ಜಪಾನಿನ ಆತ್ಮಹತ್ಯಾ ಕಾಡು

ಆತ್ಮಹತ್ಯೆ ಮಹಾ ಪಾಪ ಎನ್ನುತ್ತಾರೆ ಎಲ್ಲರೂ. ಈ ಕೃತ್ಯ ಮಾಡುವವರಿಗೂ ಅದರ ಅರಿವು ಇದ್ದೇ ಇರುತ್ತದೆ. ಆದರೂ ಒಂದು ಬಲಹೀನ ಮನಸ್ಥಿತಿಯಲ್ಲಿ ಈ ಕೆಲಸ ಮಾಡಿ ಬಿಡುತ್ತಾರೆ. ಸಾಲ, ಪ್ರೇಮ ವೈಫಲ್ಯ, ತಂದೆ ಹೊಡೆದ ಕಾರಣ, ಶಾಲೆಯಲ್ಲಿ ಅವಮಾನ, ಬೈಕ್ ತೆಗೆದುಕೊಡಲಿಲ್ಲ ಹೀಗೆ ಹಲವಾರು ಸಣ್ಣ ದೊಡ್ಡ ಕಾರಣಗಳು ಈ ಆತ್ಮಹತ್ಯೆಯ ಹಿಂದೆ ಇರುತ್ತದೆ. ನಮಗೆ ಸಣ್ಣ ಕಾರಣ ಎಂದು ಅನಿಸಿದರೆ ಈ ಕೃತ್ಯ ಮಾಡುವವನಿಗೆ ಅದು ದೊಡ್ದ ಬಗೆಹರಿಯದ ಸಮಸ್ಯೆ ಎಂದೇ ಅನಿಸುತ್ತೆ. ಸ್ವಲ್ಪ ಸಮಯ ಕಳೆದರೆ ಆ ಕೆಟ್ಟ ಕಾಲ ಹೊರಟುಹೋಗುತ್ತಿತ್ತೋ ಏನೋ? ಆದರೆ ಬಲಹೀನ ಮನಸ್ಸು ಈ ಕೃತ್ಯ ಮಾಡುವಂತೆ ಪ್ರೇರೇಪಿಸಿಯೇ ಬಿಡುತ್ತದೆ.
ಜಪಾನ್ ದೇಶದಲ್ಲಿ ಒಂದು ಅರಣ್ಯ ಇದೆಯಂತೆ. ಅವೊಕಿಗಹರ (Aokigahara) ಅಥವಾ ಆತ್ಮಹತ್ಯಾ ಕಾಡು ಎಂದೇ ಕುಖ್ಯಾತಿಗೆ ಒಳಗಾಗಿದೆ. ಸಾಯ ಬಯಸುವವರೆಲ್ಲಾ ಈ ಕಾಡಿಗೆ ಹೋಗಿ ತಮ್ಮ ಜೀವವನ್ನು ಕಳೆದುಕೊಳ್ಳುತ್ತಾರೆ. ಜಪಾನ್ ದೇಶದ ಮೌಂಟ್ ಫ್ಯೂಜಿ ಬಳಿ ಇರುವ ಈ ಕಾಡು ಆತ್ಮಹತ್ಯಾ ಕಾಡು ಎಂದೇ ಹೆಸರು ಪಡೆದಿದೆ. ಈ ಕಾಡು ತುಂಬಾನೇ ಮರಗಳಿಂದ ಕೂಡಿದ್ದು, ದಟ್ಟವಾದ ಸಸ್ಯ ಸಂಪತ್ತು ಹೊಂದಿದೆ. ಕಾಡಿನ ಒಳಗಡೆ ಪ್ರವೇಶಿಸಿದ ನಂತರ ನಿಮಗೆ ಹೊರಗೆ ಬರುವ ಮನಸ್ಸಾದರೂ ನಿಮಗೆ ಬರಲು ದಾರಿ ಸಿಗುವುದಿಲ್ಲ. ಅದಕ್ಕಾಗಿ ಕೆಲವರು ಆತ್ಮಹತ್ಯೆ ಮಾಡಲು ಮನಸ್ಸು ಮಾಡಿ ಕಾಡಿನ ಒಳಗೆ ಹೋದಾಗ ಉದ್ದನೆಯ ಟೇಪ್ ಅಥವಾ ಹಗ್ಗವನ್ನು ತೆಗೆದುಕೊಂಡು ಹೋಗುತ್ತಾರೆ. ಕಾಡಿನ ಒಳಗೆ ಹೊಕ್ಕ ನಂತರ ಆ ಹಗ್ಗವನ್ನು ಒಂದು ಮರಕ್ಕೆ ಕಟ್ಟುತ್ತಾರೆ. ನಂತರ ಅದನ್ನು ಬಿಡುತ್ತಾ ಹೋಗುತ್ತಾರೆ. ಇದು ಯಾಕೆಂದರೆ ಕಾಡಿನ ಒಳ ಹೊಕ್ಕ ನಂತರ ಮನಸ್ಸು ಬದಲಾಯಿಸಿಕೊಂಡು ಬದುಕ ಬೇಕೆಂಬ ಆಶೆಯಾದರೆ ಹಿಂದಿರುಗಿ ಬರಲು ಸಹಕಾರಿಯಾಗಲಿ ಎಂದು. ಇಂತಹ ಟೇಪ್, ದಾರಗಳು ಕಾಡಿನಲ್ಲೆಲ್ಲಾ ಯಥೇಚ್ಚವಾಗಿ ಕಂಡು ಬರುತ್ತವೆ.
ಈ ದಟ್ಟ ಕಾನನದೊಳಗೆ ನಡೆದಾಡುವುದೇ ಒಂದು ಸಾಹಸ. ಅಲ್ಲಿ ಮೊಬೈಲ್ ನೆಟ್ ವರ್ಕ್ ಸಿಗುವುದಿಲ್ಲ. ಬದುಕುವುದನ್ನು ಅಂತ್ಯ ಮಾಡಬೇಕೆಂದು ಬಯಸುವವರಿಗಾಗಿಯೇ ಈ ಕಾಡು ಇದ್ದಂತಿದೆ. ಒಳಹೊಕ್ಕವರು ಅಲ್ಲಿಯ ಕ್ರೂರ ಮೃಗಗಳಿಗೆ ಅಥವಾ ಹೊರ ಬರಲು ದಾರಿ ಸಿಗದೇ ಹಸಿವಿನಿಂದಲೇ ಸಾಯುತ್ತಾರೆ. ಆ ಊರಿನ ಪೋಲೀಸರೂ ಈಗ ಕಾಡಿನ ಹತ್ತಿರ ‘ಎಚ್ಚರ’ ‘ಪ್ರವೇಶವನ್ನು ನಿಷೇಧಿಸಲಾಗಿದೆ' ಎಂಬ ಬೋರ್ಡ್ ಗಳನ್ನು ಹಾಕಿದ್ದಾರೆ. ಅತ್ಯಂತ ಸುಂದರವಾದ ಈ ಕಾಡು ಯಾವ ಕಾರಣಗಳಿಗೆ ಖ್ಯಾತಿ ಪಡೆಯಬೇಕಿತ್ತೋ, ಅದನ್ನು ಪಡೆಯದೇ ಆತ್ಮಹತ್ಯೆಯ ಕಾಡು ಎಂಬ ಹೆಸರಿನಿಂದ ಕುಖ್ಯಾತಿ ಪಡೆಯುತ್ತಿದೆ. ಮುಂದಿನ ದಿನಗಳಲ್ಲಾದರೂ ಜನರು ತಮ್ಮ ದುರ್ಬಲ ಮನಸ್ಥಿತಿಯಿಂದ ಹೊರಗೆ ಬಂದು ಕಾಡಿಗೆ ಹೋಗಿ ಆತ್ಮಹತ್ಯೆಯನ್ನು ಮಾಡದಂತೆ ಆಶಿಸುವ ಅಲ್ಲವೇ?
ಹೌದು ಓದುಗರೇ, ಒಂದು ದುರ್ಬಲ ಮನಸ್ಸು ಹಾಗೂ ಕೆಟ್ಟ ಘಳಿಗೆ ನಮ್ಮ ಜೀವವನ್ನೇ ಬಲಿತೆಗೆದುಕೊಳ್ಳುತ್ತದೆ. ಆದುದರಿಂದ ನಿಮಗೆ ಎಂದಾದರೂ ಈ ಕ್ಷಣಗಳು ಎದುರಾದರೆ, ನಿಮ್ಮ ಆತ್ಮೀಯರ ಬಳಿ ಮಾತನಾಡಿ. ಗೆಳೆಯರು, ಸಂಬಂಧಿಕರೂ ಅಷ್ಟೇ, ಇಂತಹ ವ್ಯಕ್ತಿಗಳ ಸಣ್ಣ ಸಣ್ಣ ಸಮಸ್ಯೆಗಳನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಅವರಿಗೆ ಧೈರ್ಯ, ಸಾಂತ್ವನ ಹೇಳಿ. ಅವರಿಗಾಗಿ ಸಮಯ ಕೊಡಿ. ನಿಮ್ಮಿಂದ ಒಂದು ಜೀವ ಖಂಡಿತಾ ಉಳಿದೀತು. ನೆನಪಿಡಿ.
ಮಾಹಿತಿ ಹಾಗೂ ಚಿತ್ರ ಕೃಪೆ: ನಾಸ್ ಡೈಲಿ