ಜೀವ ವಿಜ್ಞಾನ ಹಾಗೂ ಭೌತ ವಿಜ್ಞಾನದ ವಿಷಯ

ಸಸ್ಯಗಳು ಏಕೆ ಹಸುರಾಗಿವೆ...? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟವರು ನಾವು ಎಲ್ಲಿಯೋ ಅಲೆಯುತ್ತ ಅಲೆಯುತ್ತ ಹೊರಟಿದ್ದೀರಿ ಎಂದು ಅನೇಕರು ಆಕ್ಷೇಪಿಸಿದ್ದಾರೆ. ಆದರೆ ನಾನು ಹಾಗೆ ಅಂದುಕೊಂಡಿಲ್ಲ. ಒಂದು ಕಾಲದಲ್ಲಿ ನಮ್ಮ ಜ್ಞಾನ ಸೀಮಿತವಾಗಿದ್ದಾಗ ಜ್ಞಾನದ ಒಟ್ಟು ಮೂಟೆಯನ್ನು ತತ್ವಶಾಸ್ತ್ರ ಎಂದು ಕರೆಯುತ್ತಿದ್ದೆವು. ಅಂದರೆ ಈಗಲೂ ಸಂಶೋಧನೆ ನಡೆಸಿದಾಗ ಕೊಡುವ ಪದವಿ Ph. D ಇದು ತತ್ವಶಾಸ್ತ್ರ ಪರಿಣಿತಿ (Doctor of Philosophy). ಜ್ಞಾನ ವಿಸ್ತಾರವಾಗುತ್ತಾ ಹೋದ ಹಾಗೆ ಅದು ಅನೇಕ ಕವಲುಗಳಾಯಿತು. ಹಾಗೆ ಹುಟ್ಟಿದ ವಿಜ್ಞಾನವೂ ತನ್ನ ಹರವು ಹೆಚ್ಚುತ್ತಾ ಹೋದ ಹಾಗೆ ಇನ್ನೂ ಅನೇಕ ಟಿಸಿಲುಗಳಾಯಿತು. ಆದರೆ ನೀವು ಮೇಲಕ್ಕೆ ಹೋದ ಹಾಗೆ ಇವುಗಳು ಮತ್ತೆ ಒಂದಾಗಿ ಬಿಡುತ್ತವೇನೋ. ಅದಕ್ಕೆ ಜೀವ ಭೌತಶಾಸ್ತ್ರ (biophysics), ಜೀವರಸಾಯನಶಾಸ್ತ್ರ (biochemistry), ವೈದ್ಯಕೀಯ ಗಣಿತ (medical maths) ಹೀಗೆ ನಮ್ಮ ಅಧ್ಯಯನ ಮುಂದುವರಿಯುತ್ತದೆ. ಯಾಕೆಂದರೆ ಜೀವಶಾಸ್ತ್ರ ಒಂದು ಪ್ರಕೃತಿ ರೂಪಿತ ವಿಜ್ಞಾನ. ಇದನ್ನು ಪ್ರಕೃತಿ ಹಲವು ಮಿಲಿಯ ವರ್ಷಗಳ ಸಂಶೋಧನೆಯ ನಂತರ ರೂಪಿಸಿದ ಅಂತಿಮ ಕ್ರಮವಿದು. ಏಕೆಂದರೆ ಪ್ರಕೃತಿಯಷ್ಟು ದೊಡ್ಡ ವಿಜ್ಞಾನಿ ಬೇರೆ ಯಾರೂ ಇಲ್ಲ. ಇದನ್ನು ಪುಷ್ಟೀಕರಿಸುವ ಅನೇಕ ವಿಷಯಗಳನ್ನು ನಾನು ಆಗಾಗ ಹೇಳುತ್ತಲೇ ಇರುತ್ತೇನೆ. ಇದು ಮಾನವನ ಸಂಶೋಧನೆಗೆ ಸ್ಪೂರ್ತಿಯಾದ ಉದಾಹರಣೆಗಳೇ ಸಾಕಷ್ಟಿವೆ. ಇದಕ್ಕೆ ಸಾಕ್ಷ್ಯಗಳು ಬೇಕೇ? ನೀವು ಬೈಕ್ ನ ಸಿಲಿಂಡರ್ ಅನ್ನು ನೋಡುತ್ತೀರಲ್ಲ ಅದಕ್ಕೆ ಹೊರ ಚಾಚಿಕೆಗಳಿವೆಯಲ್ಲ ಅವು ಇಂಜಿನ್ನನ್ನು ತಂಪಾಗಿಸುವಲ್ಲಿ ಮಹತ್ತರವಾದ ಪಾತ್ರ ವಹಿಸುತ್ತವೆ. ಇದು ಮಾನವನ ಮೂಲ ಸಂಶೋಧನೆ ಅಲ್ಲ. ಇದನ್ನು ಮನುಷ್ಯ ಗೆದ್ದಲುಗಳಿಂದ ನಕಲು ಹೊಡೆದಿದ್ದಾನೆ. ಗೆದ್ದಲಿನ ಹುತ್ತಗಳನ್ನು ನೋಡಿ. ಅವು ಬತ್ತದ ರಾಶಿಯ ಹಾಗೆ ಶಂಕುವಿನಾಕಾರದಲ್ಲಿಲ್ಲ ಬದಲಾಗಿ ಅದರಲ್ಲಿ ಅನೇಕ ಹೊರ ಚಾಚಿಕೆಗಳಿವೆ. ಈ ಹೊರಚಾಚಿಕೆಗಳು ಹುತ್ತದ ಮೇಲ್ಮೈ ವಿಸ್ತೀರ್ಣವನ್ನು ಹೆಚ್ಚಿಸುವ ಮೂಲಕ ಹುತ್ತವನ್ನು ತಂಪಾಗಿರಿಸುತ್ತವೆ. ಈ ಹುತ್ತವನ್ನು ನೋಡಿ ಬೈಕ್ ನ ಸಿಲಿಂಡರ್ ಅನ್ನು ರೂಪಿಸಲಾಯಿತೇ ಹೊರತು ಬೈಕನ್ನು ನೋಡಿ ಗೆದ್ದಲು ಕಲಿತದ್ದಲ್ಲ.
ನವ ಮಂಗಳೂರು ಬಂದರಿನಿಂದ ಕುದುರೆಮುಖದ ಕಬ್ಬಿಣದ ಅದಿರನ್ನು ರಫ್ತು ಮಾಡಲಾಗುತ್ತಿತ್ತು. ಆದರೆ ಆ ಕಬ್ಬಿಣದ ಅದಿರನ್ನು ರಸದತೆಯ ಮೂಲಕ ಸಾಗಾಟ ಮಾಡಿದ್ದನ್ನು ನೀವು ನೋಡಿದ್ದೀರಾ? ಇಲ್ಲ ಏಕೆಂದರೆ ಅದನ್ನು ಸಾಗಾಟ ಮಾಡಲು ಪೈಪ್ ಲೈನ್ ಹಾಕಲಾಗಿದೆ. ಕುದುರೆಮುಖದಲ್ಲಿ ಕಬ್ಬಿಣದ ಅದಿರನ್ನು ಪುಡಿ ಮಾಡಿ ನೀರಿನೊಂದಿಗೆ ಮಿಶ್ರ ಮಾಡಿ ಈ ಪೈಪ್ ಲೈನ್ ಮೂಲಕ ಮಂಗಳೂರಿಗೆ ತಂದು ಅಲ್ಲಿ ಉಂಡೆ ಮಾಡಿ ಇರಾನಿಗೆ ರಫ್ತು ಮಾಡಲಾಗುತ್ತಿತ್ತು. ಇದು ಹೊಸ ಸಂಶೋಧನೆಯೂ ಅಲ್ಲ ತಂತ್ರಜ್ಞಾನವೂ ಅಲ್ಲ. ದ್ರವ ಅಥವಾ ದ್ರಾವಣದ ಸಹಾಯದಿಂದ ಜೀವಗಳು ಕರಗುವ ಅಥವಾ ಕರಗದ ವಸ್ತುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಒಂದು ನಾಳ ವ್ಯವಸ್ಥೆಯ ಮೂಲಕ ಸಾಗಿಸುವುದು ಅತ್ಯಂತ ಸಾಮಾನ್ಯ. ಇದೇ ರಕ್ತ ಪರಿಚಲನಾ ವ್ಯೂಹ (circulatory system). ಇದರಲ್ಲಿ ಕರಗದ ರಕ್ತ ಕಣಗಳಿವೆ, ಕರಗುವ ಇಂಗಾಲದ ಡೈಆಕ್ಸೈಡ್ ಮತ್ತು ಇನ್ನಿತರ ಸಾವಯವ ವಸ್ತುಗಳಿವೆ. ಇದನ್ನೇ ನಮ್ಮ ತಂತ್ರಜ್ಞರು ಕಾಪಿ ಮಾಡಿದ್ದಾರೆ.
ಅನೇಕ ಕಿವಿಯ ಆಭರಣಗಳು ಕೀಟಗಳಿಂದ ಕಾಪಿ ಮಾಡಿದ್ದು. ಬಣ್ಣಗಳು, ಸೈನಿಕರ ಉಡುಪುಗಳು ಪ್ರಕೃತಿಯ ನೆರಳು ಬೆಳಕಿನಾಟದ ಕಾಪಿ. ಹುಲಿ ಸುಂದರಬನದ ನೆರಳು ಬೆಳಕಿನ ವಿನ್ಯಾಸಗಳಲ್ಲಿ ಮರೆಯಾಗಲು ಮೈಮೇಲೆ ಪಟ್ಟೆಗಳನ್ನು ರೂಪಿಸಿಕೊಂಡಿದೆಯೇ ಹೊರತು ಮಿಲಿಟರಿ ಉಡುಪಿನಿಂದ ಪ್ರೇರಣೆಗೊಂಡು ಪಟ್ಟೆ ಬರೆದುಕೊಂಡದ್ದಲ್ಲ. ಗೋಸುಂಬೆ ತನ್ನ ವೈರಿಗಳಿಂದ ತಪ್ಪಿಸಿಕೊಳ್ಳಲು ಬಣ್ಣ ಬದಲಿಸುತ್ತದೆ. ಇದನ್ನು ಮನುಷ್ಯ ಕಾಪಿ ಮಾಡಿದ್ದನ್ನು ನೋಡುತ್ತೀರಿ.
ಇದನ್ನೆಲ್ಲಾ ನೋಡಿದ ಮೇಲೆ ವಿಜ್ಞಾನಿಗಳು ತಮ್ಮ ಹೊಸ ಸಂಶೋಧನೆಯ ಬದಲಾಗಿ ಪ್ರಕೃತಿಯ ಜಾಡನ್ನು ಹಿಡಿದು ಸಾಗುವ ಕೆಲಸ ಮಾಡುತ್ತಾರೆ. ಕಪ್ಪೆಗಳು ನೀರಿನಲ್ಲಿ ಮತ್ತು ನೆಲದ ಮೇಲೆ ಬದುಕುತ್ತವೆ. ಆದ್ದರಿಂದ ಅವುಗಳನ್ನು ಉಭಯವಾಸಿಗಳು (amphibians) ಎಂದು ಕರೆಯುತ್ತೇವೆ ಎಂದು ನಿಮಗೆ ಹೇಳುತ್ತೇವೆ. ನೀವು ಕೆರೆಯ ಬದಿಯಲ್ಲಿ ಹೋಗುವಾಗ ನೀರು ಹಾವೂ ಕೂಡಾ ಉಭಯವಾಸಿ ಎಂದು ಅನ್ನಿಸುತ್ತದೆ. ಆದರೆ ಹಾಗಲ್ಲ ತನ್ನ ಜೀವಿತದ ಆರಂಭಿಕ ಹಂತವನ್ನು ನೀರಿನಲ್ಲಿಯೂ ನಂತರದ ಹಂತವನ್ನು ನೆಲದಲ್ಲಿಯೂ ಕಳೆಯುವ ಜೀವಿಗಳು ಎಂದಾಗಬೇಕು. ಇರಲಿ ಬಿಡಿ. ಈ ಕಪ್ಪೆಗಳು ನೀರಿನಲ್ಲಿ ಈಜುವಾಗ ಅವುಗಳ ಕಣ್ಣಿನ ಕಾರ್ನಿಯಾಕ್ಕೆ ಹಾನಿಯಾಗಬಾರದೆಂದು ಮೇಲೊಂದು ಪೊರೆಯಂತಹ ರಚನೆ ಇದೆ (nictitating membrane). ಇದನ್ನು ಬಳಸಿಕೊಂಡು ಕಪ್ಪೆ ತನ್ನ ಕಣ್ಣಿನ ಗುಡ್ಡೆಯನ್ನು ಬೇಕಾದಾಗ ಆವರಿಸಬಲ್ಲುದು. ಇದು ಮನುಷ್ಯನಲ್ಲಿಯೂ ಇದೆ. ಆದರೆ ಪೂರ್ಣ ಪ್ರಮಾಣದಲ್ಲಲ್ಲ ಅದರ ಉಳಿಕೆ ಮಾತ್ರ (vestigial organ). ಆತ ಇದನ್ನು ಬಳಸಿಲ್ಲ. ಆದ್ದರಿಂದ ಮನುಷ್ಯ ತನ್ನ ವಿಕಾಸದ ಹಂತದಲ್ಲಿ ನೀರಿನಿಂದ ಮೇಲೆದ್ದು ಬಂದಿದ್ದಾನೆ ಎಂದು ತಿಳಿದು ನಮ್ಮ ಪೂರ್ವಜರನ್ನು ಅಲ್ಲಿಯೂ ಹುಡುಕಲಾಗುತ್ತದೆ.
ಮಾನವನ ಪಾದ ಅಗಲವಾದ ಪಾದವನ್ನು ಹೊಂದಿದ್ದಾನೆ ಮತ್ತು ನಡೆಯುವಾಗ ಆತನ ಕಾಲಿನ ಬೆರಳುಗಳು ಹಿಂದಕ್ಕೆ ಮಡಿಸಿಕೊಳ್ಳುತ್ತವೆ. ಮನುಷ್ಯ ಗಟ್ಟಿ ನೆಲದಲ್ಲಿ ನಡೆಯುವ ಹುಲಿ, ಆನೆ, ಜಿಂಕೆ, ದನ ಇತ್ಯಾದಿಗಳ ಕಾಲುಗಳಿಗಿಂತ ಮನುಷ್ಯನ ಪಾದ ಬಹಳ ಭಿನ್ನ. ಆದರೆ ಮರಳಿನಲ್ಲಿ ನಡೆಯುವ ಒಂಟೆಯ ಪಾದ ಅಗಲವಾಗಿವೆ. ಮಾನವನ ಕಣ್ಣಿನಲ್ಲಿರುವ ನಿಕ್ಟಿಟೇಟಿಂಗ್ ಪದರದ ಉಳಿಕೆ ಮತ್ತು ಮರಳಿನ ಮೇಲೆ ನಡೆಯಲು ಸಹಕಾರಿಯಾದ ಪಾದವನ್ನು ನೋಡಿ ಮನುಷ್ಯ ವಿಕಾಸದ ಕೊಂಡಿಯನ್ನು ನೀರಿನಲ್ಲಿ ಹುಡುಕುವ ಬಗ್ಗೆ ಕೂಡಾ ಗಮನ ನೀಡಿದ್ದಾರೆ.
ಎಲೆಗಳು ಸೂರ್ಯನ ಬೆಳಕಿನಿಂದ ಶಕ್ತಿ ಸಂಗ್ರಹಿಸುವುದು ಕೂಡಾ ಈಗ ಸಂಶೋಧನೆಯ ವಸ್ತುವೇ. ವಿಜ್ಞಾನಿಗಳು ಸೂರ್ಯನ ಬಿಸಿಲಿನಿಂದ ವಿದ್ಯುತ್ ತಯಾರಿಸುವ ದ್ಯುತಿ ವಿದ್ಯುತ್ ಕೋಶಗಳಲ್ಲಿ (ಸೌರ ಫಲಕಗಳಲ್ಲಿ) (photovoltaic cell) ಎಲೆಗಳ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಸಾಧ್ಯವೇ ಎಂಬ ಬಗ್ಗೆ ಯೋಚಿಸತೊಡಗಿದ್ದಾರೆ. ಆದ್ದರಿಂದ ಈ ಜೀವ ವಿಜ್ಞಾನದ ವಿಷಯ ಭೌತ ವಿಜ್ಞಾನಿಗಳ ಸಂಶೋಧನಾ ವಸ್ತು.
-ದಿವಾಕರ ಶೆಟ್ಟಿ ಎಚ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ