟು ಪ್ರೋತ್ಸಾಹಿಸಿದ ಗುರುವೃಂದವ ಮರೆಯಲುಂಟೇ?

ಗುರುಬ್ರಹ್ಮ ಗುರುವಿಷ್ಣು

ಗುರು ದೇವೋ ಮಹೇಶ್ವರ:

ಗುರು ಸಾಕ್ಷಾತ್ ಪರಬ್ರಹ್ಮ

ತಸ್ಮೈ ಶ್ರೀ ಗರುವೇ ನಮ:

ಗುರುಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಸಹ.

ಡಾ//ಸರ್ವಪಲ್ಲಿ ರಾಧಾಕೃಷ್ಣನ್  ಅವರು ಶಿಕ್ಷಣದ ಬಗ್ಗೆ ದೇಶದ ಹಿತದೃಷ್ಟಿಗಾಗಿ ದುಡಿದ ದುಡಿತವನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ.ಶಿಕ್ಷಣಕ್ಕಾಗಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು,ನವನವೀನ ಯೋಚನೆಗಳು, ಯೋಜನೆಗಳಿಂದಾಗಿ ಶಿಕ್ಷಣ ತಜ್ಞ ಎನಿಸಿದರು.

ಶ್ರೀಯುತರು ಭಾರತದ ಶಿಕ್ಷಣ ಪದ್ಧತಿಗೆ ಒಂದು ಅರ್ಥಪೂರ್ಣವಾದ ಬೃಹತ್ ಚೌಕಟ್ಟನ್ನು ನಿರ್ಮಿಸಿಕೊಟ್ಟವರೆಂದರೆ ತಪ್ಪಾಗಲಾರದು.ದೇಶ ಕಂಡ ಮಹಾ ತತ್ವಜ್ಞಾನಿ. .ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಸಂಬಂಧವನ್ನು ಉನ್ನತೀಕರಿಸಿ ಮೇಲಸ್ತರಕ್ಕೆ ಒಯಿದವರು.ಆಂತರಿಕ ಕಲಹಗಳು ಏನೇ ಇರಲಿ,ಶಿಕ್ಷಣದ ದಾರಿಯಲಿ ಬೇಡ,ನಮ್ಮನಮ್ಮಲ್ಲೇ ಬಗೆಹರಿಸಿದರೊಳಿತೆಂದು ಆ ನಿಟ್ಟಿನಲ್ಲಿ ವ್ಯವಹರಿಸಿ ಯಶಸ್ವೀಯಾದವರು.

ಓರ್ವ ಶಿಕ್ಷಕ ಪುಸ್ತಕದ ಬದನೆಕಾಯಿಯಾಗದೆ,ಜೀವನಮೌಲ್ಯಗಳನ್ನು ಕಲಿಸುತ್ತಾನೆಂಬುದನ್ನು ನಾವು ಅರ್ಥ ಮಾಡಿಕೊಂಡರೆ ಗುರುವಿನ ಕಷ್ಟ ಅರ್ಥವಾಗಬಹುದು.ಮಗುವಿನ ಮನದಲ್ಲಿ ಮೌಲ್ಯಗಳನ್ನು ತುಂಬುವ ಕೆಲಸ ಶಿಕ್ಷಕರ ಬೋಧನೆಯ ಜೊತೆ ಈಗಆಗಬೇಕು.ಮಗುವಿನ ಕರ್ಣಗಳಲ್ಲಿ,ಮನದಲ್ಲಿ ಅದು ರಿಂಗಣಿಸುತ್ತಿರಬೇಕು.ತಾಯಿ ಮೊದಲ ಗುರು, ತಂದೆ ಎರಡನೇ ಗುರು, ಸಮಾಜ ಮೂರನೇ ಗುರು, ಆದರೆ ಶಾಲೆಯ ಅಧ್ಯಾಪಕರು ಸರ್ವತೋಮುಖ ಬೆಳವಣಿಗೆಗೆ ಸಹಕರಿಸುವ ಮಹಾನ್ ಗುರುಗಳು.ಆತ ಗೆಳೆಯ, ತಂದೆತಾಯಿ, ಸಮಾಜ, ಹಿತಚಿಂತಕ, ಮಾರ್ಗದರ್ಶಕ, ಮಾದರಿ ವ್ಯಕ್ತಿಯಾಗಿ ಮಗುವಿನ ಪಾಲಿಗಿರಬೇಕು.

ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡಿ ಯಶಸ್ವಿಯಾದವರು.ಸರ್ವ ಧರ್ಮಗಳ ಸಾರವನ್ನು ಓದಿ ಮನನಮಾಡಿಕೊಂಡವರು. ಮಹರ್ಷಿ ಅರವಿಂದರು, ಸ್ವಾಮಿ ವಿವೇಕಾನಂದರ, ರಾಮಕೃಷ್ಣ ಪರಮಹಂಸರ ತತ್ವಗಳಲ್ಲಿ ನಂಬಿಕೆಯಿಟ್ಟವರು.ಆದರ್ಶ ವ್ಯಕ್ತಿಗಳೇ ನಮಗೆ ಆದರ್ಶರಾಗಿದ್ದಾಗ ನಾವು ಬೆಳೆಯುವುದರ ಜೊತೆಗೆ ಇತರರನ್ನೂ ಬೆಳೆಸಬಹುದೆಂಬ ತತ್ವವನ್ನು ಅರಿತವರು ಶ್ರೀಯುತರು.

ಅವರ ಹುಟ್ಟಿದ ದಿನವಾದ ಇಂದು ಶಿಕ್ಷಕರ ದಿನಾಚರಣೆ ದೇಶಾದ್ಯಂತ ನಡೆಯುತ್ತಿದೆ. ಅವರೊಂದಿಗೆ ಕಲಿಸಿದ ಕಲಿಸುತ್ತಿರುವ ಸಮಸ್ತ ಗುರುವೃಂದದವರಿಗೂ ಗೌರವದ ಶುಭಾಶಯಗಳು.

-ರತ್ನಾ ಕೆ ಭಟ್,ತಲಂಜೇರಿ, ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ