ಚಿತ್ರ ಕವನ - ಬದುಕ ಬವಣೆ
ಕವನ
ಊರೂರು ತಿರುಗಿ ಸಂಪಾದಿಸುತ
ತನ್ನ ಹೊಟ್ಟೆಯ ಹೊರೆಯುತ
ಬದುಕ ಬವಣೆಯ ನೀಗುತ
ಬುವಿಯ ಮೇಲೆ ಪವಡಿಸುತ......
ಗೋಡೆಗೊರಗಿ ಕುಳಿತ ವೃದ್ಧನು
ತಿನಲು ಬಯಸಿದ ರೊಟ್ಟಿ ಚೂರನು
ಶ್ವಾನವೊಂದು ಬಳಿ ಬಂದು ನಿಲ್ಲಲು
ಆಸೆ ಕಂಗಳಲಿ ಪಿಳಿಪಿಳಿ ನೋಡಲು.....
ಶುನಕ ಮೊಗವ ಕಂಡು ಕನಿಕರಿಸಿ
ಮುದುಕನು ಮುಗುಳ್ನಗೆಯ ಹರಿಸಿ
ಹಂಚಿ ತಿನುವ ಎಂದು ನಿಶ್ಚಯಿಸಿ
ಪ್ರೀತಿಯಲಿ ತಲೆಯ ನೇವರಿಸಿ.....
ನಾಯಿಯಾದರೇನು ಹಸಿವು ನೀರಡಿಕೆಯಿದೆ
ಬುವಿಯಲಿ ಬದುಕುವ ಹಕ್ಕಿದೆ
ಅದಕೂ ಶುದ್ಧ ಮನವಿದೆ
ಕಸಿಯಬಾರದೆಂಬ ನೋವಿದೆ....
ಮೂಕಪ್ರಾಣಿಯ ಸ್ವಾಮಿನಿಷ್ಠೆ ಅಪಾರ
ನಂಬಿಕೆಗೆ ಅದುವೇ ಅನ್ವರ್ಥ ಸಾರ
ಬಾರೋ ಗೆಳೆಯ ಪ್ರೀತಿ ಅಪಾರ
ಸ್ವೀಕರಿಸು ಸ್ನೇಹದಲಿ ರೊಟ್ಟಿ ಚೂರ//
-ರತ್ನಾ ಕೆ.ಭಟ್, ತಲಂಜೇರಿ.
ಚಿತ್ರ್
- Log in to post comments