ಜೇನಿನ ಹಿಸ್ಟರಿಯಲ್ಲೊಂದು ಕಳ್ಳನ ಮಿಸ್ಟರಿ...! (ಭಾಗ 2)

ಜೇನಿನ ಹಿಸ್ಟರಿಯಲ್ಲೊಂದು ಕಳ್ಳನ ಮಿಸ್ಟರಿ...! (ಭಾಗ 2)

ಕೆಂಚಪ್ಪ: ಉಗಳನ್ನು ನುಂಗಿ ಗಂಟಲನ್ನು ಸರಿ ಮಾಡಿಕೊಳ್ಳುತ್ತಾ 'ಸಾರ್ ಅದು ಒಂದು ಚಳಿಗಾಲ ಸಾರ್.. ಕೆಟ್ಟ ಚಳಿ ಅಂದರೆ ಚಳಿ.. ಎಷ್ಟು ರಗ್ಗು ಹೊದ್ದುಕೊಂಡರೂ ನಿದ್ದೆ ಬರಲಿಲ್ಲ ಸಾರ್... ರಾತ್ರಿ ಹನ್ನೆರಡು - ಹನ್ನೆರಡುವರೆ ಆಗಿತ್ತು. ಯಾಕೋ ನಿದ್ದೆ ಬರತಿಲ್ಲ. ತಲೆಗೆ ಮಪ್ಲರ್ ಸುತ್ತಿಕೊಂಡು ಹಂಗೆ ಬೀಡಿ ಪೆಟ್ಟಿಗೆ ಹಿಡಿದು ಬೀಡಿ ಹಚ್ಚಿಕೊಂಡು ಹಾಗೆ ಒಂದು ಒಂದೂವರೆ ಕಿಲೊಮೀಟರ್ ನಡೆದು ಹೋದೆ. ಅಲ್ಲಿನ ಏರಿಯಾ ಎಲ್ಲಾ ಶ್ರೀಮಂತರ ಮನೆಗಳು ಅವು. ಅದೊಂದು ಸಾಹುಕಾರರ ಮನೆ ಕಾಣಿಸಿತು. ನುಗ್ಗೋಣ ಅನಿಸಿತು.. ಕಾಂಪೌಂಡ್ ಎಗರಿ ನುಗ್ಗಿದೆ ಸಾರ್' ಅಂದ..

ನಾನು ಏನೊ ನಾಲ್ಕಾರು ಜನಸೇರಿದಾಗ ಮಾಡಿದ ತಮಾಷೆಯೊ, ಕೀಟಲೆಯೋ ಎಂದುಕೊಂಡರೇ ಇವನು ಸೀರಿಯಸ್ ಆಗಿ ದಾರಿಯಲ್ಲಿ ಬಾಳೆಹಣ್ಣಿನ ಸಿಪ್ಪೆ ತುಳಿದು ಬಿದ್ದಂತೆ ಸಿಲ್ಲಿಯಾಗಿ ದರೋಡೆ ಪ್ರಸಂಗ ನನ್ನನ್ನು ಹುಬ್ಬೇರುವಂತೆ ಮಾಡಿತು..

ಮುಂದಕ್ಕೆ ಕೇಳಬೇಕು ಎನಿಸಿ

ನಾನು : ಇದೇನೋ ಮಾರಾಯ ಎಷ್ಟು ಸುಲಭವಾಗಿ ಹೇಳುತ್ತೀಯಾ? ಮನೆಯಲ್ಲಿ ಯಾರೂ ಇರಲಿಲ್ವೇ?

ಕೆಂಚಪ್ಪ: ಇದ್ದರು ಸಾರ್. ನಾನು ಹಿಂದಿನ ಬಾಗಿಲಿನಿಂದ ಹೋದೆ. ಒಂದೇ ಬೋಲ್ಟ್ ಹಾಕಿದ್ದರು. ಎರಡ್ಮೂರು ಸರಿ ಹಂಗೆ ಕದ ಅಲ್ಲಾಡಿಸಿದೆ. ಬೋಲ್ಟ್ ಕೆಳಗೆ ಸರಿದು ಬಾಗಿಲು ಓಪನ್ ಆಯಿತು.

ನಾನು: ಒಳಗೆ ಹೋಗಿ ಏನು ಮಾಡಿದೆ?

ಕೆಂಚಪ್ಪ : ಸಾರ್ ಒಳಗಡೆ ಹೋದೆ. ಮೂರು ರೂಂ ಒಂದು ಹಾಲ್ ಇತ್ತು.  ಹಾಲ್ ನಲ್ಲಿ ಯಾರೋ ಒಬ್ಬರೋ ವಯಸ್ಸಾದವರು ಮಲಗಿದ್ದರು. ಒಂದು ರೂಂ ಒಳಗಿನಿಂದ ಲಾಕ್ ಆಗಿತ್ತು. ನಿಧಾನವಾಗಿ ಮತ್ತೊಂದು ರೂಂ ಒಳಗೆ ಹೋದೆ. ಅಲ್ಲಿ ಗಾಡ್ರೇಜ್ ಓಪನ್ ಮಾಡಿದೆ.

ನಾನು: ಅದಕ್ಕೆ ಬೀಗ ಹಾಕಿರಲಿಲ್ಲವಾ? ಅದನ್ನೂ ಒಡೆದು ತೆಗೆದಾ? ಶಬ್ಧ ಆಗಲಿಲ್ಲವಾ?

ಕೆಂಚಪ್ಪ : ಸಾರ್ ನಮ್ ಜನ ಬಡವರಾದರೂ ಶ್ರೀಮಂತರಾದರೂ ಬೀರೂ ಕೀ ಬೀರಿನ ಮೇಲೆ, ಇಂಟರ್ಲಾಕರ್ದು ಅಲ್ಲೇ ಒಳಗೆ ಎಲ್ಲಿಯಾದರೂ ಬಟ್ಟೆ ಕೆಳಗೆ ಮೇಲೆ ಇಟ್ಟೇ ಇಟ್ಟಿರುತ್ತಾರೆ ಸಾರ್. ಕೀ ಇಲ್ಲದೇ ಇರೋ ಸಂದರ್ಭಗಳು ತುಂಬಾ ಕಡಿಮೆ. ಒಂದು ವೇಳೆ ಕೀ ಸಿಗಲಿಲ್ಲ ಅಂದರೆ ಸ್ಕ್ರೂಡ್ರೈವರ್/ರಾಡ್ನಿಂದ ಓಪನ್ ಮಾಡುತ್ತೀವಿ ಸಾರ್ ಎಂದ.

ನಾನು : ಬೀರು ಒಳಗೆ ದುಡ್ಡು ಬಂಗಾರ ಇತ್ತಾ?

ಕೆಂಚಪ್ಪ : ಒಂದು ಇಂಟರ್ ಲಾಕ್ ಓಪನ್ ಮಾಡ್ಲಿಲ್ಲ ಸಾರ್. ಆದರೆ ನೂರು ರೂಪಾಯಿ ನೋಟಿನವು ಬಹಳ ಕಟ್ಟು ದುಡ್ಡು ಇದ್ದವು.. ಅಲ್ಲೇ ಕಾಲು ಹೊರೆಸಲು ಹಾಕಿದ್ದ ಒಂದು ಗೋಣಿಚೀಲ ತಗಂಡು ಎಲ್ಲವನ್ನೂ ಆ ಚೀಲಕ್ಕೆ ತುಂಬಿಕ್ಯಂಡೆ ಸಾರ್. ಅರ್ಧಚೀಲ ತುಂಬಿತ್ತು. ಆ ಚೀಲವನ್ನು ಭುಜಕ್ಕೆ ಹಿಂದಕ್ಕೆ ನೇತುಹಾಕಿಕೊಂಡು, ಕೊರೆಯ ತುದಿಯನ್ನು ಎದೆಯ ಮುಂದೆ ಎರಡೂ ಕೈಯಲ್ಲಿ ಹಿಡಿದುಕೊಂಡು ನಡೆದು ಬರುತ್ತಾ ಇದ್ದೆ. ಎರಡುವರೆ ಮೂರು ಗಂಟೆ ಆಗಿತ್ತು ಸಾರ್. ಸಳಿ(ಚಳಿ) ಅಂದ್ರೆ ತುಂಬಾ ಸಳಿ ಆಗುತ್ತಿತ್ತು. ಗಡಗಡ ನಡುಗುವ ಚಳಿ ಅದಕ್ಕೆ ಅಲ್ಲೇ ಯಾವುದೋ ಅರ್ಧಂಬರ್ದ ಕಟ್ಟಿದ್ದ ಒಂದು ಮನೆಯೊಳಗೆ ಹೋಗಿ ಚೀಲ ಕೆಳಗಿಟ್ಟು ಒಂದರಿಂದೆ ಒಂದು ಮೂರ್ನಾಲ್ಕು ಬೀಡಿ ಎಳೆದೆ ಸಾರ್, ಚಳಿ ಕಮ್ಮಿಯಾಗಲಿಲ್ಲ. ಅದಕ್ಕೇ ಚೀಲದಾಗೆ ನೋಟ್ ಇದ್ದವಲ್ಲ? ಅವುಗಳಿಗೆ ಬೆಂಕಿ ಹಾಕಿ ಬೆಳಕು ಹರಿಯೋವರೆಗೂ ಚಳಿಕಾಯಿಸ್ಕಂಡೆ ಸಾರ್..

ನಾನು: ಅಬ್ಬಾಬ್ಬಾ ಕೆಂಚಣ್ಣ. ಥೂ ನಿನ್ನ... ಹೇ... ಅವರೆಷ್ಟು ಕಷ್ಟಪಟ್ಟು ಯಾವುದಕ್ಕೆ ಹಣ ಕೂಡಿಟ್ಟಿದ್ದರೊ ಏನೋ... ಮಾಡೋದು ಮಾಡಿದ್ದೆ ನೀನಾದರೂ ಕಷ್ಟಕ್ಕೆ ಬಳಸಿಕೋ ಬೇಕಾಗಿತ್ತು. ಅದು ಬಿಟ್ಟು ದುಡ್ಡು ಸುಟ್ಟು ಬಹಳ ದಡ್ಡ ಕೆಲಸ ಮಾಡಿದೆ ನೀನು. ಕಳ್ಳತನ ಮಾಡಬಾರದಿತ್ತು, ಆದರೂ ಮಾಡಿದ್ದೆ ಅದರಲ್ಲೇ ಜೀವನ ಕಟ್ಟಿಕೊಳ್ಳುವುದ ಬಿಟ್ಟು ಬೆಂಕಿಹಾಕಿ ಚಳಿ ಕಾಯಿಸ್ಕಂಡೀಯಾ? ಥೂ ನಿನ್ನ ಮೂರ್ಖ...

ಕೆಂಚಪ್ಪ : ಸಾರ್ ನಾನು ಕಳ್ಳತನ ಮಾಡ್ತಿರೋದು ಖುಷಿ ಮತ್ತು ಟೈಮ್ ಪಾಸ್ ಗೆ ಸಾರ್. ಅಲ್ಲಾ ಸಾರ್ ಎಂಥಹ ಸಾವುಕಾರ ಆದರೂ ದುಡ್ಡಲ್ಲಿ ಯಾರಾದ್ರೂ ಚಳಿ ಕಾಯಿಸ್ಕೊಂಡಿದ್ದಾರಾ ಸಾರ್ ನೀವ್ ಎಲ್ಲಿಯಾದ್ರೂ ಕೇಳಿರಾ? ನಾಲ್ಕಾಣೆ ಗಲೀಜಲ್ಲಿ ಬಿದ್ದಿದ್ದರೂ ಎತ್ಕಂಡ್ ಜೇಬಲ್ಲಿ ಹಾಕ್ಕೋತ್ತಾರೆ ಆದ್ರೆ ನಾನು ದುಡ್ಡಲ್ಲಿ ಸಳಿ(ಚಳಿ)ಕಾಯಿಸ್ಕೊಂಡೀನೀ ಅದೇ ಸಾರ್ ನನ್ ರೆಕಾರ್ಡ್.. ಅಷ್ಟು ಸಾಕು ಸಾರ್...

ಅವನಿಗೆ ಅದೊಂದು ಯಾರೂ ಮಾಡದ ರೆಕಾರ್ಡ್, ಅವನ ಪಾಲಿಗೆ ಅದೊಂದು WORLD RECORD ಎಂಬಂತೆ feel ಆಗುತ್ತಿದ್ದ. ಅವನ ಆ ಕೆಲಸದ ಬಗ್ಗೆ ಅತೀವ ಗರ್ವವೂ ಇತ್ತು..

ನಾನು: ಅಬ್ಬಾ ಬ್ಬಾ ಬ್ಬಾ... ಬಾರೀ ಇದೀಯಾ ಕೆಂಚಣ್ಣ ನೀನು. ಅವು ಅಂದಾಜು ಎಷ್ಟು ಕಟ್ಟು ಇದ್ದವಪ್ಪ ನೋಟುಗಳು?

ಕೆಂಚಪ್ಪ : ಸಾರ್ ನಾನು ಎಣಿಸಲಿಲ್ಲ. ಆದರೆ ಹದಿನೈದು ಇಪ್ಪತ್ತು ಕಟ್ಟು ಅಂತೂ ಇದ್ದವು ಸಾರ್.

ನಾನು : ಅಲ್ಲಪ್ಪಾ ಕೆಂಚಣ್ಣಾ ತೂ ನಿನ್ನಾ.. ಅನ್ಯಾಯವಾಗಿ ಒಂದೂವರೆ ಎರಡು ಲಕ್ಷ ಸುಟ್ಟಾಕಿಯಲ್ಲಾ..

ಕೆಂಚಪ್ಪ ತಲೆ ತಗ್ಗಿಸಿಕೊಂಡು ನಿಂತ. ಮುಂದುವರೆದು ಅಲ್ಲ ಕೆಂಚಣ್ಣ ಈ ಕಳ್ಳರಿಗೆ ಕಳ್ಳತನ ಮಾಡಲು ಸರಿಯಾದ ಸಮಯ ಯಾವುದು?

ಕೆಂಚಪ್ಪ: ಸಾರ್ ಸಾಮಾನ್ಯವಾಗಿ ಕಳ್ಳತನ ಮಾಡಲು ಸರಿಯಾದ ಸಮಯ ಅಂದರೆ ಮಧ್ಯರಾತ್ರಿ ಒಂದು ಗಂಟೆಯಿಂದ ಮೂರು- ಮೂರುವರೆ ವರೆಗೆ ಸರಿಯಾದ ಸಮಯ. ಈ ಟೈಮ್ನಲ್ಲಿ ಸಣ್ಣಪುಟ್ಟ, ಎಂಥ ದೊಡ್ಡ ಶಬ್ಧ ಆದರೂ ಯಾರೂ ಎದ್ದೇಳಲ್ಲ ಸಾರ್...

ನಾನು : ಕಳ್ಳತನ ಹೆಂಗೆಲ್ಲಾ ಮಾಡುತ್ತಿರಿ? ಕಳ್ಳತನ ಮಾಡಲು ಮನೆಗಳಿಗೆ ಬೀಗ ಹಾಕಿದ ಮನೆಗಳು ಸೂಕ್ತವೇ...?

ಕೆಂಚಣ್ಣ: ಹ್ಞು ಸಾರ್ ಮತ್ತೆ ಬೀಗ ಹಾಕಿದ್ದ ಮನೆಗಳಾದರೆ ಯಾವುದೇ ಭಯ ಇರಲ್ಲ ನಿರಾತಂಕವಾಗಿ ಕೆಲಸ ಮುಗಿಸಬಹುದು. ನನ್ನ ಇತಿಹಾಸದಲ್ಲಿ ಅಕ್ಕ ಪಕ್ಕದ ಮನೆಯವರು ಎದ್ದು ಬಂದು ಕಳ್ಳರನ್ನು ಓಡಿಸಿದ ಮಾತೇ ಇಲ್ಲ. ಆದರೆ ವಾಸ ಇರುವ ಮನೆಗಳಲ್ಲಿ ಎಷ್ಟು ಜನ ಇದಾರೆ ಅವರು ಎಲ್ಲೆಲ್ಲಿ ಮಲಗಿರುತ್ತಾರೆ ಅಂತ ನೋಡಿ ಸದ್ದು ಮಾಡದೆ ಕೆಲಸ ಮಾಡಬೇಕಾಗತ್ತೆ..

ನಾನು : ಮನೆಗಳಿಗೆ ಬೀಗ ಡೋರ್ ಲಾಕ್ ಮಾಡಿರುತ್ತಾರಲ್ಲ ಅದೇಗೆ ಒಳಗೆ ನುಗ್ಗುವಿರಿ?

ಕೆಂಚಣ್ಣ: ಬೀಗ ಒಡೆಯುತ್ತೀವಿ, ಬಾಗಿಲು ಮುರಿಯುತ್ತೀವಿ ಸಾರ್... ಸಾರ್..

ಒಂದು ಒಂದುವರೆ ಅಡಿಯ ಒಂದು ರಾಡ್/ಸ್ಕ್ರೂ ಡ್ರೈವರ್ ಇದರೆ ಸಾಕು ಅಷ್ಟೇ. ಡೋರ್ ಲಾಕ್ ಈತರ ಬರದೇ ಇದ್ದರೆ ಬಾಗಿಲಿನ ಹಲಗೆ/ಕಿಟಕಿ, ಹೀಗೆ ಪರ್ಯಾಯವಾಗಿ ಹೇಗೆ ತೂರಿ ಹೋಗಲು ಸಾದ್ಯವೋ ನೋಡುತೀವಿ..

ಪೋಲಿಸ್ ಕೈಗೆ ನೀನ್ ಸಿಕ್ಕಿಲ್ಲವೋ?

ಕೆಂಚಣ್ಣ: ಈ ಕೇಸಲ್ಲಿ ಇಲ್ಲ ಸಾರ್ ಆದ್ರೆ ಬೇರೆ ಕೇಸಲ್ಲಿ ಹಿಡಿದಿದ್ದರು. ಅವರೇ ಸಾರ್ ನನ್ನ ಜೀವನ ಹಾಳ್ ಮಾಡಿದ್ದು..

ನಾನು : ಏಯ್ ಕೆಂಚಣ್ಣ ಕಳ್ಳತನ ಮಾಡುವುದು ತಪ್ಪಲ್ಲವೇನು? ತಪ್ಪು ಮಾಡಿರುವುದು ನೀನು ಅವರೇನು ಹಾಳು ಮಾಡಿದರು?? ಮಾಡಿದ ತಪ್ಪಿಗೆ ಶಿಕ್ಷೆಯಾಗಬೇಕು ಅಲ್ಲವೇ?

ಕೆಂಚಣ್ಣ: ಸಾರ್ ನಾನು ಮಾಡದ ತಪ್ಪುಗಳಿಗೆ ಪೋಲಿಸ್ ನವರು ನನ್ನ ಮೇಲೆ ಹೊರಿಸಿದರು ಸಾರ್.. ಯ್ಯಾವ್ಯಾವೋ ಕೇಸ್ ನನ್ತಲೆಗೆ ಕಟ್ಟಿ ಹಾಕಿದರು. ನನಗೆ ಆ ವ್ಯವಸ್ಥೆ ಬಗ್ಗೆ ಪೈಟ್ ಮಾಡಲು ಸಾಧ್ಯ ಆಗಲಿಲ್ಲ.. ಎಲ್ಲಾ ಅವರೇ ಬರೆದು ಸೈನ್ ಹಾಕಿಸ್ತಾರೆ... ಸೈನ್ ಹಾಕಿದ ಮೇಲೆ ಮುಗಿತು. ಬಂದ ಶಿಕ್ಷೆ ಅನುಭವಿಸಲೇ ಬೇಕು...

ನಾನು : ಹೋಗ್ಲಿಬಿಡು ನೀನು ತಪ್ಪುಗಳನ್ನು ಮಾಡದೇ ಇದ್ದರೆ ನಿನಗೆ ಖಂಡಿತಾ ನ್ಯಾಯ ಸಿಗತ್ತೆ..

ಕೆಂಚಣ್ಣ: ಸಾರ್ ದೇವರ ಕೃಪೆಯಿಂದ ನಾನು ಬೇಲ್ ಮೇಲೆ ಇದ್ದೀನಿ. ಇನ್ನೂ ಒಂದೆರಡು ಕೇಸ್ ಇದಾವೆ ಕ್ಲಿಯರ್ ಮಾಡಿಕ್ಯಂತೀನಿ ಸಾರ್.. ಇನ್ನೂ ಸ್ವಲ್ಪ ದಿನ.. ಅವು ಆದರೆ ಮುಗೀತು.

ಆಗ್ಲಿ ಒಳ್ಳೇದಾಗಲಿ ಆದರೆ ಅಪರಾಧ ಮಾಡಿ ಜೈಲಿಗೆ ಹೋದ್ರೆ ಹೆಂಡತಿ ಮಕ್ಕಳ ಗತಿ ಏನು ಕೆಂಚಣ್ಣ? ಹೋಗ್ಲಿಬಿಡು ಇನ್ಮೇಲೆ ಆ ಕೆಲಸ ಮಾಡಬ್ಯಾಡ. ತಪ್ಪು ಮಾಡುವ ಮೊದಲೇ ಯೋಚನೆ ಮಾಡಬೇಕಿತ್ತು. ಈಗ ತಪ್ಪಾಗಿದೆ. ಇನ್ಮೇಲಾದರೂ ಮಾಡಬೇಡಿ...

ಇಲ್ಲಾ ಸಾರ್ ಬಿಟ್ಟಾಕಿನೀ ಮಾಡಲ್ಲ ಸಾರ್ ಅರ್ಥ ಆಗಿದೆ.. ಆ ಜನಗಳ ಶಾಪದಿಂದ ಕಳ್ಳರು ಎಷ್ಟೇ ಕಳ್ಳತನ ಮಾಡಿದರೂ ಅವರ ಬಡತನ ಮಾತ್ರ ಹೋಗುವುದಿಲ್ಲ.. ಅದ್ಕೆ ಸಾರ್ ಕಳ್ಳರು ಕೊನೆಯವರಗೂ ಕಳ್ಳರಾಗಿಯೇ ಉಳಿತಾರೆ.. ಅದೇ ಸಾರ್ ಜನಗಳ ಶಾಪ.. ನಾನು ಕಳ್ಳತನ ಬಿಟ್ಟು ಐದಾರು ವರ್ಷ ಆಯಿತು ಸಾರ್ ಮಾಡುವುದಿಲ್ಲ. ಬೇಕಾದರೆ ಪಾಸ್ಟರ್ ನ ಕೇಳಿ ಅಂದ...

ನಾನು: ಆಯ್ತಪ್ಪ.. ಕಷ್ಟಪಟ್ಟು ದುಡಿದು ಚೆನ್ನಾಗಿರು. ಇಷ್ಟೋತ್ತು ಬಹಳ ಮಾಹಿತಿಕೊಟ್ರೀ.. ಬಿರಿಯಾನಿ ತುಂಬಾ ಸಕತ್ತಾಗಿತ್ತು.. ಚೆನ್ನಾಗಿ ಮಾಡಿದ್ದೀಯಾ.. ಇದೇ ಕೆಲಸ ಮಾಡಿಕೊಂಡು ಮುಂದುವರೆಯಪ್ಪ ಮತ್ತೆ ಆ ನಿನ್ ಮೂಲ ಕೆಲಸಕ್ಕೆ ಕೈ ಹಾಕಬೇಡ. ಅನ್ಯಾಯವಾಗಿ ಗಳಿಸಿದ್ದು ನಮಗೆ ದಕ್ಕದೇ ಅದರಿಂದ ನಮ್ಮ ಮಾನ ಮರ್ಯಾದೆಯೂ ಹೋಗತ್ತೆ. ಸಾರ್ವಜನಿಕವಾಗಿ 'ಕಳ್ಳ' ಎನ್ನುವ ಪಟ್ಟ ಕಟ್ಟಿಕೊಂಡು ಬದುಕಬೇಕಾಗತ್ತೆ. ಗೌರವ ಇರಲ್ಲ ಇದೇ ಕೆಲಸ ಮಾಡಿಕೊಂಡು ಗೌರವಯುತವಾಗಿ ಬದುಕು ಎಂದೇಳಿ ಎಲ್ಲರಿಗೂ bye ಹೇಳಿ ಜೇಮ್ಸ್ ನಾನು ಹಿಂದಿರುಗಿದೆವು.

ಯಾವ ಯಾವ ಪರಿಸ್ಥಿತಿಗಳು ಯಾರ್ಯಾರ ಕೈಯಲ್ಲಿ ಎಂಥೆಂಥಾ ದುಷ್ಕೃತ್ಯ ಯಾವಾಗ ಮಾಡಿಸುತ್ತವೆಯೋ ಗೊತ್ತಿಲ್ಲ.. ಅನಿವಾರ್ಯ ವೋ ಅಗತ್ಯವೋ.. ಖುಷಿಗೋ... ಆದರೆ ನಾವು ಆಯ್ದುಕೊಳ್ಳಬೇಕಾದದ್ದು ನಮ್ಮ ಗೌರವ ಕಾಪಾಡುವಂತಿರಬೇಕು. ಬೈಕಲ್ಲಿ ಹಿಂದಿರುಗುವಾಗ ರಸ್ತೆ ಬದಿಯ ಲಂಟಾನ ಗಿಡದಲ್ಲಿ ಒಂದು ಜೇನು ಕಂಡು ಜೇಮ್ಸ್ ಗಾಡಿ ನಿಲ್ಲಿಸು ಅಂತ ಹೇಳಿದೆ. ಜೇಮ್ಸ್ ಗೆ ಅಚ್ಚರಿಯೋ ಅಚ್ಚರಿ.. ಏನ್ ಕಣ್ಣಜ್ಜ ನಿನ್ನಾವು, ಇಷ್ಟು ಸ್ಪೀಡ್ ಲ್ಲಿ ಹೆಂಗೆ ಕಾಣಿಸುತ್ತಾವೋ ಎಂದು ಇಳಿದು ಎಲ್ಲಿದೆ ಎಂದು ಹುಡುಕುತ್ತಿದ್ದ. ಇಲ್ಲೇ ಇಲ್ಲವೇ ಜೇಮ್ಸ್‌‌ ಎಂದು ತೋರಿಸಿ ಅದನ್ನು ಕಿತ್ತೆ. ದೂರದಲ್ಲಿ ಹೋಗಿ ಜೇಮ್ಸ್ ನಿಂತಿದ್ದ. ಜೇನು ಕೈಯಲ್ಲಿ ಹಿಡಿದು ಇಬ್ಬರೂ ತಿನ್ನತೊಡಗಿದೆವು.

ನಾನು: ಜೇಮ್ಸ್ ಈ ಕೆಂಚಪ್ಪ ನಿಜವಾಗಲೂ ದುಡ್ಡುನ್ನು ಹಾಕಿ ಚಳಿಕಾಯಿಸ್ಕೊಂಡಿರುತ್ತಾನಾ?? ಅಥವಾ ಬಿಲ್ಡಪ್ ಗೆ ನನ್ನದೂ ರೆಕಾರ್ಡ್ ಇದೆ ಅಂತ ಬೊಗಳೆ ಬಿಡುತ್ತಿದ್ದಾನೆಯೇ?

ಇಲ್ಲ ಮಾಸ್ಟರ್... ಅವನು ಖತರ್ನಾಕ್... ತುಂಬಾ ಕ್ರೇಜಿ... ಅವನಿಗೆ ಏನು ಅನಿಸುತ್ತೋ ಹಾಗೆ ಮಾಡ್ತಿದ್ದ.. ಆದರೆ ಈಗ ಮೊದಲಿನ ಹುಚ್ಚುತನ ಇಲ್ಲ... ವಾಸ್ತವ ಪ್ರಪಂಚ ಅವನಿಗೆ ಅರ್ಥ ಆದಂಗಿದೆ.

ಜೇನು ಸವಿಯುತ್ತಾ ಅಲ್ಲಾ ಜೇಮ್ಸ್ ಆ ಕೆಂಚಪ್ಪ ಕಳ್ಳತನ ಬಿಡುತ್ತಾನ..? ನಿಜವಾಗ್ಲೂ ಒಳ್ಳೆಯವನಾಗಿದ್ದಾನ??! ಅಥವಾ ಕೆಲವು ದಿನಗಳವರೆಗೆ ನಾಟಕನಾ?

ಜೇಮ್ಸ್: ಹ್ಞೂ ಮೇಷ್ಟ್ರೇ.. ಒಳ್ಳೆಯವನಾಗಿದ್ದಾನೆ. ಇಲ್ಲ ಅಂದ್ರೆ ಎಂಟತ್ತು ಸಾವಿರ ಕೊಡೋ ಈ ಅಡುಗೆ ಭಟ್ರ ಕೆಲಸಕ್ಕೆ ಯಾಕ್ ಬರ್ತಿದ್ದ?? ಕೆಲವೇ ನಿಮಿಷಗಳಲ್ಲಿ ಅವನು ಇಲ್ಲಿ ತಿಂಗಳಿಗೆ ಕೊಡುವ ದುಡ್ಡನ್ನು ಕಳ್ಳತನದ ಮೂಲಕ ಸಂಪಾದನೆ ಮಾಡುತ್ತಾನೆ. ಬಿಟ್ಟಿರುವುದಕ್ಕೇ ಅವನು ಈ ಕೆಲಸ ಮಾಡುತ್ತಿರುವುದು. ನನ್ ಕಣ್ಣೋಟದ ಕವರಿಂಗ್ ಏರಿಯಾದಲ್ಲೇ ಕಂಟ್ರೋಲ್ ಲ್ಲೇ ಇದ್ದಾನೆ. ಈಗ ನಾಲ್ಕೈದು ವರ್ಷಗಳ ಕಾಲ ಅಂತಹವು ಯಾವೂ ಮಾಡಿಲ್ಲ. ಬದಲಾಗಿದ್ದಾನೆ. ಬದಲಾಗಿಲ್ಲ ಅಂದ್ರೆ ಅವನು ಈ ಕೆಲಸಗಳೆಲ್ಲಾ ಮಾಡುತ್ತಿರಲಿಲ್ಲ... ಒಂದು ವೇಳೆ ಅವನು ಇನ್ಮೇಲೂ ಬದಲಾಗಲಿಲ್ಲ ಅಂದರೆ ಕಾನೂನಿನಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ... ಶಿಕ್ಷೆಯೋ... ಜೈಲೊ.. ಅನುಭವಿಸುತ್ತಾನೆ. ಯಾರು ಏನು ಮಾಡಾಕೆ ಆಗತ್ತೆ...?

ಅವನು ಬದಲಾಗಲಿ ಜೇಮ್ಸ್ ಏನೇ ಏನೋ ಬ್ಯಾಡ್ ಟೈಂ ಲ್ಲಿ ಏನೋ ಆಗಿರತ್ತೆ ಆದರೆ ಅದನ್ನು ಬದಲಾಯಿಸ್ಕೊಂಡು ಬಾಳಬೇಕು. ತಪ್ಪು ದಾರಿ ಹಿಡಿದದ್ದು ತಪ್ಪು ಅಂತಾ ಗೊತ್ತಾದ ಮೇಲೆ ಅದನ್ನೇ ಮುಂದುವರೆಸುವುದು ತಪ್ಪು ಎಂದು ಹೇಳುತ್ತಾ ರಸ್ತೆಯಲ್ಲಿ ಸಿಕ್ಕ ಮತ್ತೊಂದು ಜೇನನ್ನು ಕಿತ್ತು ಕೈಯಲ್ಲಿ ಹಿಡಿದು ಬೈಕ್ ಹತ್ತಿದೆವು. ಕೈಯಲ್ಲಿ ಹಿಡಿದ ಜೇನನ್ನು ನೋಡಿದ ಜನರು ಹೈ ಜೇನು... ಎಂದು ಉದ್ಗಾರ ತೆಗೆದರೆ ಜೇಮ್ಸ್ ಗೆ ಗೊತ್ತು ಪರಿಚಯದವರು ನಮ್ಗೂ ಜೇನುತುಪ್ಪ ಕೊಡಿ ಎಂದು ಕೇಳುತ್ತಿದ್ದರು. ಯಾರಿಗೂ ಕೊಡಲಾಗದೇ ಮನೆಗೆ ಬಂದೆವು. ಜೇಮ್ಸ್ ನ ಹೆಂಡತಿ ಮಕ್ಕಳೆಲ್ಲಾ ಜೇನು ತಿಂದು ಖುಷಿ ಪಟ್ಟರು. ಜೇಮ್ಸ್ ತನ್ನ ಹೆಂಡತಿಗೆ ಮಾಸ್ಟರ್ ಬೈಕಲ್ಲೇ ಜೇನು ನೋಡಿದರು. ಒಂದು ಜೇನುಹುಳುಗಳು ಕಚ್ಚದೇ ಜೇನನ್ನೂ ಕಿತ್ತರು ಎಂದು ಗುಣಗಾನ ಮಾಡಿದರು. ಅದೇ ಲಾಸ್ಟ್.. ಆ ಕೆಂಚಪ್ಪ ಈಗ ಎಲ್ಲಿದ್ದಾನೋ?? ಹೇಗಿದ್ದಾನೋ ಗೊತ್ತಿಲ್ಲ ಒಳ್ಳೆಯವನಾಗಿಯೇ ಗೌರವದಿಂದ ಬದುಕುತ್ತಿದ್ದಾನೆ ಎನ್ನುವ ನಂಬಿಕೆ ಇದೆ..

(ಮುಗಿಯಿತು)

-ನಾಗೇಂದ್ರ ಬಂಜಗೆರೆ, ಬಳ್ಳಾರಿ 

ಚಿತ್ರ ಕೃಪೆ: ಇಂಟರ್ನೆಟ್ ತಾಣ