ಜಪ - ತಪಗಳ ಮಹತ್ವವೇನು?

ಜಪ - ತಪಗಳ ಮಹತ್ವವೇನು?

"ಜಪ" ಈ ಎರಡು ಅಕ್ಷರಗಳಲ್ಲಿ ಅಡಗಿರುವ ಅರ್ಥ ಮತ್ತು ಶಕ್ತಿಯನ್ನು ಜ್ಞಾನಿಗಳಾದ ಸಿದ್ಧರು, ಸಾಧುಗಳು, ಋಷಿ, ಮುನಿಗಳು ಮತ್ತು ದೈವ ಭಕ್ತರು ಮಾತ್ರ ಅರಿತಿರುತ್ತಾರೆ. ಈ ಕಾರಣದಿಂದಲೇ ಇವರುಗಳು ಯಾವಾಗಲೂ ತಮ್ಮ ಇಷ್ಟ ದೈವವನ್ನು ಜಪಿಸುತ್ತಲೇ ಇರುತ್ತಾರೆ. ಜಪ ಎಂಬ ಪದವು "ಜಪಿಸು" ಎನ್ನುವ ಪದದಿಂದ ಮೂಡಿ  ಬಂದಿದೆ ಎಂದರೆ ತಪ್ಪಾಗಲಾರದು...

"ಜಪ" ಶಬ್ದವನ್ನು ವಿಶ್ಲೇಷಣೆ ಮಾಡಿದಾಗ, ಈ ರೀತಿ ಅರ್ಥ ಬರುತ್ತದೆ. ಅದನ್ನು ಸಂಸ್ಕೃತ ಭಾಷೆಯಲ್ಲಿ ಈ ರೀತಿ ತಿಳಿಸಲಾಗಿದೆ

"ಜ" ಕಾರೋ ಜನ್ಮ ವಿಚ್ಚೇದನ

"ಪ" ಕಾರೋ ಪಾಪನಾಶಕl

ತಸ್ಮಾಜ್ಯಪ ಇತಿಪ್ರೊಕ್ತೋ

ಜನ್ಮ ಪಾಪ ವಿನಾಶಕll

"ಜ"ಕಾರವು ಜನ್ಮ ವಿನಾಶಕವಾದದ್ದೆಂದೂ "ಪ" ಕಾರವು ಪಾಪಗಳನ್ನು ನಾಶ ಮಾಡುವುದೆಂದೂ, ಜನ್ಮ ಪವಿತ್ರವಾಗ ಬೇಕಾದರೆ "ಜಪ" ಅವಶ್ಯಕವೆಂದಾಗುತ್ತದೆ.

"ಜಪ" ಅಂದರೇನು? ಎಂಬ ಜಿಜ್ಞಾಸೆ ಉಂಟಾಗುತ್ತದೆ. ಅದನ್ನು ಈ ರೀತಿ ಅರ್ಥೈಸ ಬಹುದು. ಪರಮಾತ್ಮನನ್ನು ಮಂತ್ರದ ರೂಪದಲ್ಲಾಗಲೀ, ನಾಮ ರೂಪದಲ್ಲಾಗಲೀ ಮನಸ್ಸಿನಲ್ಲಿ ಧ್ಯಾನಿಸುವುದೇ "ಜಪ". ಕೆಲವರು ಜೋರಾಗಿ ನಾಮ ಸ್ಮರಣೆ ಮಾಡುತ್ತಾ ಬೇರೆಯವರ ಕಿವಿಗೂ ಬೀಳುವಂತೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಪಠಿಸುವವರಿಗೂ, ಕೇಳುವವರಿಗೂ ಏಕ ಕಾಲದಲ್ಲಿ ಫಲ ದೊರಕುತ್ತದೆ. ಜಪಿಸುವ "ಬೀಜ" ಮಂತ್ರವಾಗಲೀ, "ತಾರಕ" ಮಂತ್ರವನ್ನಾಗಲೀ, ಅಥವಾ ಇಷ್ಟ ದೇವತಾ ಮಂತ್ರವನ್ನಾಗಲೀ, ಗುರುಗಳಿಂದ, ಜ್ಞಾನಿಗಳಿಂದ ಅಥವಾ ಹಿರಿಯರಿಂದ ಉಪದೇಶ ಪಡೆಯ ಬೇಕೆಂಬ ನಿಯಮವಿದೆ.

"ಜಪ"ದಲ್ಲಿ ಮೂರು ವಿಧಾನಗಳಿವೆ...

ವಾಚಕ : ಬೇರೆಯವರ ಕಿವಿಗೆ ಬೀಳುವಂತೆ ಪಠಿಸುವುದು...

ಉಪಾಂಶು : ತುಟಿಗಳು ಅಲುಗುತ್ತಿದ್ದರೂ ಶಬ್ದವು ಹೊರಗೆ ಬಾರದಂತಿರುವುದು...

ಮಾನಸೀ ಜಪ : ಮನಸ್ಸಿನಲ್ಲಿ ಧ್ಯಾನಿಸುವುದು...

ವಾಚಕ ಜಪಕ್ಕಿಂತಲೂ ಹತ್ತು ಪಾಲು ಶ್ರೇಷ್ಟವಾದುದ್ದು ಉಪಾಂಶು... ಉಪಾಂಶುವಿಗಿಂಲೂ ಮೂರು ಪಟ್ಟು ಶ್ರೇಷ್ಟವಾದುದ್ದು, ಮಾನಸಿಕ ಜಪ... ಆದ್ದರಿಂದ ಮಾನಸಿಕ ಜಪವನ್ನು ಅಭ್ಯಸಿಸುವುದು ಸರ್ವಶ್ರೇಷ್ಟ.. ಇದನ್ನು "ಮೌನ"ವೆಂದು ಕರೆಯಲಾಗುತ್ತದೆ...

ಜಪವನ್ನು ಉಪದೇಶಿಸುವವನನ್ನು "ಗುರು" ಎಂದು ಕರೆಯಲಾಗುತ್ತದೆ... "ಗುರು" ಎಂಬ ಶಬ್ದಕ್ಕೆ ಅರ್ಥ "ಗು" ಎಂದರೆ ಕತ್ತಲು ಅಜ್ಞಾನವೆಂದಾಗುತ್ತದೆ. (ಗುಹೆ ಕತ್ತಲು ಪ್ರದೇಶ) "ರು" ಎಂದರೆ ಅದನ್ನು ಪರಿಹರಿಸುವವನು ಎಂದಾಗುತ್ತದೆ....ಗುರು ಉಪದೇಶ ಮಾಡುವುದರ ಜೊತೆಗೆ  ಆಶೀರ್ವಾದವನ್ನೂ ಮಾಡುತ್ತಾನೆ. ಶಿಷ್ಯನಿಗೆ ಗುರುವಿನ ಆಶೀರ್ವಾದವೇ ಮುಖ್ಯ.. ಉಪದೇಶಕ್ಕೆ ದಾರಿ...

ಗುರುವು ಉಪದೇಶ ಮಾಡುವ ಮಂತ್ರವು, ಏಕಾಕ್ಷರಿ

ದ್ವೈಕ್ಷರಿ 

ಪಂಚಾಕ್ಷರಿ

ಅಷ್ಟಾಕ್ಷರಿ 

ದಶಾಕ್ಷರಿ

ಪಂಚ ದಶಾಕ್ಷರಿ 

ಶೋಡಶಾಕ್ಷರಿ.... ಇವುಗಳಲ್ಲಿ ಯಾವುದೇ ಇರ ಬಹುದು. ಇವುಗಳಲ್ಲೆವೂ ಭಗವಂತನನ್ನು ಸ್ತುತಿಸುವುದೇ ಆಗಿದೆ...

ಜಪ ಮಾಡುವವರು ಕೈನಲ್ಲಿ ಜಪಮಾಲೆಯನ್ನು ಹಿಡಿದು ಜಪ ಮಾಡುವುದನ್ನು ಕಾಣಬಹುದು. ಜಪಮಾಲೆಯಲ್ಲಿ ನೂರ ಎಂಟು ಮಣಿಗಳಿರುತ್ತವೆ. ಈ ಮಣಿಗಳನ್ನು ತುಳಸಿ ಗಿಡದ ಕಾಂಡದಿಂದ ಮಾಡಲಾಗುತ್ತದೆ, ಇಲ್ಲವೆ ಚಿಕ್ಕ ರುದ್ರಾಕ್ಷಿಗಳನ್ನು ಪೋಣಿಸಿ ತಯಾರಿಸಲಾಗುತ್ತದೆ. ಕೆಲವರು ಗಾಜಿನ ಮಣಿಗಳಿಂದ ತಯಾರಿಸಿದ ಜಪಮಣಿಗಳನ್ನು ಉಪಯೋಗಿಸುತ್ತಾರೆ. 

ಜಪಸರದಲ್ಲಿ 108 ಮಣಿಗಳಿರಬೇಕೆಂಬ ನಿಯಮವಿದೆ. ಈ ಮಣಿಗಳು ಉಪನಿಷತ್ತನ್ನು ಪ್ರತಿನಿಧಿಸುತ್ತವೆ. ಅಲ್ಲದೆ ಅಷ್ಟೋತ್ತರ ಅತ್ಯಂತ ಗೌರವವನ್ನು ಹೊಂದಿರುವ ಸಂಖ್ಯೆ. ಭಗವಂತನಿಗೆ ಅಷ್ಟೋತ್ತರ ಪೂಜೆ ಅತ್ಯಂತ ಪ್ರಿಯವಾದುದ್ದು. ಈ ಪೂಜೆಯಲ್ಲಿ ಭಗವಂತನನ್ನು 108 ರೀತಿಯಲ್ಲಿ ಸ್ತುತಿಸಿ ಪೂಜಿಸಲಾಗುತ್ತದೆ....

ಜಪದಲ್ಲಿ ವಿಧಗಳಿವೆ...

ನಿತ್ಯ ಜಪ...

ವೈಯಕ್ತಿಕ ಜಪ...

ಪ್ರಾಯಶ್ಚಿತ್ತ ಜಪ...

ಅಚಲ ಜಪ...

ಜಲ ಜಪ...

ಅಖಂಡ ಜಪ...

ಪ್ರದಕ್ಷಿಣ ಜಪ...

ಲಿಖಿತ ಜಪ...

ಕಾಮ್ಯ ಜಪ...

ಈ ಜಪಗಳು ಪ್ರತಿಯೊಂದೂ ವಿಶೇಷ ಅರ್ಥದಿಂದ ಕೂಡಿದ್ದು ಆಯಾ ಸಂಧರ್ಭಗಳಲ್ಲಿ ಪಠಿಸಲಾಗುತ್ತದೆ....

ಜಪವನ್ನು ಮಾಡುವುದಕ್ಕೆ ಕೆಲವೊಂದಿಷ್ಟು ನಿಯಮ ನಿಬಂಧನೆಗಳಿವೆ. ಅವುಗಳೆಂದರೆ, ಜಪವನ್ನು

ಮಾಡುವ ಸ್ಥಳವು ಪರಿಶುದ್ಧವಾಗಿಯೂ, ಶಾಂತ ವಾತಾವರಣದಿಂದ ಕೂಡಿರಬೇಕು. ಬರೀ ನೆಲದ ಮೇಲೆ ಕೂತು ಜಪ ಮಾಡಬಾರದು. ಮರದ ಮಣೆ ಅಥವಾ ಚಾಪೆಯ ಮೇಲೆ ಪೂರ್ವಾಭಿಮುಖವಾಗಿ ಅಥವಾ ಉತ್ತರಾಭಿಮುಖವಾಗಿ ಕುಳಿತು ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗವನ್ನು ಮನಸ್ಸು ಮೀರಿ ನಿಲ್ಲುವಂತೆ ಏಕ ಮನಸ್ಸಿನಿಂದ ಜಪಿಸಬೇಕು...

ಪ್ರಾತಃಕಾಲ ಎದ್ದ ನಂತರ ಮುಖ ತೊಳೆದು ಏನನ್ನೂ ಸೇವಿಸದೆ ಕೊನೆಯ ಪಕ್ಷ ಒಂದು ಸುತ್ತು (108) ಜಪ ಮಾಡಬೇಕು. ಜಪಮಣಿ ಎಣಿಸುವಾಗ ಹೆಬ್ಬೆರಳು ಮೂರು ಮತ್ತು ನಾಲ್ಕನೆಯ ಬೆರಳುಗಳನ್ನು ಮಾತ್ರ ಉಪಯೋಗಿಸಬೇಕು. ತೋರು ಬೆರಳು ಅಹಂಕಾರ ಸೂಚಕವೆಂದು ಪರಿಗಣಿಸಿ ಅದನ್ನು ಕೈಬಿಡಲಾಗಿದೆ. ಮಾಡುವ ಜಪವನ್ನು ಲೆಕ್ಕ ಮಾಡಿಕೊಳ್ಳಬೇಕು...

ಅಸಂಖ್ಯಾ ಮಸುರಂ ಯಸ್ಮಾತ್l

ತಸ್ಮಾದತೆ ಗಣೀಯತೆ ದೈವಂll

ಎಂಬುದಾಗಿ ತಿಳಿಸಲಾಗಿದೆ. ಇದರ ಅರ್ಥವೆಂದರೆ ಲೆಕ್ಕವಿಲ್ಲದ ಜಪ ಅಸುರ (ರಾಕ್ಷಸ) ಜಪವೆಂದು ಪರಿಗಣಿಸಲ್ಪಡುತ್ತದೆ. ಆದ್ದರಿಂದ ಮಾಡುವ ಜಪಕ್ಕೆ ಲೆಕ್ಕವಿರ ಬೇಕು.

ಪ್ರತಿ ನಿತ್ಯವೂ ಜಪ ಮಾಡುವುದರಿಂದ ವಿಷಯ, ವಸ್ತುಗಳತ್ತ ಹರಿದಾಡುವ ಮಾನಸಿಕ ಚಿಂತನೆಗಳನ್ನು ನಿಯಂತ್ರಿಸುತ್ತದೆ. ಮನಸ್ಸನ್ನು ಏಕಾಗ್ರತೆ ಕಡೆಗೆ ಮಾಡುವುದೇ ಅಲ್ಲದೆ ದುಷ್ಕಾರ‍್ಯಗಳನ್ನು ಮಾಡದಂತೆ ತಡೆ ಹಿಡಿಯುತ್ತದೆ. ಮನಸ್ಸಿಗೆ ಶಾಂತಿ ತರುತ್ತದೆ... ಜಪಿಸುವ ಪ್ರತಿ ಮಂತ್ರದಲ್ಲಿಯೂ ಚೈತನ್ಯ ಶಕ್ತಿ ಅಡಗಿದ್ದು, ಸಾಧಕನ ಶಕ್ತಿ ಕುಂದಿದಾಗ ಮಂತ್ರಶಕ್ತಿ ಸಾಧನಾ ಶಕ್ತಿಯಾಗಿ ನಿಂತು ಸಾಧಕನಿಗೆ ಹುರಿದುಂಬಿಸುತ್ತದೆ. ರಜೋ ಗುಣವನ್ನು ಸತ್ವ ಗುಣವನ್ನಾಗಿ ಪರಿವರ್ತಿಸುತ್ತದೆ. ವ್ಯಾಯಾಮದಿಂದ ಶರೀರವು ದೃಢವಾಗಿ ಆರೋಗ್ಯವನ್ನು ಹೊಂದುವಂತೆ, ಜಪದಿಂದ ಮನಸ್ಸಿಗೆ ವ್ಯಾಯಾಮ ದೊರೆತು ಸ್ಥಿರವಾದ ಮನಸ್ಸನ್ನು ಪಡೆಯಲು ಸಹಾಯಕವಾಗುತ್ತದೆ. ಸ್ಥಿರ  ಚಿತ್ತದಿಂದ ಮನಸ್ಸಿಗೆ ಶಾಂತಿ.....

ಓಂ ಶಾಂತಿ ಶಾಂತಿ ಶಾಂತಿಃ 

(ಆಧಾರ)

ಚಿತ್ರ: ಇಂಟರ್ನೆಟ್ ತಾಣ