ಚಿತ್ರ ಒಂದು ನೋಟ ಎರಡು !
ಕಂಬಳಿಹುಳಗಳು
ಕಂಬಳಿ ಹುಳುಗಳು ದಾಳಿಯನಿಟ್ಟರೆ
ಗಿಡಗಳ ನಾಶವು ಇದು ಖಚಿತ
ಸನಿಹಕೆ ಹೋದರೆ ದೇಹಕೆ ತಗುಲಲು
ತ್ವಚೆಯಲಿ ತುರಿಕೆಯು ಇದು ಉಚಿತ
ಗಾತ್ರದೆ ಚಿಕ್ಕದು, ಗುಂಪಲಿ ಬರುವುದು
ಉಳಿಯದು ಗಿಡದಲಿ ಹಸಿರೆಲೆಯು
ಎಲೆಗಳ ಮುಕ್ಕುವ ಭೀಕರ ಹುಳುಗಳ
ಕಾಟದಿ ಫಸಲಿಗೆ ಕತ್ತರಿಯು
ಕೋಶವ ನಿರ್ಮಿಸಿ ಒಳಗಡೆ ಸೇರುತ
ಸಿದ್ಧತೆ ಮುಂದಿನ ಹಂತಕ್ಕೆ
ಬಣ್ಣದ ರೆಕ್ಕೆಯ ಚಿಟ್ಟೆಗಳಾಗುತ
ಸೊಗಸನು ಬೀರಲು ವಿಶ್ವಕ್ಕೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
***
ಗಝಲ್
ಪ್ರೀತಿ ಹಚ್ಚೆಯನು ಹಚ್ಚಿಸಿಯೊಳಗೆ ಏಕೆ ಹೋದೆಯೋ
ಮನಕೆ ಒಲವನು ತುಂಬಿಸಿಯೊಳಗೆ ಏಕೆ ಹೋದೆಯೋ
ಸಾಗರವೆಂಬ ಮನದೊಳಗಿನ ಅಲೆಯಲ್ಲೀಗ ನಲಿಯುತಿರು
ಗುಡಿ ಗುಡಿಯಲ್ಲಿರುವ ಘಂಟೆಯೊಳಗೆ ಏಕೆ ಹೋದೆಯೋ
ಕಾಡಿನಲ್ಲಿರುವ ನಡುವಿನ ದಾರಿಯೊಳಗೆ ನಡೆದು ಹೋಗು
ಆಗಸದಲ್ಲಿಹ ಮೋಹಕ ಚಂದಿರನೊಳಗೆ ಏಕೆ ಹೋದೆಯೋ
ಮಳೆಹನಿಯ ನೀರಾಟದ ಆರ್ಭಟದೊಳಗೆಯೇ ಮೆಲ್ಲ ಸಾಗು
ಮರವನೇರುತ ಗೆಲ್ಲನಿಡಿದು ಕನಸಿನೊಳಗೆ ಏಕೆ ಹೋದೆಯೋ
ದೀಪವಿರುವ ಕೋಣೆಯಲ್ಲಿ ಸ್ಥಳವನಿಡಿದು ಕುಳ್ಳಿರುತ ಹಾಡು
ಚಿಲಕವಿರದ ಮನೆಯ ಪಡಸಾಲೆಯೊಳಗೆ ಏಕೆ ಹೋದೆಯೋ
ಸುಪ್ತವಿರುವ ಚೆಲುವಿನಲ್ಲಿಯ ಸೊಬಗಿನೊಳಗೆ ಸೇರಿ ನಲಿಯು
ಚಲಿಸದಿರುವ ರಥದಂತಿರುವ ಬದುಕಿನೊಳಗೆ ಏಕೆ ಹೋದೆಯೋ
ಮೌನವನ್ನು ಹೀಗೆಯೇ ಮರಿದು ಮಾತಿನಲ್ಲಿಯೇ ಬೆಳಕಾಗು ಈಶಾ
ಅನಂತ ಕನಸುಗಳ ವ್ಯರ್ಥವೆನಿಪ ನನಸಿನೊಳಗೆ ಏಕೆ ಹೋದೆಯೋ
-ಹಾ ಮ ಸತೀಶ ಬೆಂಗಳೂರು
![](https://saaranga-aws.s3.ap-south-1.amazonaws.com/s3fs-public/IMG-20240402-WA0034.jpg)