ಚಟ: ಚಟಚಟ....ಅಕಟಕಟಾ!

ಚಟ: ಚಟಚಟ....ಅಕಟಕಟಾ!

ಬರಹ

ಚಟ: ಚಟಚಟ....ಅಕಟಕಟಾ!



80 ರ ದಶಕದಲ್ಲಿ ನಾನು ಬಳ್ಳಾರಿಯಲ್ಲಿದ್ದಾಗ ನಡೆದ ಪ್ರಸಂಗವಿದು. ಬರೆಯಲು ಸಂಕೋಚ ಎನಿಸಿದರೂ ಇದೊಂದು ಜೀನವಾನುಭವ ಎಂಬ ಕಾರಣಕ್ಕೆ ಪ್ರಾಮಾಣಿಕವಾಗಿ ನಿಮ್ಮ ಮುಂದೆ ತೆರೆದಿಡುತ್ತಿದ್ದೇನೆ!
ಆಗ ನಾನು ಬಳ್ಳಾರಿಯ ಕ್ಯಾಂಟೀನ್ ಒಂದರಲ್ಲಿ ಕ್ಯಾಷಿಯರ್. ಈ ಕ್ಯಾಂಟೀನ್ ಮಾಲೀಕನದ್ದೇ ಇನ್ನೆರಡು ಹೋಟೆಲ್ ಗಳು ಇದ್ದವು. ಅವುಗಳ ಕ್ಯಾಷಿಯರ್ ಗಳು ಸೇರಿದಂತೆ ಮೂವರಿಗೂ ವಾಸಿಸಲು ಒಂದು ಪ್ರತ್ಯೇಕ ಕೊಠಡಿ ಇತ್ತು. ಆಗ ನನ್ನ ವಯಸ್ಸು ಇಪ್ಪತ್ತೋ ಇಪ್ಪತ್ತೊಂದೋ ಇರಬಹುದು. ವೈಯಕ್ತಿಕವಾಗಿ ನನ್ನ ಮಟ್ಟಿಗೆ ಆಗ `ಅರಸನ ಅಂಕೆ ಇಲ್ಲ; ದೆವ್ವದ ಕಾಟವಿಲ್ಲ; ಒಟ್ಟಾರೆ ಹೇಳುವವರು ಕೇಳುವವರು ಯಾರೂ ಇಲ್ಲ! `ನನ್ನ ದುಡಿಮೆ ನನ್ನದು; ನನ್ನ ಜಲ್ಸಾ ನನ್ನದು' ಎಂಬ ಪರಿಸ್ಥಿತಿ! ಆಗ ನನಗೆ ಧೂಮಪಾನದ ಚಟವಿತ್ತು. ಚಟ ಎಂಬುದು ಮನುಷ್ಯನನ್ನು ಚಟ್ಟಕ್ಕೆ ಏರಿಸಿ ಚಟಚಟ ಎನ್ನಿಸುತ್ತದೆ ಎಂದು ಕೇಳಿದ್ದೆನಾದರೂ, ಅದನ್ನು ಪಾಲಿಸುವ ಮನಸ್ಥಿತಿಯಾಗಲಿ; ಪ್ರಬುದ್ಧತೆಯಾಗಲಿ ಇನ್ನೂ ನನ್ನಲ್ಲಿ ಬೆಳೆದಿರಲಿಲ್ಲ. ಹೀಗಾಗಿ ಕೆಲವು ಧೂಮ ಪಾನಿಗಳು ಕಿವಿಯಲ್ಲೂ ಹೊಗೆ ಬಿಡುವಂತೆ ಆ ವಿವೇಕವನ್ನೂ ನಾನು ಆ ಕಿವಿಯಲ್ಲಿ ಕೇಳಿ ಈ ಕಿವಿಯಲ್ಲಿ ಬಿಟ್ಟಿದ್ದೆ! ಮಾರುಕಟ್ಟೆಗೆ ಬರುತ್ತಿದ್ದ ನಾನಾ ರೀತಿಯ ದುಬಾರಿ ಸಿಗರೇಟುಗಳನ್ನು ಸೇದುವುದು ಆಗ ನನ್ನ `ಪ್ರೆಸ್ಟೀಜ್' ಆಗಿತ್ತು; ಕಿಂಗ್ ಸೈಜ್ ಗಿಂತಲೂ ಉದ್ದನೆಯ `ಡಂಕನ್ಸ್-100', 555 ಇತ್ಯಾದಿ ವಿದೇಶಿ ಬ್ರಾಂಡುಗಳು!!
ಒಮ್ಮೆ ನಾವು ಮೂವರೂ ಕ್ಯಾಷಿಯರ್ ಗಳು ನಟರಾಜ್ ಟಾಕೀಸ್ ಗೆ ಹಿಂದಿ ಸಿನಿಮಾವೊಂದನ್ನು ನೋಡಲು ಸಂಜೆ ಶೋಗೆ ಹೋಗಿದ್ದೆವು. ನಾವು ಕ್ಯಾಷಿಯರ್ ಗಳಾಗಿ `ಗಾಂಧಿ ಕ್ಲಾಸ್'ಗೋ, ಫಸ್ಟ್ ಕ್ಲಾಸ್ಗೋ ಹೋಗಲು ಸಾಧ್ಯವೆ? ಎಲ್ಲಾದರೂ ಉಂಟೆ! ಸೀದಾ ಬಾಲ್ಕನಿಗೇ ಹೋಗಿ ಕುಳಿತೆವು. ನನ್ನ ಪಕ್ಕ ಒಬ್ಬ ಗೆಳೆಯನಿಗೆ ಮಾತ್ರ ಸೀಟು ಲಭ್ಯವಾಗಿತ್ತು. ಮತ್ತೊಬ್ಬ ಗೆಳೆಯ ಬೇರೆ ರೋಲ್ ನಲ್ಲಿ ಕುಳಿತಿದ್ದ. ಸಿನಿಮಾ ಆರಂಭವಾಯಿತು; ಬಾಲ್ಕನಿಯಲ್ಲಿ ಕತ್ತಲು ಆವರಿಸಿತ್ತು. ಸ್ವಲ್ಪ ಹೊತ್ತಿಗೇ `ಪ್ರೆಸ್ಟೀಜ್ ವ್ಯಕ್ತಿ' (ನಾನು) ಸುಮ್ಮನಿರಲಾಗದೆ ಸಿಗರೇಟ್ ಹೊತ್ತಿಸಿದೆ. ನನ್ನನ್ನು ನೋಡಿ ನನ್ನ ಗೆಳೆಯನೂ ತುಟಿಗೆ ಸಿಗರೇಟ್ ಇಟ್ಟು ನನ್ನಿಂದಲೇ ಬೆಂಕಿ ಪಡೆದ. ಇನ್ನೂ ಆರಾಮಾಗಿ 2 ದಮ್ಮೂ ಎಳೆದಿರಲಿಲ್ಲ ಸ್ವಾಮಿ! ಶುರುವಾಯಿತು ಕಿರಿಕ್!! ನನ್ನ ಈಚೆ ಪಕ್ಕ ಕುಳಿತಿದ್ದ ವ್ಯಕ್ತಿಯೊಬ್ಬ, `ರೀ ಆರಿಸ್ರೀ ಸಿಗರೇಟು... ಆಡಿಟೋರಿಯಂನಲ್ಲಿ ಸ್ಮೋಕ್ ಮಾಡಬಾರದು' ಎಂದು ಗೊತ್ತಿಲ್ಲವೆ?' ಎಂದು ಗದರಿದ. ನಾನು ಹೆದರಿ ಕೂಡಲೇ ಸ್ಟೈಲಾಗಿ ಬಗ್ಗಿ `ಸಾರಿ ಸಾರ್' ಎನ್ನುತ್ತಾ ಸಿಗರೇಟನ್ನು ಕಾಲ ಕೆಳಗೆ ಹೊಸಕಿ ಹಾಕಿದೆ. ನನ್ನ ಗೆಳೆಯ ಕ್ಯಾಷಿಯರ್ ಸಹ ಹಾಗೇ ಮಾಡಿದನೆಂದು ಬೇರೆ ಹೇಳಬೇಕಾಗಿಲ್ಲವಲ್ಲಾ!
ದುರದೃಷ್ಟವಶಾತ್ ನಮ್ಮನ್ನು ಆ ರೀತಿ ಗದರಿದ ವ್ಯಕ್ತಿ ನಂತರ ಎದ್ದು ಹೊರಗೆ ಹೋದ. ಬಹುಷಃ ಸಿಗರೇಟ್ ವಾಸನೆ ಕಂಡರೆ ಈತನಿಗೆ ವಾಕರಿಕೆ ಬರಬಹುದೇನೋ ಅದಕ್ಕೇ ಎದ್ದು ಬಾತ್ ರೂಂಗೆ ಹೋಗಿದಾನೆ ಎಂದು ನಾನು ಸುಮ್ಮನಾದೆ. ಆದರೆ ನಂತರದ ಐದು ನಿಮಿಷಕ್ಕೇ ಆತನ ಜತೆ ಇಬ್ಬರು ಪೊಲೀಸರು ಒಳ ಬಂದರು! ಅವರು ಸೀದಾ ನಮ್ಮ ಸೀಟುಗಳ ಕಡೆಯೇ ಬರಬೇಕೆ!? ಆ ವ್ಯಕ್ತಿ ಪೊಲೀಸರಿಗೆ `ನೋಡಿ ಇವರೇ ಸಿಗರೇಟ್ ಸೇದಿದ್ದು' ಎಂದು ನಮ್ಮತ್ತ ಬೊಟ್ಟು ಮಾಡಿ ತೋರಿಸಿದ. ಸಿನಿಮಾಕ್ಕೆ ಬಂದಿದ್ದ ನಾವು ನಂತರ ಯಾವ `ಸಿನಿಮಾ' ನೋಡಬೇಕಾಯಿತೆಂದು ನಿಮಗೆ ಹೇಳಬೇಕಾಗಿಯೇ ಇಲ್ಲವಲ್ಲ!?
ಆ ಬಳ್ಳಾರಿಯ ಪೊಲೀಸ್ ಸ್ಟೇಷನ್ನೋ ದೇವರಿಗೇ ಪ್ರೀತಿ! ಮೂವರನ್ನೂ ಒಂದು ಕಡೆ ಮೂಲೆಯಲ್ಲಿ ಬೆಂಚ್ ಮೇಲೆ ಕೂರಿಸಿದರು. ನಮ್ಮ ರಾತ್ರಿ ಊಟದ ವಿಷಯ ಹಾಳಾಗಲಿ; ಸ್ಟೇಷನ್ನಲ್ಲಿ ರಾತ್ರಿಯೆಲ್ಲಾ ನಡೆಯುವ ಆಗುಹೋಗುಗಳಿಗೆ ನಾವೇ ಮೂಕ ಸಾಕ್ಷಿಗಳು! ಅದ್ಯಾವನೋ ಅಪರಾಧಿಯನ್ನು ಬಾತ್ ರೂಂನಲ್ಲಿ ಹಾಕಿಕೊಂಡು, ಆತನನ್ನು ಹೊರಗೆ ಬರಲೂ ಬಿಡದೆ ರಪ್ ರಪ್ ರಪ್ ಎಂದು ಎಂದು ಲಾಠಿಯಲ್ಲಿ ಹೊಡೆಯುತ್ತಿದ್ದರೆ ಆತ ಸೂರು ಕಳಚಿ ಬೀಳುವಂತೆ ಇಲ್ಲಾ ಸಾರ್... ಬಿಡಿ ಸಾರ್.. ಎಂದು ಅರಚುತ್ತಿದ್ದ. ಆ ರಪ್ ರಪ್ ಸದ್ದು ನಮ್ಮ ಎದೆಯಲ್ಲೂ ಅವಲಕ್ಕಿ ಕುಟ್ಟಲಾರಂಭಿಸಿತ್ತು. ದೇವರೇ...! ಅಪ್ಪಾ ಸ್ವಾಮಿ...ನಮಗೂ ಹೀಗೇ ಮಾಡದಂತೆ ಕಾಪಾಡೋ ದೇವಾ...!! ಎಂದು ನಾನು ಮನಸ್ಸಿನಲ್ಲೇ ಪ್ರಾರ್ಥನೆ ಮಾಡುತ್ತಿದ್ದೆ!
ನನ್ನ ಗೆಳೆಯರಿಬ್ಬರಂತೂ ಥಂಡಾ ಹೊಡೆದು ಹೋಗಿದ್ದರು. ಒಳಗಿನಿಂದ ಬಂದ ಹೆಡ್ ಕಾನ್ಸ್ ಟೇಬಲ್ ತನ್ನ ಟೇಬಲ್ ಮುಂದೆ ಕುಳಿತು ರಿಜಿಸ್ಟರ್ ನಲ್ಲಿ ಏನೋ ಬರೆಯಲು ಆರಂಭಿಸಿದ. ನಾನೇ ಸ್ವಲ್ಪ ಧೈರ್ಯ ಮಾಡಿ. `ಸಾರ್ ಎಂದೆ'! ಆತ ನಮ್ಮತ್ತ ತಿರುಗಿ ಏನು ಎಂಬಂತೆ ತೀಕ್ಷ್ಣವಾಗಿ ನೋಡಿದ. ನನಗಂತೂ ಮನಸ್ಸಿನಲ್ಲಿ ದುಗುಡ ಇದ್ದರೂ ನಮ್ಮ ಮಾವನ ಮುಂದೆಯೇ ಮಾತನಾಡುತ್ತಿದ್ದೇನೆ ಎಂಬ ಭಾವನೆ ತಂದುಕೊಂಡು, `ಅಲ್ಲಾ ಸಾರ್;....ಅವರು ನಮಗೆ `ಸಿಗರೇಟ್ ಸೇದಬಾರದು ಎಂದು ಗೊತ್ತಿಲ್ಲವೇನ್ರೀ'? ಎಂದು ಗದರಿದ ಕೂಡಲೇ ನಾವು ಸಿಗರೇಟ್ ಆರಿಸಿಬಿಟ್ಟೆವಲ್ಲಾ!? ಇಷ್ಟಾದರೂ ನೀವು ಅವರ ದೂರನ್ನೇ ಪರಿಗಣಿಸಿ ನಾವು ಏನೋ ದೊಡ್ಡ ಅಪರಾಧ ಮಾಡಿದ್ದೇವೆ ಎಂಬಂತೆ ಸ್ಟೇಷನ್ನಿಗೆ ತಂದು ಕೂಡಿದ್ದೀರಲ್ಲಾ...? ಎಂದು ಪ್ರಶ್ನಿಸಿದೆ. ಆ ಕಾನ್ಸ್ಟೇಬಲ್ ತನ್ನ ತುಟಿಯಲ್ಲೇ ಮಂದಹಾಸ ಬೀರಿದ. (ಸದ್ಯ ನಮ್ಮ ಅದೃಷ್ಟವಲ್ಲದೆ ಮತ್ತೇನು!?) ನಂತರ, `ನೋಡ್ರೋ ಹುಡುಗ್ರಾ; ನೀವೇನೂ ಹೆದರಬೇಡ್ರಿ. ನೀವೇನೂ ಅಂಥಾ ದೊಡ್ಡ ಅಪರಾಧ ಮಾಡಿಲ್ಲ ಅಂತ ನನಗೂ ಗೊತ್ತು; ನಿಮಗೇನೂ ಮಾಡಲ್ಲ. ಒಂದು `ಪೆಟಿ ಕೇಸ್' ಬುಕ್ ಮಾಡಿದ್ದೇವೆ ಅಷ್ಟೆ. ಬೆಳಿಗ್ಗೆ ಕೋರ್ಟಿಗೆ ಹಾಜರುಪಡಿಸುತ್ತೇವೆ. ಅಲ್ಲಿ ದಂಡ ಹಾಕುತ್ತಾರೆ. ಅದನ್ನು ಅಲ್ಲೇ ಕಟ್ಟಿ ನಿಮ್ಮ ಮನೆಗಳಿಗೆ ಹೋಗಿ' ಎಂದು ತಲೆ ಬಗ್ಗಿಸಿ ಬರೆಯಲು ಆರಂಭಿಸಿದ. ಸೊಳ್ಳೆಗಳ ಗುಂಯ್....ಶಬ್ದ ಹೊರತು, ನೀರವ ಮೌನದ ನಡುವೆ ನಾವು ರಾತ್ರಿಯೆಲ್ಲ ಅಲ್ಲೇ ತೂಕಡಿಸಿದೆವು.
ಬೆಳಿಗ್ಗೆ 7 ಗಂಟೆಗೆ ಎದ್ದು ಸ್ಟೇಷನ್ ಬಾತ್ ರೂಂನಲ್ಲೇ ಅಸಹ್ಯದಿಂದಲೇ ಮೂಗು ಮುಚ್ಚಿಕೊಂಡು ಮುಖ ತೊಳೆದೆವು. ನಮ್ಮ ಕರ್ಚೀಫುಗಳಿಂದ ಮುಖ ಒರೆಸಿಕೊಂಡು ಕಣ್ಣು ಬಿಟ್ಟಾಗ ಎದುರಿಗೆ ನಿಂತಿದ್ದಾರೆ ನಮ್ಮ ಹೋಟೆಲ್ಲುಗಳ ಓನರ್!! ಅಯ್ಯಯ್ಯೋ ಇವರಿಗೆ ಹೇಗೆ ಗೊತ್ತಾಯ್ತು? ಕೆಕ್ಕರಿಸಿಕೊಂಡು ನೋಡುವ ಅವರ ಚುಚ್ಚುವ ನೋಟ ಎದುರಿಸಲಾಗದೆ ಮತ್ತೆ ಮುಖ ಮುಚ್ಚಿಕೊಳ್ಳಬೇಕೆನಿಸಿದರೂ ಹಾಗೆ ಮಾಡದೆ ತಲೆ ತಗ್ಗಿಸಿದೆವು. ಅವರು ಕಾನ್ಸ್ಟೇಬಲ್ ಬಳಿ ಮೆಲು ದನಿಯಲ್ಲಿ ಏನೋ ಮಾತನಾಡಲಾರಂಭಿಸಿದರು. ನಂತರ ಏನೂ ಹೇಳದೆ ಹೊರಟು ಹೋದರು! ಅಯ್ಯೋ ರಾಮ! `ನನ್ನ ಮರ್ಯಾದೆ ಕಳೆದ ಇವರನ್ನು ಬಿಡಲೇ ಬೇಡಿ ಸಾರ್, ಚೆನ್ನಾಗಿ ಬೆಂಡೆತ್ತಿ ಸಾರ್...' ಎಂದೇನಾದರೂ ಈ ಮುಂಡೆ ಮಗ ಹೇಳಿ ಹೋದನೋ ಏನಪ್ಪಾ' ಎಂದು ಗಾಬರಿಯಾಯ್ತು!!
ಯಥಾಪ್ರಕಾರ ಬೆಳಿಗ್ಗೆ ಉಪಾಹಾರಯೂ ಇಲ್ಲ. 10 ಗಂಟೆ ವೇಳೆಗೆ ಓರ್ವ ನಿಯೋಜಿತ ಕಾನ್ಸ್ಟೇಬಲ್ ಬಂದು `ಬನ್ನಿ ಕೋರ್ಟಿಗೆ ಹೋಗಬೇಕು' ಎಂದ. ಏನು!? ಪೊಲೀಸರ ಜತೆ ಕೋರ್ಟಿಗೆ; ಅದೂ ನಡು ರಸ್ತೆಯಲ್ಲಿ ಅಷ್ಟು ದೂರ ಇರುವ ಕೋರ್ಟಿಗೆ ಅವರ ಜತೆ ಹೋಗಬೇಕೆ? (ಕೈಗೆ ಕೋಳ ಹಾಕಿಸಿಕೊಂಡು ನಾಲೈದು ಪೊಲೀಸರ ಸಂಗಡ ಹೋಗುವ ಅಪರಾಧಿಗಳ ಪೆರೇಡನ್ನು ಆಗಾಗ ನಾನು ನೋಡಿದ್ದು ನೆನಪಿಗೆ ಬಂತು!) ತಕ್ಷಣ ನಮ್ಮ ಒಳಗಿದ್ದ `ಪ್ರೆಸ್ಟೀಜ್ ವ್ಯಕ್ತಿ' ಜಾಗೃತನಾದ! ಏನಾದರೂ ಆಗಲಿ ಎಂದು ನಾವು ಮೂವರೂ, `ಇಲ್ಲಾ ಸಾರ್; ಸುತಾರಾಂ ನಾವು ನಿಮ್ಮ ಜತೆ ಬರುವುದಿಲ್ಲ. ನಾವು ಏನು ಮಹಾ ತಪ್ಪು ಮಾಡಿದ್ದೇವೆಂದು ಹೀಗೆ ಹೇಳುತ್ತೀರಿ? ಒಂದು ಕೆಲಸ ಮಾಡಿ; ನಿಮ್ಮ ಪಾಡಿಗೆ ನೀವು ಮುಂದೆ ಮುಂದೆ ಹೋಗುತ್ತಾ ಇರಿ ಸಾರ್; ನಾವಂತೂ ಯಾರೋ; ಏನೂ ಸಂಬಂಧವೇ ಇಲ್ಲವೇನೋ ಎಂಬಂತೆ ನಿಮ್ಮ ಹಿಂದೆ ಸಹಜವಾಗಿ ಬರುತ್ತಾ ಇರುತ್ತೇವೆ; ನಮ್ಮನ್ನು ನಂಬಿ ಸಾರ್; ನಾವು ಎಲ್ಲೂ ಓಡಿ ಹೋಗುವುದಿಲ್ಲ' ಎಂದೆವು! ಅಂತೂ ಸದ್ಯ ಆತ ಒಪ್ಪಿದನೆನ್ನಿ! ಸರಿ. ಒಂದು ಸೈಕಲ್ ರಿಕ್ಷಾದಲ್ಲಿ ಆತ ಮುಂದೆ ಹೋಗುತ್ತಿದ್ದ. ಇನ್ನೊಂದು ಸೈಕಲ್ ರಿಕ್ಷಾದಲ್ಲಿ ನಾವು ಮೂವರೂ ಹಿಂಬಾಲಿಸಿ ಕೋರ್ಟಿನ ಸಂಕೀರ್ಣಕ್ಕೆ ಬಂದೆವು.
ಅಲ್ಲಿನ ಮರದ ಕೆಳಗಿನ ಕಟ್ಟೆಯ ಮೇಲೆ ಕುಳಿತು- `ಆಗ ಕರೆಯುತ್ತಾರೆ; ಈಗ ಕರೆಯುತ್ತಾರೆ' ಎಂದು ಕಾಯುತ್ತಾ ಕೂತೆವು. ರಾತ್ರಿ ಊಟವೂ ಇಲ್ಲದೆ, ಬೆಳಿಗ್ಗೆ ತಿಂಡಿಯೂ ಇಲ್ಲದ ಪರಿಸ್ಥಿತಿಯಲ್ಲಿ ಅದಾಗಲೇ ನನ್ನ ಜತೆಗಿದ್ದ ಇಬ್ಬರೂ ಗೆಳೆಯರು ಇದೇನು ಗ್ರಹಚಾರ ಎಂದು ಬುಸುಗುಡುತ್ತಿದ್ದರು. ಒಬ್ಬನಂತೂ `ಯಾವ ತಪ್ಪೂ ಮಾಡದ ನಮಗೇಕೆ ಈ ಶಿಕ್ಷೆ? ಕೋರ್ಟಿನಲ್ಲಿ ನ್ಯಾಯಾಧೀಶರನ್ನೇ ಕೇಳಿಬಿಡುತ್ತೇನೆ' ಎಂದ. ನನಗಂತೂ ಆಗ ಗಾಬರಿಯಾಯಿತು; `ಇವನ್ಯಾವನಲೇ...' ಎಂಬಂತೆ ಅವನತ್ತ ನೋಡಿದೆ!
(ಏಕೆಂದರೆ, ಆಗಿನ ಕಾಲಕ್ಕೆ ಒಂದು ವರ್ಷದ ಹಿಂದಷ್ಟೇ ನಾನು ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಎದುರು ಕುಳಿತುಕೊಂಡು ಕಕ್ಷಿದಾರರಿಗೆ ಕಾಗದ ಪತ್ರ, ಅರ್ಜಿ ಇತ್ಯಾದಿ ಬರೆದುಕೊಡುವ ಡೀಡ್ ರೈಟರ್ ಒಬ್ಬರ ಬಳಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದೆ. ಅಲ್ಲಿ ನಾನು ಕಂಡು-ಕೇಳಿ ಪಡೆದಿದ್ದ ಅನುಭವ ಈಗ ಕೆಲಸಕ್ಕೆ ಬಂತು!) `ಅಪ್ಪಾ ಸ್ವಾಮಿ; ಹಾಗೆಲ್ಲಿಯಾದರೂ ಮಾಡಿಬಿಟ್ಟೀಯೆ ಜೋಕೆ! ಕೋರ್ಟಿನಲ್ಲಿ ತೆಪ್ಪಗೆ ಕೈಕಟ್ಟಿಕೊಂಡು ಬಿದ್ದಿರು. ಅವರು ಏನು ಕೇಳಿದರೂ `ಹೌದು ಸ್ವಾಮಿ! ತಪ್ಪಾಯ್ತು ಸ್ವಾಮಿ!! ಎಂದಷ್ಟೇ ಹೇಳು; ಹಾಕಿದಷ್ಟು ದಂಡ ಕಟ್ಟಿ ಸುಮ್ಮನೆ ಹೋಗೋಣ; ನನಗೆ ಗೊತ್ತಿರುವಷ್ಟು ಕೋರ್ಟು ಕಚೇರಿ ವಿಚಾರ ನಿನಗೇನು ಗೊತ್ತು?' ಎಂದು ಸ್ವಲ್ಪ ಗತ್ತಿನಿಂದಲೇ ಬುದ್ಧಿವಾದ ಹೇಳಿದೆ.
ಆಗ ಆತ ಉಡಾಫೆಯಿಂದ `ಯಾಕೆ? ಏನಾಗಿ ಬಿಡುತ್ತೆ ಮಹಾ'! ಎಂದು ಪ್ರಶ್ನಿಸಿದ. ನಾನು ಅವನತ್ತ ತಿರುಗಿ- `10 ರೂ. ದಂಡ ಹಾಕ್ತಾರೆ ಎಂದಿಟ್ಟುಕೋ; ನೀನು ಪ್ರಶ್ನಿಸಲು ಆರಂಭಿಸಿದರೆ ಮೊದಲು ಕಟು ಎಚ್ಚರಿಕೆ ಕೊಡುತ್ತಾರೆ; ನಂತರವೂ ನೀನು ಮಾತು ಮುಂದುವರೆದರೆ ನಿನ್ನ ಪ್ರತಿ ಹೆಚ್ಚುವರಿ ಮಾತಿಗೂ ಆ ದಂಡದ ಮೊತ್ತ 10 ರೂ ಇದ್ದದ್ದು 20 ಕ್ಕೆ; 20 ರೂ. ಇದ್ದದ್ದು 40 ರೂ.- ಹೀಗೆ ಏರಿಸುತ್ತಾ ಹೋಗುತ್ತಾರೆ; ಹುಷಾರ್' ಎಂದೆ! ಆತ ಕಕ್ಕಾಬಿಕ್ಕಿಯಾಗಿ ಮುಂದೆ ಮತ್ತೆ ಮಾತನಾಡಲಿಲ್ಲ!!
ಬೆಳಿಗ್ಗೆ 10-30 ರಿಂದಲೂ ಕಾಯುತ್ತಿದ್ದ ನಮ್ಮನ್ನು ಅಂತೂ ಇಂತೂ ಕೋರ್ಟಿನ ಕಟಕಟೆಗೆ ಕರೆದಾಗ ಸಂಜೆ 4 ಗಂಟೆ!! ಮೂವರೂ ಬಂದು ಕಟಕಟೆಯಲ್ಲಿ ನಿಂತೆವು. ಚಟ ಎಂಬುದು `ಚಟಚಟ' ಎನಿಸಿಬಿಟ್ಟಿದ್ದರೆ ಚೆನ್ನಾಗಿತ್ತೇನೋ! ಅದರ ಬದಲು ಈಗ ಅಕಟಕಟಾ.... ಕಟಕಟೆ ಏರಿಸಿಬಿಟ್ಟಿತಲ್ಲೋ ಶಿವನೇ ಎನಿಸಿತು!!
ನ್ಯಾಯಾಧೀಶರು ಬಂದು ತಮ್ಮ ಪೀಠದಲ್ಲಿ ಆಸೀನರಾದರು. ನಾವು ಕತ್ತೆತ್ತಿ ನೋಡಿದೆವು. ಒಮ್ಮೆಲೇ ನನಗೆ ಸಿಡಿಲು ಬಡಿದಂತಾಯ್ತು!! ಸಿನಿಮಾ ಮಂದಿರದಲ್ಲಿ ನನ್ನ ಪಕ್ಕದಲ್ಲೇ ಕುಳಿತು, ನಂತರ ಎದ್ದು ಹೋಗಿ, ಐದು ನಿಮಿಷಕ್ಕೇ ಪೊಲೀಸರನ್ನು ಕರೆತಂದಿದ್ದನಲ್ಲಾ ಆ ವ್ಯಕ್ತಿ- ಅದೇ ಗೌರವಾನ್ವಿತ ವ್ಯಕ್ತಿ ಈ ನ್ಯಾಯಾಧೀಶ!!! ಒಂದು ಫೋನ್ ಮಾಡಿದ್ದಕ್ಕೇ ಪೊಲೀಸರು ಏಕೆ ಓಡಿಬಂದರು; ಏಕೆ ಸ್ಟೇಷನ್ನಲ್ಲೇ ನಮ್ಮನ್ನು ಇಟ್ಟುಕೊಂಡರು; ಎಷ್ಟೇ ತಡವಾದರೂ ಈ ಗೌ. ನ್ಯಾಯಾಧೀಶರ ಪೀಠದ ಮುಂದೆಯೇ ನಮ್ಮನ್ನು ಏಕೆ ಹಾಜರುಪಡಿಸಿದರು ಎಂಬ ವಾಸ್ತವಗಳೆಲ್ಲ ಚಕಚಕ ನನ್ನ ತಲೆಯಲ್ಲಿ ಹಾದುಹೋದವು!
ಅಲ್ಲಾ ಸ್ವಾಮಿ! ಗೊತ್ತೋ ಗೊತ್ತಿಲ್ಲದೆಯೋ ಒಟ್ಟಾರೆ ಸಿನಿಮಾಕ್ಕೆ ಬಂದಿದ್ದ ಓರ್ವ ಜಿಲ್ಲಾ ಮಟ್ಟದ ನ್ಯಾಯಾಧೀಶರೊಬ್ಬರ ಪಕ್ಕದಲ್ಲೇ ನಾವು ಸಿಗರೇಟ್ ಸೇದಿದರೆ ಅವರು ಸುಮ್ಮನಿರಲು ಸಾಧ್ಯವೆ!? ನಾನಂತೂ ವಿಲವಿಲ ಒದ್ದಾಡಿದೆ; ಏಕೆಂದರೆ ಆಡಿಟೋರಿಯಂನ ಅಸ್ಪಷ್ಟ ಮಂದ ಬೆಳಕಿನಲ್ಲೂ ಅವರು ನನ್ನನ್ನು ನೋಡಿದ್ದರು; ನಾನೂ ಅವರನ್ನು ನೋಡಿ `ಸಾರಿ...' ಎಂದಿದ್ದೆಲ್ಲ ನೆನಪಿಗೆ ಬಂತು!! ಅಂತೂ ಹುಲಿಯ ಹಿಡಿತಕ್ಕೆ ಹುಲ್ಲೆ ಮರಿ ಸಿಕ್ಕಾಗಿದೆ; ಇನ್ನು ದೇವರೇ ಗತಿ!!! ನನ್ನ ಗೆಳೆಯರಂತೂ ನಾನು ಮೊದಲೇ ಕೊಟ್ಟಿದ್ದ ಎಚ್ಚರಿಕೆಗಳನ್ನೆಲ್ಲ ನನ್ನೊಂದಿಗೆ ಚಾಚೂ ತಪ್ಪದೆ ಪಾಲಿಸಿದರು.
`ಪಬ್ಲಿಕ್ ಆಡಿಟೋರಿಯಂನಲ್ಲಿ ಸಿಗರೇಟ್ ಸೇದುವುದು ಕಾನೂನು ರೀತ್ಯ ಅಪರಾಧ ಅಲ್ಲವೆ'?
`ಹೌದು ಸ್ವಾಮಿ'!
`ನಿಮ್ಮ ಅಪರಾಧಕ್ಕೆ ಶಿಕ್ಷೆಯಾಗಿ ದಂಡ ಹಾಕುತ್ತೇವೆ; ಸರಿಯೇ?
`ಆಯ್ತು ಸ್ವಾಮಿ'
`ಸರಿ; ನಿಮಗೆ ತಲಾ 20 ರೂ. ದಂಡ ಹಾಕಿದ್ದೇನೆ; ಕಟ್ಟಿ ಹೋಗಿ' ಇನ್ನು ಮುಂದೆ ಈ ರೀತಿ ಮಾಡಬೇಡಿ ಗೊತ್ತಾಯ್ತೆ?'
`ಆಯ್ತು ಸ್ವಾಮಿ!"
ನಾವು ಮೂವರೂ ಹೊರಬಂದೆವು. ಆಗಿನ ಕಾಲಕ್ಕೆ `ಪೆಟಿ ಕೇಸ್' ಎಂದರೆ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ, ಲೈಟ್ ಇಲ್ಲದೆ ಸೈಕಲ್ ಓಡಿಸುವುದು ಇತ್ಯಾದಿ ಸಣ್ಣ ಪುಟ್ಟ ಪ್ರಕರಣಗಳಿಗೆ ಅಬ್ಬಬ್ಬಾ ಎಂದರೆ 2 ರೂ.ನಿಂದ 10 ರೂ.ವರೆಗೆ ದಂಡ ವಿಧಿಸುವುದನ್ನು ಕೇಳಿದ್ದೆ. ಆದರೆ ನಮ್ಮ ಪ್ರಕರಣದಲ್ಲಿ ಆಕಸ್ಮಿಕ ಸಾಕ್ಷಿ ಹಾಗೂ ತೀರ್ಪುಗಾರ ಒಬ್ಬರೇ ಆಗಿದ್ದ ಪರಿಣಾಮವಾಗಿಯೋ ಏನೋ ಈ `ಹುಲಿ' ನಮಗೆ ತಲಾ 20 ರೂ. ದಂಡ ವಿಧಿಸಿತ್ತು! ತೆಪ್ಪಗೆ ಕೋರ್ಟಿನಲ್ಲಿ ದಂಡ ಕಟ್ಟಿ, ನಮ್ಮ ಕೊಠಡಿಗೆ ಹೋಗಿ ರಗ್ಗು ಹೊದ್ದು ಮಲಗಿದೆವು.
ಎಷ್ಟೇ ಕೆಲಸದ ಒತ್ತಡ-ತಲೆ ಬಿಸಿಗಳು ಇದ್ದರೂ ಈಗ ನಾನು ಧೂಮಪಾನಿಯಲ್ಲ! ಈಗಲೂ ನಾನು ಪೊಲೀಸ್ ಸ್ಟೇಷನ್ ಗಳಿಗೆ ಹೋಗುತ್ತೇನೆ; ಪೊಲೀಸರ ಒಡನಾಟವಿದೆ; ಕೋರ್ಟುಗಳ ಒಡನಾಟವಿದೆ!- ಆದರೆ ಬಳ್ಳಾರಿಯ `ಪ್ರೆಸ್ಟೀಜ್' (ಕುಕ್ಕರ್-ಕ್ಯಾಷಿಯರ್)ನಂತಲ್ಲ!! ಈಗೇನಿದ್ದರೂ ಅಧಿಕಾರಯುತವಾಗಿ; ಗೌರವಾನ್ವಿತನಾಗಿ; ಪತ್ರಕರ್ತನಾಗಿ!!