ಚಿರಯೌವನ ಸೌಂದರ್ಯ ಪ್ರಸಾಧನಗಳಿಂದ ಸಾಧ್ಯವೇ? (ಭಾಗ 2)

ಚಿರಯೌವನ ಸೌಂದರ್ಯ ಪ್ರಸಾಧನಗಳಿಂದ ಸಾಧ್ಯವೇ? (ಭಾಗ 2)

ಸೌಂದರ್ಯ ಪ್ರಸಾಧನಗಳಿಂದ ಹಾನಿ
ಸೌಂದರ್ಯ ಪ್ರಸಾಧನಗಳಲ್ಲಿ ಏನಿದೆ? “ಮುಖ್ಯವಾಗಿ ನೀರು ಇದೆ” ಎಂದು ಬ್ರಿಟನಿನ ಬಳಕೆದಾರರ ಎಸೋಸಿಯೇಷನಿನ “ವಿಚ್?" ಪತ್ರಿಕೆ ತಿಳಿಸಿದೆ. ಅದರ ಜೊತೆಗೆ, ಕ್ರೀಂ ಚೆನ್ನಾಗಿ ಕಾಣುವಂತೆ ಮಾಡಲು ಬಣ್ಣಗಳನ್ನೂ, ಪರಿಮಳ ಬರುವಂತೆ ಮಾಡಲು ಸುಗಂಧ ದ್ರವ್ಯಗಳನ್ನೂ ಬೆರೆಸುತ್ತಾರೆ. ಅವುಗಳು “ಚಿರಯೌವನದ ರಾಮಬಾಣ”ವೆಂಬ ಪ್ರಚಾರ ತಂತ್ರಕ್ಕಾಗಿ ಮೂರು ರಾಸಾಯನಿಕ ಅಂಶಗಳನ್ನು ಬಳಸುತ್ತಾರೆ.

ಆಲ್ಫಾ-ಹೈಡ್ರಾಕ್ಸಿ ಆಸಿಡ್‌ಗಳು: “ಹಣ್ಣಿನ ಆಮ್ಲಗಳು” ಎಂದು ಕರೆಯಲಾಗುವ ಇವು ಕಬ್ಬು, ಹಾಲು, ದ್ರಾಕ್ಷಿ ಮತ್ತು ನಿಂಬೆಹಣ್ಣುಗಳಲ್ಲಿವೆ. ಇವುಗಳಿಂದಾಗಿ ಚರ್ಮ ಹೊಳೆಯುವಂತೆ ಕಾಣಬಹುದು. ಆದರೆ, ಅಮೇರಿಕದ ಆಹಾರ ಮತ್ತು ಔಷಧಿ ಪ್ರಾಧಿಕಾರಕ್ಕೆ 1997ರಲ್ಲಿ ಒಂದೇ ತಿಂಗಳಿನಲ್ಲಿ ಇವುಗಳ ಹಾನಿಕರ ಪರಿಣಾಮಗಳ್ ಬಗ್ಗೆ 100 ದೂರುಗಳು ಬಂದವು! ಈ ಆಸಿಡ್‌ಗಳಿದ್ದ ಸೌಂದರ್ಯ ಪ್ರಸಾಧನಗಳು ತುರಿಕೆ, ಚರ್ಮದಲ್ಲಿ ಗುಳ್ಳೆ ಹಾಗೂ ಚರ್ಮ ಸುಟ್ಟು ಹೋಗಲು ಕಾರಣವಾಗಿದ್ದವು.

ಕೊಲ್ಲಾಜೆನ್ ಮತ್ತು ಇಲಾಸ್ಟಿನ್: ಇವು ಚರ್ಮದ ಕೆಳಪದರದಲ್ಲಿರುವ ಅಂಗಾಂಶಗಳು. ಯೌವನ ಕಳೆಯುವ ತನಕ ಇವುಗಳಿಂದಾಗಿ ಚರ್ಮ ದೃಢವಾಗಿ ಮತ್ತು ರಬ್ಬರಿನಂತೆ ಇರುತ್ತದೆ. ವಯಸ್ಸಾದಂತೆ ಅವುಗಳ ಸ್ಥಿತಿಸ್ಥಾಪಕತ್ವ ಕಡಿಮೆಯಾಗಿ, ಸುಕ್ಕುಗಳು ಮೂಡುತ್ತವೆ. ಪ್ರಸಾಧನಗಳ ಮೂಲಕ ಅವನ್ನು ಚರ್ಮಕ್ಕೆ ಲೇಪಿಸಿದರೆ, ಚರ್ಮದ ಕೆಳಪದರ್ದಲ್ಲಿರುವ ಅವುಗಳ ಪರಿಮಾಣ ಹೆಚ್ಚುಕಡಿಮೆಯಾಗುವುದಿಲ್ಲ. ಯಾಕೆಂದರೆ ಅವು ಚರ್ಮವನ್ನು ತೂರಿಕೊಂಡು ಒಳ ಹೋಗಲು ಸಾಧ್ಯವೇ ಇಲ್ಲ. ಈ ವೈಜ್ನಾನಿಕ ಸತ್ಯ ಇವುಗಳಿಂದ ಏನೇನೂ ಪ್ರಯೋಜನವಿಲ್ಲ ಎಂದು ತೋರಿಸಿಕೊಡುತ್ತದೆ.

ರೆಟಿನೋಲ್: ಇದು ವಿಟಮಿನ್-“ಎ"ಯ ವೈಜ್ನಾನಿಕ ಹೆಸರು. ನಮ್ಮ ದೇಹ ಆರೋಗ್ಯವಂತ ಜೀವಕೋಶಗಳನ್ನು ರಚಿಸಲು ಮತ್ತು ಕಾಯ್ದುಕೊಳ್ಳಲು ವಿಟಮಿನ್-ಎಯನ್ನು ಬಳಸುತ್ತದೆ ಎಂಬುದೇನೋ ನಿಜ. ಆದರೆ ಇದರಿಂದ ಅಪಾಯಗಳೂ ಇವೆ. ಇದು ಚರ್ಮವನ್ನು ಶುಷ್ಕವಾಗಿಸಿ, ಕೆಂಪಾಗಿಸುತ್ತದೆ. ಹುಟ್ಟುವ ಮಕ್ಕಳ ನ್ಯೂನತೆಗಳಿಗೂ ಇದಕ್ಕೂ ಸಂಬಂಧ ಇದೆಯೆಂದು ತಿಳಿದು ಬಂದಿದೆ. ಹಾಗಾಗಿ ಗರ್ಭಿಣಿಯರು ಇದನ್ನು ಬಳಸಲೇ ಬಾರದು. ಗರ್ಭ ಧರಿಸುವ ಕಿಂಚಿತ್ ಸಂಭವವಿದ್ದರು ಇದನ್ನು ಬಳಸಬಾರದೆಂದು ವಿಜ್ನಾನಿಗಳು ಎಚ್ಚರಿಸಿದ್ದಾರೆ.  

ಜಾಗರೂಕರಾಗಿರಿ
ಚಿರಯೌವನದ ಸೌಂದರ್ಯ ಪ್ರಸಾಧನಗಳ ಇನ್ನೊಂದು ಟೊಳ್ಳು ಜಾಹೀರಾತು: “ಅಲರ್ಜಿ ಪರೀಕ್ಷೆಗೆ ಒಳಗಾಗಿದೆ” ಅಥವಾ “ಚರ್ಮ ತಜ್ನರಿಂದ ಪರೀಕ್ಷಿಸಲಾಗಿದೆ” ಎಂಬ ಹೇಳಿಕೆ. ಆದರ ಅಂತಹ ಪರೀಕ್ಷೆಗಳ ಫಲಿತಾಂಶ ಏನೆಂದು ಈ ಜಾಹೀರಾತುಗಳು ತಿಳಿಸುವುದೇ ಇಲ್ಲ!

ಸೌಂದರ್ಯ ಪ್ರಸಾಧನಗಳನ್ನು ನಿಯಂತ್ರಿಸುವ ಕಾಯಿದೆಗಳು ನಮ್ಮ ದೇಶದಲ್ಲಿ ಹಲ್ಲಿಲ್ಲದ ಹುಲಿಗಳಾಗಿವೆ. ಆದ್ದರಿಂದ ಬಳಕೆದಾರರು ಜಾಗರೂಕರಾಗಬೇಕಾದು ಅತ್ಯಗತ್ಯ. ಅವುಗಳ ಪೊಟ್ಟಣಗಳ ಲೇಬಲ್ ಮತ್ತು ಮಾಹಿತಿಪತ್ರ (ಒಂದು ವೇಳೆ ಕೊಟ್ಟಿದ್ದರೆ)ದಲ್ಲಿ ಮುದ್ರಿಸಿದ್ದನ್ನು ಎಚ್ಚರಿಕೆಯಿಂದ ಓದಿರಿ. ಯಾವುದೇ ಪ್ರಸಾಧನದಿಂದ ತುರಿಕೆ ಅಥವಾ ದಡಿಕೆ ಉಂಟಾದರೆ ತತ್‌ಕ್ಷಣ ಅದರ ಬಳಕೆ ನಿಲ್ಲಿಸಿರಿ.

ಪ್ರಖರ ಸೂರ್ಯ ಕಿರಣಗಳಿಂದ ನಿಮ್ಮನ್ನು ಯಾವತ್ತೂ ರಕ್ಷಿಸಿಕೊಳ್ಳಿರಿ. ಯಾಕೆಂದರೆ ಅತಿ-ನೇರಳೆ ಕಿರಣಗಳು ಚರ್ಮ ಸುಕ್ಕಾಗಲು ಕಾರಣವಾಗುತ್ತವೆ. ಬಿಸಿಲಿನಲ್ಲಿ ಹೋಗಲೇ ಬೇಕೆಂದಾದರೆ, ಟೊಪ್ಪಿ ಅಥವಾ ಕೊಡೆಯ ಮೂಲಕ ಅತಿ-ನೇರಳೆ ಕಿರಣಗಳಿಂದ ರಕ್ಷಣೆ ಪಡೆಯಿರಿ.
ವಯಸ್ಸಾಗುವುದು ಸಹಜ
ನಮ್ಮ ಮುಖದಲ್ಲಿ ಅಥವಾ ಕೈಗಳಲ್ಲಿ ಕೆಲವು ಸುಕ್ಕುಗಳು ಮೂಡಿದರೆ ನಾವೇಕೆ ಭಯ ಪಡಬೇಕು? ಕನ್ನಡಿಯಲ್ಲಿ ಕಾಣುವ ವಯಸ್ಸಿನ ಚಿಹ್ನೆಗಳಿಗೆ ನಾವು ಹೆದರಬೇಕಾಗಿಲ್ಲ. ಯಾಕೆಂದರೆ, ಅವು ಬದುಕಿನಲ್ಲಿ ನಮ್ಮ ಪಕ್ವತೆಯ ಚಿಹ್ನೆಗಳು. ಒಂದೊಂದು ಸುಕ್ಕಿನ ಹಿನ್ನೆಲೆಯಲ್ಲೂ ದಶಕಗಳ ನೋವು ನಲಿವುಗಳ ಖಜಾನೆಯೇ ಹುದುಗಿರುತ್ತದೆ. ಅದನ್ನು ತೆರೆದು ನೋಡಬೇಕಾದರೆ ನಾವು ಕನ್ನಡಿಗಿಂತಲೂ ಆಚೆ ನೋಡಲು ಕಲಿಯಬೇಕು.

ನಮಗೆಲ್ಲರಿಗೂ ವಯಸ್ಸಾಗುವುದು ಸಹಜ. ಆದರೆ, ವಯಸ್ಸಿನಲ್ಲಿ ದೊಡ್ಡವರಾದಂತೆ ಜೀವನದಲ್ಲಿಯೂ ದೊಡ್ಡವರು ಎನಿಸಿಕೊಳ್ಳುವುದು ಸುಲಭವಲ್ಲ. ಯಾಕೆಂದರೆ ನಮ್ಮ ತಲೆಗೂದಲು ಹಣ್ಣಾದರೆ ಸಾಲದು, ನಾವು ಬದುಕಿನಲ್ಲೂ ಹಣ್ಣಾಗಬೇಕು. ಅದಕ್ಕೆ ಬೇಕಾಗಿರುವುದು ಸೌಂದರ್ಯ ಪ್ರಸಾಧನಗಳಲ್ಲ; ಬದುಕಿನ ಬಗ್ಗೆ ಪ್ರೀತಿ. ಚಿರಯೌವನಕ್ಕೆ ಅಗತ್ಯವಾದದ್ದು ನಮ್ಮ ಶರೀರದ ಹೊರಗಿಲ್ಲ, ಒಳಗೇ ಇದೆ - ಅದು ಚಿರನೂತನ ಮನಸ್ಸು, ಅಲ್ಲವೇ?

ಫೋಟೋ 1 ಮತ್ತು 2: ಹಿರಿಯರು ಮತ್ತು ಕಿರಿಯರು - ವಯಸ್ಸಿನ ಅಂತರದ ಚಂದ