ಚೆಲುವು (ವಿಶ್ವಕಥಾಕೋಶ -೪)

ಚೆಲುವು (ವಿಶ್ವಕಥಾಕೋಶ -೪)

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಧಾನ ಸಂಪಾದಕರು: ನಿರಂಜನ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೬೫.೦೦, ಮುದ್ರಣ: ೨೦೧೧

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.

ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ ಇದೇ ಮೊತ್ತಮೊದಲನೆಯದು.

ಇದೊಂದು ಬೃಹತ್ ಯೋಜನೆ. ಒಟ್ಟು ೨೫ ಸಂಪುಟಗಳಲ್ಲಿ ಇದರ ಪ್ರಕಟಣೆ. ಜಗತ್ತಿನ ಅತ್ಯುತ್ತಮ ಸಣ್ಣ ಕಥೆಗಳ ಈ ಮಹಾ ಸಂಕಲನವನ್ನು ಸಂಪಾದಿಸುವ ಗುರುತರವಾದ ಹೊಣೆಯನ್ನು ಹೊತ್ತವರು ಖ್ಯಾತ ಸಾಹಿತಿಯೂ, ಸ್ವತಃ ಶ್ರೇಷ್ಟ ಕಥೆಗಾರರೂ ಆದ ನಿರಂಜನರು.”

ಇದು ವಿಶ್ವಕಥಾಕೋಶದ ಮೊದಲ ಮುದ್ರಣದ ಸಮಯದಲ್ಲಿ ಬರೆದ ಪ್ರಕಾಶಕರ ನುಡಿ. ಈ ಕಥಾಕೋಶದ ಎಲ್ಲಾ ಪ್ರತಿಗಳು ಮುಗಿದು ಹೋದ ಕಾರಣ, ಹೊಸ ಓದುಗರಿಗೂ ಪುಸ್ತಕ ದೊರೆಯಬೇಕು ಎಂಬ ಸದಾಶಯದಿಂದ ೨೦೧೧ರಲ್ಲಿ ಎಲ್ಲಾ ಪುಸ್ತಕಗಳ ದ್ವಿತೀಯ ಮುದ್ರಣ ಮಾಡಲಾಯಿತು. ಆ ಸಮಯದಲ್ಲಿ ಪ್ರಕಾಶಕರ ನುಡಿ ಹೀಗಿದೆ. 

“ನವಕರ್ನಾಟಕ ಪ್ರಕಾಶನದ ೫೦ರ ಸಂಭ್ರಮದಲ್ಲಿ ‘ವಿಶ್ವಕಥಾಕೋಶ'ದ ಇಪ್ಪತ್ತೈದು ಸಂಪುಟಗಳನ್ನು ಪುನರ್ಮುದ್ರಿಸಿ ಓದುಗರ ಕೈಗಿಡುತ್ತಿದ್ದೇವೆ. ಮೂವತ್ತು ವರ್ಷಗಳ ಕಾಲ ಅಲಭ್ಯವಾಗಿದ್ದ ಜಗತ್ತಿನ ಸಾಹಿತ್ಯ ಕಥಾ ಕಣಜ ಬೆಳಕು ಕಾಣುವ ಸಮಯದಲ್ಲಿ ಈ ಯೋಜನೆಯ ಹೊಣೆ ಹೊತ್ತ ಶ್ರೇಷ್ಟ ಕಥೆಗಾರ, ಸಾಹಿತಿ ನಿರಂಜನರು ನಮ್ಮೊಂದಿಗೆ ಇದ್ದಿದ್ದರೆ, ನವಕರ್ನಾಟಕದ ಚಿನ್ನದ ಹಬ್ಬ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಈ ಸಂಪುಟಗಳನ್ನು ಅವರಿಗೆ ಅರ್ಪಿಸಿ, ಅವರನ್ನು ನೆನೆಯುತ್ತೇವೆ.”

ಈ ಸಂಪುಟದ ಬೆಲೆ ಕೈಗೆಟಕುವಂತಿದೆ. ಅದಕ್ಕೆ ಕಾರಣ ಇನ್ಫೋಸಿಸ್ ಫೌಂಡೇಶನ್ ಇದರ ಅಧ್ಯಕ್ಷೆಯಾದ ಶ್ರೀಮತಿ ಸುಧಾ ಮೂರ್ತಿಯವರು. ಈಗ ನಮ್ಮ ಕೈಯಲ್ಲಿರುವುದು ವಿಶ್ವಕಥಾಕೋಶದ ನಾಲ್ಕನೆಯ ಸಂಪುಟ ‘ಚೆಲುವು'. ಈ ಸಂಪುಟದಲ್ಲಿ ಮಂಗೋಲಿಯಾ, ಚೀನ, ಜಪಾನ್ ಹಾಗೂ ಕೊರಿಯಾ ದೇಶದ ಆಯ್ದ ಸಣ್ಣ ಕಥೆಗಳಿವೆ. “ಪ್ರಾಚೀನ ಕಾಲದಿಂದಲೂ ಕಥನಕಾರರಿಗೆ ಕೊರಿಯದಲ್ಲಿ ಬಹಳ ಬೇಡಿಕೆ. ಈ ಅಲೆಮಾರಿ ಕಥೆಗಾರರಿಗಾಗಿ ಹಳ್ಳಿಗರು ಕಾದಿರುತ್ತಿದ್ದರು. ಉಪಾಹಾರ (ಪಾನ) ಮಂದಿರದಲ್ಲೋ ಸಂತೆಪೇಟೆಯಲ್ಲೋ ಜನ ಜಂಗುಳಿಯ ಎದುರು ಕಥನ ನಡೆಯುತ್ತಿತ್ತು. ಕಾವ್ಯ ರಮ್ಯವೋ? ನಾಟಕವೋ? ಕಥೆಯೊ? ಎಲ್ಲದಕ್ಕೂ ಅಲ್ಲಿ ಸ್ಥಾನ. ಲೋಹದ ಆಮೆಗಳನ್ನು ಕಳಿಸಿ ಜಪಾನೀ ನೌಕಾಪಡೆಯನ್ನು ಧ್ವಂಸ ಮಾಡಿದನಲ್ಲ ನೌಕಾ ಸೇನಾನಿ ಯಿ ಸೂನ್ ಸಿನ್? ಆತ ನಾಯಕನಾಗಿರುವ ಒಂದು ಆಧುನಿಕ ಗೀತ ನಾಟಕ ಬಲು ಜನಪ್ರಿಯ.” ಎಂದು ಮುಖ್ಯ ಸಂಪಾದಕರು ಪ್ರಸ್ತಾವನೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಪುಸ್ತಕದಲ್ಲಿ ೧೩ ಕಥೆಗಳಿವೆ. ಅವುಗಳೆಂದರೆ ಚೆಲುವು (ಮಯಗ್ಮರ್ ದೆಂಬರ್ಜಿನ್), ಅಪ್ಪ ಯಾವಾಗ ಬರ್ತಾರೆ? (ಲಮ್ ಸುರಿಂಗೀನ್), ಕಣ್ಣುಗಳು ( ಎಸ್.ಎರ್ದೇನೆ), ನಮುಂದರೀ ( ಸೋನೋಮಿನ್ ಉದ್ವಾಲ್), ಹುಚ್ಚನ ದಿನಚರಿ (ಲು ಷುನ್), ಎರಡನೇ ಪೀಳಿಗೆ (ಮಾವೋ ತೂನ್), ಇಬ್ಬರು ದಳ ನಾಯಕರು ( ಚಿ ಷ್ವೇ ಪೆಯ್), ಪ್ರೇಮಕ್ಕೆ ಸ್ಥಾನ ( ಲಿಉ ಜಿನ್ ವು), ಕಿರುಕುಳದ ಒಡ್ಡು (ತ್ಸಾವ್ ಚ್ಯಾ ಚ್ಯೇನ್), ಹಡಗು ಕಟ್ಟೆ ( ಮೋರಿ ಓಗಾಇ), ಮಣ್ಣಿನ ಗೊಂಬೆ ( ಸಾತಾ ಇನೇಕೋ), ಕ್ರೇನ್ ಪಥ (ಓಮ್ ದಾನ್ ಉಂಗ್), ಅಸ್ವಸ್ಥತೆ (ಚ ಲೋಂಗ್ ಸು).

ಇಲ್ಲಿರುವ ಕೆಲವು ಕಥೆಗಳ ಲೇಖಕರ ಬಗ್ಗೆ ಪುಟ್ಟದಾದ ಮಾಹಿತಿಯನ್ನು ಕೊನೆಯ ಪುಟಗಳಲ್ಲಿ ನೀಡಲಾಗಿದೆ. ಇದರಿಂದ ಅಪರಿಚಿತರಾಗಿರುವ ಲೇಖಕರನ್ನು ಪರಿಚಯ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇಲ್ಲಿರುವ ಎಲ್ಲ ಕಥೆಗಳನ್ನು ಜಿ.ಎಸ್.ಸದಾಶಿವ ಇವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ದ್ವಿತೀಯ ಮುದ್ರಣವನ್ನು ಪ್ರಕಾಶಕರು ಈ ಸಂಪುಟದ ಮುಖ್ಯ ಸಂಪಾದಕರಾದ ನಿರಂಜನ ಅವರಿಗೇ ಅರ್ಪಿಸಿದ್ದಾರೆ. ಪುಸ್ತಕ ೧೭೦ ಪುಟಗಳನ್ನು ಹೊಂದಿದೆ. ಚೀನಾ, ಜಪಾನ್ ಮುಂತಾದ ವಿದೇಶಗಳ ಕಥೆಗಳನ್ನು ಓದಿ ಆನಂದಿಸಲು ಇದು ಸೂಕ್ತ ಪುಸ್ತಕವಾಗಿದೆ.