ಜೊರಾಮಿ – ಒಂದು ವಿಮೋಚನೆಯ ಹಾಡು

“ಈ ಕಥನವು ಜೊರಾಮಿ ಎಂಬ ಮಹಿಳೆಯ ಮದುವೆಯ ನೆನಪಿನೊಂದಿಗೆ ತೆರೆದುಕೊಳ್ಳುತ್ತದೆ. ಕಾದಂಬರಿಯು ಜೊರಾಮಿಯ ವೈವಾಹಿಕ ಬದುಕಿನ ಬಿರುಕನ್ನು ಚಿತ್ರಿಸುತ್ತಲೇ ಮಿಜೋರಾಮ್ ಭೌಗೋಳಿಕ ಪ್ರದೇಶ ಹಾಗೂ ಅಲ್ಲಿಯ ಸಮುದಾಯಗಳ ತಲ್ಲಣಗಳೊಂದಿಗೆ ನಿಕಟ ಸಂಬಂಧವನ್ನು ಬೆಸೆಯುತ್ತದೆ. ಈ ಕಥನವು ಮುಂದಕ್ಕೆ ಚಲಿಸಿದಂತೆ, ಕಮರಿ ಹೋಗಿರುವ ಮಿಜೋರಾಮ್ನ ಅಸ್ಮಿತೆ ಹಾಗೂ ಸಾಂಸ್ಕೃತಿಕ ಅನನ್ಯತೆಗಳು ಶೋಧಗೊಳ್ಳುತ್ತವೆ. ಸ್ವಾತಂತ್ರೋತ್ತರ ಕಾಲಘಟ್ಟದಲ್ಲಿ ಈ ನಾಡು ಅಸ್ಸಾಮಿನ ಭಾಗವಾಗಿತ್ತು; ಆಗ ಅಸ್ಸಾಮ್ ರೈಫಲ್ಸ್ ಸಂಘಟನೆಯಿಂದ ಕಿರುಕುಳ ಅನುಭವಿಸಿತು. ಪ್ರತ್ಯೇಕ ರಾಜ್ಯವಾದಾಗ ರಕ್ಷಣೆಯ ಹೆಸರಿನಲ್ಲಿ ಭಾರತೀಯ ಸೈನ್ಯದಿಂದ ಮಾರಣ ಹೋಮಕ್ಕೆ ತುತ್ತಾಯಿತು. ಇದನ್ನೆಲ್ಲ ಎದುರಿಸಲು ಮಿಜೋರಾಮ್ನ ಒಳಗಡೆಯಿಂದ ಹುಟ್ಟಿಕೊಂಡ ಮಿಜೋ ನ್ಯಾಶನಲ್ ಫ್ರಂಟ್ ನಿಂದಲೂ ಒಂದಲ್ಲ ಒಂದು ಬಗೆಯಲ್ಲಿ ಹಿಂಸೆ ದೌರ್ಜನ್ಯಗಳಿಗೆ ಈಡಾಗಬೇಕಾಯಿತು. ಒಂದು ಸಮುದಾಯದ ಮೇಲಾದ ಗತಕಾಲದ ಗಾಯಗಳು ವರ್ತಮಾನದಲ್ಲಿಯೂ ಅವುಗಳಿಗೆ ಉಪ್ಪು ಸುರಿದು ಹೊತ್ತಿ ಉರಿಯುವಂತಾಗುವ ಸಂಕೀರ್ಣ ಆಯಾಮಗಳನ್ನು ಕಾದಂಬರಿಯು ಕಟ್ಟಿಕೊಡುತ್ತದೆ.” ಇದು ಡಾ. ಸುಭಾಷ್ ರಾಜಮಾನೆಯವರು ಬೆನ್ನುಡಿಯಲ್ಲಿ ಬರೆದ ಮಾತುಗಳು.
ಮಾಲ್ಪಾವಿ ಜೇಕಬ್ ಸಾಹಿತ್ಯದ ಓದು, ಬರಹ ಮತ್ತು ಶಿಕ್ಷಣದ ಬಗೆಗೆ ಅತೀವವಾದ ಪ್ರೀತಿಯನ್ನು ಹೊಂದಿರುವ ಲೇಖಕಿ. ೧೨ ವರ್ಷಗಳ ಕಾಲ ಶಿಕ್ಷಕಿಯಾಗಿದ್ದವರು. ಈಶಾನ್ಯ ಭಾರತದ ಪ್ರಾದೇಶಿಕ ಪತ್ರಿಕೆಗಳಿಗೆ ಸ್ವತಂತ್ರ ಪತ್ರಕರ್ತರಾಗಿ ಕೆಲಸ ಮಾಡಿರುವ ಇವರು ಈವರೆಗೆ ಕಾವ್ಯ, ಕತೆ ಮತ್ತು ಸೃಜನಶೀಲ ವಿಚಾರ ಸಾಹಿತ್ಯ ಪ್ರಕಾರಗಳಲ್ಲಿ ೬ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಅನುವಾದಕಿಯಾದ ಭೂಮಿಕಾ ಆರ್. ಜಮ್ಮುವಿನ ಕೋತ್ ಭಲ್ವಾಲ್ನಲ್ಲಿರುವ ಮಾಡೆಲ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಅನ್ವಯಿಕ ವಿಜ್ಞಾನ ಮತ್ತು ಮಾನವಿಕ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿ. ಇವರು ಕತೆ, ಕವನಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಹಾಗೂ ಕನ್ನಡದಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಇವರ ಮೊದಲ ಇಂಗ್ಲಿಷ್ ಕವನ ಸಂಕಲನ 'ದಿ ಲ್ಯಾಂಗ್ಲೆಜ್ ಆಫ್ ಅನ್ಹೀಲ್ಡ್ ವೂಂಡ್ಸ್' ದೆಹಲಿಯ ರೆಡ್ ರಿವರ್ ಪ್ರೆಸ್ ಪ್ರಕಾಶಕರಿಂದ 2023ರಲ್ಲಿ ಪ್ರಕಟವಾಗಿದೆ. ಕಲಾವಿದ, ಸಾಹಿತಿ ಡಾ. ಎಂ. ಎಸ್. ಮೂರ್ತಿಯವರ 'ಬೌಲ್' ಹಾಗೂ ಕತೆಗಾರ್ತಿ, ಚಿತ್ರಸಾಹಿತಿ ಎನ್. ಸಂಧ್ಯಾರಾಣಿಯವರ 'ಇಷ್ಟು ಕಾಲ ಒಟ್ಟಿಗಿದ್ದು' ಕಾದಂಬರಿಗಳನ್ನು ಇವರು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಇದಲ್ಲದೆ ಪ್ಲೇಟೋ ಕೇಮ್ಸ್ ಅನ್ಲೈನ್ನ ಸಂಪಾದಕರ ತಂಡದಲ್ಲಿದ್ದಾರೆ.
ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ ಪ್ರೊ. ಎನ್ ಮನು ಚಕ್ರವರ್ತಿ. ಅವರ ಮುನ್ನುಡಿಯ ಆಯ್ದ ಭಾಗಗಳು…”ಅಸ್ತಿತ್ವದ ಅನುಭವಗಳಾಗಿ ಇತಿಹಾಸ, ರಾಜಕೀಯ ಹಾಗೂ ರಾಷ್ಟ್ರೀಯತೆ ಎಲ್ಲಾ ಕಾಲಗಳಲ್ಲೂ ಐತಿಹಾಸಿಕ ಕಥನ ಹಾಗೂ ಕಥನಾತ್ಮಕ ಇತಿಹಾಸ ಸಾಹಿತ್ಯ ವಿಮರ್ಶೆಯ ಮುಖ್ಯ ನೆಲೆ. ಸಮಯ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಸಾಹಿತ್ಯ ವಿಮರ್ಶಕರು ಎಚ್ಚರದಿಂದಲೇ ಈ ಅಂಶಗಳನ್ನು ಪರಾಮರ್ಶೆಗೆ ಒಳಪಡಿಸುತ್ತಿರುವುದು ಸಹಜ ನಡೆ. ಚಾರಿತ್ರಿಕ ಹಾಗೂ ರಾಜಕೀಯ ಘಟನಾವಳಿಗಳಿಗೆ ಸಂಬಂಧಿಸಿದಂತೆ ಪ್ರಮುಖ ಕಥಾನಕಗಳನ್ನು ಇಂತಹ ಎಚ್ಚರದ ಕಣ್ಣಿನಿಂದಲೇ ಗಮನಿಸುವುದು ಸೂಕ್ತ. ಉದಾಹರಣೆಗೆ ಲಿಯೋ ಟಾಲ್ಸ್ಟಾಯ್ ವಿರಚಿತ 'ವಾರ್ ಅಂಡ್ ಪೀಸ್' ಹಾಗೂ ಚಾರ್ಲ್ಸ್ ಡಿಕೆನ್ಸ್ ವಿರಚಿತ 'ಎ ಟೇಲ್ ಆಫ್ ಟೂ ಸಿಟೀಸ್' ಸೇರಿದಂತೆ ಇನ್ನೂ ಹಲವಾರು ಪ್ರಮುಖ ಕೃತಿಗಳು ಪರಿಶೀಲನೆಗೆ ಅರ್ಹವಾಗಿದ್ದರೂ ಈ ಎರಡು ಕೃತಿಗಳಲ್ಲಿನ ಚಾರಿತ್ರಿಕ ಘಟನಾವಳಿಗಳ ಹಾಗೂ ರಾಜಕಾರಣದಲ್ಲ ಬಿಕ್ಕಟ್ಟುಗಳ ವಿವಿಧ ಮುಖಗಳನ್ನು ಪರಿಶೀಲಿಸಿದಾಗ ಸಾಹಿತ್ಯದ ಪರಾಮರ್ಶೆಯಲ್ಲಿ ಕಲೆ ಮತ್ತು ರಾಜಕೀಯ ಪೂರಕವಲ್ಲದ ಕ್ಷೇತ್ರಗಳಾಗಿದ್ದು ಅವುಗಳನ್ನು ಮೇಲೈಸಿ ಪರಿಗಣಿಸುವುದು ಸೂಕ್ತವಲ್ಲ ಎಂಬುದನ್ನು ಒಳ್ಳೆಯ ಸೂಕ್ಷ್ಮಜ್ಞ ಸಾಹಿತ್ಯ ವಿಮರ್ಶಕರು ಒಪ್ಪಲಾರರು. ಕಲೆಯ ದೃಷ್ಟಿಕೋನ ಇಲ್ಲವೇ ಕಲೆಯನ್ನು ಕೊಚ್ಚಿಕೊಂಡು ಹೋಗುವ ಶಕ್ತಿ ಇರುವ ರಾಜಕೀಯ ಹಾಗೂ ಚರಿತ್ರೆಯ ಸಾಮರ್ಥ್ಯವನ್ನು ಪರಿಗಣಿಸದವರು ಮಾತ್ರ ಸಾಹಿತ್ಯ ಕೃತಿಗಳು ಚರಿತ್ರೆ ಮತ್ತು ರಾಜಕಾರಣದ ಸಮಯ ಸಂದರ್ಭಗಳನ್ನು ಪ್ರತ್ಯೇಕಿಸುವ ವಾದವನ್ನು ಮಂಡಿಸಬಲ್ಲರು.”
ಕೃತಿಯ ಲೇಖಕಿ ಮಾಲ್ಪಾವಿ ಜೇಕಬ್ ಬರೆದ ಲೇಖಕರ ಮಾತು ೧೯೬೬ನೇ ಇಸವಿಯ ಮಾರ್ಚಿ ತಿಂಗಳ ಮಧ್ಯಾಹ್ನದಲ್ಲಿ ನಾನು ಮತ್ತು ನನ್ನ ತಂಗಿ ಶಾಲೆಗೆ ಹೊರಡಲೆಂದು ತಯಾರಾಗುತ್ತಿದ್ದೆವು. ಆ ಹೊತ್ತಿಗೆ ನಮ್ಮ ಮನೆಯ ಹತ್ತಿರದಲ್ಲಿದ್ದ ವಿದ್ಯಾರ್ಥಿನಿಲಯ ಒಂದರಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿಯೊಬ್ಬ ಮನೆಯ ಬಾಗಿಲ ಬಳಿ ಬಂದು ನಮ್ಮ ತಂದೆಯವರನ್ನು ಕಾಣಬೇಕೆಂದು ಕೋರಿಕೊಂಡ. ಆಗ ಆತ ನಮ್ಮ ತಂದೆಗೆ ಹೇಳಿದ್ದೇನೆಂದರೆ, 'ಹೋರಾಟವು ಈಗ ವಿಪರೀತ ಹಿಂಸೆಯ ಮಾರ್ಗದಲ್ಲಿ ಚಲಿಸತೊಡಗಿದೆ. ಬಂದೂಕುಗಳು ಈಗ ಮಾತನಾಡತೊಡಗಿವೆ.' ಆತನ ಮಾತನ್ನು ಕೇಳಿ ಅಪ್ಪನಿಗೆ ಬಹಳ ದುಃಖ ಮತ್ತು ಸಂಕಟವಾಯಿತು. 'ಇದು ಬಹಳ ವಿಷಾದನೀಯ. ಇದು ಹೀಗೆ ಮುಂದುವರೆದಲ್ಲಿ ಖಂಡಿತವಾಗಿಯೂ ಸಿಕ್ಕಾಪಟ್ಟೆ ಹಿಂಸೆ, ಸಾವು ಮತ್ತು ರಕ್ತಪಾತ ಕಟ್ಟಿಟ್ಟ ಬುತ್ತಿ ಮತ್ತು ಇದೆಲ್ಲದರಿಂದಾಗಿ ನಮ್ಮ ಜನರ ಬದುಕು ಛಿದ್ರಗೊಳ್ಳುವುದೆಂದು ಹಾಗೂ ಎಲ್ಲರೂ ಬಹಳ ಸಂಕಟ-ನೋವಿನಲ್ಲಿ ಮುಳುಗಿ – ಬಿಡುತ್ತಾರೆ' ಎಂದು ಅಪ್ಪ ಬೇಸರ ಮತ್ತು ಆತಂಕದಿಂದ ಹೇಳಿದ್ದರು.
ನಮ್ಮ ತಂದೆಯವರು ಸರ್ಕಾರಿ ಕೆಲಸದಲ್ಲಿ ಇದ್ದ ಕಾರಣ ಆಗ ಅವರಿಗೆ ಇಂಫಾಲಿಗೆ ವರ್ಗವಾಗಿತ್ತು. ಹಾಗಾಗಿ ನಾವುಗಳು ಸಹ ಆ ಸಮಯದಲ್ಲಿ ಇಂಫಾಲಿನಲ್ಲಿ ಇದ್ದೆವು. ಆ ವಿದ್ಯಾರ್ಥಿ ಹೇಳಿದ ಹೋರಾಟ ಲಾಲ್ಲೆಂಗರ ನೇತೃತ್ವದಲ್ಲಿ ನಡೆಯುತ್ತಿದ್ದ ನಮ್ಮ ಮಿಜೋ ನ್ಯಾಶನಲ್ ಫ್ರಂಟಿನವರ ಸ್ವಾತಂತ್ರ್ಯದ ಹೋರಾಟ.
ಈ ಘಟನೆಯಾದ ಕೆಲ ತಿಂಗಳುಗಳ ಬಳಿಕ ನಮ್ಮ ಕುಟುಂಬದವರೆಲ್ಲರೂ ಶಿಲ್ಲಾಂಗಿನಲ್ಲಿ ವಾಸಿಸತೊಡಗಿದೆವು. ಆಗ ಆ ಊರಿಗೆ ಮಿಜೋಗಳು ದೊಡ್ಡ ಸಂಖ್ಯೆಯಲ್ಲಿ ಗುಳೆ ಬರುತ್ತಿದ್ದರು. ಈ ಪಾಪದ ಜನ ನಮ್ಮ ನಾಡಿನಲ್ಲಿ ಹರಡಿದ್ದ ಹಿಂಸೆಯಿಂದ ತಪ್ಪಿಸಿಕೊಂಡು ಶಿಲ್ಲಾಂಗಿಗೆ ಓಡಿ ಬಂದಿದ್ದರು. ಆ ಹಿಂಸೆಯ ಕಾಲವನ್ನು ನಾವುಗಳು ರಾಮ್ ಬುವಾಯಿ ಎಂದು ಕರೆಯುತ್ತೇವೆ. ಹಾಗೆ ಶಿಲ್ಲಾಂಗಿಗೆ ಗುಳೆ ಬಂದವರು ಮಿಜೋರಾಮಿನಲ್ಲಿ ನಡೆಯುತ್ತಿದ್ದ ಭಯಾನಕ ಘಟನೆಗಳ ಕುರಿತು ಹೇಳುತ್ತಿದ್ದರು. ಒಂದೆಡೆ ಗಲಭೆ ಹತ್ತಿಕ್ಕಲೆಂದು ನಿಯೋಜಿಸಿದ್ದ ಭಾರತೀಯ ಸೇನೆಯವರ ದೌರ್ಜನ್ಯ ಮತ್ತು ಉಪಟಳ ಹಾಗೂ ಇನ್ನೊಂದೆಡೆ ಮಾರಣಹೋಮ ನಡೆಸುತ್ತಿದ್ದ ಮಿಜೋ ನ್ಯಾಷನಲ್ ಫ್ರಂಟಿನ ಮಂದಿ. ಮೈ ನಡುಗಿಸುವಂತಹ ಘಟನೆಗಳ ವಿವರಗಳು ಬಹಳ ವರ್ಷಗಳವರೆಗೆ ನಮ್ಮ ಕಿವಿಯ ಮೇಲೆ ಬೀಳುತ್ತಿದ್ದವು.
ಈ ಹಿಂಸೆಯನ್ನು ಕೊನೆಗಾಣಿಸಿ, ಶಾಂತಿ ನೆಲೆಸಬೇಕೆಂಬ ನಿಟ್ಟಿನಲ್ಲಿ ಮಿಜೋರಾಮಿ ನಲ್ಲಿದ್ದ ಚರ್ಚಿನ ಮಿನಿಸ್ಟರ್ ಒಬ್ಬರು ಶಾಂತಿಗಾಗಿ ಬಹಳ ಪರಿಶ್ರಮ ವಹಿಸಿದರು. ಸುಮಾರು ೨೦ ವರ್ಷಗಳ ಬಳಿಕ, ೧೯೮೬ರ ಜೂನ್ ೩೦ನೇ ತಾರೀಖಿನಂದು, ಭಾರತ ಸರ್ಕಾರ ಹಾಗೂ ಮಿಜೋ ನ್ಯಾಷನಲ್ ಫ್ರಂಟಿನವರ ನಡುವೆ ಶಾಂತಿಯ ಒಪ್ಪಂದವೊಂದರ ಸಹಿಯಾಯಿತು. ಈ ಒಪ್ಪಂದದ ಬಳಿಕ ಭೂಗತವಾಗಿದ್ದ ಎಂ.ಎನ್.ಎಫ್.ನ ಹೋರಾಟಗಾರರೆಲ್ಲರೂ ಪುನಃ ತಮ್ಮ ಮನೆಗಳಿಗೆ ಮರಳಿದರು. ಆಗ ಬಹಳ ಸಂಭ್ರಮ ಹಾಗೂ ಸಂತಸ ಇಡೀ ನಾಡಿನಲ್ಲೆಲ್ಲಾ ಕಾಣಬಹುದಿತ್ತು. ಅಲ್ಲಿಯವರೆಗೆ ಅಸ್ಸಾಮಿನ ಅಡಿಯಲ್ಲಿದ್ದ ಒಂದು ಜಿಲ್ಲೆಯಾಗಿದ್ದ 'ಮಿಜೋ ಬೆಟ್ಟದೂರು' ರಾಜ್ಯದ ಸ್ಥಾನ ಪಡೆದುಕೊಂಡಿತು.
ಸುಮಾರು ೨೦೦೦ನೆಯ ಇಸವಿಯ ಆಸುಪಾಸಿನಲ್ಲಿ ಮಿಜೋರಾಮ್ ಅನ್ನು 'ಕಪ್ಪಿಟ್ಟ ಸಮುದ್ರದಲ್ಲಿರುವ ಶಾಂತಿಯ ದ್ವೀಪವೆಂದು' ಕರೆಯಲಾಗುತ್ತಿತ್ತು. ಇದಕ್ಕೆ ಕಾರಣ, ಸುತ್ತಮುತ್ತಲಿನ ಈಶಾನ್ಯ ಭಾರತದ ರಾಜ್ಯಗಳಲ್ಲೆಲ್ಲ ಹಿಂಸೆ-ಕಲಹ ತಾಂಡವವಾಡುತ್ತಿತ್ತು. ಈ ಸಮಯದಲ್ಲಿ ನನ್ನ ಮನಸ್ಸಿನಲ್ಲಿ ಮೂಡಿದ ಪ್ರಶ್ನೆಯೆಂದರೆ, 'ಸುಮಾರು 20 ವರ್ಷಗಳ ಕಾಲ ನೋವು-ಸಂಕಟ ಮತ್ತು ಆತಂಕವನ್ನು ಅನುಭವಿಸಿದ ನಮ್ಮೆಲ್ಲರಿಗೆ (ಮಿಜೋಗಳ) ರಾಜಕೀಯವಾಗಿ ಶಾಂತಿ ನೆಲೆಸಿತ್ತಾದರೂ ನಮ್ಮೆಲ್ಲರೊಳಗೆ ಎಷ್ಟರಮಟ್ಟಿಗೆ ನಿರಾಳತೆ ಮನೆ ಮಾಡಿದೆ ಎನ್ನುವುದು ನನ್ನನ್ನು ಕಾಡುತ್ತಿತ್ತು. ನಾವು ಅಷ್ಟು ವರ್ಷಗಳು ಅನುಭವಿಸಿದ ತಲ್ಲಣಗಳನ್ನು ನಮ್ಮ ಮನಸ್ಸು ಯಾವ ರೀತಿಯಲ್ಲಿ ಎದುರಿಸಿ ನಿಭಾಯಿಸುತ್ತಿರಬಹುದು?' ಎಂದು ನನಗೆ ಅನಿಸಿತು.
ಆಗ ನಾನು ಗುವಾಹಟಿಯಲ್ಲಿದ್ದೆ. ಆದರೆ ನನ್ನ ಈ ಪ್ರಶ್ನೆಗೆ ಉತ್ತರ ಹುಡುಕುವ ಸಲುವಾಗಿ ೨೦೦೨ನೇ ಮೇ ತಿಂಗಳಂದು ಐಜಾಲ್ ಹಾಗೂ ಲುಂಗಲೆಯಿಗೆ ಪಯಣ ಬೆಳೆಸಿದೆ. ಸಂದರ್ಶನದ ಮೂಲಕವಾಗಿ ಮುಖ್ಯ ಧ್ವನಿಗಳೆಂದು ಅನಿಸಿಕೊಂಡಿದ್ದ ಜನರು ವಿವರಿಸಿದ ನೋವಿನ ಕಥೆಗಳನ್ನು ದಾಖಲಿಸಿಕೊಂಡೆ. ಇದಲ್ಲದೆ ಈ ಎಲ್ಲದರ ಕುರಿತು ಪ್ರಕಟವಾಗಿದ್ದ ಲೇಖನಗಳನ್ನೆಲ್ಲ ಓದಿಕೊಂಡೆ. ನನ್ನ ಕಾದಂಬರಿ, 'ಜೊರಾಮಿ: ಎ ರಿಡೆಂಫನ್ ಸಾಂಗ್', ನನ್ನ ಈ ಸಂಶೋಧನೆಯ ಪ್ರತಿಫಲ, ಈ ಕಾದಂಬರಿಯಲ್ಲಿ ಬರುವ ಬಹಳಷ್ಟು ಜನ ಮತ್ತು ಘಟನೆಗಳು ನೈಜವಾದರೂ ಅವುಗಳನ್ನು ಕಾದಂಬರಿಗೆ ಅನುಗುಣವಾಗಿ ಕಥೆಯಾಗಿಸಿದ್ದೇನೆ.”