ಗೆಲುವ ಕನ್ನಡ ನಾಡು
ಕವನ
ಉದಯವಾಗಿದೆ ನೋಡು ಚೆಲುವ ಕನ್ನಡ ನಾಡು
ಹುಯಿಲುಗೋಳರ ಮೆಚ್ಚಿನ ಕನಸಿನಾನಂದದ ಗೂಡು
ವಿಖ್ಯಾತವಾಗಿದೆ ನಮ್ಮ ಗೆಲುವ ಕನ್ನಡ ನಾಡು
ಬದುಕು ಒಲವಿನ ನಿಧಿಯು ಸಹಬಾಳ್ವೆಯ ಗೂಡು II ಪ II
ರಾಜರಾವೇಶದಿಂ ಆಳಿ ಬೆಳಸಿದ ನಾಡು
ರಾರಾಜಿಸುವ ಕನ್ನಂಬಾಡಿ ಕಟ್ಟೆಯ ನೋಡು
ಪಂಪ ರನ್ನ ಜನ್ನರ ಜಾಡು ಹಿಡಿದಿಹರ ಬೀಡು
ಜ್ಞಾನಪೀಠದ ದಿಗ್ಗಜರ ಸಾಹಿತ್ಯ ವೈಖರಿಯ ಗೂಡು II ೧ II
ವಿಶ್ವೇಶರಯ್ಯ ಯಾಜ್ಞವಲ್ಕ ಮಿತಾಕ್ಷರರು ಉತ್ತಿಹ ಬೀಡು
ಸಾಲುಮರದ ತಿಮ್ಮಕ್ಕನ ಕಾರುಣ್ಯದಿಂದುಳಿದಿಹ ಕಾಡು
ಕೃಷ್ಣೆ ತುಂಗೆ ಕಾವೇರಿ ಹರಿದುಣಿಸಿ ಬೆಳಸಿಹ ಫಲ ಬೀಡು
ವಿದ್ವತ್ಮಣಿಗಳ ಗಣಕಾಧಿಪತಿಗಳ ವಿಜ್ಞಾನಿಗಳ ಕಲೆವೀಡು II ೨ II
ಆಚಾರ್ಯರು ದಾಸರು ವಚನಕಾರರು ಜನಪದರುಗಳ ಘನ ಬೀಡು
ಶಾಂತತೆಯ ಕೂಟ ಕಾಂತಿಯುತ ನೋಟ ಮೈಗೂಡಿಹ ತಾಯ್ನಾಡು
ಕನ್ನಡದ ನಿಲುಮೆ ಜನರ ಒಲುಮೆ ಕಿರುಭಾರತವನಾಗಿಸಿದೆ ಈ ಸೂಡು
ಪ್ರಖ್ಯಾತವಾಗಲಿ ಓಜೆಯಿಂ ತೇಜದಿಂ ಶ್ರೀಗಂಧದ ಹೃದಯದ ನಾಡು II ೩ II
-ಡಾ. ಪ್ರಭಾಕರ್ ಬೆಳವಾಡಿ
(ಹುಯಿಲಗೋಳು ನಾರಾಯಣರಾಯರ ಸನ್ನಿಧಿಯಲ್ಲಿ)
ಚಿತ್ರ್
