ಘಾಚರ್ ಘೋಚರ್

ಘಾಚರ್ ಘೋಚರ್

ಪುಸ್ತಕದ ಲೇಖಕ/ಕವಿಯ ಹೆಸರು
ವಿವೇಕ ಶಾನಭಾಗ
ಪ್ರಕಾಶಕರು
ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ
ಪುಸ್ತಕದ ಬೆಲೆ
ರೂ.೧೫೫.೦೦, ಮುದ್ರಣ: ೨೦೨೨

ಸಮಕಾಲೀನ ಕನ್ನಡ ಲೇಖಕರಲ್ಲಿ ಪ್ರಸಿದ್ಧರಾಗಿರುವ ವಿವೇಕ ಶಾನಭಾಗ ಅವರು ಕಳೆದ ಕೆಲವು ವರ್ಷಗಳಲ್ಲಿ ರಚಿಸಿದ ೬ ಕಥೆಗಳು ‘ಘಾಚರ್ ಘೋಚರ್' ಕಥಾ ಸಂಕಲನದಲ್ಲಿ ಕೂಡಿವೆ. ಘಾಚರ್ ಘೋಚರ್, ನಿರ್ವಾಣ, ಕೋಳಿ ಕೇಳಿ ಮಸಾಲೆ, ರಿಸ್ಕ್ ತಗೊಂಡು, ಸುಧೀರನ ತಾಯಿ, ವಿಚಿತ್ರ ಕತೆ – ಇವು ಈ ಸಂಕಲನದಲ್ಲಿರುವ ವಿವೇಕರ ಕಥೆಗಳು.

ಈ ಪುಸ್ತಕದ ಮುನ್ನುಡಿ ‘ಒಂದೆರಡು ಮಾತು' ಇಲ್ಲಿ ವಿವೇಕರು ತಮ್ಮ ಅನಿಸಿಕೆಗಳನ್ನು ಬಿಚ್ಚಿಟ್ಟಿದ್ದಾರೆ. ಅವರ ಪ್ರಕಾರ “ಪ್ರಸ್ತುತ ಸಂಕಲನದ ಕತೆಗಳು ಕಳೆದ ಏಳು ವರ್ಷಗಳ ಅವಧಿಯಲ್ಲಿ ಬರೆದವು. ಇವುಗಳನ್ನು ಬರೆದಂತೆಲ್ಲ ಪ್ರಕಟನೆಯ ಮುನ್ನವೇ ಓದಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ಆತ್ಮೀಯರು ಹಲವರು. ಇವರ ವಿಮರ್ಶೆಯ ಓರೆಗಲ್ಲನ್ನು ನೆಚ್ಚಿ ನಾನು ಬರೆಯುತ್ತೇನೆ. ಈ ಕತೆಗಳು ಸಂಕಲನವಾಗಿ ಪ್ರಕಟವಾಗುತ್ತಿರುವ ಸಮಯದಲ್ಲಿ ಇವರೆಲ್ಲರನ್ನೂ ಮನಸಾರೆ ನೆನೆಯುತ್ತೇನೆ.

ಇಲ್ಲಿರುವ ‘ಘಾಚರ್ ಘೋಚರ್' ಎಂಬ ನೀಳ್ಗತೆಯು ಇತ್ತೀಚೆಗೆ  ಬರೆದುದು ಮತ್ತು ಅದೆಲ್ಲಿಯೂ ಪ್ರಕಟವಾಗಿಲ್ಲ. ಈ ಜಗತ್ತಿನ ಕೆಲವೇ ಕೆಲವು ಜನರಿಗೆ ಮಾತ್ರ ಗೊತ್ತಿರುವ ‘ಘಾಚರ್ ಘೋಚರ್' ಎಂಬ ಶಬ್ದಯುಗಳದ ಅರ್ಥವನ್ನು ತಿಳಿಯಲು ಇರುವ ಒಂದೇ ಮಾರ್ಗವೆಂದರೆ ಈ ಕತೆಯನ್ನು ಓದುವುದು" ಎಂದಿದ್ದಾರೆ.

ಪುಸ್ತಕದ ಬೆನ್ನುಡಿಯು ಈ ಸಂಕಲನದ ಎರಡು ಕತೆಗಳಿಂದ ಕೆಲವು ಸಾಲುಗಳನ್ನು ಎತ್ತಿಕೊಟ್ಟಿದೆ:

ಹಾಗೆ ನೋಡಿದರೆ ಅವತಾರವೆತ್ತಿ ಬಂದವರು ದೊಡ್ಡ ದೊಡ್ಡ ಮಾತುಗಳನ್ನು ಆಡುವುದೇ ಇಲ್ಲ. ಅವರ ಸಾಮಾನ್ಯ ಮಾತುಗಳಿಗೇ ದೊಡ್ಡ ದೊಡ್ಡ ಅರ್ಥಗಳನ್ನು ಪಾಮರರು ಗ್ರಹಿಸುವುದಲ್ಲವೆ? ಶಬ್ದಗಳ ಶಕ್ತಿ ಸ್ಫೋಟವಾಗೋದು ಅವು ಹೊಕ್ಕ ಮನಸ್ಸಿನಲ್ಲಿಯೇ ತಾನೇ? ಅಷ್ಟಕ್ಕೂ ದೇವರು ಯಾವ ರೂಪದಲ್ಲಿ ಬರುತ್ತಾನೆಂದು ಬಲ್ಲವರಾರು? (‘ಘಾಚರ್ ಘೋಚರ್’ ಕತೆಯಿಂದ)

ಬೇರೆ ಎಲ್ಲಿದ್ದರೂ ನಾವು ಮಾತಾಡುತ್ತಿರಲಿಲ್ಲ. ಒಬ್ಬರನ್ನೊಬ್ಬರು ನೋಡದ ಹಾಗೆ ಹೋಗಿಬಿಡುತ್ತಿದ್ದೆವು ಅಂತಲೂ ಅನಿಸುತ್ತದೆ. ಆ ಸಂಜೆ, ಆ ಹಸಿವು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಆ ಪರದೇಶ – ಇದೆಲ್ಲ ಇಲ್ಲದಿದ್ದರೆ ಈ ಭೆಟ್ಟಿ ಆಗುತ್ತಲೇ ಇರಲಿಲ್ಲ. ಸಂಯೋಗ ಅಂದರೆ ಹಾಗೇ. ಎಲ್ಲವೂ ಏಕತ್ರ ಸಂಭವಿಸಬೇಕು. (‘ನಿರ್ವಾಣ’ ಕತೆಯಿಂದ)

ಈ ಕಥಾ ಸಂಕಲನದ ಕುರಿತಾಗಿ ಹಿರಿಯ, ಖ್ಯಾತ ಸಾಹಿತಿಗಳು ಹೀಗೆ ಅಭಿಪ್ರಾಯ ಪಟ್ಟಿದ್ದಾರೆ.

ಕನ್ನಡದಲ್ಲಿ ಕಳೆದ ಹತ್ತು-ಹದಿನೈದು ವರ್ಷಗಳಲ್ಲಿ ಪ್ರಕಟವಾಗಿರುವ ಮಹತ್ವದ ಕಾದಂಬರಿಗಳಲ್ಲೊಂದು ಘಾಚರ್ ಘೋಚರ್. ಆಧುನಿಕ ಬೆಂಗಳೂರು ನಗರದ ಜೀವನವನ್ನು ಎತ್ತಿಕೊಂಡು ಇಷ್ಟೊಂದು ಸಂವೇದನಾಶೀಲವಾಗಿ, ಸೂಕ್ಷ್ಮವಾಗಿ, ಹೃದಯಂಗಮವಾಗಿ ವಿವೇಚಿಸುವ ಇನ್ನೊಂದು ಕಾದಂಬರಿ ನಮ್ಮಲ್ಲಿ ಬಂದಿಲ್ಲ. -ಗಿರೀಶ ಕಾರ್ನಾಡ

ಧ್ಯಾನಿಸಿ ಬರೆದ ಕತೆಯೊಂದು ಹೇಗೆ ಒಳನೋಟಗಳನ್ನೂ ಅನುಭವವನ್ನೂ ಒಂದಿಡೀ ತಲೆಮಾರಿನ ತಲ್ಲಣವನ್ನೂ ಹಿಡಿದಿಟ್ಟುಕೊಂಡಿರುತ್ತದೆ ಎಂಬುದು ಕುತೂಹಲಕಾರಿ. ಘಾಚರ್ ಘೋಚರ್ ಅಂಥದ್ದೊಂದು ಕತೆ. -ಜೋಗಿ

`ಘಾಚರ್ ಘೋಚರ್’ ಕಥೆಯಲ್ಲಿ ಕಥೆ ನಿಜವಾಗಿಯೂ ಮುಗಿದಿಲ್ಲ ಅಂತನ್ನಿಸುವುದು, ಆ ದಾರಿಗೆ ಇರಬಹುದಾದ ಹಲವು ಸಾಧ್ಯತೆಗಳ ಕಾರಣದಿಂದಾಗಿ. -ವೆಂಕಟ್ರಮಣ ಗೌಡ

ಕೇವಲ ಸಾಂಸಾರಿಕ ರಗಳೆ ಅಥವಾ ಗೋಳುಕರೆಯಾಗಬಹುದಾಗಿದ್ದ ಕಥನವೊಂದು ಮನುಷ್ಯ ಸ್ವಭಾವ ಮತ್ತು ವರ್ತನೆಗಳ ಹಿಂದಿನ ನಿಗೂಢತೆಗೆ ಹಿಡಿದ ಕನ್ನಡಿಯಾಗಿ ಬಿಡುತ್ತದೆ; ಗ್ರಹಿಕೆ ಮತ್ತು ಅಭಿವ್ಯಕ್ತಿಗಳ ಸಾಧ್ಯತೆ ಮತ್ತು ಕಷ್ಟಗಳ ಬಗೆಗಿನ ಧ್ಯಾನವಾಗಿ ಬಿಡುತ್ತದೆ. -ಟಿ.ಪಿ. ಅಶೋಕ

ಈ ಯುಗಳ ಪದ ನಮ್ಮ ಇಡೀ ಬದುಕೇ ಗೋಜಲಾಗಿರುವ ಕ್ರಮಕ್ಕೆ ಭಾವ ಪ್ರತಿಧ್ವನಿಯಂತೆ ಅನುರಣನಗೊಳ್ಳುತ್ತದೆ. -ಎಸ್. ಆರ್. ವಿಜಯಶಂಕರ

ಸುಮಾರು ೧೪೦ ಪುಟಗಳನ್ನು ಹೊಂದಿರುವ ಈ ಪುಸ್ತಕವನ್ನು ಲೇಖಕರಾದ ವಿವೇಕ ಶಾನಭಾಗ ಇವರು ತಮ್ಮ ಗೆಳೆಯರಾದ ಎಂ ಎಸ್ ಶ್ರೀರಾಮ್ ಮತ್ತು ಗೌರಿಯವರಿಗೆ ಪ್ರೀತಿ ಮತ್ತು ಸ್ನೇಹದ ನೆನಪಿಗಾಗಿ ಅರ್ಪಿಸಿದ್ದಾರೆ. ‘ಘಾಚರ್ ಘೋಚರ್’ ಕಥೆಯು ಆಂಗ್ಲಭಾಷೆಯಲ್ಲೂ ಪ್ರಕಟವಾಗಿದೆ, ಆದರೆ ಆಂಗ್ಲ ಭಾಷೆಯ ಅನುವಾದದಲ್ಲಿ ಈ ಕಥೆಯನ್ನು ಇನ್ನಷ್ಟು ವಿಸ್ತರಿಸಿ ಕಾದಂಬರಿಯ ರೂಪದಲ್ಲಿ ಪ್ರಕಟಿಸಲಾಗಿದೆ.