"ಚಿರಂತನ" - ಹಿರಿಯರ ಆಶ್ರಯಧಾಮ
"ನನ್ನ ಮಗ ತೀರಿಕೊಂಡ ನಂತರ ನನ್ನನ್ನು ನೋಡಿಕೊಳ್ಳುವವರು ಯಾರೂ ಇರಲಿಲ್ಲ. ಹಾಗಾಗಿ ಇಲ್ಲಿಗೆ ಬಂದೆ. ಇದೀಗ ನನ್ನ ಮನೆಯೇ ಆಗಿದೆ" ಎಂದು ಆ ವೃದ್ಧೆ "ಚಿರಂತನ"ದಲ್ಲಿ ಹೇಳುತ್ತಿದ್ದರೆ, ಮುಂದೊಂದು ದಿನ ಯಾರ ಅವಸ್ಥೆ ಏನಾದೀತೋ ಎಂಬ ಭಾವ ಮಿಂಚಿ ಮರೆಯಾಯಿತು.
ಅಂತಹ ಹಿರಿಯರಿಗೆ ಹಾಗೂ ವಿಕಲಚೇತನರಿಗೆ ಆಶ್ರಯಧಾಮವಾದ "ಚಿರಂತನ" ಮಂಗಳೂರು - ಉಡುಪಿ ಹೆದ್ದಾರಿಯಲ್ಲಿ ಸುರತ್ಕಲ್ ಬಸ್ನಿಲ್ದಾಣದ ಹತ್ತಿರದಲ್ಲಿದೆ. ವಯಸ್ಸಾದವರಿಗೆ ಜೀವನದ ಸಂಧ್ಯಾಕಾಲದಲ್ಲಿ ವಸತಿ, ಆಹಾರ, ಆರೈಕೆ, ಶುಶ್ರೂಷೆ ಇನ್ನಿತರ ಸೌಲಭ್ಯ ಒದಗಿಸುವ ಉದ್ದೇಶದಿಂದ ನಾಲ್ವರು ಯುವಕರು ಈ ಸಂಸ್ಥೆಯನ್ನು ಸ್ಥಾಪಿಸಿದ್ದು ೧೯೯೮ರಲ್ಲಿ.
ಭಾರವಿ ದೇರಾಜೆ, ಶಿವಾನಂದ ರೈ, ಈಶ್ವರ ಕುಮಾರ್ ಮತ್ತು ಜಾದೂಗಾರ್ ಶಂಕರ್ ಜೂನಿಯರ್ - ಇವರೇ ಆ ನಾಲ್ವರು ಯುವಕರು. ಚಿರಂತನ ಚಾರಿಟೆಬಲ್ ಟ್ರಸ್ಟ್ (ರಿ.) ಹೆಸರಿನಲ್ಲಿ ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಅವರು ಆಶ್ರಯಧಾಮ ಆರಂಭಿಸಿದ ಬಳಿಕ ವೃದ್ಧ ಮಹಿಳೆಯರು ಹಾಗೂ ಪುರುಷರು ಒಬ್ಬೊಬ್ಬರಾಗಿ ಸೇರತೊಡಗಿದರು.
ದಾನಿಗಳು ಸ್ಥಳ ಹಾಗೂ ಆರ್ಥಿಕ ನೆರವು ಒದಗಿಸಿದ್ದರಿಂದಾಗಿ, "ಚಿರಂತನ"ಕ್ಕೆ ೨೦೦೯ರಲ್ಲಿ ಸ್ವಂತ ಕಟ್ಟಡ ಹೊಂದಲು ಸಾಧ್ಯವಾಯಿತು. ೯,೦೦೦ ಚದರ ಅಡಿಗಳ ಕಟ್ಟಡದಲ್ಲಿ ೨೪ ವಸತಿ ಕೋಣೆಗಳು, ಸಿಬ್ಬಂದಿ ಮತ್ತು ನಿರ್ವಾಹಕರ ಕ್ವಾರ್ಟರ್ಸ್ ಹಾಗೂ ಅತಿಥಿ ಕೋಣೆಗಳಿವೆ. ಪುಟ್ಟ ಸಭಾಗೃಹ, ಕಚೇರಿ, ಗ್ರಂಥಾಲಯ, ಡಿಸ್ಪೆನ್ಸರಿ, ಅಡುಗೆಕೋಣೆ - ಇವೆಲ್ಲ ಇವೆ. ಸಂಸ್ಥೆಯಲ್ಲಿ ೧೫ ಸೇವಾನಿರತರು ಇದ್ದಾರೆ - ಹಿರಿಯರ ಸೇವೆಗಾಗಿ. ದಿನದ ೨೪ ತಾಸುಗಳೂ ಶುಶ್ರೂಷೆಯ ವ್ಯವಸ್ಥೆ ಇದೆ. ಪ್ರತಿದಿನ ವೈದ್ಯರು ಆರೋಗ್ಯ ತಪಾಸಣೆಗಾಗಿ ಬರುತ್ತಾರೆ. ಹತ್ತಿರದ ಶ್ರೀನಿವಾಸ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ. ತುರ್ತಾಗಿ ಯಾರನ್ನಾದರೂ ಚಿಕಿತ್ಸೆಗೆ ಒಯ್ಯಲು ಸಂಸ್ಥೆಯ ಅಂಬುಲೆನ್ಸ್ ಸದಾ ಸಿದ್ಧ.
ಹಿರಿಯರನ್ನು ಕೆಲವು ತಿಂಗಳು ಅಥವಾ ವರುಷಗಳ ಅವಧಿಗೆ "ಚಿರಂತನ"ಕ್ಕೆ ಸೇರಿಸಬಹುದು. ಜಾತಿ, ಲಿಂಗ ಅಥವಾ ಆದಾಯದ ಭೇದವಿಲ್ಲದೆ ಯಾರನ್ನೂ ಸೇರಿಸಬಹುದು. ಆದರೆ, ಒಂದು ತಿಂಗಳು ಪ್ರಾಯೋಗಿಕವಾಗಿ ಉಳಿದುಕೊಂಡ ಬಳಕ ಹೊಸಬರನ್ನು "ಚಿರಂತನ"ದಲ್ಲಿ ಮುಂದುವರಿಸಬೇಕೇ ಬೇಡವೇ ಎಂದು ನಿರ್ಧರಿಸಲಾಗುತ್ತದೆ. ಆಡಳಿತ ಮಂಡಲಿಯು ಒಂದು ವರುಷದ ಒಪ್ಪಂದ ಮಾಡಿಕೊಂಡು ಸೇರಿಸಿಕೊಳ್ಳುತ್ತದೆ. ನಿವಾಸಿಗಳು ಮಾಸಿಕ ಶುಲ್ಕ ಹಾಗೂ ವೈದ್ಯಕೀಯ ಚಿಕಿತ್ಸೆಯ ವೆಚ್ಚ ಪಾವತಿಸಬೇಕು. ಅದಲ್ಲದೆ, "ಚಿರಂತನ"ಕ್ಕೆ ವೃದ್ಧರನ್ನು ಸೇರಿಸಿದ ಸಂಬಂಧಿ ಅಥವಾ ಹಿತೈಷಿಯು ತಿಂಗಳಿಗೆ ಒಮ್ಮೆಯಾದರೂ ಬಂದು, ಹಿರಿಯ ನಿವಾಸಿಯ ಯೋಗಕ್ಷೇಮ ವಿಚಾರಿಸಿಕೊಳ್ಳ ಬೇಕು.
ಹಿರಿಯರಿಗೆ ಹಾಗೂ ವಿಕಲಚೇತನರಿಗೆ ಆಧಾರವಾಗುವುದರ ಜೊತೆಗೆ, ಸಾಂಸ್ಕೃತಿಕ ಅಭಿವೃದ್ಧಿಗಾಗಿ ಮತ್ತು ಜನಜಾಗೃತಿಗಾಗಿ ಕಾರ್ಯಕ್ರಮಗಳನ್ನು ನಡೆಸುವುದು "ಚಿರಂತನ"ದ ಉದ್ದೇಶ.
"ಚಿರಂತನ’ ಜರಗಿಸಿದ ಇಂತಹ ಕೆಲವು ಕಾರ್ಯಕ್ರಮಗಳು: ಡಾ. ಸಾವಿತ್ರಿ ದೈತೋಟ ಅವರಿಂದ ಆರೋಗ್ಯ ರಕ್ಷಣೆ ಬಗ್ಗೆ ಉಪನ್ಯಾಸಗಳು; ದಿವಂಗತ ಡಾ. ಪಲ್ಲತ್ತಡ್ಕ ಕೇಶವ ಭಟ್ ಅವರಿಂದ ಆರೋಗ್ಯಪೂರ್ಣ ಜೀವನಕ್ಕಾಗಿ ದಿನನಿತ್ಯದ ಆಹಾರ ಬಗ್ಗೆ ಉಪನ್ಯಾಸ. ಪ್ರೊ. ಶಂಕರ್ ಅವರಿಂದ ಮೂಢನಂಬಿಕೆಗಳ ಬಗ್ಗೆ ಮ್ಯಾಜಿಕ್ ಪ್ರದರ್ಶನ.
ಸ್ವ-ಉದ್ಯೋಗದ ಬಗ್ಗೆ ೨೦೦೪ರಿಂದೀಚೆಗೆ ಹಲವಾರು ಕಾರ್ಯಕ್ರಮಗಳನ್ನು ಸಾರ್ವಜನಿಕರ ಹಾಗೂ ಸ್ವಸಹಾಯ ಸಂಘಗಳ ಸದಸ್ಯರ ಅನುಕೂಲಕ್ಕಾಗಿ "ಚಿರಂತನ" ಏರ್ಪಡಿಸಿದೆ. ಸುರತ್ಕಲ್ ಪರಿಸರದ ಜನರಿಗಾಗಿ ಆರೋಗ್ಯ, ಜ್ನಾಪಕಶಕ್ತಿ , ದಂತಆರೋಗ್ಯ, ಕಣ್ಣು ಬಗ್ಗೆ ತಪಾಸಣಾ ಶಿಬಿರಗಳನ್ನೂ ಜರಗಿಸಿದೆ.
"ಚಿರಂತನ"ದಲ್ಲಿ ಹರಿಕಥೆ, ಯೋಗ, ಸಂಗೀತ, ವಾದ್ಯಸಂಗೀತ, ಭಕ್ತಿಗೀತೆ, ಯಕ್ಷಗಾನ, ತಾಳಮದ್ದಲೆ, ನಾಟಕ, ಹಾಸ್ಯಲಹರಿ - ಇಂತಹ ಕಾರ್ಯಕ್ರಮಗಳನ್ನು ತಿಂಗಳಿಗೊಮ್ಮೆ ಹಮ್ಮಿಕೊಳ್ಳಲಾಗುತ್ತದೆ. ಇವುಗಳಲ್ಲಿ ನಿವಾಸಿಗಳ ಜೊತೆಗೆ ಸಾರ್ವಜನಿಕರೂ ಭಾಗವಹಿಸುತ್ತಾರೆ.
ಡಾ. ಸಾವಿತ್ರಿ ದೈತೋಟ, ದೀಪಾ ರೋಸ್, ಸೌಮ್ಯಲಕ್ಷ್ಮಿ ಭಟ್, ಶ್ರೀಮತಿ ಸಿ. ಸರೋಜಿನಿ ಹಾಗೂ ಇತರ ಹಲವರ ಸಹಕಾರದಿಂದ "ಚಿರಂತನ"ದ ಚಟುವಟಿಕೆಗಳು ಮುಂದುವರಿದಿವೆ. ಆಸಕ್ತರು "ಚಿರಂತನ’ಕ್ಕೆ ತಮ್ಮ ನೆರವು ನೀಡಬಹುದು. ಅದರ ವೆಬ್ಸೈಟ್ www.chiranthana.org ಮತ್ತು ಮಿಂಚಂಚೆ bderaje@gmail.com
ಮಂಗಳೂರಿನ ಕೂಟ ಮಹಾಜಗತ್ತಿನ ಮಹಿಳಾ ವೇದಿಕೆಯ ಸದಸ್ಯೆಯರು ೯ ಅಕ್ಟೋಬರ್ ೨೦೧೧ರಂದು "ಚಿರಂತನ"ಕ್ಕೆ ಭೇಟಿಯಿತ್ತೆವು. ಅಲ್ಲಿ ಹಿರಿಯರ ಜೊತೆಗೆ ಕಳೆದ ಸಮಯವು ನಮ್ಮ ಜೀವನದಲ್ಲಿ ಮರೆಯಲಾಗದ ಅನುಭವ. ಇಂತಹ ಅನುಭವಗಳೇ ನಮ್ಮ ಕಣ್ಣು ತೆರೆಸಬಲ್ಲವು.
ಫೋಟೋ: "ಚಿರಂತನ" ವೆಬ್ಸೈಟ್
Comments
ಉ: "ಚಿರಂತನ" - ಹಿರಿಯರ ಆಶ್ರಯಧಾಮ